ಕೊಪ್ಪಳ/ಕಲಬುರಗಿ, (ಮಾರ್ಚ್ 18): ಮರಳು ತುಂಬಿದ್ದ ಟಿಪ್ಪರ್ ಹರಿದು ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ನಡೆದಿದೆ. ರಮೇಶ ಜವಳಗೇರಿ(27), ಸಿದ್ದಪ್ಪ ಪ್ಯಾಟ್ಯಾಳ್(34) ಮೃತ ಯುವಕರು. ಸಾವನ್ನಪ್ಪಿರುವ ಇಬ್ಬರು ಯುವಕರು ಕನಕಗಿರಿ ತಾಲೂಕಿನ ಗುಡೂರಿನ ನಿವಾಸಿಗಳಾಗಿದ್ದು, ಇಂದು (ಮಾರ್ಚ್ 18) ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿದೆ. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿ ಯುವಕರ ದೇಹ ಛಿದ್ರವಾಗಿದೆ.
ನವಲಿ ಕಡೆಯಿಂದ ಗುಡೂರು ಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಪೈಕಿ ಓರ್ವ ಮೃತದೇಹ ಛಿದ್ರ ಛಿದ್ರವಾಗಿದ್ದು, ರಸ್ತೆ ತುಂಬ ದೇಹದ ಮಾಂಸ ಚೆಲ್ಲಾಪಿಲ್ಲಿಯಾಗಿದೆ. ಮತ್ತೋರ್ವ ಯುವಕನ ತಲೆ ಛದ್ರಗೊಂಡಿದೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಗಲು ರಾತ್ರಿ ಎನ್ನದೇ ಈ ಮಾರ್ಚದಲ್ಲಿ ಮರಳು ತುಂಬಿದ ಟಿಪ್ಪರ್ ಗಳು ಓಡಾಡುತ್ತಿದ್ದು, ಅಕ್ರಮ ಮರಳು ದಂಧೆಗೆ ಯುವಕರು ಬಲಿಯಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಈ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಲಬುರಗಿ: ಇನ್ನೊಂದೆಡೆ ನೀರಿನ ಸಂಪ್ಗೆ ಬಿದ್ದು ಎರಡು ಮಕ್ಕಳು ಸಾವಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದಲ್ಲಿ ನಡೆದಿದೆ. ಗಿರೀಶ್(3), ಶ್ರೇಷ್ಠಾ(2) ಮೃತ ಮಕ್ಕಳು. ಆಟವಾಡುತ್ತಿದ್ದಾಗ ಕಣ್ಮರೆಯಾಗಿದ್ದ ಗಿರೀಶ್ ಹಾಗೂ ಶ್ರೇಷ್ಠಾ ನಾಪತ್ತೆಯಾಗಿದ್ದರು. ಹುಡುಕಾಡುತ್ತಿರುವಾಗ ಮನೆ ಬಳಿಯಿದ್ದ ನೀರಿನ ಸಂಪ್ನಲ್ಲಿ ಮಕ್ಕಳಿಬ್ಬರ ಮೃತದೇಹ ಪತ್ತೆಯಾಗಿವೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 10:06 pm, Tue, 18 March 25