ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮಾಜಕ್ಕೆ ಏನು ಕೊಟ್ಟಿದ್ದಾರೆ? ಇಬ್ರಾಹಿಂ ಪ್ರಶ್ನೆ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವಾಗಲೇ ಮುಸ್ಲಿಮರು ಏನಾದ್ರೂ ಮಾಡಿಕೊಳ್ಬೇಕು. ನಂತರ ಮುಸ್ಲಿಮರಿಗೆ ಚೊಂಬೇ ಗತಿ ಎಂದು ಕಾಂಗ್ರೆಸ್​ ನಾಯಕ ಇಕ್ಬಾಳ್ ಅನ್ಸಾರಿ ಹೇಳಿದ್ದು, ಇದೀಗ ಇದಕ್ಕೆ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮಾಜಕ್ಕೆ ಏನು ಮಾಡಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮುಸ್ಲಿಂ ಸಮಾಜಕ್ಕೆ ಏನು ಕೊಟ್ಟಿದ್ದಾರೆ? ಇಬ್ರಾಹಿಂ ಪ್ರಶ್ನೆ
Edited By:

Updated on: Nov 11, 2024 | 6:31 PM

ವಿಜಯಪುರ (ನವೆಂಬರ್ 11): ಸಿದ್ದರಾಮಯ್ಯ ಮುಸ್ಲಿಮರ ಪರವಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆಮುಂದೆ ನೋಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಒಂದೂವರೆ ವರ್ಷವಾಯಿತು. ಸಿದ್ದರಾಮಯ್ಯ ಮೇಲೆ ನಿರೀಕ್ಷೆ ಇಟ್ಟಿದ್ದು ಆಗಲಿಲ್ಲ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಸಿಎಂ ಇರುವಾಗಲೇ ಮುಸ್ಲಿಮರು ಏನಾದರೂ ಮಾಡಿಕೊಳ್ಳಬೇಕು, ಇಲ್ಲದಿದ್ರೆ ಮುಸ್ಲಿಮರಿಗೆ ಚೊಂಬೇ ಗತಿ ಎಂಬ ಮಾಜಿ ಸಚಿವ ಅನ್ಸಾರಿ ಹೇಳಿಕೆ ವಿಚಾರವಾಗಿ ಇಂದು ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ ಅವರು, ಸಿದ್ದರಾಮಯ್ಯ ಸಿಎಂ ಆಗಿ ಒಂದೂವರೆ ವರ್ಷವಾಯ್ತು. ನಾವು ಸಿದ್ದರಾಮಯ್ಯ ಮೇಲೆ ನಿರೀಕ್ಷೆ ಇಟ್ಟಿಷ್ಟು ಆಗಲಿಲ್ಲ. ಮುಸ್ಲಿಮರಿಗೆ ರಿಸರ್ವೇಶನ್ ಆಗಿಲ್ಲ, ಹಿಜಾಬ್ ಬಗ್ಗೆ ಸುಪ್ರೀಂಕೋರ್ಟ್ ಆದೇಶವಾಗಿದ್ರು ನೋಟಿಫಿಕೇಶನ್ ಮಾಡಿಲ್ಲ. ಸಿದ್ದರಾಮಯ್ಯ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿಂದೆಮುಂದೆ ನೋಡುತ್ತಿದ್ದಾರೆ. ಅವರಿಗೆ ಏನು ಒತ್ತಡವಿದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬಳಿಕ ರಾಜ್ಯದ ಮುಸ್ಲಿಮರಿಗೆ ಚೊಂಬು: ಅನ್ಸಾರಿ

ಸಿದ್ದರಾಮಯ್ಯ ಮುಸ್ಲಿಮರನ್ನು ಒಲೈಸಿದ್ದಾರೆ ಎಂಬ ಮಾತು ಹೇಳುತ್ತಿದ್ದಾರೆ. ಎಲ್ಲಿ ಓಲೈಕೆ ಮಾಡಿದ್ದಾರೆ. ಸವಣೂರಿನಲ್ಲಿ 50 ಜನ ಮುಸ್ಲಿಂರನ್ನು ಒದ್ದು ಹೊರಗೆ ಹಾಕಿದ್ದಾರೆ. ಇದು ಓಲೈಕೆನಾ? ಸವಣೂರಿನಲ್ಲಿ ಇಲ್ಲ ಅವರೀಗ ಹಳ್ಳಿಗೆ ಹೋಗಿದ್ದಾರೆ. ಇಷ್ಟೆಲ್ಲ ಆದ್ರೂ ಇದುವರೆಗೆ ಒಂದೂ ಎಫ್‌ಐಆರ್ ಆಗಿಲ್ಲ. ಇದು ಓಲೈಕೆನಾ? ಓಲೈಸಿ ಏನು ಕೊಟ್ಟಿದ್ದಾರೆ ಹೇಳಲಿ ಎಂದು ಕಿಡಿಕಾರಿದರು.

ಏನಾದರೂ ಹೆಚ್ಚುವರಿ ಮುಸ್ಲಿಮರಿಗೆ ಕೊಟ್ಟಿದ್ದಾರಾ? ಬಜೆಟ್ ನಲ್ಲಿ ಮೈನಾರಿಟಿಗೆ ಅನುದಾನ ಕೊಟ್ಟಿದ್ದಾರಾ? ಏನು ಇಲ್ಲ ಓಲೈಕೆ ಅಂತ ನೀವು ಹಿಂಗೆ ಹೇಳ್ತೀರಾ, ಅವರು ಹಂಗೆ ಹೇಳ್ತಾರೆ. ಕಾಂಗ್ರೆಸ್ ಬಿಜೆಪಿ ಪಕ್ಷದವರು ಮುಸ್ಲಿಮರನ್ನು ಕೈಬಿಟ್ಟು ಬಿಡಿ. ನಿಮ್ಮ ಓಲೈಕೆನೂ ಬೇಡ ತೆಗಳಿಕೆಯೂ ಬೇಡ‌. ನಾವು ಸೌತೆಕಾಯಿ, ತೆಂಗಿನಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತೇವೆ ಎಂದರು.

ಸಿದ್ದರಾಮಯ್ಯ ಒಳ್ಳೆ ಕೆಲ್ಸ ಮಾಡ್ತಿದ್ದಾರೆ, ಮಾಡಿಲ್ಲ ಎಂದು ಹೇಳಲ್ಲ. ಆದರೆ ಒಬ್ಬ ವ್ಯಕ್ತಿಯಿಂದ ಆಗುತ್ತೆ ಅನ್ನೋದು ತಪ್ಪು. ಸಿಎಂ ಇಬ್ರಾಹಿಂ ಸತ್ತರೆ ಸಾಬರಿಗೆ ಯಾರಿದ್ದಾರೆ ಅಂದ್ರೆ ಏನರ್ಥ? ಇನ್ನೊಬ್ಬ ಇಬ್ರಾಹಿಂ ಹುಟ್ಟುತ್ತಾರೆ. ಮುಸ್ಲಿಂ ಸಮಾಜ ತತ್ವ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟುಕೊಂಡಿದೆ‌. ಯಾರೂ ಅನಿವಾರ್ಯರಲ್ಲ ಎಂದರು.

ಇನ್ನು ಸಿಎಂ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರಲಿದ್ದಾರೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ಕಾಂಗ್ರೆಸ್ ಗೆ ಗೊತ್ತಿರುವುದು, ನನಗೇನು ಗೊತ್ತು? ನಾನು ಕಾಂಗ್ರೆಸ್‌ನಲ್ಲಿಲ್ಲ. ನಾನು ಅದನ್ನು ಹೇಳಲಿಕ್ಕೆ ಹೋದ್ರೆ ವಿವಾದ ಆಗುತ್ತೆ. ಸಿದ್ದರಾಮಯ್ಯ ಈಗ ಸಿಎಂ ಆಗಿದ್ದಾರೆ ಅಷ್ಟೆ. ಅವರ ಮೇಲೆ ಆರೋಪ ಕೇಳಿ ಬಂದಾಗ ಅವರ ಪರವಾಗಿ ಮಾತನಾಡಿದೆ. ಸಿದ್ದರಾಮಯ್ಯ ಮೇಲೆ ಅಪಾದನೆ ಬಂದಿದ್ದು ತಪ್ಪು. ಅವರ ಆ ರೀತಿ ಕೆಲಸ ಮಾಡಿಲ್ಲ. ಸಿದ್ದರಾಮಯ್ಯರ ಮೇಲೆ ಮುಡಾ ಒಂದು ಪ್ರಕರಣವಷ್ಟೇ. ಅದನ್ನ ಈಗ ಬಿಜೆಪಿಯವರು ಎತ್ತಿದ್ದಾರೆ . ಇದರಲ್ಲಿ ಸಿದ್ದರಾಮಯ್ಯರ ಯಾವ ತಪ್ಪು ಇಲ್ಲ ಎಂದು ಹೇಳಿದರು. ಈ ಮೂಲಕ ಸಿದ್ದರಾಮಯ್ಯನವರನ್ನು ಸಮರ್ಥಿಸಿಕೊಂಡರು.

Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us