ಕೊಪ್ಪಳ ಸೇರಿದಂತೆ ಅನೇಕ ಜಿಲ್ಲೆಯ ಅಂಗನವಾಡಿಗಳಿಗೆ ಹಾಲೇ ಸಿಗ್ತಿಲ್ಲಾ! ಯಾಕೆ ಹೀಗೆ?
ಒಂದು ವರ್ಷದಿಂದ ಮಕ್ಕಳು ಹಾಲಿನಿಂದ ವಂಚಿತರಾಗಿದ್ದಾರೆ. ಹೀಗಾಗಿ ಇಲಾಖೆ ಆದಷ್ಟು ಬೇಗನೆ ಹಾಲು ಪೂರೈಕೆಯ ಕೆಲಸ ಮಾಡಬೇಕಿದೆ. ಇಲ್ಲವೇ ಹಾಲಿನ ಪೌಡರ್ ಖರೀದಿಗೆ ನೀಡುತ್ತಿದ್ದ ಹಣವನ್ನು ಮಕ್ಕಳ ಅಕೌಂಟ್ ಗೆ ಹಾಕುವ ಕೆಲಸವನ್ನಾದ್ರು ಮಾಡಬೇಕಿದೆ.

ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಬೇಕು, ಗರ್ಭಿಣಿಯರು ಮತ್ತು ಬಾಣಂತಿಯ ಕ್ಯಾಲ್ಸಿಯಂ ಸೇರಿದಂತೆ ಇನ್ನಿತರ ಪೌಷ್ಟಿಕಾಂಶಗಳು ಸಿಗಬೇಕು ಅನ್ನೋ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ 2013 ರಲ್ಲಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಕೆಲ ದಿನಗಳ ಹಿಂದಷ್ಟೇ ಸರ್ಕಾರ ಕ್ಷೀರಭಾಗ್ಯ ಯೋಜನೆಯ ದಶಮಾನೋತ್ಸವವನ್ನು ಕೂಡಾ ಅದ್ದೂರಿಯಾಗಿ ಆಚರಿಸಿದೆ. ಆದರೆ ಕಳೆದ ಒಂದು ವರ್ಷದಿಂದ ಕೊಪ್ಪಳ (koppal) ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಯ ಅಂಗನವಾಡಿ (anganwadi) ಮಕ್ಕಳಿಗೆ, ಬಾಣಂತಿಯರು, ಗರ್ಭಿಣಿಯರಿಗೆ ಹಾಲೇ (milk) ಸಿಗ್ತಿಲ್ಲಾ. ಇದು ಅಚ್ಚರಿಯಾದರು ಕೂಡಾ ಸತ್ಯ. ಹೌದು ಸರ್ಕಾರ (karnataka government) ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತದೆ. ಅದಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುತ್ತದೆ. 2013 ರಲ್ಲಿಯೇ ಸಿದ್ದರಾಮಯ್ಯ ಸರ್ಕಾರ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಅಂಗನವಾಡಿ ಮಕ್ಕಳು, ಬಾಣಂತಿಯರಿಗೆ, ಗರ್ಭಿಣಿಯರಿಗೆ ಈ ಯೋಜನೆಯಡಿ ಹಾಲು ಪೂರೈಕೆ ಮಾಡಲಾಗುತ್ತಿತ್ತು. ಈ ಯೋಜನೆ ಜಾರಿಯಾಗಿ ಇದೀಗ ಹತ್ತು ವರ್ಷಗಳಾಗಿದ್ದು, ಸಿದ್ದರಾಮಯ್ಯ ಸರ್ಕಾರ ಅದ್ದೂರಿಯಾಗಿ ದಶಮಾನೋತ್ಸವ ಕೂಡಾ ಆಚರಿಸಿದೆ.
ಆದ್ರೆ ದಶಮಾನೋತ್ಸವ ವರ್ಷದಲ್ಲಿರುವಾಗಲೇ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ರಾಜ್ಯದ ಲಕ್ಷಾಂತರ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಕಳೆದ ಒಂದು ವರ್ಷದಿಂದ ಹಾಲಿನಿಂದ ವಂಚಿತರಾಗಿದ್ದಾರೆ. ಹೌದು ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಯ ಮಕ್ಕಳಿಗೆ ಹಾಲು ಸಿಗ್ತಿಲ್ಲಾ. ಹೀಗಾಗಿ ಯಾವ ಉದ್ದೇಶದಿಂದ ಸರ್ಕಾರ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತೋ, ಆ ಯೋಜನೆಯ ಉದ್ದೇಶವೇ ಇದೀಗ ಹಳ್ಳ ಹಿಡಿಯುತ್ತಿದೆ.
ಹೌದು ಅಪೌಷ್ಟಿಕತೆ ನಿವಾರಣೆಗಾಗಿ ಸರ್ಕಾರ ವಾರದಲ್ಲಿ ಐದು ದಿನ ಹಾಲನ್ನು ಮಕ್ಕಳಿಗೆ ನೀಡಲಾಗುತ್ತಿತ್ತು. ಆರರಿಂದ ಆರು ವರ್ಷದ ಮಕ್ಕಳಿಗೆ ಪ್ರತಿ ದಿನ 150 ಎಂ ಎಲ್ ಹಾಲನ್ನು ನೀಡಲಾಗುತ್ತಿತ್ತು. ಜೊತೆಗೆ ಮಾತೃವಂದನಾ ಯೋಜನೆಯಡಿ, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಕೂಡಾ ಪ್ರತಿ ತಿಂಗಳು ಅರ್ಧ ಕಿಲೋ ಹಾಲಿನ ಪೌಡರ ಮತ್ತು ಸಕ್ಕರೆಯನ್ನು ನೀಡಲಾಗುತ್ತಿತ್ತು. ಆದರೆ ಇದೀಗ ಸಕ್ಕರೆ ಮಾತ್ರ ಬರ್ತಿದೆ. ಹಾಲಿನ ಪೌಡರ್ ಅಂಗನವಾಡಿಗಳಿಗೆ ಬರ್ತಿಲ್ಲಾ. ಹೀಗಾಗಿ ಅಂಗನವಾಡಿ ಮಕ್ಕಳು ಮತ್ತು ಬಾಣಂತಿಯರು, ಗರ್ಭಿಣಿಯರು ಹಾಲಿನಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಸದ್ಯ 69,899 ಅಂಗನವಾಡಿಗಳಿವೆ. ಈ ಅಂಗನವಾಡಿಗಳಲ್ಲಿ ಬರೋಬ್ಬರಿ 3,95,0179 ಮಕ್ಕಳಿವೆ. ಈ ಪೈಕಿ ಬಹುತೇಕ ಮಕ್ಕಳಿಗೆ ಕಳೆದ ಒಂದು ವರ್ಷದಿಂದ ಹಾಲು ಸಿಗ್ತಿಲ್ಲಾ.
ಕೊಪ್ಪಳ ಸೇರಿದಂತೆ ರಾಜ್ಯದ ಕಲ್ಯಾಣ ಕರ್ನಾಟಕ ಬಾಗದಲ್ಲಿ ಹೆಚ್ಚಿನ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಬಾಣಂತಿಯರು ಮತ್ತು ಗರ್ಭಿಣಿಯರು ಕೂಡಾ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದ ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಕ್ಷೀರಭಾಗ್ಯ ಯೋಜನೆಯಿಂದ ಹೆಚ್ಚಿನ ಅನಕೂಲವಾಗಿದ್ದವು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಜನರು ಹಣ ಕೊಟ್ಟು ಹಾಲು ಖರೀದಿಸಿ ಕುಡಿಯಲು ಅಸಮರ್ಥರಾಗಿದ್ದರಿಂದ ಕ್ಷೀರಭಾಗ್ಯ ಯೋಜನೆಯಿಂದ ಹೆಚ್ಚಿನ ಜನರಿಗೆ ಲಾಭವಾಗಿತ್ತು.
ಆದರೆ ಕಳೆದ ಒಂದು ವರ್ಷದಿಂದ ಹಾಲು ಸಿಗ್ತಿಲ್ಲಾ. ಈ ಮೊದಲು ಕೆ ಎಂ ಎಫ್ ನಿಂದ ಅಂಗನವಾಡಿಗಳಿಗೆ ಹಾಲಿನ ಪೌಡರ್ ಪೂರೈಕೆಯಾಗುತ್ತಿತ್ತು. ಅಂಗನವಾಡಿಗಳಲ್ಲಿ ಪೌಡರ್ ನ್ನು ಹಾಲು ಮಾಡಿ, ಮಕ್ಕಳಿಗೆ ನೀಡಲಾಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಅಂಗನವಾಡಿಗಳಿಗೆ ಪೌಡರ್ ಪೂರೈಕೆಯಾಗುತ್ತಿಲ್ಲಾ. ಈ ಮೊದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೆ ಎಂ ಎಫ್ ಗೆ ಸಾಕಷ್ಟು ಹಣ ಬಾಕಿ ಉಳಿಸಿಕೊಂಡಿತ್ತಂತೆ. ಹೀಗಾಗಿ ಕೆ ಎಂ ಎಫ್ ಹಾಲಿನ ಪೌಡರ್ ಪೂರೈಕೆ ಬಂದ್ ಮಾಡಿತ್ತು.
Also Read: ವಿಜಯಪುರ ಜಿಲ್ಲೆಯಲ್ಲಿ ಹೈನೋದ್ಯಮ ಮಾಡುವ ಗೌಳಿಗರು ದೀಪಾವಳಿಯನ್ನು ವಿಭಿನ್ನವಾಗಿ ಆಚರಿಸುತ್ತಾರೆ! ಏನದರ ವಿಶೇಷ?
ಆದ್ರೆ ಕಳೆದ ಕೆಲ ತಿಂಗಳ ಹಿಂದೆ ಇಲಾಖೆಗೆ ಅನುಧಾನ ಬಂದಿದ್ದು, ಬಾಕಿ ಹಣವನ್ನು ಕೂಡಾ ಪಾವತಿಸಿದೆ. ಇದೀಗ ಮತ್ತೆ ಹಣ ನೀಡ್ತೇವೆ, ಹಾಲಿನ ಪೌಡರ್ ನೀಡಿ ಅಂತ ಇಲಾಕೆಯ ಅಧಿಕಾರಿಗಳು ಕೆ ಎಂ ಎಪ್ ಗೆ ಮನವಿ ಮಾಡಿದ್ರು ಕೂಡಾ, ಕೆ ಎಂ ಎಫ್ ಹಾಲಿನ ಪೌಡರ್ ಪೂರೈಕೆ ಮಾಡ್ತಿಲ್ಲವಂತೆ. ಹೌದು ಕೆ ಎಂ ಎಫ್ ಹಾಲಿನ ಪೌಡರ್ ಉತ್ಫಾದನೆಗೆ ಹೆಚ್ಚು ಗಮನ ನೀಡದೇ ಇರೋದು ಮತ್ತು ಈ ವರ್ಷ ಬರಗಾಲದಿಂದ ಹಾಲಿನ ಪ್ರಮಾಣ ಕಡಿಮೆಯಾಗಿರುವದರಿಂದ ಹಾಲಿನ ಪೌಡರ್ ಉತ್ಪಾದನೆ ಕಡಿಮೆಯಾಗಿದೆ. ಇದೇ ಕಾರಣದಿಂದಲೇ ಮಕ್ಕಳಿಗೆ ಹಾಲು ಸಿಗ್ತಿಲ್ಲಾ ಅಂತ ಹೇಳಲಾಗುತ್ತಿದೆ.
ಒಂದಡೆ ಅಂಗನವಾಡಿ ಮಕ್ಕಳಿಗೆ ಹಾಲಿನ ಪೌಡರ್ ಕೊರತೆ ನೆಪ ಹೇಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಲಿನ ಪೌಡರ್ ಪೂರೈಕೆ ಮಾಡ್ತಿಲ್ಲಾ. ಆದ್ರೆ ಸರ್ಕಾರಿ ಶಾಲೆಗಳಿಗೆ ಮಾತ್ರ ಹಾಲಿನ ಪೌಡರ ನಿರಂತರವಾಗಿ ಪೂರೈಕೆಯಾಗುತ್ತಿದೆ. ಶಾಲಾ ಮಕ್ಕಳಿಗೆ ಸಿಗುತ್ತಿರುವ ಹಾಲಿನ ಪೌಡರ್, ಅಂಗನವಾಡಿ ಮಕ್ಕಳಿಗೆ ಯಾಕೆ ಸಿಗ್ತಿಲ್ಲಾ ಅನ್ನೋ ಪ್ರಶ್ನೆ ಎದುರಾಗಿದೆ.
ಸದ್ಯ ಒಂದು ವರ್ಷದಿಂದ ಮಕ್ಕಳು ಹಾಲಿನಿಂದ ವಂಚಿತರಾಗಿದ್ದಾರೆ. ಹೀಗಾಗಿ ಇಲಾಖೆ ಆದಷ್ಟು ಬೇಗನೆ ಹಾಲು ಪೂರೈಕೆಯ ಕೆಲಸ ಮಾಡಬೇಕಿದೆ. ಇಲ್ಲವೇ ಹಾಲಿನ ಪೌಡರ್ ಖರೀದಿಗೆ ನೀಡುತ್ತಿದ್ದ ಹಣವನ್ನು ಮಕ್ಕಳ ಅಕೌಂಟ್ ಗೆ ಹಾಕುವ ಕೆಲಸವನ್ನಾದ್ರು ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ