ಕೋಲಾರಕ್ಕೆ ಬರಲಿದೆ ಬುಲೆಟ್​ ರೈಲು; ಮತ್ತೊಂದು ಹೈಸ್ಪೀಡ್‌ ಟ್ರೈನ್​ ಯೋಜನೆ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಅದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅನುಷ್ಟಾನಗೊಳ್ಳುತ್ತಿರುವ ಬುಲೆಟ್ ಟ್ರೈನ್​,‌ ಕರ್ನಾಟಕ, ಆಂಧ್ರ ಮತ್ತು ತಮಿಳುನಾಡು‌ ಸೇರಿದಂತೆ ಮೂರು ರಾಜ್ಯಗಳನ್ನು ಸೇರಿಸುವಂತಹ‌‌ ಯೋಜನೆಯಾಗಿದ್ದು, ಇದಕ್ಕಾಗಿ ಪೂರ್ವ ತಯಾರಿ ಸಿದ್ದತೆಗಳು ನಡೆಯುತ್ತಿವೆ. ಅಷ್ಟಕ್ಕೂ ಅದು‌ ಯಾವ ಯೋಜನೆ ಅಂತೀರಾ? ಈ ಸ್ಟೋರಿ ಓದಿ.

ಕೋಲಾರಕ್ಕೆ ಬರಲಿದೆ ಬುಲೆಟ್​ ರೈಲು; ಮತ್ತೊಂದು ಹೈಸ್ಪೀಡ್‌ ಟ್ರೈನ್​ ಯೋಜನೆ ಜಾರಿಗೆ ಮುಂದಾದ ಕೇಂದ್ರ ಸರ್ಕಾರ
ಕೋಲಾರಕ್ಕೆ ಬರಲಿದೆ ಬುಲೆಟ್​ ರೈಲು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 18, 2024 | 6:50 PM

ಕೋಲಾರ, ಜು.18: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಚೆನ್ನೈ-ಮೈಸೂರು ಹೈಸ್ಪೀಡ್‌ ಬುಲೆಟ್​ ಟ್ರೈನ್​ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳು ಅಂತಿಮ ಹಂತದಲ್ಲಿ ನಡೆಯುತ್ತಿದೆ. ಸುಮಾರು 463 ಕಿ.ಮೀ. ಉದ್ದದ ಮಾರ್ಗ ಇದಾಗಿದ್ದು, ಕೋಲಾರ(Kolar) ಜಿಲ್ಲೆಯಲ್ಲಿ 70 ಕಿ.ಮೀ. ಕಾರಿಡಾರ್‌ ಹಾದು ಹೋಗಲಿದೆ. ಮೈಸೂರು- ಚೆನ್ನೈ ಹೈಸ್ಪೀಡ್ ಬುಲೆಟ್ ಟ್ರೈನ್​ ಕಾಮಗಾರಿಗಾಗಿ ಈಗಾಗಲೇ ಪರಿಸರ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ.

ಕೋಲಾರದ ಹುದುಕುಳ ಬಳಿ ಬುಲೆಟ್​ ಟ್ರೈನ್​ ನಿಲ್ದಾಣ

ಬುಲೆಟ್‌ ಟ್ರೈನ್​ ಚೆನ್ನೈನಿಂದ ಶುರುವಾಗಲಿದ್ದು, ಮೈಸೂರಿನಲ್ಲಿ ಕೊನೆಗೊಳ್ಳಲಿದೆ. ಮೊದಲ ಹಂತದಲ್ಲಿ ಚೆನ್ನೈನಿಂದ ಬೆಂಗಳೂರು ವರೆಗೆ ಕಾಮಗಾರಿ ಮಾಡಲಿದ್ದು, ನಂತರ ಎರಡನೇ ಹಂತದಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಯೋಜನೆ ವಿಸ್ತರಿಸಲಾಗುತ್ತದೆ. ಹೀಗೆ ಎರಡು ಹಂತದಲ್ಲಿ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಈ ಮಾರ್ಗದಲ್ಲಿ ಒಟ್ಟು 11 ಸ್ಟಾಪ್‌ಗಳನ್ನು ಒಳಗೊಂಡಿರಲಿದ್ದು, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಹುದುಕುಳ ಬಳಿ ಬುಲೆಟ್​ ಟ್ರೈನ್​ ನಿಲ್ದಾಣ ಮಾಡುವ ಪ್ಲಾನ್ ಇದೆ.
ಇನ್ನು ಚೆನ್ನೈ- ಮೈಸೂರು ನಡುವೆ ಈ ರೈಲು ಮಾರ್ಗವು ಜಿಲ್ಲೆಯ ಕೆಲವೆಡೆ ಹೊಲ, ಗದ್ದೆಗಳ ನಡುವೆ ಹಾದು ಹೋಗಲಿದೆ. ಜಮೀನು ಸೇರಿದಂತೆ ಯಾವುದೇ ವಿಚಾರದಲ್ಲಿ ರೈತರಿಗೆ ಹೆಚ್ಚು ತೊಂದರೆ ಆಗದಂತೆ ಈಗಾಗಲೇ ರೈತರನ್ನು ಕರೆಸಿ ಸಭೆಗಳನ್ನು ಮಾಡಲಾಗಿದ್ದು, ಜಮೀನು ಕಳೆದುಕೊಳ್ಳುವ ರೈತರಿಗೆ ಹಾಲಿ ಬೆಲೆಯ ನಾಲ್ಕುಪಟ್ಟು ಹಣವನ್ನು ಕೇಂದ್ರ ಸರ್ಕಾರ ನೀಡಲಿದೆ.  ಇನ್ನು ಬುಲೆಟ್ ಟ್ರೈನ್ ಚೆನ್ನೈ ಕಾರಿಡಾರ್ ಪಕ್ಕದಲ್ಲಿ ಬರಲಿದ್ದು, ಸುಮಾರು 17 ಮೀಟರ್​ ನಷ್ಟು ಭೂಮಿ ರೈತರಿಂದ ಭೂಸ್ವಾಧೀನ ಮಾಡಿಕೊಳ್ಳಲಿದೆ. ಬುಲೆಟ್ ಟ್ರೈನ್ ನಿಂದ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎತ್ತರಿಸಿದ ಮೇಲ್ಸೇತುವೆ ಮತ್ತು ಸುರಂಗಗಳಲ್ಲಿ ಹಾದು ಈ ಬುಲೆಟ್​ ಟ್ರೈನ್​ ಹಾದು ಹೋಗಲಿದೆ.

ದಕ್ಷಿಣ ಭಾರತದ ಮೊದಲ ಯೋಜನೆ

ದಕ್ಷಿಣ ಭಾರತದ ಮೊದಲ ಯೋಜನೆಯಾಗಿದ್ದು, ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯ ಸೇರುವಂತಹ ಮಾರ್ಗ ಸೇರಲಿದ್ದು, ಇದರಿಂದ ಹಲವಾರು ಸೌಲಭ್ಯಗಳು ಜಿಲ್ಲೆಗೂ ದೊರೆಯಲಿದೆ. ಇನ್ನು ಇದರಿಂದ ವಿವಿಧ ಕೈಗಾರಿಕೆಗಳು, ಉದ್ಯೋಗಗಳು ಸಿಗಲಿದ್ದು, ಜನರಿಗೆ ತುಂಬಾ ಅನುಕೂಲವಾಗಲಿದೆ. ಇದು ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿನಿಂದ ಚೆನ್ನೈಗೆ ತಲುಪಬಹುದಾಗಿದೆ. ದಕ್ಷಿಣ‌ ಭಾರತದಲ್ಲಿ ಪ್ರಥಮ ಯೋಜನೆಯಾಗಿರುವುದರಿಂದ ರಾಜ್ಯ ಸರ್ಕಾರ ಸಹ ಇದಕ್ಕೆ ಮೊದಲ ಆದ್ಯತೆಯನ್ನು ನೀಡಬೇಕಾಗಿದೆ.
ಈಗಾಗಲೇ ಸರ್ವೇ ಕಾರ್ಯ ನಡೆದಿರುವುದರಿಂದ ಪರಿಸರದ ಮೇಲೆ ಆಗುವಂತಹ ಪರಿಣಾಮಗಳನ್ನು ಅರಿತ ನಂತರ ಅನುಮೋದನೆಗೆ ಕೇಂದ್ರ ಸರ್ಕಾರದ ಮುಂದೆ ಹೋಗಲಿದೆ. ಜೊತೆಗೆ ತ್ವರಿತ ಗತಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡುಲಾಗುವುದು ಎಂದು ನೂತನ ಸಂಸದ ಮಲ್ಲೇಶ್​ ಬಾಬು ಹೇಳಿದ್ದಾರೆ.
ಒಟ್ಟಾರೆ ಚೆನ್ನೈ ಎಕ್ಸ್​ಪ್ರೆಕ್ಸ್​ ಕಾರಿಡಾರ್ ಹೈವೇ ನಂತರ ಮತ್ತೊಂದು ಮಹತ್ವಾಕಾಂಕ್ಷೆ ಯೋಜನೆಯ ಬುಲೆಟ್ ಟ್ರೈನ್​ ಯೋಜನೆಯ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಯೋಜನೆ ಆದಷ್ಟು ಬೇಗ ಅನುಷ್ಠಾನಕ್ಕೆ ಬಂದಿದ್ದೇ ಆದಲ್ಲಿ ಕೋಲಾರ ಹಾಗೂ ಕರ್ನಾಟಕದ ಕೈಗಾರಿಕಾ ವಲಯಕ್ಕೆ ಸಹಕಾರಿ ಆಗೋದರಲ್ಲಿ ಅನುಮಾನವಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ