ಮತ್ತೆ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು
ಬಲ್ಡೋಟಾ ಕಾರ್ಖಾನೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಕಾರ್ಖಾನೆ ಬೇಕೇಬೇಕೆಂದು ಕೊಪ್ಪಳ ಜಿಲ್ಲಾಡಳಿತ ಕಚೇರಿ ಮುಂದೆ ರೈತರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಬಲ್ಡೋಟಾ ಕಾರ್ಖಾನೆ ಕುರಿತಾಗಿ ಕೊಪ್ಪಳದಲ್ಲಿ ಪರ-ವಿರೋಧ ಹೋರಾಟ ಶುರುವಾಗಿದೆ. ಸದ್ಯ ಈ ಹೋರಾಟ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕೊಪ್ಪಳ, ಡಿಸೆಂಬರ್ 05: ಕಳೆದ ವರ್ಷ ಬಲ್ಡೋಟಾ ಕಾರ್ಖಾನೆಯನ್ನ (baldota steel factory) ವಿರೋಧಿಸಿ ಗವಿ ಮಠದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಹೋರಾಟಕ್ಕೆ ಇಳಿದಿದ್ದರು. ಅಷ್ಟೇ ಅಲ್ಲದೆ ಕಣ್ಣೀರು ಕೂಡ ಹಾಕಿದ್ದರು. ಆ ಸಮಯದಲ್ಲಿ ಸಿಎಂ ಸೂಚನೆ ಮೇರೆಗೆ ಕಾರ್ಖಾನೆಯ ಕೆಲಸ ಕೆಲಕಾಲ ಸ್ಥಗಿತವಾಗಿತ್ತು. ದಿನ ಕಳೆದಂತೆ ಎಂದಿನಂತೆ ಕಾರ್ಖಾನೆಯ ಕೆಲಸ ಆರಂಭವಾಗಿತ್ತು. ಕುಡಿಯುವ ನೀರಿನ ವಿಚಾರವಾಗಿ ಕಾರ್ಖಾನೆ ಹಾಗೂ ಕುರಿಗಾಹಿಗಳ ನಡುವೆ ದೊಡ್ಡ ಗಲಾಟೆಯಾಗಿತ್ತು. ಕಾರ್ಖಾನೆ ವಿಸ್ತರಣೆ ವಿರೋಧಿಸಿ ಕಳೆದ 36 ದಿನಗಳಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ಮಾಡುತ್ತಿದೆ. ಇದೆಲ್ಲದರ ನಡುವೆ ಇಂದು ಕಾರ್ಖಾನೆ ಬೇಕೆಂದು ಹೋರಾಟ (Protest) ಆರಂಭವಾಗಿದೆ. ಕಾರ್ಖಾನೆ ಪರವಾಗಿ ರೈತರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟಿಡ್, ಕೊಪ್ಪಳ ತಾಲೂಕಿನ ಬಸಾಪೂರ ಬಳಿ ವಿಸ್ತರಣೆಯಾಗಿರುವ ಕಾರ್ಖಾನೆ. ಸುಮಾರು 54 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆಯಾಗಿದೆ. ಈ ಕಾರ್ಖಾನೆ ಆರಂಭದ ದಿನದಿಂದ ವಿವಾದ ಶುರುವಾಗಿದೆ. ಕೊಪ್ಪಳ ಜಿಲ್ಲೆಯ ಜನ ಕಾರ್ಖಾನೆ ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡಿದ್ರು. ಕೊಪ್ಪಳ ಬಂದ್ ಮಾಡಿ ಹೋರಾಟ ಮಾಡಿದ್ರು. ಹೋರಾಟದಲ್ಲಿ ಕೊಪ್ಪಳದ ಅಭಿನವ ಗವಿ ಸಿದ್ದೇಶ್ವರ ಶ್ರೀಗಳು ಕೂಡಾ ಭಾಗಿಯಾಗಿದ್ರು. ಇದೀಗ ಈ ಕಾರ್ಖಾನೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.
ಕಾರ್ಖಾನೆ ಪರವಾಗಿ ರೈತರಿಂದ ಧರಣಿ
ಬಲ್ಡೋಟಾ ಕಾರ್ಖಾನೆಗೆ ಭೂಮಿ ಕಳೆದುಕೊಂಡವರು ಕಾರ್ಖಾನೆ ಬೇಕು ಅಂತಾ ಹೋರಾಟಕ್ಕೆ ಇಳಿದಿದ್ದಾರೆ. ಇಂದಿನಿಂದ ಕೊಪ್ಪಳ ಡಿಸಿ ಆಫೀಸ್ ಮುಂದೆ ಬಲ್ಡೋಟಾ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡವರಿಂದ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ನೀಡಲಾಗಿದೆ. 18 ವರ್ಷಗಳಿಂದ ಸುಮಾರು 300ಕ್ಕೂ ಅಧಿಕ ರೈತರು ಕೆಐಡಿಬಿಗೆ ಜಮೀನು ನೀಡಿದ್ದಾರೆ. ಇದೀಗ ಆ ರೈತರು ನಮಗೆ ಕಾರ್ಖಾನೆ ಸ್ಥಾಪಿಸಿ ಕೆಲಸ ಕೊಡಿ, ಇಲ್ಲವೇ ಸರ್ಕಾರಿ ನೌಕರಿ ಕೊಡಿ ಎಂದು ಹೋರಾಟಕ್ಕೆ ಧುಮುಕಿದ್ದಾರೆ. ಭೂಮಿ ಕಳೆದುಕೊಂಡ ಕೊಪ್ಪಳ ತಾಲೂಕಿನ ಹಾಲುವರ್ತಿ, ಬಸಾಪೂರ ಭಾಗದ ರೈತರು ಕಾರ್ಖಾನೆ ಬೇಕೇಬೇಕು ಎನ್ನುತ್ತಿದ್ದಾರೆ.
ಇದನ್ನೂ ಓದಿ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿರೋಧಕ್ಕೆ ಸೆಡ್ಡು: ಬಲ್ಡೋಟಾ ಕಂಪನಿಗಾಗಿ ಪ್ರತಿಭಟನೆ
ಇನ್ನು ಈಗಾಗಲೇ ಬಲ್ಡೋಟಾ ಕಾರ್ಖಾನೆ ವಿಚಾರವಾಗಿ ಕೊಪ್ಪಳದಲ್ಲಿ ಪರ ವಿರೋಧ ಹೋರಾಟಗಳು ನಡೆಯುತ್ತಿವೆ. ಬಲ್ಡೋಟಾ, ಕಿರ್ಲೋಸ್ಕರ್, ಮುಕುಂದ ಸುಮಿ ಸೇರಿ ಯಾವ ಕಾರ್ಖಾನೆ ವಿಸ್ತರಣೆಯಾಗಬಾರದೆಂದು ಕೊಪ್ಪಳದಲ್ಲಿ ಕಳೆದ 36 ದಿನಗಳಿಂದ ಹೋರಾಟ ನಡೆಯುತ್ತಿದೆ. ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಕೊಪ್ಪಳ ನಗರಸಭೆ ಮುಂಭಾಗ ಹೋರಾಟ ನಡೆಯುತ್ತಿದೆ. ಈ ಹೋರಾಟದಲ್ಲಿ ನಾಡಿನ ಸ್ವಾಮೀಜಿಗಳು, ಸಿನಿಮಾ ನಟರು ಭಾಗಿಯಾಗಿದ್ದರು. ಇಂದು ಇದೇ ಹೋರಾಟಕ್ಕೆ ರಾಜ್ಯ ರೈತ ಸಂಘ ಬೆಂಬಲ ನೀಡಿದೆ.
ಇಂದು ಬಲ್ಡೋಟಾ ಕಾರ್ಖಾನೆ ವಿರೋಧಿಸಿ ರಾಜ್ಯ ರೈತ ಸಂಘ ಕೊಪ್ಪಳದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಕೊಪ್ಪಳ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ಮಾಡಿ ಬಲ್ಡೋಟಾ ವಿಸ್ತರಣೆಯನ್ನ ವಿರೊಧಿಸಿದರು. ಪ್ರತಿಭಟನೆಯಲ್ಲಿ ಮಹಿಳಾ ರೈತ ಮುಖಂಡರು ಭಾಗಿಯಾಗಿದ್ದರು. ಬಲ್ಡೋಟಾ ಕಂಪನಿ ತೊಲಗಬೇಕೆಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಸ್ ನಿಲ್ದಾಣದ ಮುಂಭಾಗದಿಂದ ಅಶೋಕ ವೃತ್ತದವರೆಗೂ ರ್ಯಾಲಿ ಮಾಡಿ ಸರ್ಕಾರದ ವಿರುದ್ದ ರೈತ ಸಂಘದ ಮುಖಂಡರು ಆಕ್ರೋಶ ಹೊರಹಾಕಿದರು. ಇದೆಲ್ಲದರ ನಡುವೆ ಇದೀಗ ಕೊಪ್ಪಳದಲ್ಲಿ ಕಾರ್ಖಾನೆ ಬೇಕೇಬೇಕು ಎಂದು ಮತ್ತೊಂದು ಹೊಸ ವರಸೆ ಆರಂಭವಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಬಲ್ಡೋಟಾ ಸ್ಟೀಲ್ ಕಾರ್ಖಾನೆ ಸ್ಥಾಪನೆ ವಿರೋಧಿ ಹೋರಾಟಕ್ಕೆ ಗವಿಮಠದ ಸ್ವಾಮೀಜಿ ಬೆಂಬಲ
ಒಟ್ಟಾರೆ ಕೊಪ್ಪಳದಲ್ಲಿ ಬಲ್ಡೋಟಾ ಪರ ಹೋರಾಟ ಆರಂಭವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹೋರಾಟ ನಡೆಸುತ್ತಿದ್ದರೆ, ಇತ್ತ ಕಾರ್ಖಾನೆ ಪರವಾಗಿ ರೈತರು ಹೋರಾಟಕ್ಕೆ ಇಳಿದಿದ್ದಾರೆ. ಇದು ಸದ್ಯ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಪರ-ವಿರುದ್ಧ ಹೋರಾಟ ಯಾವ ರೀತಿ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



