ಕೆಎಸ್​​ಆರ್​ಟಿಸಿಯಿಂದ ಪರಿಹಾರ ಕೋರಿ ಲಂಡನ್​ ಕೋರ್ಟ್​​ನಲ್ಲಿ ದಾವೆ ಹೂಡಿದ್ದ ಬ್ರಿಟಿಷ್ ದಂಪತಿ; ಆಮೆಲೇನಾಯ್ತು?

ಬ್ರಿಟಿಷ್ ನ್ಯಾಯಾಲಯದ ಆದೇಶವನ್ನು ಭಾರತದಲ್ಲಿ ಕಾರ್ಯಗತಗೊಳಿಸಬೇಕೆಂದು ದಂಪತಿ ಪ್ರಯತ್ನಿಸಿದ್ದರು. ಆದರೆ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರು ಜುಲೈ 14 ರಂದು ನೀಡಿದ ತೀರ್ಪಿನಲ್ಲಿ ಅದನ್ನು ತಿರಸ್ಕರಿಸಿದ್ದಾರೆ.

ಕೆಎಸ್​​ಆರ್​ಟಿಸಿಯಿಂದ ಪರಿಹಾರ ಕೋರಿ ಲಂಡನ್​ ಕೋರ್ಟ್​​ನಲ್ಲಿ ದಾವೆ ಹೂಡಿದ್ದ ಬ್ರಿಟಿಷ್ ದಂಪತಿ; ಆಮೆಲೇನಾಯ್ತು?
ಕರ್ನಾಟಕ ಹೈಕೋರ್ಟ್
Edited By:

Updated on: Jul 25, 2023 | 10:02 AM

ಬೆಂಗಳೂರು, ಜುಲೈ 24: ಕರ್ನಾಟಕದಲ್ಲಿ ಕೆಎಸ್​ಆರ್​ಟಿಸಿ ಬಸ್ (KSRTC Bus) ಡಿಕ್ಕಿಯಾದ ಘಟನೆಯ ಪರಿಹಾರ ಕೋರಿ ಬ್ರಿಟನ್ ದಂಪತಿ ಲಂಡನ್ ನ್ಯಾಯಾಲಯದಲ್ಲಿ (London Court) ಅರ್ಜಿ ಹಾಕಿ ತಮ್ಮ ಪರ ತೀರ್ಪು ತೆಗೆದುಕೊಂಡು ಬಂದ ಅಪರೂಪದ ವಿದ್ಯಮಾನ ವರದಿಯಾಗಿದೆ. ಆದಾಗ್ಯೂ, ಲಂಡನ್ ನ್ಯಾಯಾಲಯ ನೀಡಿದ ತೀರ್ಪನ್ನು ಇಲ್ಲಿ ಅನುಷ್ಠಾನಗೊಳಿಸುವುದು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್​ (Karnataka High Court) ಹೇಳಿದ್ದು, ಈ ಮೂಲಕ ಕೆಎಸ್​ಆರ್​ಟಿಸಿ ಪರ ತೀರ್ಪು ನೀಡಿದೆ. ಲಂಡನ್ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಬ್ರಿಟಿಷ್ ದಂಪತಿಗಳು ಮಾಡಿರುವ ಮನವಿ ಅರ್ಜಿಯನ್ನು ಪರಿಗಣಿಸಿ ಆ ತೀರ್ಪನ್ನು ಇಲ್ಲಿ ಕಾರ್ಯಗತಗೊಳಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

2002 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ಅಪಘಾತಕ್ಕೀಡಾಗಿದ್ದ ದಂಪತಿ ಲಂಡನ್​​ನ ನ್ಯಾಯಾಲಯದಲ್ಲಿ ಪರಿಹಾರಕ್ಕಾಗಿ ಕೆಎಸ್​ಆರ್​ಟಿಸಿ ವಿರುದ್ಧ ಮೊಕದ್ದಮೆ ಹೂಡಿದ್ದರು. ಅಲ್ಲಿ ಅವರ ಪರವಾಗಿ ತೀರ್ಪು ಬಂದಿತ್ತು. ಬ್ರಿಟಿಷ್ ನ್ಯಾಯಾಲಯದ ಆದೇಶವನ್ನು ಭಾರತದಲ್ಲಿ ಕಾರ್ಯಗತಗೊಳಿಸಬೇಕೆಂದು ದಂಪತಿ ಪ್ರಯತ್ನಿಸಿದ್ದರು. ಆದರೆ ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರು ಜುಲೈ 14 ರಂದು ನೀಡಿದ ತೀರ್ಪಿನಲ್ಲಿ ಅದನ್ನು ತಿರಸ್ಕರಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಹೇಳಿದ್ದೇನು?

ವಿದೇಶಿ ನ್ಯಾಯಾಲಯವು ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೆಎಸ್‌ಆರ್‌ಟಿಸಿ ನೋಟಿಸ್‌ಗೆ ಉತ್ತರ ನೀಡಿದ್ದರೂ ವಿದೇಶಿ ನ್ಯಾಯಾಲಯ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕೋರ್ಟ್ ಹೇಳಿದೆ.

ಮೈಸೂರು ಗುಂಡ್ಲುಪೇಟೆ ಮಾರ್ಗದಲ್ಲಿ ನಡೆದಿದ್ದ ಅಪಘಾತ

ಇಂಗ್ಲೆಂಡಿನ ಸರ್ರೆಯ ಓಲ್ಡ್ ಕೌಲ್ಸ್​ಡನ್ ಗ್ರಾಮದ ನಿಗೆಲ್ ರೋಡ್ರಿಕ್ ಲಾಯ್ಡ್ ಹ್ಯಾರಾಡಿನ್ ಮತ್ತು ಕರೋಲ್ ಆನ್ ಹ್ಯಾರಾಡಿನ್ 2002 ರ ಮಾರ್ಚ್ 18 ರಂದು ಮೈಸೂರಿನಿಂದ ಗುಂಡ್ಲುಪೇಟೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಸೋಮಕ್ ಟ್ರಾವೆಲ್ಸ್ ಲಿಮಿಟೆಡ್​ನ ಕಾರನ್ನು ಬಾಡಿಗೆಗೆ ಪಡೆದುಕೊಂಡಿದ್ದು, ರವಿ ಎಂಬವರು ಅದನ್ನು ಚಲಾಯಿಸುತ್ತಿದ್ದರು. ಆ ಸಂದರ್ಭದಲ್ಲಿ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿದ್ದವು.

ಇದನ್ನೂ ಓದಿ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ‌; ದ್ವಿಚಕ್ರ, ತ್ರಿಚಕ್ರ ಸೇರಿ ಕೆಲವು ವಾಹನಗಳಿಗೆ ನಿಷೇಧ, ಇನ್ನೂ ಕೆಲವು ಕಠಿಣ ನಿಯಮ

ಬ್ರಿಟನ್ ದಂಪತಿಯು ಅಪಘಾತಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಕಿಂಗ್‌ಡಂನ ಎಕ್ಸೆಟರ್ ಕೌಂಟಿ ಕೋರ್ಟ್‌ನಲ್ಲಿ ಕೆಎಸ್​ಆರ್​ಟಿಸಿ ವಿರುದ್ಧ ದಾವೆ ಹೂಡಿದ್ದರು. ಆ ನ್ಯಾಯಾಲಯ ಅವರ ಅರ್ಜಿಯನ್ನು ಅಂಗೀಕರಿಸಿತ್ತು ಮತ್ತು ಪರಿಹಾರವನ್ನು ಪಾವತಿಸುವಂತೆ ಕೆಎಸ್​ಆರ್​ಟಿಸಿಗೆ ನಿರ್ದೇಶಿಸಿತ್ತು.

ತರುವಾಯ, ಅವರು ಬ್ರಿಟನ್ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ಬೆಂಗಳೂರಿನ 25ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸಿವಿಲ್ ಕೋರ್ಟ್ ತಿರಸ್ಕರಿಸಿದ್ದು, ಹೈಕೋರ್ಟ್‌ನಲ್ಲಿ ರಿವಿಷನ್ ಪಿಟಿಷನ್ ಸಲ್ಲಿಸುವಂತೆ ಕೆಎಸ್‌ಆರ್‌ಟಿಸಿಗೆ ಸೂಚಿಸಿತ್ತು. ನಂತರ ಹೈಕೋರ್ಟ್​​​ ವಿಚಾರಣೆ ನಡೆಸಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:12 pm, Mon, 24 July 23

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us