
ಬೆಂಗಳೂರು, (ಏಪ್ರಿಲ್ 19): ಕರ್ನಾಟಕದ ಡಾ. ಕೆ.ಎಸ್. ಸೋಮಶೇಖರ್ (Dr KS Somashekhar) ಅವರು ರಾಜ್ಯಸಭೆ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ (Rajya Sabha secretary) ನೇಮಕಗೊಂಡಿದ್ದಾರೆ. ಕೋಲಾರ (Kolar) ಮೂಲದ ಡಾ. ಕೆ.ಎಸ್.ಸೋಮಶೇಖರ್ ಅವರನ್ನು ನೇಮಕ ಮಾಡಿ ರಾಜ್ಯಸಭೆಯ ಸಭಾಧ್ಯಕ್ಷ, ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಆದೇಶ ಹೊರಡಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಸಂಸದೀಯ ಸೇವೆಯಲ್ಲಿರುವ ಇವರು, ಭಾಷಾಂತರಕಾರರಾಗಿ ವೃತ್ತಿ ಆರಂಭಿಸಿ ಇದೀಗ ಉನ್ನತ ಹುದ್ದೆಗೇರಿದ್ದಾರೆ. ಇದರೊಂದಿಗೆ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆ ಮತ್ತು ಕಳೆದ 3 ದಶಕಗಳಿಂದ ವಿವಿಧ ಸಂಸದೀಯ ಹುದ್ದೆ ನಿರ್ವಹಿಸಿದ್ದ ಹಿರಿಯ ಅಧಿಕಾರಿಗೆ ಮತ್ತೊಂದು ಮಹತ್ವದ ಹುದ್ದೆ ಸಿಕ್ಕಂತಾಗಿದೆ. ಇದರೊಂದಿಗೆ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಮತ್ತಷ್ಟು ಎತ್ತರಿಸಿದ್ದಾರೆ.
ಡಾ. ಕೆ.ಎಸ್. ಸೋಮಶೇಖರ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ನೀಲಟೂರು ಗ್ರಾಮದ ಒಂದು ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ಶಿಕ್ಷಕರ ಪುತ್ರ. ಈಗ ದೇಶದ ಶಾಸಕಾಂಗದ ಮೇಲ್ಮನೆಯಾದ ರಾಜ್ಯಸಭೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕನ್ನಡ ಸೇರಿದಂತೆ ಪಂಚಭಾಷೆಗಳಲ್ಲಿ ಪರಿಣತಿ ಹೊಂದಿರುವ, ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದಿರುವ ಸೋಮಶೇಖರ್ ಅವರು, ಕಳೆದ ಮೂರು ದಶಕಗಳಿಂದ ಸಂಸತ್ತಿನ ವಿವಿಧ ಆಡಳಿತಾತ್ಮಕ ಹುದ್ದೆಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ.
ಕರ್ನಾಟಕದ ಕೋಲಾರ ಮೂಲದ ಡಾ। ಕೆ.ಎಸ್.ಸೋಮಶೇಖರ್, ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆ ನಿರ್ವಹಿಸಿ ಬಳಿಕ ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದರು. 1993ರಲ್ಲಿ ರಾಜ್ಯಸಭೆಯ ಸಚಿವಾಲಯಕ್ಕೆ ನೇಮಕಗೊಂಡಿದ್ದ ಸೋಮಶೇಖರ್ ನಂತರದ 33 ವರ್ಷಗಳಲ್ಲಿ ಸಂಸದೀಯ ನಡವಳಿಕೆಗಳು, ಶಾಸಕಾಂಗದ ಆಡಳಿತ, ಸಮಿತಿ ನಿರ್ವಹಣೆ, ಭಾಷಾಂತರ ಸೇವೆ ಸೇರಿದ ವಿವಿಧ ವಿಷಯಗಳಲ್ಲಿ ಅತ್ಯಂತ ಪರಿಣಿತ ಸೇವೆ ನೀಡಿದ ಅಪಾರ ಅನುಭವ ಹೊಂದಿದ್ದಾರೆ.
ರಾಜ್ಯಸಭೆಯಲ್ಲಿ ಭಾಷಾಂತರಕಾರರಾಗಿ ಸೇವೆ ಆರಂಭಿಸಿದ್ದ ಡಾ. ಸೋಮಶೇಖರ್ ನಂತರ 33 ವರ್ಷಗಳಲ್ಲಿ ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ನಿರ್ದೇಶಕ, ಜಂಟಿ ನಿರ್ದೇಶಕರಾಗಿ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಕುರಿತ ಸಂಸದೀಯ ಸಮಿತಿ ಸದಸ್ಯರಾಗಿ, ವಿವಿಧ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
ಅಲ್ಲದೇ ಸೋಮಶೇಖರ್ ಅವರು ಯುನೈಟೆಡ್ ಕಿಂಗ್ಡಮ್ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ಸಂಸದೀಯ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಹಾಗೇ ಜಿನೀವಾದಲ್ಲಿ ನಡೆದ ಅಂತರ್ ಸಂಸದೀಯ ಒಕ್ಕೂಟದ (ಐಪಿಯು) ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ರಾಜ್ಯಸಭಾ ಸಚಿವಾಲಯ ತಿಳಿಸಿದೆ.
Published On - 4:37 pm, Sun, 19 April 26