ಸರ್ಕಾರಿ ಜಮೀನಿನ ಅಕ್ರಮ ಮಂಜೂರಾತಿ ಆರೋಪ: ಮಾಲೂರು ಶಾಸಕರ ವಿರುದ್ಧ ಎಫ್ಐಆರ್
ಸರ್ಕಾರಿ ಭೂಮಿ ಅಕ್ರಮ ಹಂಚಿಕೆ ಆರೋಪ ಸಂಬಂಧ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕೋರ್ಟ್ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೋಲಾರ: ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪದ ಹಿನ್ನೆಲೆ ಬೆಂಗಳೂರಿನ 47ನೇ ಹೆಚ್ಚುವರಿ ಸಿಎಂಎಂ ಕೋರ್ಟ್ ಆದೇಶದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಮಾಲೂರು ಶಾಸಕರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬರೋಬ್ಬರಿ 150 ಕೋಟಿ ಮೌಲ್ಯದ ಗೋಮಾಳ ಜಮೀನನ್ನು 2019ರ ಜುಲೈನಲ್ಲಿ 4 ಸಭೆ ಮಾಡಿ ಮಂಜೂರು ಮಾಡಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರಾಜಣ್ಣ ಅವರು ದೂರು ನೀಡಿದ್ದರು. ಅದರಂತೆ ಶಾಸಕ ಕೆ.ವೈ.ನಂಜೇಗೌಡ, ತಹಶೀಲ್ದಾರ್, ಕಾರ್ಯದರ್ಶಿ, ಶಿರಸ್ತೆದಾರ್, ಆರ್ಐ, ವಿಎ ಸೇರಿದಂತೆ ಹಲವರ ವಿರುದ್ಧ ದೂರು ದಾಖಲಾಗಿತ್ತು.
2019 ಜುಲೈ ತಿಂಗಳಲ್ಲಿ ಸರ್ಕಾರಿ ಗೋಮಾಳ ಜಮೀನನ್ನ ಒಂದೆ ತಿಂಗಳಲ್ಲಿ ನಾಲ್ಕು ಸಭೆ ಮಾಡಿ ಮಂಜೂರು ಮಾಡಲಾಗಿದೆ. ಬಳಿಕ ನಕಲಿ ದಾಖಲೆಗಳನ್ನ ನೀಡಿ ಭೂ ಮಂಜೂರು ಮಾಡಿರುವ ಆರೋಪ ದರಖಾಸ್ತು ಕಮಿಟಿ ಅಧ್ಯಕ್ಷರೂ ಆಗಿರುವ ಶಾಸಕರ ವಿರುದ್ಧ ಕೇಳಿಬಂದಿದೆ. ಬರೋಬ್ಬರಿ 150 ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು ಮಾಡಿರುವುದಾಗಿ ಸಾಮಾಜಿಕ ಕಾರ್ಯಕರ್ತ ರಾಜಣ್ಣ ದೂರು ನೀಡಿದ್ದರು.
ಕಮಿಟಿ ಅಧ್ಯಕ್ಷ ಶಾಸಕ, ಕಾರ್ಯದರ್ಶೀ ತಹಶೀಲ್ದಾರ್ ಸೇರಿ ಒಟ್ಟು ಒಂಬತ್ತು ಮಂದಿ ವಿರುದ್ಧ ದೂರು ನೀಡಲಾಗಿತ್ತು. ಸಮಿತಿ ಅಧಿಕರೇತರ ಸದಸ್ಯರಾದ ದೊಮ್ಮಲೂರು ನಾಗರಾಜ್, ನಲ್ಲಾಂಡಹಳ್ಳಿ ನಾಗಪ್ಪ, ಅಬ್ಬೇನಹಳ್ಳಿ ನಾಗಮ್ಮ ವಿರುದ್ದವೂ ದೂರು ನೀಡಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಶಿರಸ್ತೆದಾರ್, ಆರ್ಐ, ಗ್ರಾಮ ಲೆಕ್ಕಿಗರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದರು. ಸದ್ಯ ಬೆಂಗಳೂರಿನ 47ನೇ ಹೆಚ್ಚುವರಿ ಸಿಎಂಎಂ ನ್ಯಾಯಾಲಯದ ಆದೇಶದಂತೆ ಮಾಲೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 pm, Thu, 3 November 22