ಇನ್ನೊಂದು ವಾರ ಲಾಕ್​ಡೌನ್​ ಮುಂದುವರೆಯುವ ಸಾಧ್ಯತೆ; ಬಳಿಕ ಈ ಎಲ್ಲಾ ವಲಯಗಳಿಗೆ ವಿನಾಯಿತಿ ಘೋಷಣೆ ನಿರೀಕ್ಷೆ

ರಫ್ತು ಆಧಾರಿತ ಉತ್ಪಾದಕ ವಲಯದ ಕೈಗಾರಿಕೆಗಳಾದ ಕಬ್ಬಿಣ, ಉಕ್ಕು, ಎಲೆಕ್ಟ್ರಾನಿಕ್ ವಲಯದ ಕಂಪನಿಗಳಿಗೆ ವಿನಾಯಿತಿ ಜತೆಗೆ ಕ್ರೇನ್, ಬುಲ್ಡೋಜರ್, ಜನರೇಟರ್, ರೋಲರ್ ಸೇರಿದಂತೆ ಬೃಹತ್ ಯಂತ್ರಗಳ ರಿಪೇರಿ ವರ್ಕ್ ಶಾಪ್​ ಕಾರ್ಯಾರಂಭಕ್ಕೆ ಷರತ್ತುಬದ್ಧ ಅನುಮತಿ ವಿಧಿಸುವ ಆಲೋಚನೆ ಇದೆ.

ಇನ್ನೊಂದು ವಾರ ಲಾಕ್​ಡೌನ್​ ಮುಂದುವರೆಯುವ ಸಾಧ್ಯತೆ; ಬಳಿಕ ಈ ಎಲ್ಲಾ ವಲಯಗಳಿಗೆ ವಿನಾಯಿತಿ ಘೋಷಣೆ ನಿರೀಕ್ಷೆ
ಸಾಂದರ್ಭಿಕ ಚಿತ್ರ
Edited By:

Updated on: Jun 03, 2021 | 7:35 AM

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಮಿತ್ತ ಜೂನ್​ 7ರ ತನಕ ಹೇರಲಾಗಿರುವ ಲಾಕ್​ಡೌನ್​ ಮತ್ತೆ ಒಂದು ವಾರ ಮುಂದುವರೆಯುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ತಿಳಿಸಿವೆ. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಕೊವಿಡ್ ಉಸ್ತುವಾರಿ ಸಚಿವರು, ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ತಿಳಿದುಬಂದಿದೆ. ಮತ್ತೆ ಒಂದು ವಾರ ಲಾಕ್​ಡೌನ್​ ಮುಂದುವರಿಕೆ ಬಗ್ಗೆ ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಇಂದಿನಿಂದ (ಜೂನ್ 3) ರಾಜ್ಯದಲ್ಲಿ ರಫ್ತು ವಲಯಕ್ಕೆ ಸಂಬಂಧಿಸಿದ ಉದ್ಯಮಗಳಿಗೆ ಶೇ.‌100ರಷ್ಟು ಕಾರ್ಯ ನಿರ್ವಹಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು, ಶೇ.‌50 ರಷ್ಟು ಸಿಬ್ಬಂದಿಯೊಂದಿಗೆ ರಫ್ತು ಸಂಬಂಧಿತ ಕಂಪನಿಗಳು ಕಾರ್ಯನಿರ್ವಹಿಸಬಹುದಾಗಿದೆ. ಒಂದು ಸಾವಿರಕ್ಕಿಂತ ಹೆಚ್ಚು ಕೆಲಸಗಾರರು ಅಥವಾ ಕಾರ್ಮಿಕರಿರುವ ಕೈಗಾರಿಕೆಗಳು ನಿಯಮಿತವಾಗಿ‌ ವಾರಕ್ಕೆ ಎರಡು ಬಾರಿ ಆರ್​ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ಕೂಡಾ ರಾಜ್ಯ ಸರ್ಕಾರ ಆದೇಶ ನೀಡಿದೆ. ಸದ್ಯ ಈ ವಿನಾಯಿತಿ ಸೇರಿದಂತೆ ಈಗಿರುವ ಕಠಿಣ ನಿರ್ಬಂಧಗಳ ಮಾರ್ಗಸೂಚಿ ಇನ್ನೊಂದು ವಾರ ಬಹುತೇಕ ಯಥಾವತ್ತಾಗಿ ಮುಂದುವರೆಯಲಿದೆ ಎನ್ನಲಾಗುತ್ತಿದೆ.

ಒಂದು ವಾರದ ಪರಿಸ್ಥಿತಿ ಅವಲೋಕನ ಮಾಡಲಿರುವ ರಾಜ್ಯ ಸರ್ಕಾರ ಬಳಿಕ ಕೆಲವೊಂದು ರಿಯಾಯಿತಿಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ರಫ್ತು ಆಧಾರಿತ ಉತ್ಪಾದಕ ವಲಯದ ಕೈಗಾರಿಕೆಗಳಾದ ಕಬ್ಬಿಣ, ಉಕ್ಕು, ಎಲೆಕ್ಟ್ರಾನಿಕ್ ವಲಯದ ಕಂಪನಿಗಳಿಗೆ ವಿನಾಯಿತಿ ಜತೆಗೆ ಕ್ರೇನ್, ಬುಲ್ಡೋಜರ್, ಜನರೇಟರ್, ರೋಲರ್ ಸೇರಿದಂತೆ ಬೃಹತ್ ಯಂತ್ರಗಳ ರಿಪೇರಿ ವರ್ಕ್ ಶಾಪ್​ ಕಾರ್ಯಾರಂಭಕ್ಕೆ ಷರತ್ತುಬದ್ಧ ಅನುಮತಿ ವಿಧಿಸುವ ಆಲೋಚನೆ ಇದೆ.

ಅಲ್ಲದೇ, ಕನ್ನಡ ಧಾರವಾಹಿಗಳ ಚಿತ್ರೀಕರಣಕ್ಕೆ ಸ್ಟುಡಿಯೋಗಳಲ್ಲಿ ಷರತ್ತು ಬದ್ಧ ಅನುಮತಿ ಸಾಧ್ಯತೆಯಿದ್ದು, ಬ್ಯೂಟಿ ಪಾರ್ಲರ್, ಸೆಲೂನ್​ಗಳಿಗೂ ಷರತ್ತು ಬದ್ಧ ಅವಕಾಶ ನೀಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಅಗತ್ಯ ವಸ್ತುಗಳ ಖರೀದಿ ವೇಳೆಯಲ್ಲಿ ಸಂಜೆಯವರೆಗೆ ಅವಕಾಶ ಕಲ್ಪಿಸುವುದು, ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಗೆ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡುವುದು, ಹೊಲಗಳಿಗೆ ಹೋಗಿ ನೇರವಾಗಿ ರೈತರಿಂದಲೇ ಉತ್ಪನ್ನ ಖರೀದಿಗೆ ಅವಕಾಶ ನೀಡುವುದು ಸೇರಿದಂತೆ ಒಂದಷ್ಟು ವಿನಾಯಿತಿ ಘೋಷಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ:
ಹಳ್ಳಿಗಳಲ್ಲಿ ಕೊರೊನಾ ನಿಯಂತ್ರಿಸಲು ಹೆಚ್ಚಿನ ಗಮನ; ಲಾಕ್​ಡೌನ್ ಮುಂದುವರಿಕೆ ಬಗ್ಗೆ ಜೂನ್ 5ರಂದು ನಿರ್ಧಾರ 

Karnataka Lockdown: ಆರ್ಥಿಕ ಚಟುವಟಿಕೆ ಚುರುಕಿಗೆ ರಾಜ್ಯ ಸರ್ಕಾರ ಪ್ಲ್ಯಾನ್; ಲಾಕ್​ಡೌನ್ ನಿಯಮಾವಳಿ ಕೊಂಚ ಸಡಿಲಿಕೆ