AIIMS: ಕರ್ನಾಟಕದಲ್ಲಿ ಏಮ್ಸ್​ ಸ್ಥಾಪಿಸಲು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಒಪ್ಪಿಗೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 19, 2022 | 11:07 AM

ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ₹ 489 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ 538 ಹಾಸಿಗೆ ಸಾಮರ್ಥ್ಯದ ಮತ್ತೊಂದು ಆಸ್ಪತ್ರೆ ಸ್ಥಾಪನೆಯಾಗಲಿದೆ.

AIIMS: ಕರ್ನಾಟಕದಲ್ಲಿ ಏಮ್ಸ್​ ಸ್ಥಾಪಿಸಲು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಒಪ್ಪಿಗೆ
ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಮತ್ತು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ
Follow us on

ದೆಹಲಿ: ಕರ್ನಾಟಕದ ಆರೋಗ್ಯ ವ್ಯವಸ್ಥೆಗೆ ಹೊಸ ಬಲ ತುಂಬುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಕರ್ನಾಟಕದಲ್ಲಿ ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ (All India Institute Of Medical Science – AIIMS) ಸ್ಥಾಪಿಸಲು ಕೇಂದ್ರ ಸಚಿವ ಮನ್​ಸುಖ್ ಮಾಂಡವೀಯ ಸಮ್ಮತಿಸಿದ್ದಾರೆ. ಈ ವಿಷಯವನ್ನು ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಅವರೊಂದಿಗೆ ದೆಹಲಿಯಲ್ಲಿ ಬುಧವಾರ (ಮೇ 18) ನಡೆದ ಮಾತುಕತೆ ವೇಳೆ ಕೇಂದ್ರ ಸಚಿವರಿಂದ ಈ ಭರವಸೆ ಸಿಕ್ಕಿದೆ. ಕರ್ನಾಟಕದಲ್ಲಿ ಏಮ್ಸ್​ ಸ್ಥಾಪಿಸುವಂತೆ ಈ ಮೊದಲೂ ಕರ್ನಾಟಕದ ಆರೋಗ್ಯ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಏಮ್ಸ್​ ಘಟಕಸ್ಥಾಪನೆಯಿಂದ ಕರ್ನಾಟಕದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಸುಧಾರಿಸಲಿದೆ ಎಂದು ವಿವರಿಸಿದ್ದರು.

‘ಕರ್ನಾಟಕದಲ್ಲಿ ಏಮ್ಸ್ ಘಟಕ ಸ್ಥಾಪಿಸಲು ಅನುಮತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಅವರನ್ನು ನಾನು ಅಭಿನಂದಿಸುತ್ತೇನೆ. ಇದು ಕರ್ನಾಟಕದ ಆರೋಗ್ಯ ವ್ಯವಸ್ಥೆ ಮತ್ತು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತದೆ’ ಎಂದು ಡಾ.ಕೆ.ಸುಧಾಕರ ಹೇಳಿದ್ದರು.

ಮಾನಸಿಕ ಮತ್ತು ನರರೋಗ ವಿಜ್ಞಾನಗಳ ರಾಷ್ಟ್ರೀಯ ಸಂಸ್ಥೆಯ (National Institute of Mental Health and Neuro Sciences – NIMHANS) ನೂತನ ಪಾಲಿಟ್ರೌಮಾ ಕೇಂದ್ರ ಸ್ಥಾಪನೆಗೆ 2021ರಲ್ಲಿಯೇ ಪ್ರಸ್ತಾವ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯು ಹಣಕಾಸು ಸಮಿತಿಯ (Standing Finance Committee – SFC) ಎದುರು ಇದೆ ಎಂದು ಸುಧಾಕರ್ ಹೇಳಿದರು.

ಹಣಕಾಸು ಸಮಿತಿಯ ಅನುಮೋದನೆ ದೊರೆತ ನಂತರ ಪಾಲಿಟ್ರೌಮಾ ಕೇಂದ್ರವು ಬೆಂಗಳೂರಿನ ಹೆಣ್ಣೂರು ಮುಖ್ಯರಸ್ತೆಯಲ್ಲಿರುವ ಕ್ಯಾಲಸನಹಳ್ಳಿ ಬಳಿ ಸ್ಥಾಪನೆಯಾಗಲಿದೆ. ನಿಮ್ಹಾನ್ಸ್​ನ ಸಾಮರ್ಥ್ಯ ವರ್ಧನೆ ಮತ್ತು ಸ್ನಾತಕೋತ್ತರ ತರಬೇತಿಗೆ ಹೆಚ್ಚು ಲಕ್ಷ್ಯಕೊಡಬೇಕು ಎಂದು ಎಸ್​ಎಫ್​ಸಿಯು ಈ ಹಿಂದೆ ಸೂಚಿಸಿತ್ತು. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ₹ 489 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ 538 ಹಾಸಿಗೆ ಸಾಮರ್ಥ್ಯದ ಮತ್ತೊಂದು ಆಸ್ಪತ್ರೆ ಸ್ಥಾಪನೆಯಾಗಲಿದೆ.

ಕೇಂದ್ರ ಸಚಿವ ಮನ್​ಸುಖ್ ಮಾಂಡವೀಯ ಅವರ ಭೇಟಿ ವೇಳೆ ಆರೋಗ್ಯ ಸಚಿವ ಸುಧಾಕರ್ ಕರ್ನಾಟಕದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಹೊಸದೊಂದು ವೈದ್ಯಕೀಯ ಮತ್ತು ನರ್ಸಿಂಗ್ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ಕೋರಿದ್ದರು. ಇದಕ್ಕಾಗಿ ಪ್ರತ್ಯೇಕ ಆಡಳಿತ ವ್ಯವಸ್ಥೆ ಮತ್ತು ವಿಶೇಷ ಪಠ್ಯಕ್ರಮ ರೂಪಿಸಬೇಕು. ಈ ಮೂಲಕ ಆಸ್ಪತ್ರೆಗಳ ಸುಧಾರಣೆಗೆ ನೆರವಾಗಬೇಕು ಎಂದು ಕೋರಿದ್ದರು.

ಡೀಮ್ಡ್​ ವಿಶ್ವವಿದ್ಯಾಲಯಗಳಲ್ಲಿಯೂ ಸ್ಥಳೀಯ ವಿದ್ಯಾರ್ಥಿಗಳಿಗೆ ಆದ್ಯತೆ ಸಿಗಬೇಕು. ಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಭಾರತ ಸರ್ಕಾರದ ನೆರವು ಸಿಗಬೇಕು. ಜಿಲ್ಲಾಮಟ್ಟದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಖಾಸಗಿ ಅಥವಾ ಸರ್ಕಾರಿ ಎಂದು ಯೋಚಿಸದೇ ಭಾರತ ಸರ್ಕಾರವು ನೆರವು ಒದಗಿಸಬೇಕು ಎಂದು ಸಲಹೆ ಮಾಡಿದ್ದರು.

ತಾಜಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Thu, 19 May 22