SSLC ಫಲಿತಾಂಶ ಪ್ರಕಟ: ಮತ್ತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 09, 2024 | 4:31 PM

ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ, ಪಿಯುಸಿ ಫಲಿತಾಂಶ ಬಂದಾಗ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಹೆಸರನ್ನು ಮೇಲಿನಿಂದ ನೋಡುವುದಕ್ಕಿಂತ ಕೆಳಗಿನಿಂದ ನೋಡುವುದೇ ರೂಢಿಯಾಗಿದೆ. ಪ್ರತಿವರ್ಷ ಫಲಿತಾಂಶ ಪ್ರಕಟವಾದಾಗ ಕೂಡ ಕೊನೆಯ ಸ್ಥಾನದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಇರುತ್ತವೆ. ಅದರಂತೆ ಈ ವರ್ಷದ ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಕೂಡ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿವೆ. ಈ ಭಾಗದ ಶೈಕ್ಷಣಿಕ ಸುಧಾರಣೆಗಾಗಿ ಕೋಟಿ ಕೋಟಿ ಹಣ ಖರ್ಚಾದರೂ ಕೂಡ ಫಲಿತಾಂಶ ಹೆಚ್ಚಳವಾಗದೇ ಇರೋದು ಹತ್ತಾರು ಚರ್ಚೆಗೆ ಕಾರಣವಾಗುತ್ತಿದೆ.

SSLC ಫಲಿತಾಂಶ ಪ್ರಕಟ: ಮತ್ತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ
ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ಮತ್ತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊನೆ ಸ್ಥಾನ
Follow us on

ಕೊಪ್ಪಳ, ಮೇ.09: ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ(SSLC Result) ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳೇ ಕೊನೆಯ ಸ್ಥಾನದಲ್ಲಿವೆ. ಉಡುಪಿ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದರೆ, ಕಲ್ಯಾಣ ಕರ್ನಾಟಕ(Kalyana Karnataka) ಭಾಗದ ಯಾದಗಿರಿ ಜಿಲ್ಲೆ ಮೂವತ್ತೈದನೇ ಸ್ಥಾನ ಪಡೆದು, ಕೊನೆಯ ಜಿಲ್ಲೆ ಎನ್ನುವ ಅಪಖ್ಯಾತಿಯನ್ನು ಮುಂದುವರಿಸಿದೆ. ಕಳೆದ ವರ್ಷ ಕೂಡ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನವನ್ನು ಪಡೆದಿತ್ತು. ಇನ್ನು ಕಳೆದ ವರ್ಷ 29 ನೇ ಸ್ಥಾನದಲ್ಲಿದ್ದ ಕಲಬುರಗಿ ಈ ಬಾರಿ 34 ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 34 ಸ್ಥಾನದಲ್ಲಿದ್ದ ಬೀದರ್ ಜಿಲ್ಲೆ 33ನೇ ಸ್ಥಾನ ಪಡೆದಿದೆ. ಇನ್ನು ಕಳೆದ ವರ್ಷ 16 ನೇ ಸ್ಥಾನ ಪಡೆದಿದ್ದ ಕೊಪ್ಪಳ ಜಿಲ್ಲೆ ದಿಢೀರನೆ ಅರ್ಧಕ್ಕರ್ದ ಕುಸಿದು 32 ಸ್ಥಾನದಲ್ಲಿದೆ. ಕಳೆದ ವರ್ಷ 30 ನೇ ಸ್ಥಾನದಲ್ಲಿದ್ದ ರಾಯಚೂರು ಈ ಬಾರಿ 31 ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳು ಇಪ್ಪತ್ತೇಳು ಮತ್ತು ಇಪ್ಪತ್ತೆಂಟನೇ ಸ್ಥಾನದಲ್ಲಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ, ಕಲ್ಯಾಣ ಕರ್ನಾಟಕ ಬಾಗದ ಜಿಲ್ಲೆಗಳ ಫಲಿತಾಂಶ ಕಡಿಮೆಯಾಗಿರುವುದು ಈ ಭಾಗದ ಜನರ ಆತಂಕ ಹೆಚ್ಚಾಗುವಂತೆ ಮಾಡಿದೆ.

ಶೈಕ್ಷಣಿಕ ಸುಧಾರಣೆಗಾಗಿ ಕೆಕೆಆರ್​ಡಿಬಿ ಯಿಂದ ಕೋಟಿ ಕೋಟಿ ಹಣ ಖರ್ಚು

ಇನ್ನು ರಾಜ್ಯದಲ್ಲಿ ಈ ಬಾರಿ ಒಂದೇ ಒಂದು ಕಡೆ ಶಿಕ್ಷಕರ ಕೊರತೆ ಇಲ್ಲದ ಜಿಲ್ಲೆಗಳು ಎನ್ನುವ ಖ್ಯಾತಿಯನ್ನ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಹೊಂದಿದ್ದವು. ಯಾಕಂದರೆ ರಾಜ್ಯದ ಎಲ್ಲೆಡೆ ಇರುವ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿರೋದರಿಂದ ಸರ್ಕಾರ ಅತಿಥಿ ಶಿಕ್ಷಕರ ನೇಮಕಾತಿ ಮಾಡಿತ್ತು. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೂಡ 16,041 ಅತಿಥಿ ಶಿಕ್ಷಕರನ್ನು ನೇಮಕ ಮಾಡಿತ್ತು. ಆದರೂ ಕೂಡ ಕಲ್ಯಾಣ ಕರ್ನಾಟಕ ಭಾಗದಲ್ಲಿ 2618 ಶಿಕ್ಷಕರ ಕೊರತೆ ಇತ್ತು. ಹೀಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ಅಕ್ಷರ ಆವಿಷ್ಕಾರ ಯೋಜನೆಯಡಿ, 2618 ಅಕ್ಷರ ಮಿತ್ರರು ಎನ್ನುವ ಅತಿಥಿ ಶಿಕ್ಷಕರನ್ನು ಕೆಕೆಆರ್​ಡಿಬಿ ಯಿಂದ ನೇಮಕ ಮಾಡಲಾಗಿತ್ತು. ಅವರಿಗೆ ಗೌರವಧನವನ್ನು ನೀಡಲು ಮಂಡಳಿ ಬರೋಬ್ಬರಿ 18.34 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿದೆ.

ಇದನ್ನೂ ಓದಿ:Karnataka SSLC Result 2023: ಇಂದು ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ, ಒಂದೇ ಕ್ಲಿಕ್​ನಲ್ಲಿ ರಿಸಲ್ಟ್ ನೋಡಿ

ರಾಜ್ಯದ ಮೈಸೂರ ವಿಭಾಗ, ಧಾರವಾಡ ವಿಭಾಗದಲ್ಲಿ ಶಿಕ್ಷಕರ ಕೊರೆತೆಯಿದ್ದರೂ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಎಲ್ಲಿಯೂ ಶಿಕ್ಷಕರ ಕೊರೆತೆ ಆಗಿರಲಿಲ್ಲ. ಇಷ್ಟು ದಿನ ಶಿಕ್ಷಕರ ಕೊರೆತೆಯಿಂದಾಗಿ ಫಲಿತಾಂಶ ಕಡಿಮೆಯಾಗುತ್ತಿತ್ತು ಎಂದು ಹೇಳಲಾಗುತ್ತಿತ್ತು. ಆದ್ರೆ, ಈ ಬಾರಿ ಶಿಕ್ಷಕರ ಕೊರತೆ ಇಲ್ಲದಿದ್ದರೂ ಕೂಡ ಫಲಿತಾಂಶ ಮಾತ್ರ ಕಡಿಮೆಯಾಗಿರುವುದು ಅನೇಕ ಚರ್ಚೆಗೆ ಕಾರಣವಾಗಿದೆ. ಇನ್ನು ಅಕ್ಷರ ಆವಿಷ್ಕಾರ ಯೋಜನೆಯಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗಾಗಿಯೇ ಅನೇಕ ಶಿಕ್ಷಣ ತಜ್ಞರಿಂದ ಶಿಕ್ಷಕರಿಗೆ ತರಬೇತಿ ಕೊಡಿಸಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಕೂಡ ಶಿಕ್ಷಕರಿಗೆ ಫಲಿತಾಂಶ ಸುಧಾರಣೆ ಮಾಡೋದು ಹೇಗೆ?, ಯಾವ ರೀತಿ ಮಕ್ಕಳಿಗೆ ಬೋಧನೆ ಮಾಡಬೇಕು. ಕಲಿಕಾ ಸಾಮಾಗ್ರಿಗಳನ್ನು ನೀಡಬೇಕು ಅನ್ನೋದರ ಬಗ್ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತರಬೇತಿ ಕೊಡಿಸಲಾಗಿತ್ತು. ಆದ್ರೆ, ತರಬೇತಿ,ಅತಿಥಿ ಶಿಕ್ಷಕರ ನೇಮಕಾತಿ ಸೇರಿದಂತೆ ಯಾವುದೇ ಪ್ರಯತ್ನಗಳು ಕೂಡ ಈ ಬಾರಿ ಫಲ ನೀಡಿಲ್ಲ. ಹೀಗಾಗಿ ನಿರೀಕ್ಷೆಯಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳು ಕೊನೆಯ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಶಿಕ್ಷಣ ತಜ್ಞರು ಹೇಳಿದ್ದೀಷ್ಟು

ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ಪಡೆದುಕೊಂಡಿವೆ. ಶಿಕ್ಷಕರ ಕೊರತೆ, ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಶಿಕ್ಷಣದ ಬಗ್ಗೆ ಮಕ್ಕಳು ಮತ್ತು ಪಾಲಕರಲ್ಲಿ ಅರಿವಿನ ಕೊರೆತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಾಗಿದೆ. ಇದನ್ನು ನಿವಾರಿಸಲು ಕೋಟಿ ಕೋಟಿ ಹಣವನ್ನು ಶಿಕ್ಷಣ ಇಲಾಖೆ ಅಲ್ಲದೆ ಕೆಕೆಆರ್​ಡಿಬಿ ಯಿಂದ ಖರ್ಚು ಮಾಡಲಾಗುತ್ತಿದೆ. ಆದ್ರೆ, ಫಲಿತಾಂಶದಲ್ಲಿ ಮಾತ್ರ ಯಾವುದೇ ಸುಧಾರಣೆಯಾಗುತ್ತಿಲ್ಲ. ಹೀಗಾಗಿ ಪರಿಣಾಮಕಾರಿ ಭೋಧನೆಯ ತಂತ್ರಗಳನ್ನು ಹೆಚ್ಚಿಸುವುದರ ಜೊತೆಗೆ ಮಕ್ಕಳಿಗೆ ಓದಲು ಇನ್ನಷ್ಟು ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ