AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಲಕ್ಷ ವಿದ್ಯಾರ್ಥಿಗಳಿಗೆ ಮೆಟಾ ಮಾಡಲಿದೆ ಡಿಜಿಟಲ್ ಸುರಕ್ಷತೆಯ ಪಾಠ: ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ರಾಜ್ಯ ಕರ್ನಾಟಕ

ಸೈಬರ್ ವಂಚನೆ, ಆನ್​​ಲೈನ್ ವಂಚನೆ ಪ್ರಕರಣಗಳು ಕರ್ನಾಟಕದಾದ್ಯಂತ ಕಳೆದ ಕೆಲವು ದಿನಗಳಲ್ಲಿ ಹೆಚ್ಚಾಗುತ್ತಿರುವುದು ಕಂಡುಬಂದಿದೆ. ಡಿಜಿಟಲ್ ಸುರಕ್ಷತೆ ಕೂಡ ಸದ್ಯದ ತುರ್ತು ಆಗಿದೆ. ಹೀಗಾಗಿ ರಾಜ್ಯದ ಶಾಲೆ, ಕಾಲೇಜು ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಡಿಜಿಟಲ್ ಸುರಕ್ಷತೆಯ ಪಾಠ ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕೆ ಸಾಮಾಜಿಕ ಮಾಧ್ಯಮ ಕಂಪನಿ ಮೆಟಾ ಜತೆ ಒಪ್ಪಂದ ಮಾಡಿಕೊಂಡಿದೆ. ಆ ಬಗ್ಗೆ ವಿವರ ಇಲ್ಲಿದೆ.

10 ಲಕ್ಷ ವಿದ್ಯಾರ್ಥಿಗಳಿಗೆ ಮೆಟಾ ಮಾಡಲಿದೆ ಡಿಜಿಟಲ್ ಸುರಕ್ಷತೆಯ ಪಾಠ: ಒಪ್ಪಂದಕ್ಕೆ ಸಹಿ ಹಾಕಿದ ಮೊದಲ ರಾಜ್ಯ ಕರ್ನಾಟಕ
ಕರ್ನಾಟಕದ 10 ಲಕ್ಷ ವಿದ್ಯಾರ್ಥಿಗಳಿಗೆ ಮೆಟಾದಿಂದ ಡಿಜಿಟಲ್ ಸುರಕ್ಷತೆ ಪಾಠ
Ganapathi Sharma
|

Updated on: Jul 05, 2024 | 12:12 PM

Share

ಬೆಂಗಳೂರು, ಜುಲೈ 5: ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಶಿಕ್ಷಕರು ಮತ್ತು 10 ಲಕ್ಷ ವಿದ್ಯಾರ್ಥಿಗಳಿಗೆ ಡಿಜಿಟಲ್ ಸುರಕ್ಷತೆ, ಮತ್ತು ಆಗ್ಯುಮೆಂಟೆಡ್ ರಿಯಾಲಿಟಿ ಮತ್ತು ವರ್ಚುವಲ್ ರಿಯಾಲಿಟಿ (AR-VR) ತರಬೇತಿ ನೀಡಲು ಸಾಮಾಜಿಕ ಮಾಧ್ಯಮ ಸಂಸ್ಥೆ ಮೆಟಾ ಇಂಕ್​​​ನೊಂದಿಗೆ ಕೈಜೋಡಿಸಿದೆ. 2025 ರೊಳಗೆ ಈ ತರಬೇತಿ ನಡೆಯಲಿದೆ. ‘ಡಿಜಿಟಲ್ ನಾಗರೀಕ್ ಮತ್ತು ಎಆರ್-ವಿಆರ್ ಸ್ಕಿಲ್ಸ್ ಪ್ರೋಗ್ರಾಂ’ ಎಂಬ ಉಪಕ್ರಮವನ್ನು ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಉದ್ಘಾಟಿಸಿದ್ದು, ಇದರ ಅಡಿ ತರಬೇತಿ ಕಾರ್ಯಕ್ರಮ ನಡೆಯಲಿದೆ.

ಮೆಟಾದೊಂದಿಗೆ ಒಪ್ಪಂದ: ದೇಶದ ಮೊದಲ ರಾಜ್ಯ

ಇದರೊಂದಿಗೆ, ಡಿಜಿಟಲ್ ಸುರಕ್ಷತೆಗೆ ಸಂಬಂಧಿಸಿದ ಇಂತಹ ಉಪಕ್ರಮದಲ್ಲಿ ಮೆಟಾದೊಂದಿಗೆ ಸಹಕರಿಸಿದ ಭಾರತದ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣ ಮತ್ತು ಆನ್‌ಲೈನ್ ಸುರಕ್ಷತೆಯನ್ನು ಉತ್ತೇಜಿಸಲು ಎರಡು ವರ್ಷಗಳ ಸಹಭಾಗಿತ್ವ ಹೊಂದುವ ಉದ್ದೇಶದಿಂದ 2023 ರಲ್ಲಿ ನವೆಂಬರ್ ಲೆಟರ್ ಆಫ್ ಇಂಟೆಂಟ್‌ಗೆ ಸಹಿ ಹಾಕಲಾಗಿತ್ತು.

18 – 24 ವರ್ಷದ ವಿದ್ಯಾರ್ಥಿಗಳಿಗೆ ತರಬೇತಿ

ಈ ಉಪಕ್ರಮದಡಿ 18 ರಿಂದ 24 ವರ್ಷ ವಯಸ್ಸಿನ ಶಾಲಾ ಮತ್ತು ಪಿಯು ವಿದ್ಯಾರ್ಥಿಗಳಿಗೆ ಡಿಜಿಟಲ್ ಜಾಗೃತಿ ತರಬೇತಿ ನೀಡಲಾಗುತ್ತದೆ. ತರಬೇತಿಗಾಗಿ ಮೆಟಾ ಮಾಸ್ಟರ್ ಟ್ರೈನರ್‌ಗಳನ್ನು ಸಹ ನಿಯೋಜಿಸಲಿದ್ದು, ಅವರು ಡಿಜಿಟಲ್ ಸುರಕ್ಷತೆ ಮತ್ತು ಎಆರ್-ವಿಆರ್ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ಈ ಉಪಕ್ರಮವು ರಾಜ್ಯದಾದ್ಯಂತ 100 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಒಳಗೊಂಡಿರಲಿದೆ. ತರಬೇತಿಯು ಡಿಜಿಟಲ್ ಸುರಕ್ಷತೆ ಮತ್ತು ಜ್ಞಾನದ ಮೇಲೆ ಕೇಂದ್ರೀಕರಿಸಿರಲಿದೆ. ಮೊದಲ ಹಂತದ ಅನುಷ್ಠಾನವು ಬೆಂಗಳೂರು, ಮೈಸೂರು, ಕಲಬುರಗಿ, ಬೆಳಗಾವಿ ಮತ್ತು ದಕ್ಷಿಣ ಕನ್ನಡವನ್ನು ಒಳಗೊಳ್ಳಲಿದ್ದು, ಉಳಿದ ಜಿಲ್ಲೆಗಳನ್ನು ಮುಂದಿನ ಹಂತದಲ್ಲಿ ಸೇರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಭಾರತದಲ್ಲಿ ತಯಾರಿಸಿದ ಪಿಕ್ಸೆಲ್ ಸ್ಮಾರ್ಟ್​ಫೋನ್​ಗಳನ್ನು ಅಮೆರಿಕ, ಯೂರೋಪ್​ಗೆ ರಫ್ತು ಮಾಡಲು ಗೂಗಲ್ ಯೋಜನೆ

ಈ ಅಭಿಯಾನವು ನಮ್ಮ ಮಕ್ಕಳಿಗೆ ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಹೇಗೆ ರಚಿಸುವುದು ಅಥವಾ ಫಿಶಿಂಗ್ ಸ್ಕ್ಯಾಮ್​​ಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ಕಲಿಸುವುದಷ್ಟೇ ಅಲ್ಲದೆ ಇದು ಜಾಗರೂಕತೆ ಮತ್ತು ಜವಾಬ್ದಾರಿಯ ಮನಸ್ಥಿತಿಯನ್ನು ರೂಪಿಸಲಿದೆ. ಅದು ಅವರಿಗೆ ಎಂದೆಂದಿಗೂ ನೆರವಿಗೆ ಬರಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ