ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ; ರಾಜಕೀಯ ನಾಯಕರು, ಸ್ವಾಮೀಜಿಗಳು, ಶತಾಯುಷಿಗಳಿಂದ ವೋಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: May 07, 2024 | 8:42 PM

ಅನೇಕ ದಿನಗಳಿಂದ ಮತಕ್ಕಾಗಿ ನಾಯಕರ ನಡುವೆ ನಡೆದಿದ್ದ ಮಾತಿನ ಯುದ್ದ ಮುಗಿದಿದೆ. ಇಂದು ಮತದಾರರು ಮತ ಚಲಾಯಿಸುವ ಮೂಲಕ ಅಭ್ಯರ್ಥಿಗಳ ಹಣೆ ಬರಹ ಬರೆದಿದ್ದಾರೆ. ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಮತದಾನ ನಡೆದಿದೆ. ಆದ್ರೆ, ಹಲವಡೆ ಸ್ಥಳೀಯ ಸಮಸ್ಯೆಗಳಿಗಾಗಿ ಜನರು ಮತದಾನ ಬಹಿಷ್ಕಾರ ಮಾಡಿದ್ರೆ, ಇನ್ನು ಹಲವಡೇ ವೃದ್ದರು, ವಿಶೇಷ ಚೇತನರು ಮತಗಟ್ಟೆಗೆ ಆಗಮಿಸಿ ಮತಹಾಕಿ, ಎಲ್ಲರಿಗೂ ಆದರ್ಶವಾದರು.

ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ; ರಾಜಕೀಯ ನಾಯಕರು, ಸ್ವಾಮೀಜಿಗಳು, ಶತಾಯುಷಿಗಳಿಂದ ವೋಟ್
ಕೊಪ್ಪಳ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ನಡೆದ ಮತದಾನ
Follow us on

ಕೊಪ್ಪಳ, ಮೇ.07: ಲೋಕಸಭಾ ಚುನಾವಣೆಗೆ ಇಂದು(ಮೇ.07)ನಡೆದ ಮತದಾನ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆಯಿತು. ಅನೇಕ ದಿನಗಳಿಂದ ಅಬ್ಬರದ ಪ್ರಚಾರ ನಡೆಸಿದ್ದ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಬರೆದಿದ್ದಾರೆ. ಆದ್ರೆ ಅನೇಕ ಕಡೆ ಮತಗಟ್ಟೆಗೆ ಪೂಜೆ, ಮತದಾನ ಬಹಿಷ್ಕಾರ, ಹಿರಿಯರು, ಶತಾಯುಷಿಗಳು, ವಿಶೇಷ ಚೇತನರು ಮತದಾನ ಮಾಡಿದ್ದು, ಸೇರಿದಂತೆ ಅನೇಕ ಸ್ವಾರಸ್ಯಕರ ಘಟನೆಗಳು ಕೂಡ ನಡೆದಿವೆ. ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಇಂದು ಮತಗಟ್ಟೆಗೆ ಕಾಂಗ್ರೆಸ್ ಪಕ್ಷದ ಏಜೆಂಟ್ ಪೂಜೆ ಸಲ್ಲಿಸಿದ್ರು. ಇದರ ಬೆನ್ನಲ್ಲೇ ಮತಪೆಟ್ಟಿಗೆಗೆ ಪೂಜೆ ಸಲ್ಲಿಸಲು ಕಾಂಗ್ರೆಸ್ ಏಜೆಂಟ್ ಮುಂದಾಗಿದ್ದರು. ಆದ್ರೆ, ಸಿಬ್ಬಂಧಿ ಅವಕಾಶ ನೀಡದ ಹಿನ್ನೆಲೆಯಲ್ಲಿ, ಮತಗಟ್ಟೆಯ ಬಾಗಿಲಿಗೆ ಪೂಜೆ ಸಲ್ಲಿಸಿದರು.

ರಾಜಕೀಯ ನಾಯಕರು, ಸ್ವಾಮೀಜಿಗಳು, ಶತಾಯುಷಿಗಳಿಂದ ಮತದಾನ

ಇನ್ನು ಹಿಟ್ನಾಳ್ ಗ್ರಾಮದಲ್ಲಿ ಯುವ ಮತಗಟ್ಟೆಯನ್ನು ಮಾಡಲಾಗಿದ್ದು, ಇಡೀ ಮತಗಟ್ಟೆಯನ್ನು ಬಲೂನ್ ಗಳಿಂದ, ಅನೇಕ ಚಿತ್ರಗಳಿಂದ ಶೃಂಗಾರ ಮಾಡಲಾಗಿತ್ತು. ಆ ಮೂಲಕ ಯುವ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಬಂದು ಮತ ಹಾಕುವಂತೆ ಪ್ರೇರಿಪಿಸುವ ಉದ್ದೇಶಕ್ಕಾಗಿ ಇಡೀ ಮತಗಟ್ಟೆಯನ್ನು ಅಲಂಕಾರ ಮಾಡಲಾಗಿತ್ತು. ಇನ್ನು ಜಿಲ್ಲೆಯ ಹಲವು ನಾಯಕರು ಮತ ಚಲಾಯಿಸಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಇಂದು ಕುಟುಂಬ ಸಮೇತ ಆಗಮಿಸಿ, ಕಾರಟಗಿ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದ್ರೆ, ಇನ್ನೊಂದಡೆ ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ, ಗಂಗಾವತಿ ಪಟ್ಟಣದ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಚೇರಿಯಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿ ಸಹೋದರ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜಶೇಖರ ಹಿಟ್ನಾಳ್ ಜೊತೆ ಆಗಮಿಸಿ ಮತದಾನ ಮಾಡಿದ್ರು. ಬಿಜೆಪಿ ಅಭ್ಯರ್ಥಿ ಡಾ. ಕೆ ಬಸವರಾಜ್ ಅವರು ಕುಷ್ಟಗಿ ಪಟ್ಟಣದ ವಿದ್ಯಾನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ರು. ಕೊಪ್ಪಳದ ಸುಪ್ರಸಿದ್ದ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕೂಡ ಕೊಪ್ಪಳ ನಗರದ ಕುವೆಂಪು ನಗರದಲ್ಲಿರುವ ಕುವೆಂಪು ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದ್ರು. ಇನ್ನು ಜಿಲ್ಲೆಯ ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ 105 ವರ್ಷದ ಶತಾಯುಷಿ ನೀಲಂಕಠಯ್ಯ ಹಿರೇಮಠ್ ಅನ್ನೋರು, ಸಂಬಂಧಿಯೊಬ್ಬರ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ಮತಹಾಕಿದ್ದು ವಿಶೇಷವಾಗಿತ್ತು. ಇನ್ನು ಗಂಗಾವತಿಯಲ್ಲಿ ತೊಂಬತ್ತಾರು ವರ್ಷದ ವೃದ್ದೆ ಲಕ್ಷ್ಮಿ ಅನ್ನೋರು ಮತಗಟ್ಟೆಗೆ ಆಗಮಿಸಿ ಮತಹಾಕಿದ್ರೆ, ರಂಜಾನ್ ಎನ್ನುವ ವಿಶೇಷ ಚೇತನ ವ್ಯಕ್ತಿ ಕೂಡ ಸೈಕಲ್ ತಳ್ಳಿಕೊಂಡು ಬಂದು ಮತ ಹಾಕಿ, ಎಲ್ಲರಿಗೂ ಮಾದರಿಯಾದರು.

ಇದನ್ನೂ ಓದಿ:ಒಂದೇ ಕುಟುಂಬ 69 ಸದಸ್ಯರಿಂದ ಮತದಾನ; ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮ

ಹಲವಡೆ ಮತದಾನ ಬಹಿಷ್ಕಾರ

ಇನ್ನು ಜಿಲ್ಲೆಯ ಹಲವಡೆ ಶಾಂತಿಯುತ ಮತದಾನ ನಡೆದ್ರೆ, ಹಲವಡೆ ಮತದಾನ ಬಹಿಷ್ಕಾರ ಮಾಡಿರುವ ಘಟನೆಗಳು ಕೂಡ ನಡೆದಿವೆ. ಹೌದು ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರೇಗಾ ಗ್ರಾಮದ ವಾರ್ಡ್ ನಂಬರ್ 18 ರ ವಿಠಲಾಪುರ ಬಡಾವಣೆ ನಿವಾಸಿಗಳು ಮತದಾನ ಬಹಿಷ್ಕಾರ ಮಾಡಿದ್ದಾರೆ. ವಾರದ ಹಿಂದೆ ಗರ್ಭಿಣಿ ಮಹಿಳೆಯೋರ್ವಳು ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಇನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕರಾಂಪುರದ ನಿವಾಸಿಗಳು ತಮಗೆ ತಮ್ಮ ಮನೆಯ ಹಕ್ಕುಪತ್ರ ನೀಡದೇ ಇರೋದಕ್ಕೆ ಮತದಾನ ಬಹಿಷ್ಕಾರ ಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಗುದ್ನೆಪ್ಪನಮಠದ ನಿವಾಸಿಗಳು ಕೂಡ ಮತದಾನ ಬಹಿಷ್ಕಾರ ಮಾಡಿದ್ದಾರೆ. ಮಠಕ್ಕೆ ಸೇರಿದ ಆಸ್ತಿಯಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣ ವಿರೋಧಿಸಿ ಮತದಾನ ಬಹಿಷ್ಕಾರ ಮಾಡಿದ್ದಾರೆ. ಮೂರು ಕಡೆ ಅಧಿಕಾರಿಗಳು ಭೇಟಿ ನೀಡಿ, ಮತದಾರರ ಮನವೊಲಿಸುವ ಕೆಲಸ ಮಾಡಿದ್ರು ಕೂಡ ತಮ್ಮ ಬೇಡಿಕೆ ಈಡೇರಿಕೆ ಮಾಡೋವರಗೆ ಮತದಾನ ಮಾಡಲ್ಲ ಎಂದು ಪಟ್ಟು ಹಿಡದಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಇಂದು ಶಾಂತಿಯುತವಾಗಿ ಮತದಾನ ನಡೆದಿದೆ. ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಬರೆದಿದ್ದಾರೆ. ಆದ್ರೆ, ಯಾರಿಗೆ ಜಯ, ಯಾರಿಗೆ ಸೋಲು ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ