ಕೊಪ್ಪಳ: ಮುನಿಸಿಕೊಂಡ ವರುಣ; ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಾದರೂ ನೀರಿಲ್ಲದೆ ಬರಿದಾದ ಕೆರೆಯ ಒಡಲು

ರಾಜ್ಯದ ಅನೇಕ ಕಡೆ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಮಳೆಯ ಹೊಡೆತಕ್ಕೆ ಅನೇಕ ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಕೆಲ ಭಾಗದ ಜನರು ಯಾವಾಗ ಮಳೆ ನಿಲ್ಲುತ್ತದೆ ಅಂತಿದ್ದಾರೆ. ಆದ್ರೆ, ಕೊಪ್ಪಳದ ಜನರು, ಮಳೆಗಾಗಿ ಕಾದು ಕುಳಿತಿದ್ದಾರೆ. ಇನ್ನು ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಾದರೂ ಕೂಡ ಜಿಲ್ಲೆಯ ಬಹುತೇಕ ಕೆರೆಗಳು ಖಾಲಿ ಖಾಲಿಯಾಗಿವೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ.

ಕೊಪ್ಪಳ: ಮುನಿಸಿಕೊಂಡ ವರುಣ; ಮಳೆಗಾಲ ಆರಂಭವಾಗಿ ಒಂದೂವರೆ ತಿಂಗಳಾದರೂ ನೀರಿಲ್ಲದೆ ಬರಿದಾದ ಕೆರೆಯ ಒಡಲು
ಕೊಪ್ಪಳದಲ್ಲಿ ಮಳೆ ಬಾರದೇ ಜನ ಕಂಗಾಲು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 10, 2024 | 10:02 PM

ಕೊಪ್ಪಳ, ಜು.10: ಖಾಲಿ ಖಾಲಿಯಾಗಿರುವ ಕೆರೆಗಳನ್ನು ನೋಡಿದ್ರೆ, ಇದು ಬಿರು ಬೇಸಿಗೆಯಲ್ಲಿನ ದೃಶ್ಯಗಳು ಎಂದು ಅಂದುಕೊಳ್ಳಬಹುದು. ಆದ್ರೆ, ಈ ರೀತಿಯ ದೃಶ್ಯಗಳು ಇದೀಗ ಬಿರು ಬೇಸಿಗೆಯಲ್ಲಿ ಮಾತ್ರವಲ್ಲ, ಮುಂಗಾರು ಮಳೆ(Rain)ಯ ಆರ್ಭಟದ ಮಳೆಗಾಲದಲ್ಲಿಯೂ ಇದೇ ಸ್ಥಿತಿಯಿದೆ. ಹೌದು, ಕೊಪ್ಪಳ(Koppal) ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋಮಲಪುರ, ಕನಕಗಿರಿ ತಾಲೂಕಿನ ದಾಸನಾಳ, ರಾಂಪುರ ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿರುವ ಕೆರೆಗಳು ಬರಿದಾಗಿದೆ. ಈ ಬಾರಿ ಉತ್ತಮ ಮಳೆ ಬರುತ್ತೆ, ನೀರು ಚೆನ್ನಾಗಿ ನಿಲ್ಲಲಿ ಅಂತ ಅನೇಕ ಕಡೆ ಕೆರೆಯ ಹೂಳನ್ನು ತೆಗದು, ಕೆರೆಯ ಒಡ್ಡುಗಳನ್ನು ಸರಿಮಾಡಿ ಇಡಲಾಗಿತ್ತು. ಆದ್ರೆ, ವರುಣದೇವ ಮುನಿಸಿಕೊಂಡಿದ್ದಾನೆ.

ನೀರಿಲ್ಲದೆ ಬರಿದಾದ ಕೆರೆಯ ಒಡಲು

ಕೊಪ್ಪಳ ಜಿಲ್ಲೆಯ ಬಹುತೇಕ ಕೆರೆಗಳು ಮಳೆಗಾಲದಲ್ಲಿಯೇ ನೀರಿಗಾಗಿ ಕಾದು ಕುಳಿತಿವೆ. ಜಿಲ್ಲೆಯಲ್ಲಿ ಐನೂರಕ್ಕೂ ಹೆಚ್ಚು ಕಡೆ ಕೆರೆಗಳಿವೆ. ಆದ್ರೆ, ಬಹುತೇಕ ಕೆರೆಗಳು ಖಾಲಿ ಖಾಲಿಯಾಗಿವೆ. ಅನೇಕ ಕಡೆ ಕೆರೆಯ ನೀರು ಸಾಮಾರ್ಥ್ಯದ ಅರ್ಧದಷ್ಟು ಕೂಡ ನೀರು ಬಂದಿಲ್ಲ. ಇನ್ನು ಕೆಲವೆಡೆ ಕೆರೆಗಳಿಗೆ ಹನಿ ನೀರು ಕೂಡ ಹರಿದು ಬಂದಿಲ್ಲ. ಹೀಗಾಗಿ ಸದಾ ನೀರಿನಿಂದ ತುಂಬಿರಬೇಕಾಗಿದ್ದ ಕೆರೆಗಳಲ್ಲಿ ಇದೀಗ ಒಣ ಭೂಮಿ ಕಾಣುತ್ತಿದೆ.

ಇದನ್ನೂ ಓದಿ:ಕರಾವಳಿ ಜಿಲ್ಲೆಗಳಲ್ಲಿ ನಿಲ್ಲದ ಮಳೆ ಅಬ್ಬರ: ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ನೋಡಿ

ಜಿಲ್ಲೆಯಲ್ಲಿ ಜೂನ್ ತಿಂಗಳ ಕೆಲ ದಿನಗಳ ಕಾಲ ಉತ್ತಮ ಮಳೆಯಾಗಿತ್ತು. ಆದ್ರೆ, ಜೂನ್ ಹದಿನೈದರ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಈಗಾಗಲೇ ಮಳೆಯಾಗದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ. ಕೆರೆಗಳಲ್ಲಿನ ನೀರನ್ನು ಬಳಸಿಕೊಂಡು ಬೆಳೆಗಳಿಗೆ ಬಿಡೋಣಾ ಅಂದರೆ ಕೆರೆಗಳು ಕೂಡಾ ಖಾಲಿಯಾಗಿವೆ. ಕೆರೆಗಳಲ್ಲಿ ನೀರು ಸಂಗ್ರಹವಾಗದೇ ಇರೋದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಇನ್ನೊಂದೆಡೆ ಕೆರೆಗಳು ತುಂಬಿದ್ರೆ, ಕೆರೆಯ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರು ಹೆಚ್ಚಾಗುತ್ತಿತ್ತು. ಆದ್ರೆ, ಈ ಬಾರಿ ಕೆರೆಗಳೇ ಖಾಲಿಯಾಗಿದ್ದು, ಬೋರವೆಲ್​ಗಳು ಕೂಡಾ ಮಳೆಗಾಲದಲ್ಲಿ ಬತ್ತುತ್ತಿವೆ. ಮಳೆಗಾಲದಲ್ಲಿಯೇ ಕೆರೆಗಳು ಖಾಲಿ ಖಾಲಿಯಾಗಿರುವುದು ರೈತರ ಸಂಕಷ್ಟ ಹೆಚ್ಚಾಗುವಂತೆ ಮಾಡಿದೆ.

ಇನ್ನು ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಮೂಲವೇ ಕೆರೆಗಳು ಆಗಿವೆ. ಆದ್ರೆ, ಮಳೆಗಾಲದಲ್ಲಿ ಕೆರೆಗಳು ತುಂಬದೆ ಇದ್ರೆ ಬೇಸಿಗೆ ಕಾಲದಲ್ಲಿ ನೀರಿಗೆ ತತ್ವಾರ ಆರಂಭವಾಗುತ್ತದೆ. ಹೀಗಾಗಿ ದೊಡ್ಡ ಮಳೆಗಾಗಿ ಕೊಪ್ಪಳ ಜನರು ಕಾದು ಕುಳಿತಿದ್ದಾರೆ. ತೀರ್ವ ಮಳೆಯ ಕೊರತೆಯಿಂದ ರೈತರು ಸೇರಿದಂತೆ ಜಿಲ್ಲೆಯ ಜನರು ಕಂಗಾಲಾಗಿದ್ದು, ಮೋಡಗಳನ್ನು ನೋಡುತ್ತಾ, ಯಾವಾಗ ಮಳೆಯಾಗುತ್ತದೆ ಎಂದು ಆಗಸದತ್ತ ಮುಖ ಮಾಡಿದ್ದಾರೆ. ಆದಷ್ಟು ಬೇಗ ವರುಣದೇವ ಜಿಲ್ಲೆಯ ಜನರ ಮೇಲೆ ಕೃಪೆ ತೋರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ