ಚಾಮರಾಜನಗರ ಆಕ್ಸಿಜನ್ ಕೊರತೆ ದುರಂತ: ನ್ಯಾ.ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯ ಶಿಫಾರಸು ಪರಿಗಣಿಸಲು ಕೋರ್ಟ್ ಸೂಚನೆ

|

Updated on: May 12, 2021 | 4:39 PM

Karnataka High Court On Chamarajanagar: ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ.ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ.

ಚಾಮರಾಜನಗರ ಆಕ್ಸಿಜನ್ ಕೊರತೆ ದುರಂತ: ನ್ಯಾ.ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿಯ ಶಿಫಾರಸು ಪರಿಗಣಿಸಲು ಕೋರ್ಟ್ ಸೂಚನೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ.ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ವರದಿ ಸಲ್ಲಿಸಿತು. ವರದಿ ಪರಿಶೀಲನೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಶಿಫಾರಸುಗಳನ್ನು ಪರಿಗಣಿಸಲು ಸರ್ಕಾರಕ್ಕೆ ಸೂಚನೆ ನೀಡಿತು.

ಪ್ರತಿ ಜಿಲ್ಲೆಗಳಲ್ಲಿ ಹೆಚ್ಚುವರಿ ಆಕ್ಸಿಜನ್ ಸಂಗ್ರಹವಿರಬೇಕು. ಆಕ್ಸಿಜನ್ ಸಾಗಾಟ ವಾಹನಗಳಿಗೆ ಭದ್ರತೆ ಒದಗಿಸಬೇಕು. ಮೈಸೂರಿನ ಆಕ್ಸಿಜನ್ ಬಾಟ್ಲಿಂಗ್ ಪ್ಲಾಂಟ್ ದುರಸ್ತಿ ಪಡಿಸಬೇಕು. ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾ.ಎ.ಎನ್.ವೇಣುಗೋಪಾಲ ಗೌಡ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ.

ಚಾಮರಾಜನಗರದಲ್ಲಿ ಸಂಭವಿಸಿದ ಕೋವಿಡ್-19 ರೋಗಿಗಳ ಸಾವಿನ ಬಗ್ಗೆ ದಾಖಲೆ ಪರಿಶೀಲಿಸಿ ವರದಿ ನೀಡಲು ನ್ಯಾಯಮೂರ್ತಿ ವೇಣುಗೋಪಾಲಗೌಡ ಅವರಿಗೆ ಹೈಕೋರ್ಟ್​​ ನಿರ್ದೇಶನ ನೀಡಿತ್ತು. ಇಂದೇ ಚಾಮರಾಜನಗರಕ್ಕೆ ಹೋಗಿ ಎಲ್ಲ ದಾಖಲೆ ಪರಿಶೀಲಿಸಿ ವರದಿ ಕೊಡಿ ಎಂದು ಸೂಚಿಸಿತ್ತು.

ಏಕ ಸದಸ್ಯ ವಿಚಾರಣಾ ಆಯೋಗ ರಚನೆ
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕೋವಿಡ್-19 ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರವು ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿತ್ತು. ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್​ ಅವರಿಗೆ ಈ ಹೊಣೆಯನ್ನು ಒಪ್ಪಿಸಲಾಗಿತ್ತು. ಒಂದು ತಿಂಗಳ ಒಳಗೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 3ರಂದು ಕೋವಿಡ್-19 ರೋಗಿಗಳ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಆಯೋಗವು ವಿಚಾರಣೆ ನಡೆಸಿತ್ತು. ಆಕ್ಸಿಜನ್ ಕೊರತೆ ಮತ್ತು ಇತರ ಯಾವ ಕಾರಣದಿಂದ ಸಾವು ಸಂಭವಿಸಿತು ಎಂಬ ಬಗ್ಗೆ ತನಿಖೆ ನಡೆಸಲು ಆಯೋಗಕ್ಕೆ ಸೂಚನೆ ನೀಡಲಾಗಿತ್ತು.

ಈ ಆಯೋಗವು ವಿಚಾರಣಾ ಆಯೋಗ ಕಾಯ್ದೆ 1952ರ ಅನ್ವಯ ಎಲ್ಲ ಅಧಿಕಾರಗಳನ್ನೂ ಹೊಂದಿರುತ್ತದೆ. ಒಂದು ತಿಂಗಳ ಒಳಗೆ ವರದಿಯನ್ನು ಸಲ್ಲಿಸಬೇಕಿದೆ. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೂ ಸೇರಿದಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಬೇಕು. ಆರೋಗ್ಯ ಇಲಾಖೆ ಆಯುಕ್ತರು ಈ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಆದೇಶವು ತಿಳಿಸಿತ್ತು

ವಿಚಾರಣಾ ಆಯೋಗದ ಕಚೇರಿಯು ಮೈಸೂರಿನಲ್ಲಿ ಇರುತ್ತದೆ. ಆರೋಗ್ಯ ಇಲಾಖೆಯ ಆಯುಕ್ತರು ಆಯೋಗದ ಕಚೇರಿ ಸ್ಥಾಪನೆ, ಸಿಬ್ಬಂದಿ, ಗೌರವಧನ ಮತ್ತು ಇತರ ಭತ್ಯಗಳನ್ನು ಒದಗಿಸುತ್ತಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೊಯೆಲ್ ಆದೇಶದಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಫೈಜರ್ ಕೊವಿಡ್​ ಲಸಿಕೆಯ​ನ್ನು ಮಕ್ಕಳಿಗೆ ನೀಡಲು ಅಮೇರಿಕದ ಔಷಧ ಪ್ರಾಧಿಕಾರ ಒಪ್ಪಿಗೆ

ಅನಗತ್ಯವಾಗಿ ಬಂಧಿಸಬೇಡಿ.. ಕಾರಾಗೃಹದಲ್ಲಿ ಈಗಿರುವ ಕೈದಿಗಳ ಸಂಖ್ಯೆಯನ್ನೂ ಕಡಿಮೆ ಮಾಡಿ: ಸುಪ್ರೀಂಕೋರ್ಟ್  ಆದೇಶ

(Karnataka High Court says consider expert decision on Chamarajanagar Medical oxygen death issue)