Karnataka Rain: ‘ಮಹಾ’ ಮಳೆಗೆ ಉಕ್ಕಿ ಹರಿಯುತ್ತಿರುವ ಭೀಮಾ ನದಿ; ಕಲಬುರಗಿ-ವಿಜಯಪುರ ಸಂಪರ್ಕ ಕಡಿತ

| Updated By: Rakesh Nayak Manchi

Updated on: Oct 20, 2022 | 3:24 PM

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಕಲಬುರಗಿ ಜಿಲ್ಲೆಯಲ್ಲಿರುವ ಭೀಮಾ ನದಿ ಉಕ್ಕಿ ಹರಿಯಲು ಆರಂಭವಾಗಿದ್ದು, ಕಲಬುರಗಿಯ ವೀರ್ ಡ್ಯಾಂನಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

Karnataka Rain: ಮಹಾ ಮಳೆಗೆ ಉಕ್ಕಿ ಹರಿಯುತ್ತಿರುವ ಭೀಮಾ ನದಿ; ಕಲಬುರಗಿ-ವಿಜಯಪುರ ಸಂಪರ್ಕ ಕಡಿತ
ಉಕ್ಕಿ ಹರಿಯುತ್ತಿರುವ ಭೀಮಾ ನದಿ
Follow us on

ಕಲಬುರಗಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಪರಿಣಾಮವಾಗಿ ನದಿ ನೀರು ಉಕ್ಕಿ ಹರಿಯಲು ಆರಂಭವಾಗಿದೆ. ಹೀಗಾಗಿ ವೀರ್ ಡ್ಯಾಂನಿಂದ 1.80 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಅಫಜಲಪುರ ತಾಲೂಕಿನ ಘತ್ತರಗಾ ಸೇತುವೆ ಮುಳುಗಡೆಯಾಗಿದ್ದು, ಕಲಬುರಗಿ-ವಿಜಯಪುರ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ ನದಿ ದಡದಲ್ಲಿರುವ ಅಫಜಲಪುರ ತಾಲೂಕಿನ ಮಣ್ಣೂರಿನ ಯಲ್ಲಮ್ಮ ದೇವಿ ದೇವಸ್ಥಾನ ಜಲಾವೃತಗೊಂಡಿದೆ.

ಮೂರನೇ ಬಾರಿ ಭರ್ತಿಗೊಂಡ ಕೆಆರ್​ಎಸ್​

ಮಂಡ್ಯ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದ ಪರಿಣಾಮವಾಗಿ 124.80 ಅಡಿ ಸಾಮರ್ಥ್ಯದ ಕೆಆರ್​ಎಸ್​ ಅಣೆಕಟ್ಟು ಮತ್ತೊಮ್ಮೆ ಭರ್ತಿಗೊಂಡಿದೆ. ಆ ಮೂಲಕ ವರ್ಷದಲ್ಲಿ ಮೂರನೇ ಬಾರಿ ಭರ್ತಿಗೊಂಡಂತಾಗಿದೆ. ಈ ಹಿಂದೆ ಜುಲೈ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಗೆ ಜಲಾಶಯ ಭರ್ತಿಗೊಂಡಿತ್ತು. ಸದ್ಯ ಅಣೆಕಟ್ಟು ಭರ್ತಿಗೊಂಡ ಹಿನ್ನೆಲೆ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಹಳ್ಳದಲ್ಲಿ ಕೊಚ್ಚಿ ಹೋದ ಬೈಕ್ ಸವಾರ

ತುಮಕೂರು: ಕಲ್ಪತರು ನಾಡಿನಲ್ಲಿ ಮಳೆ ಅವಾಂತರ ಮುಂದುವರೆದಿದ್ದು, ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದೆ. ಅದರಂತೆ ಆಂಧ್ರದಲ್ಲಿ ಕೃಷಿ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಪ್ರಭು ಬೈಕ್​ನಲ್ಲಿ ಹೋಗುತ್ತಿದ್ದಾಗ ಜಿಲ್ಲೆಯ ಪಾವಗಡ ತಾಲೂಕಿನ ಹನುಮಯ್ಯನಪಾಳ್ಯ ಹಳ್ಳದ ನೀರಿನ ಹರಿವಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ. ಸಿ.ಕೆಪುರದಿಂದ ಹನುಮಯ್ಯನಪಾಳ್ಯ ಹಳ್ಳದ ಮೂಲಕ ಕನ್ನಮೇಡಿ ಕಡೆ ಹೊಗುತ್ತಿದ್ದಾಗ ಈ ಘಟನೆ ನಡೆದಿದೆ. ಇದನ್ನು ನೋಡಿದ ಸ್ಥಳೀಯ ಯುವಕರು ಕೂಡಲೇ ಕಾರ್ಯಪ್ರವೃತರಾಗಿ ಬೈಕ್ ಸವಾರನನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಬೈಕ್,ಲ್ಯಾಪ್ಟಾಪ್ ,ಕಡತಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಸ್ವಸ್ತ ಗೊಂಡಿದ್ದ ಪ್ರಭುವನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಕೃಷಿ ಅಧಿಕಾರಿಯ ಪ್ರಾಣ ಉಳಿಸಿದ ಯುವಕರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Thu, 20 October 22