2008 ರಲ್ಲಿ ಅಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಗಲಕೋಟೆಗೆ ತೋಟಗಾರಿಕೆ ವಿವಿಯನ್ನು ಕೊಡುಗೆ ಕೊಟ್ಟರು. ಅತ್ಯಂತ ಕಡಿಮೆ ಅವಧಿಯಲ್ಲೇ ವಿವಿ ಹೆಮ್ಮರವಾಗಿ ಬೆಳೆದು ನಿಂತಿದೆ. ಆದರೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಬೋಧಕ ಹಾಗೂ ಬೋಧಕೇತರ ಹುದ್ದೆಗಳು ಖಾಲಿಯಾಗಿ ದಶಕವೇ ಸಮೀಪಿಸುತ್ತಿದ್ದರೂ ಹುದ್ದೆ ಭರ್ತಿಗೆ ಅನುಮತಿ ಮಾತ್ರ ಸಿಗುತ್ತಿಲ್ಲ. ಶಿಕ್ಷಕ ಹಾಗೂ ಶಿಕ್ಷಕೇತರ ಸಮಸ್ಯೆ ವಿಶ್ವ ವಿದ್ಯಾಲಯದಲ್ಲಿ ಇದೆ. ಹೀಗಾಗಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಆಗುತ್ತಿಲ್ಲ. ಒಟ್ಟು 424 ಬೋಧಕ ಹುದ್ದೆಗಳಲ್ಲಿ 285 ಹುದ್ದೆಗಳನ್ನು ತುಂಬಲಾಗಿದೆ. ಇನ್ನುಳಿದ ಶೇ.35 ರಷ್ಟು 131 ಹುದ್ದೆಗಳು ಖಾಲಿ ಉಳಿದಿವೆ. ಬೋಧಕೇತರ ಸಿಬ್ಬಂದಿಗಳಲ್ಲಿ ಸರ್ಕಾರದಿಂದ 1,419 ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ 739 ಹುದ್ದೆಗಳನ್ನು ತುಂಬಲಾಗಿದ್ದು, ಇನ್ನೂ 680 ಹುದ್ದೆಗಳು ಖಾಲಿ ಇವೆ. ಇದನ್ನು ಖುದ್ದಾಗಿ ವಿವಿ ಕುಲಪತಿ ಡಾ.ಕೆ.ಎಂ.ಇಂದಿರೇಶ್ ಬಹಿರಂಗಪಡಿಸಿದ್ದು, ವಿವಿಗೆ ಸಿಬ್ಬಂದಿ ಬರ ಎದುರಾಗಿವುದು ಸ್ಪಷ್ಟವಾಗಿದೆ.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿಗೆ ರಾಜ್ಯದಲ್ಲಿ 23 ಜಿಲ್ಲೆಗಳು ಬರಲಿವೆ. ಇದರಲ್ಲಿ 9 ತೋಟಗಾರಿಕೆ ಮಹಾವಿದ್ಯಾಲಯ, 12 ಸಂಶೋಧನಾ ಕೇಂದ್ರ, 12 ವಿಸ್ತರಣಾ ಘಟಕಗಳು ಮತ್ತು 2,863 ವಿದ್ಯಾರ್ಥಿಗಳನ್ನು ಹೊಂದಿರುವ ಅತಿ ದೊಡ್ಡ ವಿಶ್ವವಿದ್ಯಾಲಯ ಇದಾಗಿದೆ. ಆದರೂ ಸರ್ಕಾರ ಮಾತ್ರ ಇಂಥಹ ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ಬೋಧಕ ಹಾಗೂ ಬೋಧಕೇತರ ಹುದ್ದೆಗಳನ್ನು ಮಾತ್ರ ತುಂಬದಿರುವುದಕ್ಕೆ ಕಾರಣ ತಿಳಿಯುತ್ತಿಲ್ಲ. ತೋಟಗಾರಿಕೆ ನಿರ್ಮಾಣ ಆಗಿ 10 ವರ್ಷ ಕಳೆದಿದೆ. ಸಿಬ್ಬಂದಿ ಸಮಸ್ಯೆ ವಿವಿಯಲ್ಲಿ ಹೆಚ್ಚಾಗಿ ಕಾಡುತ್ತಿದೆ. ಸಿಬ್ಬಂದಿ ಇಲ್ಲದೇ ವಿದ್ಯಾರ್ಥಿಗಳು ಏನು ಮಾಡೋಕು ಸಾಧ್ಯವಿಲ್ಲ. ಸಿಬ್ಬಂದಿಗಳಿದ್ದರೆ ಕಲಿಯುವುದಕ್ಕೆ ಸಾಧ್ಯ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇರುವುದರಿಂದ ಶಿಕ್ಷಕರ ಕೊರತೆ ಅಧಿಕವಾಗಿ ಕಾಡುತ್ತಿದೆ. ಈ ಬಗ್ಗೆ ಕುಲಪತಿಗಳಲ್ಲೂ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ ಎಂದು ವಿವಿಯ ತೃತಿಯ ವರ್ಷದ ವಿದ್ಯಾರ್ಥಿ ಮಲ್ಲಿಕಾರ್ಜುನ ಮೆನಣಸಗಿ ಹೇಳಿದರು.
ಇದನ್ನೂ ಓದಿ
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ; 14 ಚಿನ್ನದ ಪದಕಗಳಿಸಿ ಸಂಭ್ರಮಿಸಿದ ವಿದ್ಯಾರ್ಥಿ
(Karnataka’s one and only horticulture university is facing lecturers crisis in Bagalkot)