AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2010ರಲ್ಲಿ ಯಡಿಯೂರಪ್ಪಗೆ ಆದಂತೆ ಸಿದ್ದರಾಮಯ್ಯಗೆ ಕುತ್ತು ತರುತ್ತಾ ಪ್ರಾಸಿಕ್ಯೂಷನ್? ಅಂದು ಏನಾಗಿತ್ತು ಗೊತ್ತಾ?

2010-2011ರಲ್ಲಿ ಕರ್ನಾಟಕದ ರಾಜ್ಯ ರಾಜಕೀಯ ಅಲ್ಲೋಲ ಕಲ್ಲೋಲವಾಗಿತ್ತು. ಜಮೀನು ಹಗರಣವೊಂದಕ್ಕೆ ಸಂಬಂಧಿಸಿ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ವಿಚಾರಣೆಗೆ ಅನುಮತಿ ನೀಡಿದ್ದರು.‌ ಅಂದಿನ ರಾಜ್ಯಪಾಲರು ಸಿಎಂ ವಿರುದ್ಧದ ಪ್ರಾಸಿಕ್ಯುಷನ್ ಅನುಮತಿ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅದೇ ರೀತಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆತಂಕ ಕಾಡುತ್ತಿದೆ. ಸಿದ್ದರಾಮಯ್ಯ ಪ್ರಕರಣದ ಜೊತೆಗೆ ಬಿಎಸ್​ವೈ ಪ್ರಕರಣದಲ್ಲಿ ಆಗಿದ್ದೇನು ಎನ್ನುವುದನ್ನು ತಿಳಿದುಕೊಳ್ಳಿ.

2010ರಲ್ಲಿ ಯಡಿಯೂರಪ್ಪಗೆ ಆದಂತೆ ಸಿದ್ದರಾಮಯ್ಯಗೆ ಕುತ್ತು ತರುತ್ತಾ ಪ್ರಾಸಿಕ್ಯೂಷನ್? ಅಂದು ಏನಾಗಿತ್ತು ಗೊತ್ತಾ?
ಯಡಿಯೂರಪ್ಪ, ಸಿದ್ದರಾಮಯ್ಯ
ರಮೇಶ್ ಬಿ. ಜವಳಗೇರಾ
|

Updated on:Jul 31, 2024 | 8:25 PM

Share

ಬೆಂಗಳೂರು, (ಜುಲೈ 31): ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರ ವಿರುದ್ಧ ಕಾನೂನುಬಾಹಿರ ಡಿನೋಟಿಫಿಕೇಷನ್​ಗಳ ಆರೋಪಗಳು ಬಂದಿದ್ದವು. ಈ ಆರೋಪಗಳ ಬಗ್ಗೆ ಕೋರ್ಟ್​ಗೆ ಖಾಸಗಿ ದೂರು ಸಲ್ಲಿಸಲು ಮುಂದಾಗಿದ್ದ ವಕೀಲ ಸಿರಾಜಿನ್ ಬಾಷಾ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ 2011 ರಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದರು. ಇದಾದ ಮೇಲೆ ಇಕ್ಕಟ್ಟಿಗೆ ಸಿಲುಕಿದ ಬಿಎಸ್​ವೈ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು. ಯಾಕಂದ್ರೆ ಪ್ರಾಸಿಕ್ಯೂಷನ್​ಗೆ ಅನುಮತಿ ಪಡೆದ ನಂತರ ವಕೀಲ ಸಿರಾಜಿನ್ ಬಾಷಾ ಯಡಿಯೂರಪ್ಪ ವಿರುದ್ಧ 5 ಖಾಸಗಿ ದೂರುಗಳನ್ನು ಬೆಂಗಳೂರಿನ ಲೋಕಾಯುಕ್ತ ವಿಶೇಷ ಕೋರ್ಟ್​ಗೆ ಸಲ್ಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಯಡಿಯೂರಪ್ಪಗೆ ಸಮನ್ಸ್ ಜಾರಿಗೊಳಿಸಿತ್ತು.‌ ಕೋರ್ಟ್​ಗೆ ಹಾಜರಾಗಿ ಬಿಎಸ್​ವೈ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. ಆದ್ರೆ, ಜಾಮಿನು ಅರ್ಜಿ ತಿರಸ್ಕರಿಸಿದ ಲೋಕಾಯುಕ್ತ ವಿಶೇಷ ಕೋರ್ಟ್ ಯಡಿಯೂರಪ್ಪರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇದಾದ ಬಳಿಕ ಮುಂದೆ ನಡೆದಿದ್ದೆಲ್ಲ ಒಂದು ಇತಿಹಾಸ. ಇದೀಗ ಮತ್ತದೇ ಇತಿಹಾಸ ಮರುಕಳಿಸುತ್ತದೆಯಾ ಎಂಬ ಪ್ರಶ್ನೆ ಮೂಡಿದೆ.

ಬಿಎಸ್​ವೈನಂತೆ  ಸಿದ್ದರಾಮಯ್ಯಗೆ ಕುತ್ತು ತರುತ್ತಾ ಮುಡಾ ಹಗರಣ?

ಎಲ್ಲರ ಚಿತ್ತ ರಾಜಭವನದತ್ತ ಹರಿಯಲು ಒಂದು ಕಾರಣ ಮುಡಾ ಪ್ರಕರಣದಲ್ಲಿ ರಾಜ್ಯಪಾಲರ ವರದಿ ಕೇಳಿರುವ ವಿಚಾರ. ಹೌದು, ಜುಲೈ 26 ರಂದು ಸಾಮಾಜಿಕ ಹೋರಾಟಗಾರ ಟಿಜೆ ಅಬ್ರಹಾಂ ಸುದೀರ್ಘವಾದ ದೂರೊಂದನ್ನು ಹಿಡಿದು ರಾಜ್ಯಪಾಲರ ಬಾಗಿಲು ತಟ್ಟಿದ್ದರು. ಸಿಎಂ ಸಿದ್ದರಾಮಯ್ಯ ವಿರುದ್ಧದ ಟಿಜೆ ಅಬ್ರಹಾಂರ ದೂರನ್ನು ಮುಂದಿಟ್ಟುಕೊಂಡು ರಾಜ್ಯಪಾಲರು ಸುದೀರ್ಘ ಒಂದೂವರೆ ಗಂಟೆಗಳ ಕಾಲ ಮಾಹಿತಿ ಪಡೆದುಕೊಂಡಿದ್ದಾರೆ. ದೂರಿನಲ್ಲಿ ಪ್ರಸ್ತಾಪವಾದ ಅಂಶ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯುಷನ್​ಗೆ ಅನುಮತಿ ನೀಡಬೇಕು ಎಂಬುದು. ಇದೇ ಪ್ರಾಸಿಕ್ಯುಷನ್​ಗೆ ಅನುಮತಿ ನೀಡಬೇಕು ಎಂಬ ಅಂಶ ರಾಜ್ಯಪಾಲರ ನಿರ್ಧಾರದ ಕಡೆ ಎಲ್ಲರೂ ಗಮನ ಹರಿಸುವಂತೆ ಮಾಡಿದೆ.

ಇದನ್ನೂ ಓದಿ: ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ಸರ್ಕಾರ ಅಸ್ಥಿರಗೊಳಿಸುವ ಕಸರತ್ತು ನಡೆದಿದ್ಯಾ? ಪುಷ್ಠಿ ನೀಡುವ ಅಂಶಗಳು ಇಲ್ಲಿವೆ

ಸಿಎಂ ವಿರುದ್ಧ ವಿಚಾರಣಾ ಅನುಮತಿ ನೀಡಲು ರಾಜ್ಯಪಾಲ ಚಿಂತನೆ

ದೂರಿನ ಮೇಲೆ ಗಂಭೀರವಾಗಿ ಕಣ್ಣಾಡಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ಬಗ್ಗೆ ಕಾನೂನು ತಜ್ಞರಿಂದ ವರದಿ ಪಡೆದಿದ್ದಾರೆ. ಟಿ.ಜೆ.ಅಬ್ರಾಹಂ ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ವರದಿ ರಾಜ್ಯಪಾಲರ ಕೈ ಸೇರಿದೆ.‌ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪ್ರಮುಖ ಪ್ರಕರಣಗಳನ್ನ ಉಲ್ಲೇಖಿಸಿ ಕಾನೂನು ತಜ್ಞರಿಂದ ವರದಿ ಸಲ್ಲಿಕೆಯಾಗಿದ್ದು, ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿದ್ದ ತೀರ್ಪುನ್ನೂ ಉಲ್ಲೇಖಿಸಲಾಗಿದೆ.‌ ಈ ಬಗ್ಗೆ ಟಿವಿನೈನ್​ಗೆ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದು ಮಹತ್ವದ ಬೆಳವಣಿಗೆಗಳು ತೀವ್ರಗೊಳ್ಳುವ ಸಾಧ್ಯತೆ ಇದೆ.‌

ಸಿಎಂ ವಿರುದ್ಧ ವಿಚಾರಣಾ ಅನುಮತಿ ನೀಡದಂತೆ ಸಂಪುಟದಲ್ಲಿ ನಿರ್ಣಯ

ಸದ್ಯ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರಿಗೂ ವಿಷಯವನ್ನು ಮನದಟ್ಟು ಮಾಡಿ ಕೊಟ್ಟಿರುವ ಸಿದ್ದರಾಮಯ್ಯಗೆ ರಾಜಭವನದ ಬೆಳವಣಿಗೆಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿಯೇ ಮುಂದಿನ ತಮ್ಮ ನಡೆ ಏನಾಗಿರಬೇಕು ಎಂಬ ಬಗ್ಗೆಯೂ ಸಿದ್ದರಾಮಯ್ಯ ಗಂಭೀರವಾಗಿ ಪ್ಲ್ಯಾನ್ ಮಾಡಿದ್ದಾರೆ. ನಾಳೆ (ಆಗಸ್ಟ್ 01) ಸಿಎಂ ನಿವಾಸ ಕಾವೇರಿಯಲ್ಲಿ ಸಂಪುಟ ಸಹೋದ್ಯೋಗಿಗಳಿಗೆ ಉಪಾಹಾರಕೂಟ ಆಯೋಜನೆ ಮಾಡಿದ್ದಾರೆ. ಬಳಿಕ ಸಚಿವ ಸಂಪುಟ ಸಭೆಯನ್ನೂ ಕರೆದಿರುವ ಸಿಎಂ ಸಿದ್ದರಾಮಯ್ಯ,‌ ಕ್ಯಾಬಿನೆಟ್ ಮೀಟಿಂಗ್​ನಲ್ಲಿ ಮಹತ್ವದ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ.‌

ಸಿಎಂ ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ನೀಡದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗಿಕರಿಸಲು ಚರ್ಚಿಸಲಾಗುತ್ತಿದೆ.‌ ಒಂದು ಸಾಲಿನ ನಿರ್ಣಯ ಅಂಗೀಕರಿಸಲಿರುವ ಸಂಪುಟ ರಾಜಭವನದೊಂದಿಗೆ ಸಂಘರ್ಷಕ್ಕೆ ಇಳಿದರೂ ಆಶ್ಚರ್ಯವಿಲ್ಲ. ಈಗಾಗಲೇ ಕಾನೂನು ತಜ್ಞರಿಂದಲೂ ಅಭಿಪ್ರಾಯ ಸಂಗ್ರಹಿಸಿರುವ ಸಿದ್ದರಾಮಯ್ಯ, ಮೊನ್ನೆ ಶನಿವಾರ ಸುಪ್ರಿಂಕೋರ್ಟ್​ನ ನ್ಯಾಯವಾದಿಗಳ ಜೊತೆಗೇ ಸುದೀರ್ಘ ಮಾತುಕತೆ ನಡೆಸಿದ್ದಾರೆ.

ಸಚಿವ ಸಂಪುಟದಿಂದ ಹೊರಗುಳಿಯುಲಿರುವ ಸಿಎಂ

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದುಕೊಂಡೇ ತಮ್ಮ ಪರವಾಗಿ ಸಚಿವ ಸಂಪುಟದಲ್ಲಿ ನಿರ್ಣಯ ಪಡೆದಿದ್ದರು. ಅಲ್ಲದೇ ಸಂಪುಟ ಸಭೆಯಲ್ಲಿ ಸ್ವತಃ ಯಡಿಯೂರಪ್ಪ ಭಾಗಿಯಾಗಿದ್ದರು. ಬಳಿಕ ಇದನ್ನು ಹೈಕೋರ್ಟ್​ ಪ್ರಶ್ನಿಸಿತ್ತು. ಈ ಕಾರಣಕ್ಕೆ ಸಿದ್ದರಾಮಯ್ಯ ನಾಳಿನ ಸಂಪುಟ ನಿರ್ಣಯದಿಂದ‌ ಹೊರಗುಳಿಯಲಿದ್ದಾರೆ. ಆದಾಯಮೀರಿ ಆಸಕ್ತಿ ಗಳಿಕೆ ಪ್ರಕರಣದಲ್ಲಿ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಕೈಗೊಳ್ಳುವ ಡಿಕೆ ಶಿವಕುಮಾರ್ ಅವರು ಸಹ ಸಚಿವ ಸಂಪುಟದಿಂದ ಹೊರಗಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.

ರಾಜ್ಯಪಾಲರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಬಿಜೆಪಿ ಅಧ್ಯಕ್ಷ, ಎಚ್​ಡಿ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಚದುರಂಗದ ಆನೆ, ಕುದುರೆ, ಒಂಟೆ, ಮಂತ್ರಿಗಳೆಲ್ಲ ಏಕಕಾಲದಲ್ಲಿ ಒಂದೇ ಕಾರಣಕ್ಕೆ ಅನೇಕ ವ್ಯಕ್ತಿಗಳನ್ನ ದೆಹಲಿಯಲ್ಲೇ ಭೇಟಿಯಾಗುತ್ತಿರುವುದು ರಾಜ್ಯ ರಾಜಕೀಯದಲ್ಲೇ ಮೊದಲು ಎನ್ನಬಹುದೇನೋ. ಹೀಗಾಗಿ ಈ ಆಟ ಖಂಡಿತ ಸಣ್ಣದಲ್ಲ. ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯುಷನ್​ಗೆ ಅನುಮತಿ ನೀಡಿದ್ದೇ ಆದರೆ ರಾಜಕೀಯ ಸಂಚಲನ ಸೃಷ್ಟಿಸುವುದು ನಿಶ್ಚಿತ. ಒಂದು ಹಂತದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್​ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾದರೂ ಅಚ್ಚರಿ ಪಡಬೇಕಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:19 pm, Wed, 31 July 24

Follow Us