AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾದ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಒತ್ತಡ, ಖಾಸಗಿ ಶಾಲೆಗಳ ಕಳವಳ

ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳ ವ್ಯವಸ್ಥೆಯಿಂದ ಎರಡು ಪರೀಕ್ಷೆಗಳ ವ್ಯವಸ್ಥೆಗೆ ಮರಳಬೇಕಿದೆ. ಅತಿಯಾದ ಪೂರ್ವ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳು ವಿಪರೀತ ದೈಹಿಕ ಮತ್ತು ಮಾನಸಿಕ ಒತ್ತಡಗಳಿಗೆ ಸಿಲುಕುತ್ತಿದ್ದಾರೆ. ಕೇವಲ ಪರೀಕ್ಷೆಗಾಗಿ ಪಾಠ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘವು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದೆ.

ಅತಿಯಾದ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಒತ್ತಡ, ಖಾಸಗಿ ಶಾಲೆಗಳ ಕಳವಳ
ಸಾಂದರ್ಭಿಕ ಚಿತ್ರ
Ganapathi Sharma
|

Updated on:Feb 27, 2024 | 7:13 AM

Share

ಬೆಂಗಳೂರು, ಫೆಬ್ರವರಿ 27: ಅತಿಯಾದ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು (Preparatory exam) ನಡೆಸುವ ಬಗ್ಗೆ ಖಾಸಗಿ ಶಾಲಾ (Private Schools) ಆಡಳಿತ ಮಂಡಳಿಗಳು ಆಕ್ಷೇಪ ವ್ಯಕ್ತಪಡಿಸಿವೆ. 5, 8, 9, 10, 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ಸರಣಿ ಪೂರ್ವ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳಲ್ಲಿ ಒತ್ತಡ ವಿಪರೀತ ಹೆಚ್ಚಾಗುತ್ತಿದೆ ಎಂದು ಆಡಳಿತ ಮಂಡಳಿಗಳು ಹೇಳಿವೆ. ಈ ವಿಚಾರವಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ (Madhu Bangarappa) ಅವರಿಗೆ ಪತ್ರವನ್ನೂ ಬರೆದಿವೆ. ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ಒತ್ತಡವನ್ನು ಉಂಟುಮಾಡುತ್ತಿವೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘ ಉಲ್ಲೇಖಿಸಿದೆ.

ಅಂತಿಮ ಪರೀಕ್ಷೆಗಳ ಹೊರತಾಗಿ, ಮಕ್ಕಳು ಸದ್ಯ ಕನಿಷ್ಠ 3 ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಇದು ಅವರ ಮೇಲೆ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ ಎಂದು ಸಚಿವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳಲ್ಲಿ ಮೌಖಿಕ ಕಲಿಕೆಯ ಬಗ್ಗೆ ಸಂಘವು ಕಳವಳ ವ್ಯಕ್ತಪಡಿಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.

ಸರಣಿ ಪರೀಕ್ಷೆಗಳ ಕಾರಣ ಮಕ್ಕಳು ಕೇವಲ ಪರೀಕ್ಷೆಗಾಗಿ ಓದುತ್ತಿದ್ದಾರಷ್ಟೆ. ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಇದು ಗುಣಮಟ್ಟದ ಶಿಕ್ಷಣದ ನಿಜವಾದ ಉದ್ದೇಶವನ್ನು ಪೂರೈಸುತ್ತಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.

ಮಕ್ಕಳ ಹಕ್ಕುಗಳ ಉಲ್ಲಂಘನೆಯ ಆರೋಪ

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿಯು ನಡೆಸುವ ಪೂರ್ವಸಿದ್ಧತಾ ಪರೀಕ್ಷೆಯ ಹೊರತಾಗಿ, ಹೆಚ್ಚುವರಿ ಪರೀಕ್ಷೆಗಳನ್ನು ಬ್ಲಾಕ್ ಶಿಕ್ಷಣ ಅಧಿಕಾರಿಗಳು, ಉಪ ನಿರ್ದೇಶಕರು ಮತ್ತು ಶಾಲೆಗಳ ಮಟ್ಟದಲ್ಲಿ ನಡೆಸಲಾಗುತ್ತಿದೆ. ಸರಣಿ ಪರೀಕ್ಷೆಗಳು, ವಿಷಯಗಳ ಪಾಠವನ್ನು ಬೇಗನೆ ಮುಗಿಸಬೇಕಾದ ಒತ್ತಡವನ್ನು ಶಿಕ್ಷಕರ ಮೇಲೂ ತಂದೊಡ್ಡುತ್ತಿವೆ. ಕೇವಲ ಪರೀಕ್ಷೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಎಲ್ಲವೂ ನಡೆಯುವಂತಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಸಂಘವು ಇದನ್ನು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿದೆ.

ಇದನ್ನೂ ಓದಿ: 1ನೇ ತರಗತಿ ಪ್ರವೇಶಕ್ಕೆ 6 ವರ್ಷ ವಯೋಮಿತಿ ನಿಗದಿ: ಶಿಕ್ಷಣ ಇಲಾಖೆ ಆದೇಶ

ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಮಕ್ಕಳನ್ನು ರಾಜ್ಯ ಮಂಡಳಿಯ ಶಿಕ್ಷಣ ವ್ಯವಸ್ಥೆಯಿಂದ ಇತರ ಮಂಡಳಿಗಳಿಗೆ ಸೇರುವಂತೆ ಮಾಡಲು ಕಾರಣವಾಗುತ್ತಿದೆ. ಎಸ್​ಎಸ್​ಎಲ್​ಸಿ ಮತ್ತು ಸೆಕೆಂಡ್ ಪಿಯುಸಿಗಾಗಿ ಮೂರು ಪರೀಕ್ಷಾ ನೀತಿಯನ್ನು ಮರುಪರಿಶೀಲಿಸುವಂತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಎರಡು ಪರೀಕ್ಷಾ ವ್ಯವಸ್ಥೆಗೆ ಹಿಂತಿರುಗುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಸಂಘವು ಹೇಳಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:11 am, Tue, 27 February 24