AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Theerthodbhava: ಅ. 17ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ; ಈ ಬಾರಿಯೂ ಕಾವೇರಿ ದರ್ಶನಕ್ಕೆ ಕೊರೊನಾ ಕರಿ ನೆರಳು?

Talacauvery | ತಲಕಾವೇರಿಯಲ್ಲಿ ಅ. 17ರಂದು ಸಂಜೆ ತೀರ್ಥೋದ್ಭವವಾಗಲಿದೆ. ಆದರೆ ಜಾತ್ರೆ ನಡೆಸುವ ಬಗ್ಗೆ ಇದುವರೆಗೆ ನಿರ್ಧಾರ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ಇನ್ನೂ ಗೊಂದಲದಲ್ಲಿದೆ. ಈ ಸಂಬಂಧ ಸರ್ಕಾರದ ಮಾರ್ಗಸೂಚಿಗೆ ಎದುರು ನೋಡುತ್ತಿದೆ.

Theerthodbhava: ಅ. 17ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ; ಈ ಬಾರಿಯೂ ಕಾವೇರಿ ದರ್ಶನಕ್ಕೆ ಕೊರೊನಾ ಕರಿ ನೆರಳು?
ತೀರ್ಥೋದ್ಭವದ ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Sep 24, 2021 | 6:13 PM

Share

ಕೊಡಗು: ಕೊಡಗಿನ ತಲಕಾವೇರಿಯಲ್ಲಿ ಅ. 17ರಂದು ಕಾವೇರಿ ತೀರ್ಥೋದ್ಭವವಾಗಲಿದೆ. ಇದಕ್ಕಾಗಿ ಈಗಾಗಲೇ ಕೊಡಗು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕದ ಜೀವ ನದಿಯಾದ ಕಾವೇರಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ದರ್ಶನ ನೀಡುವ ಪುಣ್ಯ ಘಳಿಗೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಆದರೆ ಈ ಕೊರೊನಾ ಮಹಾಮಾರಿ ಈ ಬಾರಿ ಕೂಡ ಕಾವೇರಿ ದರ್ಶನಕ್ಕೆ ವಿಘ್ನ ಮಾಡುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಕೊಡಗು ಜಿಲ್ಲಾಡಳಿತ ಇನ್ನೂ ಕೂಡ ಕಾವೇರಿ ಜಾತ್ರೆ ಸಂಬಂಧ ಗೊಂದಲದಲ್ಲೇ ಇದೆ.

ಜೀವನದಿ ಕಾವೇರಿಯ ಹುಟ್ಟೂರು ತಲಕಾವೇರಿಯಲ್ಲಿ ಇದೇ ಅಕ್ಟೋಬರ್​ 17ರಂದು ತೀರ್ಥೋದ್ಭವವಾಗಲಿದೆ. ಪ್ರತಿ ವರ್ಷ ಜೀವನದಿ ಕಾವೇರಿ ತೀರ್ಥ ರೂಪದಲ್ಲಿ ದರ್ಶನ ನೀಡುವ ಪುಣ್ಯ ಘಳಿಗೆಯನ್ನು ಕಣ್ತುಂಬಿಸಿಕೊಳ್ಳಲು ದೇಶದ ಮೂಲೆ ಮೂಲೆಯಿಂದ ಸಹಸ್ರಾರು ಭಕ್ತರು ಆಗಮಿಸ್ತಾರೆ. ಕಲ್ಯಾಣಿಯಲ್ಲಿ ಮಿಂದು ಪುನೀತರಾಗ್ತಾರೆ. ಇದುವರೆಗೂ ಕಾವೇರಿ ಭಕ್ತರ ಉತ್ಸಾಹಕ್ಕೆ ಯಾವುದೇ ಅಡ್ಡಿಯಾಗಿರಲಿಲ್ಲ. ಆದರೆ ಕೊರೊನಾದಿಂದಾಗಿ ಕಳೆದ ವರ್ಷ ಕಾವೇರಿ ಜಾತ್ರೆ ಸಂಪೂರ್ಣ ಕಳೆಗುಂದಿತ್ತು. ಹೆಚ್ಚಿನ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿರಲಿಲ್ಲ. ಹಾಗಾಗಿ ದೂರದೂರುಗಳಿಮದ ತೀರ್ಥೋದ್ಭವಕ್ಕೆ ಆಗಮಿಸಬೇಕಿದ್ದ ಭಕ್ತರಿಗೆ ನಿರಾಸೆಯಾಗಿತ್ತು. ಇದೀಗ ಮತ್ತೆ ತೀರ್ಥೋದ್ಭವ ಸಂದರ್ಭ ಬಂದಿದೆ. ಅ. 17ರಂದು ಸಂಜೆ ತೀರ್ಥೋದ್ಭವವಾಗಲಿದೆ. ಆದರೆ ಜಾತ್ರೆ ನಡೆಸುವ ಬಗ್ಗೆ ಇದುವರೆಗೆ ನಿರ್ಧಾರ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತ ಇನ್ನೂ ಗೊಂದಲದಲ್ಲಿದೆ. ಈ ಸಂಬಂಧ ಸರ್ಕಾರದ ಮಾರ್ಗಸೂಚಿಗೆ ಎದುರು ನೋಡುತ್ತಿದೆ.

ಇದೇ ವೇಳೆ ಕಾವೇರಿ ತೀರ್ಥೋದ್ಭವ ಕಣ್ತುಂಬಿಸಿಕೊಳ್ಳಲು ಅವಕಾಶ ನೀಡಿ ಅಂತ ಕೊಡಗಿನ ಎಲ್ಲಾ ಮೂಲ ನಿವಾಸಿಗಳು ಆಗ್ರಹಪಡಿಸುತ್ತಿದ್ದಾರೆ. ಹೊರ ಜಿಲ್ಲೆ ಹೊರ ರಾಜ್ಯದಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲೆಯ ಭಕ್ತರಿಗೆ ಮಾತ್ರ ಅವಕಾಶ ನೀಡಿ ಅಂತ ಜಿಲ್ಲಾಡಳಿತವನ್ನು ಆಗ್ರಹಿಸಿ ಮನವಿ ಮಾಡಿದ್ದಾರೆ. ಈಗಾಗಲೇ ಭೂ ಕುಸಿತ ಮತ್ತು ಕೊರೊನಾ ದಿಂದಾಗಿ ಕಾವೇರಿ ಜಾತ್ರೆ ಕಳೆಗುಂದಿ ಹೋಗಿದೆ. ಆದರೆ, ಈ ಬಾರಿಯಾದ್ರೂ ಜಿಲ್ಲೆಗೆ ಸೀಮಿತವಾಗಿ ಜಾತ್ರೆ ನಡೆಸಲು ಅವಕಾಶ ನೀಡಿ ಎಂದು ವಿನಂತಿಸಿದ್ದಾರೆ.

ಕಾವೇರಿ ತುಲಾ ಸಂಕ್ರಮಣದ ಪವಿತ್ರ ತೀರ್ಥೋದ್ಭವದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಾರ್ವಜನಿಕರ ಪ್ರವೇಶದ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. ತೀರ್ಥೋದ್ಭವದ ವೇಳೆ ಪೊಲೀಸ್ ಇಲಾಖೆಯಿಂದ ಪೊಲೀಸರು ಮತ್ತು ಹೋಂ ಗಾರ್ಡ್​ಗಳ ನಿಯೋಜನೆ ಮಾಡಲಾಗುವುದು.

ಒಂದೆಡೆ ಕೊರೊನಾ ಭೀತಿ ಮತ್ತೊಂದೆಡೆ ಭಕ್ತರ ಒತ್ತಡ. ಇವೆರಡರ ಮಧ್ಯೆ ಸಿಲುಕಿ ಜಿಲ್ಲಾಡಳಿತ ಗೊಂದಲದ ಗೂಡಾಗಿದೆ. ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಈ ಗೊಂದಲಗಳಿಗೆ ತೆರೆ ಎಳೆಯುತ್ತಾ? ಅಥವಾ ಮತ್ತೊಂದು ಹೊಸ ಸಮಸ್ಯೆ ತಂದೊಡ್ಡುತ್ತಾ? ಎಂಬುದನ್ನು ಕಾದು ನೋಡಬೇಕಿದೆ.

(ವರದಿ: ಗೋಪಾಲ್ ಐಮಂಡ)

ಇದನ್ನೂ ಓದಿ: ತಮಿಳುನಾಡಿಗೆ 30.6 ಟಿಎಂಸಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸೂಚನೆ, ಮೇಕೆದಾಟು ಯೋಜನೆ ಕುರಿತು ಚರ್ಚೆ ನಡೆದಿಲ್ಲ

ಮುಂದಿನ ನಾಲ್ಕು ದಿನ ಕೊಡಗಿನಲ್ಲಿ ಭಾರಿ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

(Kodagu Cauvery Theerthodbhava at Talacauvery on October 17 Government may not Give Permission to Devotees)