ನೆರವಿಗೆ ಕೋರಿಕೆ: ಅಪಘಾತಕ್ಕೆ ತುತ್ತಾದ 5ನೇ ತರಗತಿ ವಿದ್ಯಾರ್ಥಿಯ ಚಿಕಿತ್ಸೆಗೆ ಕೊಪ್ಪಳದ ಶಿಕ್ಷಕ ವೃಂದ ನೆರವಾಗಿದೆ, ನೀವೂ ಸಹಾಯ ಮಾಡಿ

| Updated By: ಆಯೇಷಾ ಬಾನು

Updated on: Sep 07, 2021 | 8:38 AM

ಅಪಘಾತಕ್ಕೀಡಾದ ಬಾಲಕ ಮುತ್ತುರಾಜ್​ನ ಮೆದುಳು, ಯಕೃತ್ ಹಾಗೂ ಕೈ ಕಾಲುಗಳು, ಪಕ್ಕೆಲುಬುಗಳಿಗೆ ತೀವ್ರತರದ ಪೆಟ್ಟಾಗಿದೆ. ಕೈ ಕಾಲು ಹಾಗೂ ಪಕ್ಕೆಲುಬುಗಳ ಆಪರೇಷನ್ ಆಗಬೇಕಿದೆ.

ನೆರವಿಗೆ ಕೋರಿಕೆ: ಅಪಘಾತಕ್ಕೆ ತುತ್ತಾದ 5ನೇ ತರಗತಿ ವಿದ್ಯಾರ್ಥಿಯ ಚಿಕಿತ್ಸೆಗೆ ಕೊಪ್ಪಳದ ಶಿಕ್ಷಕ ವೃಂದ ನೆರವಾಗಿದೆ, ನೀವೂ ಸಹಾಯ ಮಾಡಿ
ಅಪಘಾತಕ್ಕೂ ಮುನ್ನ ಮುತ್ತುರಾಜ್ ಮತ್ತು ಆಸ್ಪತ್ರೆಯಲ್ಲಿ ಮುತ್ತುರಾಜ್
Follow us on

ಕೊಪ್ಪಳ: ಎರಡು ದಿನಗಳ ಹಿಂದಷ್ಟೇ (ಸೆಪ್ಟೆಂಬರ್ 5) ಶಿಕ್ಷಕರ ದಿನಾಚರಣೆಯನ್ನು ಆಚರಿಸಿದ್ದೇವೆ. ನಮಗೆ ಪಾಠ ಹೇಳಿದ, ತಿದ್ದಿದ, ಸರಿ ದಾರಿಗೆ ತಂದ, ಕೈಹಿಡಿದು ಮೇಲೆತ್ತಿದ ಎಲ್ಲ ಶಿಕ್ಷಕರಿಗೆ ನಮಿಸಿದ್ದೇವೆ. ಈ ಹೊತ್ತಲ್ಲೇ ಇಲ್ಲೊಂದೆಡೆ ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವೊಂದೇ ಅಲ್ಲದೇ ಅಪಘಾತಕ್ಕೆ ತುತ್ತಾಗಿದ್ದ ತಮ್ಮ ವಿದ್ಯಾರ್ಥಿಯ ಚಿಕಿತ್ಸೆಗೆ ಹಣ ಒಟ್ಟುಗೂಡಿಸಿಕೊಟ್ಟಿದ್ದಾರೆ. ಆರ್ಥಿಕ ಸಂಕಷ್ಟ ವಿದ್ಯಾರ್ಥಿಯ ಜೀವ ಕಸಿಯಬಾರದು ಎಂದು ಕಾಳಜಿ ಮೆರೆದಿದ್ದಾರೆ. ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ 5 ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ಮುತ್ತುರಾಜ್ ಯಲ್ಲಪ್ಪ ಹಂಚಿನಾಳ. ತನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಕೊಪ್ಪಳಕ್ಕೆ ಹಿಂತಿರುಗುವಾಗ ಕಡೂರು ಬಳಿ ಬಾಲಕ ರಸ್ತೆ ದಾಟುವಾಗ ವೇಗದಲ್ಲಿದ್ದ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು, ಬಾಲಕನ ದೇಹಸ್ಥಿತಿ ತೀವ್ರ ಅಸ್ವಸ್ಥವಾಗಿತ್ತು. ಚಿಕಿತ್ಸೆ ನೀಡಲು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆದುಳು, ಯಕೃತ್ ಹಾಗೂ ಕೈ ಕಾಲುಗಳು, ಪಕ್ಕೆಲುಬುಗಳಿಗೆ ತೀವ್ರತರದ ಪೆಟ್ಟಾಗಿದೆ. ಆಸ್ಪತ್ರೆಯಲ್ಲಿ ಮೆದುಳು ಹಾಗೂ ಯಕೃತ್ತಿನ ಆಪರೇಷನ್ ಆಗಿದ್ದು ಮುತ್ತುರಾಜ್ ಕೋಮಾದಿಂದ ಎಚ್ಚರವಾಗಿದ್ದಾನೆ. ಆದರೆ ಇನ್ನೂ ಕೈ ಕಾಲು ಹಾಗೂ ಪಕ್ಕೆಲುಬುಗಳ ಆಪರೇಷನ್ ಆಗಬೇಕಿದೆ. ವಿದ್ಯಾರ್ಥಿ ಮುತ್ತುರಾಜ್​ನ ವಿಷಯ ತಿಳಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಬಳಗ ಸುಮಾರು 25 ಸಾವಿರ ರೂಪಾಯಿಗಳ ಸಹಾಯ ಮಾಡಿದ್ದಲ್ಲದೇ, ತಮ್ಮ ಶಿಕ್ಷಕರ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ನೆರವು ನೀಡುವಂತೆ ಸಂದೇಶ ಹಂಚಿಕೊಂಡಿದೆ. ಇದರ ಫಲವಾಗಿ ಒಂದೇ ದಿನದಲ್ಲಿ ₹ 50,000 ನೆರವು ಹರಿದುಬಂದಿದ್ದು, ಶಿಕ್ಷಕರ ದಿನಾಚರಣೆಗೆ ವಿಶೇಷ ಅರ್ಥ ದೊರೆತಿದೆ.

ಗ್ರಾಮ ಪಂಚಾಯತ್​ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ
ಗಾಯಾಳು ಬಾಲಕ ಮುತ್ತುರಾಜ್ ಅವರ ತಂದೆ ಯಲ್ಲಪ್ಪ ಬಿಸರಳ್ಳಿ ಗ್ರಾಮ ಪಂಚಾಯತ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಪತ್ನಿ ಶಕುಂತಲಾ ಕೂಲಿ ಕೆಲಸ ಮಾಡುತ್ತಾರೆ. ಯಲ್ಲಪ್ಪ ಅವರಿಗೆ‌ ಮೂರು ಮಕ್ಕಳಿದ್ದಾರೆ. ಸದ್ಯ ಮುತ್ತುರಾಜ್​ನ ಚಿಕಿತ್ಸೆಗೆ ವೈದ್ಯರು 4 ರಿಂದ 5 ಲಕ್ಷ ಅಗತ್ಯವಿದೆ ಎಂದಿದ್ದಾರೆ. ಆದರೆ ಯಲ್ಲಪ್ಪ ಅವರಿಗೆ ಅಷ್ಟೊಂದು ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರ ದಿನಾಚರಣೆ ದಿನ ಸಾಮಾಜಿಕ ಜಾಲತಾಣಗಳ ಮೂಲಜಕ ಸರಿ ಸುಮಾರು 50 ಸಾವಿರದಷ್ಟು ಹಣವನ್ನು ಸಂಗ್ರಹಿಸಿ ಮುತ್ತುರಾಜ್​ನ  ಶಿಕ್ಷಕರು ನೀಡಿದ್ದಾರೆ.

ಕೊರೊನಾ ಮದ್ಯೆಯೂ ಶಾಲೆಗೆ ಬರ್ತಿದ್ದ ಮುತ್ತುರಾಜ್
ಶಿಕ್ಷಕರು ಮುತ್ತುರಾಜ್​ಗೆ ಸಹಾಯ ಮಾಡಲು ಕಾರಣ, ಆತನ ಓದುವ ಹಂಬಲ. ಮನೆಯಲ್ಲಿ ಬಡತನ ಇದ್ದರೂ ಓದಿ ಸಾಧನೆ ಮಾಡಬೇಕು ಅಂದುಕೊಂಡ ಮುತ್ತುರಾಜ್ ಕೊರೊನಾ ಮಧ್ಯೆಯೂ ನಿತ್ಯವೂ ಶಿಕ್ಷಕರ ಬಳಿ ಬರುತ್ತಿದ್ದ. ಆತನಲ್ಲಿರುವ ಓದುವ ಹಂಬಲ ಕುರಿತು ಶಾಲೆಯ ಶಿಕ್ಷಕರು ಆತನ ಸಹಾಯಕ್ಕೆ ನಿಂತಿದ್ದಾರೆ. ಶಿಕ್ಷಕರು ಹೇಳಿದ ಕೆಲಸವನ್ನು ಚಾಚೂತಪ್ಪದೇ ಮಾಡುತ್ತಿದ್ದ ಮುತ್ತುರಾಜ್ ಸ್ಥಿತಿ ಕಂಡು ಆತನ ಶಾಲೆಯ ಶಿಕ್ಷಕರು ಮಮ್ಮಲು ಮರುಗುತ್ತಿದ್ದಾರೆ. ಹೇಗಾದರೂ ಗುಣಮುಖವಾಗಲಿ ಅಂದುಕೊಂಡು ಹಣ ಹೊಂದಿಸುವ ಕೆಲಸ ಮಾಡುತ್ತಿದ್ದಾರೆ.

ಮುತ್ತುರಾಜ್ ನಮ್ಮ ಶಾಲೆಯಲ್ಲಿ ಓದುತ್ತಿದ್ದು, ಅವರ ತಂದೆ ತಾಯಿ ತುಂಬಾ ಬಡವರು. ಮುತ್ತುರಾಜ್ ತುಂಬಾ ಪ್ರತಿಭಾವಂತ ವಿದ್ಯಾರ್ಥಿ. ಹೀಗಾಗಿ ನಾವು ಅವನ‌ ಸಹಾಯಕ್ಕೆ ನಿಂತಿದ್ದೇವೆ. ಮೊದಲು ನಮ್ಮ ಕೈಯಿಂದ ಸಾಧ್ಯವಾದಷ್ಟು ಹಣ ನೀಡಿದ್ದೆವು. ಶಿಕ್ಷಕರ ದಿನಾಚರಣೆಯಂದು ಪರಿಚಿತ ಶಿಕ್ಷಕರು ಇರುವ ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ವಿಷಯ ಹಂಚಿಕೊಂಡಿದ್ದೆವು. ಹಲವು ಶಿಕ್ಷಕರು ಮುತ್ತುರಾಜ್ ಸಹಾಯಕ್ಕೆ ಮುಂದಾಗಿದ್ದಾರೆ’ ಎಂದು ಶಿಕ್ಷಕರಾದ ರಮೇಶ್ ಬುಡ್ಡನಗೌಡ ಅವರು ತಿಳಿಸಿದ್ದಾರೆ.

ಟಿವಿ9 ಕನ್ನಡ ಡಿಜಿಟಲ್​ಗೆ ಪ್ರತಿಕ್ರಿಯಿಸಿದ ಬಾಲಕ ಮುತ್ತುರಾಜ್ ಯಲ್ಲಪ್ಪ ಹಂಚಿನಾಳ, ‘ನಾನು ಗ್ರಾಪಂನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ. ಮಗ ಇದೀಗ ಆಸ್ಪತ್ರೆಯಲ್ಲಿ ಮಲಗಿದ್ದಾನೆ. ಚಿಕಿತ್ಸೆಗೆ ವೈದ್ಯರು ನಾಲ್ಕೈದು ಲಕ್ಷ ಕೇಳಿದ್ದಾರೆ. ಆದರೆ ನಮ್ಮ ಬಳಿ ಅಷ್ಟೊಂದು ಹಣ ಇಲ್ಲ. ಹಲವು ಶಿಕ್ಷಕರು ಸಹಾಯ ಮಾಡಿ ಹಣ ಹಾಕಿದ್ದಾರೆ. ಅವರಿಗೆ ಹೇಗೆ ಕೃತಜ್ಞತೆ ತಿಳಿಸಬೇಕು ಎಂದು ಗೊತ್ತಾಗುತ್ತಿಲ್ಲ’ ಎಂದು ಭಾವುಕರಾದರು.

ಮುತ್ತುರಾಜ್ ಎಂಬ 5ನೇ ತರಗತಿಯ ವಿದ್ಯಾರ್ಥಿಗೆ ಸಹಾಯ ಮಾಡಬಯಸುವವರು: ಫೋನ್ ಪೇ ಮೂಲಕ 8884772966 ( Ravi N B- ಬಾಲಕ ಮುತ್ತುರಾಜ್​ನ ಮಾವ ) ನೆರವು ನೀಡಬಹುದು

ವರದಿ: ಶಿವಕುಮಾರ್ ಪತ್ತಾರ್, ಟಿವಿ9 ಕೊಪ್ಪಳ 

ಇದನ್ನೂ ಓದಿ: 

ಒಳ್ಳೆ ಸುದ್ದಿ | 70 ಸಾವಿರ ರೂ ಮೌಲ್ಯದ ಬ್ಯಾಗನ್ನು ಪ್ರಯಾಣಿಕನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ KSRTC ಚಾಲಕ, ನಿರ್ವಾಹಕ

ಕೊಪ್ಪಳ: ಜಾನಪದ ಶ್ರೀ ಪುರಸ್ಕೃತ ಶತಾಯುಷಿ ಅಜ್ಜಿಯೂ ಸೇರಿ ತೊಗಲುಗೊಂಬೆಯಾಟ ಪ್ರದರ್ಶಿಸುವ ಒಂದೇ ಕುಟುಂಬದ 6 ಸದಸ್ಯರು

(Koppal Teachers Help their 5th standard Student for Accident treatment called public for more help)

Published On - 8:38 am, Tue, 7 September 21