
ಕರ್ನಾಟಕದಾದ್ಯಂತ ಇಂದು (ಸೆ.18) ಗಣೇಶ ಚತುರ್ಥಿ ಮನೆ ಮಾಡಿದೆ. ಗೌರಿ-ಗಣೇಶ ಹಬ್ಬಕ್ಕೆ ತಯಾರಿ ಜೋರಾಗಿ ನಡೆದಿದ್ದು, ಮಾರುಕಟ್ಟೆಗಳೆಲ್ಲ ಫುಲ್ ರಶ್ ಆಗಿವೆ. ಹೂವು, ಹಣ್ಣುಗಳಿ ಅಧಿಕ ಬೇಡಿ ಹಿನ್ನೆಲೆಯಲ್ಲಿ ಬೆಲೆ ಗಗನಕ್ಕೆ ಏರಿದೆ. ಸೋಮವಾರ ಬೆಳಗಿನ ಜಾವದಿಂದಲೇ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುತ್ತಿವೆ. ಇನ್ನು ಮನೆಗಳಲ್ಲಿ ಗಣೇಶ ಹಬ್ಬ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಪ್ರಾತಃ ಕಾಲದಿಂದಲೇ ಜನರು ವಿಘ್ನನಿವಾರಕನ ವಿಗ್ರಹಗಳನ್ನು ತಂದು ಪ್ರತಿಷ್ಠಾಪಿಸಿ, ಪೂಜೆ-ಪುನಸ್ಕಾರ ನೆರವೇರಿಸುತ್ತಿದ್ದಾರೆ. ಇನ್ನು ಇಂದಿನಿಂದ ಐದು ದಿನಗಳ ಕಾಲ ಸಂಸತ ವಿಶೇಷ ಅಧಿವೇಶನ ನಡೆಯಲಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚನೆ ಎಸಗಿದ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಮತ್ತು ಆಕೆಯ ಗ್ಯಾಂಗ್ನ ವಿಚಾರಣೆ ಮುಂದುವರೆಯಲಿದೆ.
ಸಮುದ್ರದಲ್ಲಿ ಮುಳುಗುತ್ತಿದ್ದ ಐವರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಋತುರಾಜ್, ಗುಪ್ತಾ, ಪ್ರಶಾಂತ್ ಚಂದ್ರಶೇಖರ್, ಆರುಷಿ ಬನ್ಸಾಲ್, ರೀತು ಎಂಬವರನ್ನು ರಕ್ಷಣೆ ಮಾಡಲಾಗಿದೆ. ಸಮುದ್ರದಲ್ಲಿ ಈಜಾಡುವಾಗ ಅಲೆಗಳ ಹೊಡೆತಕ್ಕೆ ಸಿಕ್ಕಿ ಮುಳುಗುತ್ತಿದ್ದರು. ಈ ವೇಳೆ ಎಚ್ಚೆತ್ತ ಲೈಫ್ಗಾರ್ಡ್ ಸಿಬ್ಬಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಪ್ರವಾಸಿಗರನ್ನು ಗೋಕರ್ಣ ಪಿಹೆಚ್ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಗೋಕರ್ಣ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ದಿವಂಗತ ಮಾಜಿ ಎಂಎಲ್ಸಿ ಸಿ.ನಾರಾಯಣರೆಡ್ಡಿ ಪತ್ನಿ ಸುಶೀಲಾ ಎನ್ ರೆಡ್ಡಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಸ್ವರೂಪ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಸಂಜೆ ವಿಧಿವಶರಾದರು. ಸುಶೀಲಾ ಅವರು ಮೀನಾಕ್ಷಿ ಸುಂದರೇಶ್ವರ ದೇಗುಲದ ಸಂಸ್ಥಾಪಕರಾಗಿದ್ದರು. ನಾಳೆ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲು ಕುಟುಂಬಸ್ಥರು ನಿರ್ಧಾರಿಸಿದ್ದಾರೆ.
ಹಾಸನ: ಪ್ರಜ್ವಲ್ ರೇವಣ್ಣ ಸಂಸದ ಸ್ಥಾನ ಅನರ್ಹ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕ ರೇವಣ್ಣ, ನಮ್ಮದು ದೇವರನ್ನು ನಂಬಿಕೊಂಡಿರುವ ಕುಟುಂಬ. ಈ ಕುಟುಂಬಕ್ಕೆ ದೇವರ ಅನುಗ್ರಹದಿಂದ ಶುಭ ಸುದ್ದಿ ಬಂದಿದೆ. ದೇವೇಗೌಡರಾಗಲಿ, ನಾನಾಗಲಿ, ಕುಮಾರಸ್ವಾಮಿ ಆಗಲಿ ನಮ್ಮ ಕುಟುಂಬದ ಎಲ್ಲಾ ಸದಸ್ಯರು ದೇವರನ್ನು ನಂಬಿದ್ದೇವೆ. ಇವತ್ತು ಬಂದಿರುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸ್ವಾಗತ ಮಾಡುತ್ತೇನೆ. ಏನಿದೆ ಅಂತಾ ಇನ್ನೂ ಡಿಟೇಲ್ ಆಗಿ ಗೊತ್ತಿಲ್ಲ ನನಗೆ ಎಂದರು.
ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ವಿಚಾರವಾಗಿ ಮಾತನಾಡಿದ ಡಿಸಿಎಂ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ನಾವು ಸುಪ್ರೀಂಕೋರ್ಟ್ಗೆ ಹೋಗಬೇಕಿದೆ, ವಾಸ್ತವಾಂಶ ತಿಳಿಸಲೇಬೇಕಿದೆ. ಸಂಸದರೆಲ್ಲ ರಾಜ್ಯದ ಹಿತ ಕಾಪಾಡಲು ಬದ್ಧ ಅಂತಾ ತಿಳಿಸಿದ್ದಾರೆ. ರಾಜ್ಯದ ಹಿತ ಕಾಪಾಡಲು ಬದ್ಧ ಎಂದಿದ್ದಾರೆ. ನಾನು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೇನೆ. ಸಂಸದರು ಸಹ ಕೇಂದ್ರ ಸಚಿವರ ಭೇಟಿಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಜೊತೆಯೂ ಮಾತನಾಡಿದ್ದೇನೆ ಎಂದರು.
ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಪೊಲೀಸರು ಪಥಸಂಚಲನ ನಡೆಸಿದರು. ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಪಥಸಂಚಲನ ನಡೆಯಿತು. ಹಬ್ಬ ಆಚರಣೆ ವೇಳೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮನವಿ ಮಾಡಿದರು.
ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ವಿಚಾರವಾಗಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಯಾವುದೇ ಕಾರಣಕ್ಕೂ ಸರ್ಕಾರ ನೀರು ಬಿಡುವ ನಿರ್ಧಾರ ಮಾಡಬಾರದು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸರ್ಕಾರ ಧಿಕ್ಕರಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ನೀರು ಬಿಡಲ್ಲ ಎನ್ನುವ ತೀರ್ಮಾನ ಕೈಗೊಂಡಿದೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ಜಲಾಶಯಗಳು ಖಾಲಿಯಾಗಿವೆ, ನೀರು ಬಿಡಲ್ಲ ಎನ್ನುವ ಬದ್ಧತೆ ತೋರಬೇಕು. ರಾಜ್ಯದ ಜನರ ಹಿತರಕ್ಷಣೆಗಾಗಿ ಸರ್ಕಾರ ಕೆಲಸ ಮಾಡಬೇಕು. ಈಗಾಗಲೇ ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರನ್ನು ಬಲಿ ಕೊಟ್ಟಾಗಿದೆ. ನಗರ ಪ್ರದೇಶಗಳ ಜನರನ್ನು ಬಲಿ ಕೊಡುವ ಸ್ಥಿತಿ ನಿರ್ಮಾಣ ಮಾಡಬಾರದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ, ನಾನು ಯಾವತ್ತೂ ಪ್ರತ್ಯೇಕವಾಗಿ ಪ್ರಧಾನಿ ಮೋದಿರನ್ನು ಭೇಟಿಯಾಗಿಲ್ಲ. ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ನಾನು ಯಾರನ್ನೂ ಭೇಟಿಯಾಗಲ್ಲ. ಮೈತ್ರಿ ವಿಚಾರವಾಗಿ ಚರ್ಚೆಗೆ ಬಂದರೆ ಮಾತನಾಡುತ್ತೇನೆ. ಈಗ ನಾವು ಎಲ್ಲಿ ಇದ್ದೇವೋ ಅಲ್ಲೇ ಇರುತ್ತೇವೆ. ಈಗ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಯಾವುದೇ ಚರ್ಚೆ ಇಲ್ಲ ಎಂದರು.
ಯಾದಗಿರಿ: ಬಿಜೆಪಿ ಸರ್ಕಾರ ಬರುತ್ತೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಸಚಿವ ಶರಣಬಸಪ್ಪ ದರ್ಶನಾಪುರ, ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಾರೆ. ಹಿಂದೆ ಬಿಜೆಪಿಯವರು ಏನು ಮಾಡಿದ್ದರು ಅಂತಾ ಗೊತ್ತಿದೆ. ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡೋದು ಎಷ್ಟು ಸರಿ? ರಾಜ್ಯದಲ್ಲಿ 4 ವರ್ಷ ಬಿಜೆಪಿಯವರು ಕೆಟ್ಟದಾಗಿ ಸರ್ಕಾರ ನಡೆಸಿದರು. ರಾಜ್ಯದ ಜನತೆ ಬಿಜೆಪಿಗೆ 113 ಸ್ಥಾನ ನೀಡಿಲ್ಲ, ಮುಂದೆಯೂ ನೀಡಲ್ಲ. ಜನ ಕಾಂಗ್ರೆಸ್ಗೆ ಸರ್ಕಾರ ನಡೆಸಲು ಅವಕಾಶ ನೀಡಿದ್ದಾರೆ. ಜನರ ಆಶೀರ್ವಾದ ಇರುವ ತನಕ ನಮ್ಮ ಸರ್ಕಾರ ಇರುತ್ತದೆ. ಬಿಜೆಪಿಗೆ ಈವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದರು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಜೆಯಾಗುತ್ತಲೇ ಮಳೆಯ ಸಿಂಚನವಾಗಿದೆ. ನಗರದ ಮಾರ್ಕೆಟ್, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಮೈಸೂರು: ತಮಿಳುನಾಡಿಗೆ ಮತ್ತೆ ಐದು ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ವಿಚಾರವಾಗಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತೀರ್ಪು ಅವೈಜ್ಞಾನಿಕ ಅವಾಸ್ತವಿಕ. ತೀರ್ಪು ಕೊಡುವ ಮುನ್ನ ರಾಜ್ಯಕ್ಕೆ ಅಧಿಕಾರಿಗಳು ಭೇಟಿ ನೀಡಬೇಕಿತ್ತು. ನವದೆಹಲಿಯಲ್ಲಿ ಕೈಗೊಂಡಿರುವ ತೀರ್ಮಾನ ಏಕಪಕ್ಷೀಯವಾದದ್ದು, ಇದನ್ನು ರಾಜ್ಯ ಸರ್ಕಾರ ಖಡಾಖಂಡಿತವಾಗಿ ತಿರಸ್ಕರಿಸಬೇಕು. ಸುಪ್ರೀಂಕೋರ್ಟ್ನಲ್ಲಿ ರಾಜ್ಯ ಸರ್ಕಾರ ಮೇಲ್ಮನವಿಯನ್ನು ಸಲ್ಲಿಸಬೇಕು. ಸರ್ವಪಕ್ಷಗಳ ನಿಲುವಿಗೆ ರಾಜ್ಯ ಸರ್ಕಾರ ಬದ್ಧರಾಗಿರಬೇಕು. ಒಂದು ವೇಳೆ ತಮಿಳುನಾಡಿಗೆ ನೀರು ಬಿಟ್ಟರೆ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ ಆದೇಶಕ್ಕೆ ತಡೆ ನೀಡಿದ ವಿಚಾರವಾಗಿ ಮಾತನಾಡಿದ ಹೆಚ್ಡಿ ದೇವೇಗೌಡ, ಸುಪ್ರೀಂಕೋರ್ಟ್ನ ಆದೇಶ ಪ್ರತಿ ಇನ್ನೂ ನೋಡಿಲ್ಲ ಎಂದರು.
ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಆದೇಶ ವಿಚಾರವಾಗಿ ದೆಹಲಿಯಲ್ಲಿ ಟಿವಿ9 ಜೊತೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯದಲ್ಲಿ ಕುಡಿಯಲು ನೀರಿಲ್ಲದೇ ಒದ್ದಾಡುತ್ತಿದ್ದೇವೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ರಾಜ್ಯಸಭೆಯಲ್ಲಿ ಮಾತನಾಡಿದ್ದೆ. ಐವರು ಸದಸ್ಯರನ್ನು ಕಳಿಸಿಕೊಡುವಂತೆ ಮನವಿ ಮಾಡಿದ್ದೆ. ಅಲ್ಲಿ ಬೆಳೆ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೆ ಎಂದರು.
ಬೆಂಗಳೂರು: ಕೆಆರ್ಎಸ್ ಡ್ಯಾಮ್ನಿಂದ ತಮಿಳುನಾಡಿಗೆ ನೀರು ಹರಿಸುವ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್ಸಿ ರವಿಕುಮಾರ್, ರಾಜ್ಯದ ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಘೋಷಣೆ ಮಾಡಲಿ. ಎಕರೆಗೆ ತಲಾ 25 ಸಾವಿರ ರೂ. ಬೆಳೆ ಪರಿಹಾರ ಕೊಡಲಿ. ಕಾವೇರಿ, ಬರ ವಿಚಾರ ಡೈವರ್ಟ್ ಮಾಡಲು ಮೂವರು ಡಿಸಿಎಂ ನೇಮಕದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ.ಎನ್. ರಾಜಣ್ಣ, ಚಲುವರಾಯಸ್ವಾಮಿ ಇವರೆಲ್ಲಾ ಬುದ್ಧಿವಂತರು. ರಾಜ್ಯದಲ್ಲಿ ಬರ, ಕಾವೇರಿ ಸಮಸ್ಯೆ ಬಗ್ಗೆ ಚರ್ಚೆ ಆಗಬಾರದು ಅಂತ ಮೂರು ಡಿಸಿಎಂ ಚರ್ಚೆಗೆ ಬಿಟ್ಟಿದ್ದಾರೆ. ಇವರು ದಲಿತರನ್ನು ಸಿಎಂ ಮಾಡದೇ ಮೋಸ ಮಾಡಿದವರು. ನಾನೇ ಸಿಎಂ ಆಗಬೇಕು, ಐದೂ ವರ್ಷ ನಾನೇ ಸಿಎಂ ಅಂತ ಸಿದ್ದರಾಮಯ್ಯ ಅವರ ಆಪ್ತರಿಂದ ಹೇಳಿಸುತ್ತಿದ್ದಾರೆ. ಇವರಿಗೆ ತಾಕತ್ ಇದ್ದರೆ ಮೂರು ಡಿಸಿಎಂಗಳನ್ನು ಮಾಡಲಿ ಎಂದು ಸವಾಲು ಹಾಕಿದರು.
ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿದ ಹಿನ್ನೆಲೆ ಚೈತ್ರಾ ಕುಂದಾಪುರ ಅವರನ್ನು ಸಿಸಿಬಿ ಕಚೇರಿಗೆ ಕರೆತರಲಾಗಿದ್ದು, ಚೈತ್ರಾ ಮೌನಕ್ಕೆ ಜಾರಿದ್ದಾರೆ. ಸದ್ಯ ತನಿಖಾಧಿಕಾರಿ ರೀನಾ ಸುವರ್ಣ ಅವರು ಕಚೇರಿಗೆ ಆಗಮಿಸಿದ ನಂತರ ವಿಚಾರಣೆ ಆರಂಭಗೊಳ್ಳಲಿದೆ.
ರಾಮನಗರ: ಹುಟ್ಟೂರು ದೊಡ್ಡ ಆಲಹಳ್ಳಿಯಲ್ಲಿ ಅಜ್ಜ, ಇಬ್ಬರು ಅಜ್ಜಿ, ತಂದೆ ಸಮಾಧಿಗೆ ಡಿಕೆ ಶಿವಕುಮಾರ್ ಮತ್ತು ಕುಟುಂಬಸ್ಥರು ಪೂಜೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಂದೆ ಕೆಂಪೇಗೌಡರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು. ಗೌರಿ ಹಬ್ಬದಂದು ತಂದೆ ಸಮಾಧಿಗೆ ಪೂಜೆ ಸಲ್ಲಿಸಿ ಹಾಲು ತುಪ್ಪ ಬಿಟ್ಟರು. ಬಳಿಕ ಸಾಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಸಂಪೂರ್ಣ ಕೇಸರಿಮಯವಾಗಿದೆ. ನಗರದ ಹೃದಯಭಾಗ ಚೆನ್ನಮ್ಮವೃತ್ತ , ಸಂಗೊಳ್ಳಿ ರಾಯಣ್ಣ ವೃತ್ತ ಸಂಪೂರ್ಣ ಭಗವಾ ಧ್ವಜಗಳನ್ನು ಕಟ್ಟಲಾಗಿದೆ. ವಿವಾದಿತ ಈದ್ಗಾ ಮೈದಾನದ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಾಳೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ಈ ಹಿನ್ನೆಲೆಯಲ್ಲಿ ಒಂದೆಡೆ ಹಿಂದೂಪರ ಸಂಘಟನೆಗಳು ತಯಾರಿಯಲ್ಲಿ ತೊಡಗಿಕೊಂಡಿವೆ.
ಬೆಂಗಳೂರು: ಮೂರು ಜನರನ್ನು ಉಪಮುಖ್ಯಮಂತ್ರಿ ಮಾಡುವ ವಿಚಾರವಾಗಿ ಮುಖ್ಯಮಂತ್ರಿಗಳೇ ಉತ್ತರ ಕೊಡುತ್ತಾರೆ. ಮುಖ್ಯಮಂತ್ರಿಗಳ ಕೆಳಗೆ ಕೆಲಸ ಮಾಡುತ್ತಿದ್ದೇವೆ. ಅವರೇ ಉತ್ತರ ಕೊಡಬೇಕು. ಮೂರು ಉಪಮುಖ್ಯಮಂತ್ರಿ ಸ್ಥಾನಗಳ ಬಗ್ಗೆ ಅವರನ್ನೇ ಕೇಳಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಜಾರಿಕೊಂಡರು.
ಹೆಚ್.ಡಿ.ಕುಮಾರಸ್ವಾಮಿ ಭೇಟಿಯಲ್ಲಿ ಯಾವುದೇ ವಿಶೇಷತೆ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಗೆ ಹೈಕಮಾಂಡ್ ನಿರ್ಧಾರ ಸ್ವಾಗತ ಮಾಡುತ್ತೇನೆ. ಹೆಚ್ಡಿ ಕುಮಾರಸ್ವಾಮಿಯವರು ಸತತವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಮೈತ್ರಿಯಿಂದ ಇನ್ನಷ್ಟು ಶಕ್ತಿ ಬರಲಿದೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಬೆಂಗಳೂರು: ತಮಿಳುನಾಡಿಗೆ ಕೆಆರ್ಎಸ್ ಡ್ಯಾಂನಿಂದ ನೀರು ಬಿಡುವ ವಿಚಾರವಾಗಿ ಸಂಸತ್ ಅಧಿವೇಶನದ ವೇಳೆ ಪ್ರಧಾನಿ ಮೋದಿ ಭೇಟಿ ಮಾಡಲು ಚಿಂತಿಸಲಾಗಿದೆ. ಪ್ರಧಾನಿ ಮೋದಿ ಅವರ ಬಳಿ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು. ಆದರೆ ಪ್ರಧಾನಿ ಮೋದಿ ಅವರು ಇನ್ನೂ ಭೇಟಿಗೆ ಅವಕಾಶ ಕೊಟ್ಟಿಲ್ಲ. ಕಾವೇರಿ ನೀರಿನ ಬಗ್ಗೆ ನ್ಯಾಯಾಲಯಕ್ಕೆ ವಾಸ್ತವಾಂಶ ತಿಳಿಸುತ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಸಂಸತ್ನಲ್ಲಿ ಹಲವು ಐತಿಹಾಸಿಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಆರ್ಟಿಕಲ್ 370 ರದ್ದತಿ, ಜಿಎಸ್ಟಿ ನಿರ್ಣಯ ಇದೇ ಸದನದಲ್ಲಿ ಆಗಿದ್ದು, ಈ ಸದನ ಲೋಕತಂತ್ರದ ತಾಕತ್ತು. 4 ಸಂಸದರನ್ನು ಹೊಂದಿದ್ದ ಪಕ್ಷ ಅಧಿಕಾರದಲ್ಲಿತ್ತು. 100 ಸಂಸದರನ್ನು ಹೊಂದಿದ್ದ ಪಕ್ಷ ವಿಪಕ್ಷ ಸ್ಥಾನದಲ್ಲಿದ್ದರು. ಒಂದು ವೋಟ್ನಿಂದ ಸರ್ಕಾರ ಪತನವಾಗಿದ್ದನ್ನು ನೋಡಿದ್ದೇವೆ. ಇದೇ ಸದನದಲ್ಲಿ ಹೊಸ ರಾಜ್ಯಗಳ ರಚನೆಯಾಗಿದೆ. ನಮ್ಮ ಸಂಸತ್ ಅನೇಕ ಐತಿಹಾಸಿಕ ನಿರ್ಣಯಗಳಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಭಾರತದ ವಿಕಾಸ ಯಾತ್ರೆಯಲ್ಲಿ ಪತ್ರಕರ್ತರ ಸೇವೆ ಮರೆಯಲು ಆಗಲ್ಲ. ದೇಶದ ಕನ್ನಡಿಯಂತೆ ಪತ್ರಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಹಳೇ ಸಂಸತ್ ಭವನ ಬಿಟ್ಟು ಹೋಗಲು ದುಃಖ ಆಗುತ್ತಿದೆ. ಪತ್ರಕರ್ತರಿಗೂ ಕೂಡ ನಮಗಿಂತ ಹೆಚ್ಚು ದುಃಖ ಆಗುತ್ತದೆ. ನಮಗಿಂತ ಹೆಚ್ಚು ಸಮಯ ಪತ್ರಕರ್ತರು ಇಲ್ಲಿ ಕಳೆದಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಸಂಸತ್ ಭವನದ ಮೇಲೂ ಭಯೋತ್ಪಾದಕರ ದಾಳಿ ನಡೆಯಿತು. ಸಂಸದರನ್ನು ಉಳಿಸಲು ಭದ್ರತಾ ಸಿಬ್ಬಂದಿ ಜೀವ ಕಳೆದುಕೊಂಡರು. ಭದ್ರತಾ ಸಿಬ್ಬಂದಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ. ಪತ್ರಕರ್ತರು ಸಂಸತ್ ಕಲಾಪಗಳಿಗೆ ಜೀವಂತ ಸಾಕ್ಷಿಯಾಗಿದ್ದಾರೆ. ತಂತ್ರಜ್ಞಾನ ವ್ಯವಸ್ಥೆ ಇಲ್ಲದಿದ್ದಾಗಲೂ ನಿಖರ ಸುದ್ದಿ ತಲುಪಿಸುತ್ತಿದ್ದರು. ಸಂಸತ್ ಕಲಾಪದ ವರದಿ ಮಾಡಿದ ಮಾಧ್ಯಮಗಳಿಗೂ ಪ್ರಧಾನಿ ಮೋದಿ ಧನ್ಯವಾದ ಅರ್ಪಿಸಿದರು.
ಕಠಿಣ ಸಂದರ್ಭದಲ್ಲೂ ಸಂಸದರು ಜವಾಬ್ದಾರಿ ನಿಭಾಯಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಕೆಲ ಸಂಸದರು ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅನಾರೋಗ್ಯದ ನಡುವೆಯೂ ಕಲಾಪಕ್ಕೆ ಸದಸ್ಯರು ಹಾಜರಾಗಿದ್ದಾರೆ. ಕೊರೊನಾ ಸಂದರ್ಭದಲ್ಲೂ ಸಂಸತ್ ನಡೆಸಲಾಯಿತು. ರಾಷ್ಟ್ರದ ಕೆಲಸ ನಿಲ್ಲಬಾರದು ಎಂದು ಕಲಾಪ ನಡೆಸಲಾಯಿತು. ಕೆಲವು ಮಾಜಿ ಸಂಸದರು ಸಂಸತ್ಗೆ ನಿರಂತರ ಭೇಟಿ ನೀಡುತ್ತಾರೆ. ಇದು ದೇಶದ ಸಂಸತ್ನ ತಾಕತ್ತು. ಇಲ್ಲೇ 2 ವರ್ಷ 11 ತಿಂಗಳು ಸಂವಿಧಾನದ ರಚನಾ ಸಮಿತಿ ಸಭೆ ಆಯ್ತು. ಸಂವಿಧಾನವನ್ನು ನಾವು ಇಲ್ಲೇ ಒಪ್ಪಿಕೊಂಡೆವು. ಬಹಳಷ್ಟು ನೌಕರರು, ಕಾರ್ಮಿಕರು ಸಂಸತ್ನಲ್ಲಿ ಕೆಲಸ ಮಾಡಿದ್ದಾರೆ. ದೇಶವನ್ನು ಮುನ್ನಡೆಸುವ ಪ್ರಕ್ರಿಯೆಯಲ್ಲಿ ಅವರು ಕೆಲಸ ಮಾಡಿದ್ದಾರೆ. ಹೀಗಾಗಿ ಸಂಸತ್ ಸಿಬ್ಬಂದಿಗೂ ವಿಶೇಷವಾಗಿ ಧನ್ಯವಾದ ಹೇಳುತ್ತೇನೆ. ಸಂಸತ್ ಕಲಾಪದ ವರದಿ ಮಾಡಿದ ಮಾಧ್ಯಮಗಳಿಗೂ ಧನ್ಯವಾದ ಎಂದು ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಅರ್ಪಿಸಿದರು.
ನೂತನ ಸಂಸತ್ನ ಪ್ರವೇಶದ ದ್ವಾರದಲ್ಲಿ ಜನರಿಗಾಗಿ ಬಾಗಿಲು ತೆರೆಯಿರಿ ಎಂಬ ವಾಕ್ಯವಿದೆ. ಇದನ್ನು ಋಷಿ ಮುನಿಗಳು ಇದನ್ನು ಬರೆದಿದ್ದಾರೆ. ಆರಂಭದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ತುಂಬಾ ಕಡಿಮೆ ಇತ್ತು. ದಿನ ಕಳೆದಂತೆ ಮಹಿಳಾ ಸದಸ್ಯರ ಸಂಖ್ಯೆಯೂ ಹೆಚ್ಚಳವಾಗಿದೆ. ವಾದ-ಪ್ರತಿವಾದ ಪ್ರತಿಯೊಂದು ನಮಗೆ ಅನುಭವ ಆಗಿದೆ. ನಮ್ಮ ಕುಟುಂಬದ ನಡುವೆ ವಾದ ಆಗಿದೆ. ಈವರೆಗೂ 7,500 ಸಂಸದರು ಸಂಸತ್ನಲ್ಲಿ ಸೇವೆ ಸಲ್ಲಿಸಿದ್ದಾರೆ. 600ಕ್ಕೂ ಹೆಚ್ಚು ಮಹಿಳೆಯರು ಸಂಸತ್ನ ಗೌರವ ಹೆಚ್ಚಿಸಿದ್ದಾರೆ. ಎರಡು ಸದನಗಳ ಸದಸ್ಯರು ಸಂಸತ್ ಮೂಲಕ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಡೀ ವಿಶ್ವವೇ ಭಾರತದ ಸ್ನೇಹವನ್ನು ಸ್ವೀಕರಿಸಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಮಂತ್ರ. ಸಂಸತ್ಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿ. ಹಳೆಯ ಸಂಸತ್ ಭವನ ಬಿಟ್ಟು ಹೋಗುವುದು ಕಷ್ಟದ ಕೆಲಸ. ಹಳೇ ಮನೆ ಬಿಟ್ಟು ಹೋಗಲು ಕುಟುಂಬಕ್ಕೆ ಎಷ್ಟು ಕಷ್ಟವೋ ಹಾಗೆ. ಅನೇಕ ಕಹಿ, ಸಿಹಿ ನೆನಪುಗಳ ಸಮ್ಮಿಲನ ಹಳೆಯ ಸಂಸತ್ ಭವನ. ಒಂದು ಕುಟುಂಬ ಹಳೇ ಮನೆ ಬಿಟ್ಟು ಹೋಗಲು ಆಗಲ್ಲ. ಈ ಸದನ ಬಿಟ್ಟು ಹೊಸ ಸದನಕ್ಕೆ ಪ್ರವೇಶ ಮಾಡುತ್ತಿದ್ದೇವೆ. ಮೊದಲ ಬಾರಿ ಸಂಸತ್ ಭವನ ಪ್ರವೇಶಿಸಿದಾಗ ಭಾವುಕನಾಗಿದ್ದೆ. ಸಂಸತ್ ಭವನದ ಮೆಟ್ಟಿಲುಗಳಿಗೆ ಶಿರಬಾಗಿ ನಮಸ್ಕಾರ ಮಾಡಿದ್ದೆ. ಸಂಸತ್ ಪ್ರವೇಶಿಸುತ್ತೇನೆಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಹಳೆ ಸಂಸತ್ ಭವನ ಬಿಟ್ಟು ಹೋಗುವುದು ಕಷ್ಟದ ಕೆಲಸ. ಹಳೆಯ ಮನೆಯನ್ನು ಬಿಟ್ಟು ಹೋಗುವುದು ಒಂದು ಕುಟುಂಬಕ್ಕೆ ಎಷ್ಟು ಕಷ್ಟವೋ ಹಾಗೆ ಕಷ್ಟವಾಗುತ್ತದೆ. ಅನೇಕ ಕಹಿ, ಸಿಹಿ ನೆನಪುಗಳ ಮಿಳಿತ ಹಳೆಯ ಸಂಸತ್ ಭವನದಲ್ಲಿದೆ. ಸಂಘರ್ಷದ ಘಟನೆಗಳು ಈ ಸಂಸತ್ ಭವನದಲ್ಲಿ ನಡೆದಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ನಾವೆಲ್ಲ ಸಂಭ್ರಮ ಪಡುವ ವಿಚಾರ ಅಂದರೆ ಅದು G20 ಯಶಸ್ಸು ಭಾರತದ ಯಶಸ್ಸಾಗಿದೆ. ಇದು ಯಾವುದೇ ಪಕ್ಷದ, ನಾಯಕನ ಯಶಸ್ಸು ಅಲ್ಲ. 140 ಕೋಟಿ ಭಾರತೀಯರ ಯಶಸ್ಸು. ಆಫ್ರೀಕನ್ ಯೂನಿಯನ್ ಕೂಡ G20ಗೆ ಸೇರಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಹಳೆಯ ಸಂಸತ್ ಭವನವನ್ನು ವಿದೇಶಿಗರು ಕಟ್ಟಿರಬಹುದು. ಭವನ ಕಟ್ಟಲು ಈ ದೇಶದ ಜನರು ಬೆವರು ಹರಿಸಿದ್ದಾರೆ. ಈ ದೇಶ ಹಣದಿಂದ ಸಂಸತ್ ಭವನ ಕಟ್ಟಲಾಗಿದೆ. ಮುಂದೆ ಹೊಸ ಸಂಸತ್ ಭವನಕ್ಕೆ ಹೋಗಲಿದ್ದೇವೆ. ಹಳೆ ಸಂಸತ್ ಭವನ ನಮಗೆ ಯಾವಾಗಲು ಪ್ರೇರಣೆ ನೀಡಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಸಂಸತ್ ಕಲಾಪಕ್ಕೆ 75 ವರ್ಷ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ನಡೆಯುತ್ತಿದ್ದು, ಅಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತುದ್ದಾರೆ.
ಹಳೆಯ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷಗಳು ಗದ್ದಲ ಮಾಡಿದವು.
ಇಂಡಿಯಾ ಒಕ್ಕೂಟದ ಪಕ್ಷಗಳ ಸಭೆ ಅಂತ್ಯವಾಗಿದ್ದು, ವಿಶೇಷ ಅಧಿವೇಶನದಲ್ಲಿ ಭಾಗಿಯಾಗಲು ನಿರ್ಧರಿಸಲಾಗಿದೆ. ಸಂಸತ್ನಲ್ಲಿ ದೇಶದ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಲು ವಿರೋಧಪಕ್ಷಗಳು ತೀರ್ಮಾನಿಸಿವೆ.
ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆಯಿಂದ ಕುಶಲಕರ್ಮಿಗಳಿಗೆ ಆರ್ಥಿಕವಾಗಿ ನೆರವಾಗಲಿದೆ. ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯಲಿದೆ. ಪ್ರತಿಪಕ್ಷಗಳು ಸುಗಮ ಕಲಾಪಕ್ಕೆ ಸಹಕಾರ ನೀಡುವ ಭರವಸೆ ಇದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
#WATCH | PM Narendra Modi says, “…This session of the Parliament is short but going by the time, it is huge. This is a session of historic decisions. A speciality of this session is that the journey of 75 years is starting from a new destination…Now, while taking forward the… pic.twitter.com/suOuM2pnyH
— ANI (@ANI) September 18, 2023
ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ. ಚಂದ್ರಯಾನ-3 ಯಶಸ್ವಿ ಬಳಿಕ ಭಾರತ ವಿಶ್ವದ ಗಮನ ಸೆಳೆದಿದೆ. ಚಂದ್ರನ ಅಂಗಳದಲ್ಲಿ ಭಾರತದ ರಾಷ್ಟ್ರಧ್ವಜ ಹಾರುತ್ತಿದೆ. ಚಂದ್ರಯಾನ-3 ನಮ್ಮ ತಿರಂಗವನ್ನು ಎತ್ತಿ ಹಿಡಿದಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ. ಜಗತ್ತು, ಅಂತಹ ಸಾಧನೆಯನ್ನು ಮಾಡಿದಾಗ, ಅದನ್ನು ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಜೋಡಿಸುವ ಮೂಲಕ ನೋಡಲಾಗುತ್ತದೆ. ಈ ಸಾಧನೆಯಿಂದ ಹಲವು ಅವಕಾಶಗಳು ಭಾರತದ ಬಾಗಿಲುಗಳನ್ನ ತಟ್ಟುತ್ತವೆ. ಇಸ್ರೋ ವಿಜ್ಞಾನಿಗಳ ಸಾಧನೆ ಎಲ್ಲರಿಗೂ ಸ್ಫೂರ್ತಿ ಎಂದು ಸಂಸತ್ ಭವನದ ಬಳಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಇಂದಿನಿಂದ ಐದು ದಿನ ಸಂಸತ್ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 11 ಗಂಟೆಗೆ ಭಾಷಣ ಮಾಡಲಿದ್ದಾರೆ. 75 ವರ್ಷಗಳ ಸಂಸದೀಯ ಪಯಣ – ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಪಾಠಗಳ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ಕೊಪ್ಪಳ: ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಕೊಪ್ಪಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ಪೊಲೀಸ್ ಇಲಾಖೆ ರೂಟ್ ಮಾರ್ಚ್ ನಡೆಸಿತು. ನಗರದ ಡಿಎಆರ್ ಕಚೇರಿಯಿಂದ ನಗರಸಭೆ ಕಚೇರಿಯವರೆಗೆ ರೂಟ್ ಮಾರ್ಚ್ ನಡೆಯಿತು. ರೂಟ್ ಮಾರ್ಚ್ನಲ್ಲಿ ಜಿಲ್ಲಾಧಿಕಾರಿ ನಲೀನ್ ಅತುಲ್ ಎಸ್ಪಿ ಯಶೋಧಾ ವಂಟಗೋಡಿ ಸೇರಿದಂತೆ 20 ಕ್ಕೂ ಹೆಚ್ಚು ಇನ್ಸಪೆಕ್ಟರ್, ಪಿಎಸ್, 500 ಪೊಲೀಸ್ ಪೇದೆಗಳು, ಹೋಂ ಗಾರ್ಡ್ಗಳು ರೂಟ್ ಮಾರ್ಚ್ನಲ್ಲಿ ಭಾಗಿಯಾಗಿದ್ದರು.
ಉಡುಪಿ: ಬಿಜೆಪಿ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ಐದು ಕೋಟಿ ರೂ. ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ, ಟಿಕೆಟ್ ಆಕಾಂಕ್ಷಿ ಗೋವಿಂದಬಾಬು ಐದು ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಚೈತ್ರಾ ಕುಂದಾಪುರ ಜಾರಿ ನಿರ್ದೇಶನಾಲಯಕ್ಕೆ (ED) ಪತ್ರ ಬರೆದಿದ್ದಾರೆ.
ಇಂದಿನಿಂದ ಸಂಸತ್ ವಿಶೇಷ ಅಧಿವೇಶನ ಹಿನ್ನೆಲೆಯಲ್ಲಿ 9 ಅಂಶಗಳ ಚರ್ಚೆಗೆ ಕಾಂಗ್ರೆಸ್ ಒತ್ತಾಯ ಮಾಡುತ್ತಿದೆ. ಪ್ರಸ್ತುತ ಆರ್ಥಿಕ ಹಿಂಜರಿಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗ, ರೈತರ ಬೆಳೆಗಳಿಗೆ MSP ಮತ್ತು ರೈತರ ಇತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅದಾನಿ ವ್ಯಾಪಾರದ ಅವ್ಯವಹಾರದ ಕುರಿತು JPC ತನಿಖೆ,
ಮಣಿಪುರದ ಜನರು ಎದುರಿಸುತ್ತಿರುವ ನಿರಂತರ ಸಂಕಟ ಮತ್ತು ರಾಜ್ಯದಲ್ಲಿ ಸಾಂವಿಧಾನಿಕ ಯಂತ್ರಗಳ ಕುಸಿತ,
ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೋಮು ಉದ್ವಿಗ್ನತೆ, ಚೀನಾದಿಂದ ಭಾರತೀಯ ಭೂಪ್ರದೇಶದ ಮುಂದುವರಿದ ಆಕ್ರಮಣ ಮತ್ತು ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿ ನಮ್ಮ ಸಾರ್ವಭೌಮತ್ವಕ್ಕೆ ಸವಾಲು, ಜಾತಿ ಗಣತಿಯ ತುರ್ತು ಅಗತ್ಯ, ಕೇಂದ್ರ-ರಾಜ್ಯ ಸಂಬಂಧಗಳ ಮೇಲೆ ಆಗುತ್ತಿರುವ ಹಾನಿ, ಕೆಲವು ರಾಜ್ಯಗಳಲ್ಲಿ ಅತಿವೃಷ್ಟಿ ಮತ್ತು ಇತರ ರಾಜ್ಯಗಳಲ್ಲಿ ಅನಾವೃಷ್ಟಿಯಿಂದ ಉಂಟಾದ ನೈಸರ್ಗಿಕ ವಿಕೋಪಗಳ ಪರಿಣಾಮ, ಈ ಎಲ್ಲ ಅಂಶಗಳ ಕುರಿತು ಚರ್ಚಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಇಂದಿನಿಂದ (ಸೆ.18) ಐದು ದಿನಗಳಕಾಲ ವಿಶೇಷ ಸಂಸತ್ ಅಧಿವೇಶನ ನಡೆಯಲಿದೆ. ಇಂದು ಹಳೆ ಸಂಸತ್ ಭವನದಲ್ಲಿ ಕಲಾಪ ಆರಂಭವಾಗಲಿದ್ದು, ನಾಳೆ (ಸೆ.19) ರಂದು ಹೊಸ ಸಂಸತ್ ಭವನಕ್ಕೆ ಕಲಾಪ ವರ್ಗಾವಣೆಯಾಗಲಿದೆ. ನಾಳೆಯಿಂದ ಹೊಸ ಸಂಸತ್ ಭವನದ ಕಟ್ಟಡದಲ್ಲಿ ಅಧಿಕೃತವಾಗಿ ಕಲಾಪ ಆರಂಭವಾಗಲಿದೆ.
ಮೈಸೂರು: ಅಗ್ರಹಾರದ 101 ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಒಂದೇ ದೇಗುಲದಲ್ಲಿರುವ 101 ಗಣಪತಿ ವಿಗ್ರಹಗಳಿವೆ. ಅಶ್ವಿನಿ, ಭರಣಿ, ಕೃತ್ತಿಕಾ ರೋಹಿಣಿ, ಮೃಗಶಿರಾ ಸೇರಿದಂತೆ 27 ವಿದಧ ಗಣಪ, ದ್ವಿಜ ಗಣಪತಿ ಸಿದ್ದಿ ಗಣಪತಿ ಸಂಕಷ್ಟಹರ ಗಣಪತಿ ವರ ಗಣಪತಿ ಸೇರಿದಂತೆ 27 ವಿವಿಧ ಗಣಪತಿ ವಿಗ್ರಹಗಳಿವೆ.
ಬೆಂಗಳೂರು: ಇಂದು ನಾಡಿನೆಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೀಗಾಗಿ ನಗರದ ದೊಡ್ಡ ಗಣೇಶ ದೇವಸ್ಥಾನ ಹಾಗೂ ಪುಟ್ಟೇನಹಳ್ಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿದೆ. ಬೆಳ್ಳಗ್ಗೆ 6 ಗಂಟೆಯಿಂದಲೇ ವಿಶೇಷ ಪೂಜೆ ಶುರುವಾಗಿದೆ. ಪಂಚಾಭಿಷೇಕ, ಪುಷ್ಪಭಿಷೇಕ ನೆರವೇರಿಸಿ ನಂತರ ಬೆಣ್ಣೆ ಅಲಂಕಾರ ಮಾಡಲಾಗಿದೆ. ಇಂದು ರಾತ್ರಿ 9 ಗಂಟೆಯವರೆಗೂ ವಿಶೇಷ ಪೂಜೆ ಇರಲಿದೆ. ಹೀಗಾಗಿ ದೊಡ್ಡ ಗಣೇಶ ಹಾಗೂ ಪುಟ್ಟೆನಗಳ್ಳಿ ಗಣೇಶ ದೇವಸ್ಥಾನಕ್ಕೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
Published On - 7:50 am, Mon, 18 September 23