
ಕೊಪ್ಪಳ, ಮೇ 21: ಕಾರ್ಖಾನೆಗಳ (factory) ವಿಷಕಾರಿ ಹೊಗೆ ಹಾಗೂ ಮಾಲಿನ್ಯದಿಂದ ನಲುಗಿಹೋಗಿದ್ದ ಕೊಪ್ಪಳ (koppal) ತಾಲೂಕಿನ ಜನತೆಗೆ ಇದೀಗ ದೊಡ್ಡ ನೆಮ್ಮದಿ ಸಿಕ್ಕಿದೆ. ನಿಯಮ ಉಲ್ಲಂಘಿಸಿ ಪರಿಸರ ಮಾಲಿನ್ಯ ಉಂಟುಮಾಡುತ್ತಿದ್ದ ತಾಲೂಕಿನ ಎರಡು ಪ್ರಮುಖ ಕಾರ್ಖಾನೆಗಳನ್ನು ಜಿಲ್ಲಾಡಳಿತ ಅಧಿಕೃತವಾಗಿ ಸೀಜ್ ಮಾಡಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಖಡಕ್ ಸೂಚನೆಯ ಮೇರೆಗೆ ಕೊಪ್ಪಳ ತಾಲೂಕಿನ ಹಾಲುವರ್ತಿ ಬಳಿ ಇರುವ ಪಿಬಿಎಸ್ 1 ಹಾಗೂ ಅಲ್ಲಾನಗರ ವ್ಯಾಪ್ತಿಯಲ್ಲಿರುವ ಹೊಸಪೇಟೆ ಇಸ್ಪಾತ್ ಕಾರ್ಖಾನೆಗಳಿಗೆ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಭಾಗದಲ್ಲಿ ವಾಯು ಹಾಗೂ ಪರಿಸರ ಮಾಲಿನ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಗ್ರಾಮಗಳ ಸುತ್ತಮುತ್ತಲಿನ ಕಾರ್ಖಾನೆಗಳು ಹೊರಸೂಸುವ ದೂಳು ಮತ್ತು ಹೊಗೆಯಿಂದಾಗಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ, ಕೊಪ್ಪಳ ತಾಲೂಕಿನ ಜನತೆ ಕಳೆದ ದಶಕದಿಂದ ನಿರಂತರ ಹೋರಾಟ ನಡೆಸುತ್ತಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶ ಹಿನ್ನೆಲೆ ಕಳೆದ ತಿಂಗಳು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಕೊಪ್ಪಳಕ್ಕೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದರು. ಈ ವೇಳೆ ನಿಯಮ ಉಲ್ಲಂಘನೆ ಪತ್ತೆಯಾದ ಹಿನ್ನೆಲೆಯಲ್ಲಿ ಒಟ್ಟು ಐದು ಕಾರ್ಖಾನೆಗಳಿಗೆ ಕ್ಲೋಸರ್ ನೋಟಿಸ್ ನೀಡಲಾಗಿತ್ತು. ಅದರ ಮೊದಲ ಹಂತವಾಗಿ ಇಂದು ಎರಡು ಕಾರ್ಖಾನೆಗಳಿಗೆ ಬೀಗ ಜಡಿಯಲಾಗಿದೆ.
ಇದನ್ನೂ ಓದಿ: ಕೊನೆಗೂ ಕೊಪ್ಪಳ ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ: ಕಾರ್ಖಾನೆಗಳಿಗೆ ಬೀಗ ಫಿಕ್ಸ್
ಇನ್ನು ಜಿಲ್ಲಾಡಳಿತದ ಈ ನಿರ್ಧಾರ ರೈತ ವಲಯದಲ್ಲಿ ಸಂತಸ ಮೂಡಿಸಿದರೂ ಮತ್ತೊಂದೆಡೆ ಅಧಿಕಾರಿಗಳ ನಡೆ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೀಜ್ ಮಾಡಲಾಗಿರುವ ಹೊಸಪೇಟೆ ಇಸ್ಪಾತ್ ಕಾರ್ಖಾನೆಯಲ್ಲಿ ಕಳೆದ ಒಂದು ವರ್ಷದಿಂದಲೇ ಉತ್ಪಾದನಾ ಕೆಲಸಗಳು ಸ್ಥಗಿತಗೊಂಡಿದ್ದವು ಎನ್ನಲಾಗಿದೆ. ಈಗಾಗಲೇ ಬಂದ್ ಆಗಿರುವ ಕಾರ್ಖಾನೆಯನ್ನು ಸೀಜ್ ಮಾಡಿ ಅಧಿಕಾರಿಗಳು ಕೈತೊಳೆದುಕೊಳ್ಳುತ್ತಿದ್ದಾರಾ? ಪ್ರಸ್ತುತ ಕಾರ್ಯನಿರ್ವಹಿಸುತ್ತಾ ದಿನನಿತ್ಯ ಮಾಲಿನ್ಯ ಕಾರುತ್ತಿರುವ ಉಳಿದ ಮೂರು ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುವುದು ಯಾವಾಗ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.