ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರರ ಅವಿರತ ಶ್ರಮ ಮುಖ್ಯ ಕಾರಣ: ಕೆವಿ ಪ್ರಭಾಕರ್

| Updated By: ವಿವೇಕ ಬಿರಾದಾರ

Updated on: Feb 28, 2024 | 9:12 AM

ಗ್ರಾಮೀಣ ಪತ್ರಕರ್ತರ ಶ್ರಮ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ಅವರ ಬಹುವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿನಂದನೆ ಸಲ್ಲಿಸಿದರು.

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್‌ಗೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರರ ಅವಿರತ ಶ್ರಮ ಮುಖ್ಯ ಕಾರಣ: ಕೆವಿ ಪ್ರಭಾಕರ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್
Follow us on

ಬೆಂಗಳೂರು: ಗ್ರಾಮೀಣ ಪತ್ರಕರ್ತರ (Journalist) ಶ್ರಮ ಮತ್ತು ಕಾರ್ಯಕ್ಷಮತೆಯನ್ನು ಗುರುತಿಸಿ ಅವರ ಬಹುವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿನಂದನೆ ಸಲ್ಲಿಸಿದರು. ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಬೇಡಿಕೆಯನ್ನು ಈ ಬಾರಿಯ ಬಜೆಟ್​ನಲ್ಲಿ ಈಡೇರಿಸಿದ್ದಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನಿರಂತರ ಶ್ರಮದಿಂದಾಗಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ದೊರಕಿದೆ. ಇವರ ಬೇಡಿಕೆ ಮತ್ತು ಹೋರಾಟವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಂಥಾ ಸಂದರ್ಭದಲ್ಲಿ ಅವರು ಸ್ಪಂದಿಸಿದ ರೀತಿಯನ್ನು ಕೆ.ವಿ.ಪ್ರಭಾಕರ್ ವಿವರಿಸಿದರು.

ಪತ್ರಕರ್ತ ಹುದ್ದೆಗೆ ಬರುವವರಲ್ಲಿ ಹೆಚ್ಚಿನವರು ಕಷ್ಟದ ಕುಟುಂಬಗಳಿಂದ ಬರುವವರು. ಆದ್ದರಿಂದ ಸರ್ಕಾರ ಈ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಬೇಕಾಗುತ್ತದೆ ಎಂದರು.

ಪತ್ರಕರ್ತರ ಪೆನ್ಷನ್ ಮತ್ತು ನಿವೇಶನ ಸೇರಿ ಪತ್ರಕರ್ತರಿಗೆ ಇಲಾಖೆಯಿಂದ, ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಿಗದಂತೆ ಅಡ್ಡಿ ಆಗಿರುವ ಎಲ್ಲಾ ತಾಂತ್ರಿಕ ಅಡೆ ತಡೆಗಳನ್ನು ನಿವಾರಿಸಲು ಸತತ ಪ್ರಯತ್ನ ಮತ್ತು ಸಭೆ ನಡೆಸುತ್ತಿದ್ದೇವೆ. ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, 29 ವರ್ಷದ ಹಿಂದೆ ಚಿಕ್ಕಮಗಳೂರಿನಲ್ಲಿ ರಾಜ್ಯ ಸಮ್ಮೇಳನವಾದ ಸಂದರ್ಭದಿಂದ ಬಸ್ ಪಾಸ್ ಬೇಡಿಕೆ ಇತ್ತು. ಆ ಬೇಡಿಕೆ ಬಜೆಟ್‌ನಲ್ಲಿ ಸಾಕಾರಗೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಸಮ್ಮೇಳನದಲ್ಲಿ ಕೆಯುಡಬ್ಲೂೃಜೆ ಹಕ್ಕೊತ್ತಾಯಕ್ಕೆ ಸ್ಪಂದಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಬಸ್ ಪಾಸ್ ಬೇಡಿಕೆ ಈಡೇರಿಸುವುದಾಗಿ ಹೇಳಿ, ಹಾಗೆ ನುಡಿದಂತೆಯೇ ನಡೆದುಕೊಂಡಿದ್ದಾರೆ ಎಂದು ಹೇಳಿದರು.

ಕೆಯುಡಬ್ಲೂೃಜೆ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ನಮ್ಮ ಭಾವನೆಗೆ ಸ್ಪಂಧಿಸಿದ ಕೆ.ವಿ. ಪ್ರಭಾಕರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಹಣಕಾಸು ಇಲಾಖೆ ಮುಖ್ಯಸ್ಥ ಎಲ್.ಕೆ.ಅತೀಕ್ ಸೆರಿದಂತೆ ಎಲ್ಲಾ ಅಧಿಕಾರಿ ವರ್ಗಕ್ಕೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಗಡೂರು ತಿಳಿಸಿದರು.

ಸಂಘದ ಉಪಾಧ್ಯಕ್ಷ ಅಜ್ಜಮಾಡ ಕುಟ್ಟಪ್ಪ ಮಾತನಾಡಿ, ಬಸ್ ಪಾಸ್‌ಗೆ ಹೆಚ್ಚಿನ ಷರತ್ತುಗಳನ್ನು ವಿಧಿಸದೆ ಪತ್ರಕರ್ತರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನಗೌಡ ಮಾತನಾಡಿ, ಸ್ನೇಹಿತರಾದ ಪ್ರಭಾಕರ್ ಅವರು ಪತ್ರಕರ್ತರ ಬೇಡಿಕೆಗಳಿಗೆ ಸ್ಪಂಧಿಸಿದ್ದರೆ, ಶಿವಾನಂದ ತಗಡೂರು ಅವರು ಪತ್ರಕರ್ತರ ಶಕ್ತಿಯಾಗಿ ಕೆಲಸ ಮಾಡಿ ಇಬ್ಬರೂ ಸೇರಿ ಬಸ್ ಪಾಸ್ ಕನಸು ನನಸಾಗಿಸಿದ್ದಾರೆ ಎಂದರು.

ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್ ಮಾತನಾಡಿ, ಹಿಡಿದ ಕೆಲಸವನ್ನು ತಗಡೂರು ಬಿಡುವುದಿಲ್ಲ. ಸತತ ವಿಧಾನಸೌಧದಲ್ಲಿ ಾಲೊಅಪ್ ಮಾಡುತ್ತಾರೆ ಎಂದರು. ಈ ನಿಟ್ಟಿನಲ್ಲಿ ಕೆ.ವಿ.ಪ್ರಭಾಕರ್ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಕೆಯುಡಬ್ಲೂೃಜೆ ಪ್ರಶಸ್ತಿಗೆ ಭಾಜನರಾಗಿದ್ದ ಕೆ.ಎನ್.ಪುಟ್ಟಲಿಂಗಯ್ಯ ಮತ್ತು ತೃಪ್ತಿ ಕುಮ್ರಗೋಡು ಅವರನ್ನು ಸನ್ಮಾನಿಸಲಾಯಿತು.

ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಖಜಾಂಚಿ ವಾಸುದೇವ ಹೊಳ್ಳ ಹಾಜರಿದ್ದರು.

ಅಭಿಮಾನದಲ್ಲಿ ಮಿಂದೆದ್ದ ಪ್ರಭಾಕರ್

ಕೆ.ವಿ.ಪ್ರಭಾಕರ್ ಅವರನ್ನು ಮೊದಲು ರಾಜ್ಯ ಸಂಘದಿಂದ ಗೌರವಿಸಲಾಯಿತು. ಬಿ.ಪಿ.ಲೋಕೇಶ್ ಅವರು ರಚಿಸಿದ ಅವರದೇ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಜಿಲ್ಲೆ ಮತ್ತು ತಾಲೂಕುಗಳಿಂದ ಬಂದಿದ್ದ ಪತ್ರಕರ್ತರು ಪ್ರಭಾಕರ್ ಅವರನ್ನು ಅಭಿಮಾನದಿಂದ ಸನ್ಮಾನಿಸಿದರು. ಪತ್ರಕರ್ತರ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಪ್ರಭಾಕರ್, ಕ್ಷಣ ಕಾಲ ಭಾವುಕರಾಗಿ, ಸುದ್ದಿಮನೆಯ ಒಡನಾಟವನ್ನು ನೆನೆದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:10 am, Wed, 28 February 24