AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯಾದ್ಯಂತ ಮಾ.16 ರಿಂದ ಕೆಪಿಟಿಸಿಎಲ್​ ನೌಕರರ ಮುಷ್ಕರ, ವಿದ್ಯುತ್​ ವ್ಯತ್ಯಯ ಸಾಧ್ಯತೆ

ವೇತನ ಹೆಚ್ಚಿಸುವಂತೆ ಕೆಪಿಟಿಸಿಎಲ್​ ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ 14 ದಿನಗಳ ಗಡುವು ಇಂದಿಗೆ ಅಂತ್ಯವಾಗಿದ್ದು, ಇದರಿಂದ ನಾಳೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕೆಪಿಟಿಸಿಎಲ್​ ನೌಕರರ ಸಂಘ ಮುಂದಾಗಿದೆ.

ರಾಜ್ಯಾದ್ಯಂತ ಮಾ.16 ರಿಂದ ಕೆಪಿಟಿಸಿಎಲ್​ ನೌಕರರ ಮುಷ್ಕರ, ವಿದ್ಯುತ್​ ವ್ಯತ್ಯಯ ಸಾಧ್ಯತೆ
ಕೆಪಿಟಿಸಿಎಲ್​
Follow us
ವಿವೇಕ ಬಿರಾದಾರ
|

Updated on:Mar 15, 2023 | 1:11 PM

ಬೆಂಗಳೂರು: ವೇತನ ಹೆಚ್ಚಿಸುವಂತೆ ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ (KPTCL) ನೌಕರರು ರಾಜ್ಯ ಸರ್ಕಾರಕ್ಕೆ ನೀಡಿದ 14 ದಿನಗಳ ಗಡುವು ಇಂದಿಗೆ ಅಂತ್ಯವಾಗಿದೆ. ಇದರಿಂದ ನಾಳೆ (ಮಾ.16) ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲು ಕೆಪಿಟಿಸಿಎಲ್​ ನೌಕರರ ಸಂಘ (KPTCL Employees Union) ಕರೆ ಕೊಟ್ಟಿದೆ. ಈ ಹಿನ್ನೆಲೆ ಎಲ್ಲಾ ಎಸ್ಕಾಂಗಳು (ESCOM) ನೌಕರರು ಕರ್ತವ್ಯಕ್ಕೆ ಗೈರಾಗಿ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಪ್ರತಿಭಟನೆಯ ಬಿಸಿ ಸಾರ್ವಜನಿಕರಿಗೆ ತಟ್ಟಲಿದ್ದು, ವಿದ್ಯುತ್​ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಸರ್ಕಾರ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಗ್ರಾಹಕರಿಗೆ ತೊಂದರೆಯಾದರೆ ಇದಕ್ಕೆ ಸರ್ಕಾರವೇ ನೇರ ಹೊಣೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ನೌಕರರು ಸರಿಪಡಿಸಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಇಂಧನ ಸಚಿವರು ಚರ್ಚೆ ಮಾಡಿದ್ದಾರೆ, ಇನ್ನೂ ತೀರ್ಮಾನ ಆಗಿಲ್ಲ. ಇಂದು ಸಂಜೆಯವರೆಗೆ ಸರ್ಕಾರಕ್ಕೆ ಸಮಯಾವಕಾಶ ಇದೆ. ಒಂದು ವೇಳೆ ನಮ್ಮ ಬೇಡಿಕೆಗಳು ಈಡೇರದಿದ್ದರೇ ಮುಷ್ಕರ ನಡೆಸುವುದು ಕಟ್ಟಿಟ್ಟ ಬುತ್ತಿ ಎಂದು ಕೆಪಿಟಿಸಿಎಲ್​ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಲರಾಮ್​ ಹೇಳಿದ್ದಾರೆ.

ಇದನ್ನೂ ಓದಿ: ಸಿಹಿ ಸುದ್ದಿ ನೀಡಿದ ಎಸ್ಕಾಂ: ಮುಂದಿನ 3 ತಿಂಗಳ ಕಾಲ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡದಿರಲು ನಿರ್ಧಾರ

ಸುಮಾರು 50 ಸಾವಿರ ನೌಕರರು ನಾಳೆಯ ಮುಷ್ಕರದಲ್ಲಿ ಭಾಗಿಯಾಗುತ್ತಾರೆ. ನಾವು ಧಿಕ್ಕಾರ, ಘೋಷಣೆಗಳು ಕೂಗುವುದಿಲ್ಲ, ಮನೆಯಲ್ಲೇ ಇರುತ್ತೇವೆ. ಕೆಲಸಕ್ಕೆ ಹಾಜರಾಗದೆ ಗೈರು ಹಾಜರಾಗುವ ಮೂಲಕ ಮುಷ್ಕರ ಮಾಡುತ್ತೇವೆ. ಯಾವುದೇ ದುರಸ್ತಿ ಕಾರ್ಯಗಳನ್ನ ನಾವು ಮಾಡುವುದಿಲ್ಲ. ಆದರೆ ಆಸ್ಪತ್ರೆ ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಮುಂದಾಗುತ್ತೇವೆ ಎಂದರು.

ಕೆಪಿಟಿಸಿಎಲ್​ ನೌಕರರ ಬೇಡಿಕೆ ಏನು?

1. ಪ್ರತಿ 5 ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ ಅದು ಆಗಿಲ್ಲ, ಹೀಗಾಗಿ ಈ ಕೂಡಲೇ ವೇತನ ಪರಿಷ್ಕರಣೆ ಮಾಡಬೇಕು. ಸರ್ಕಾರಿ ನೌಕರರಿಗೆ ಮಧ್ಯಂತರ ಶೇ17ರಷ್ಟು ವೇತನ ಪರಿಷ್ಕರಣೆ ಮಾಡಿದ್ದಾರೆ, ಆದರೆ ನಮಗೆ ಆಗಿಲ್ಲ.

2. ಕೆಪಿಟಿಸಿಎಲ್​ ಹಾಗೂ ಎಸ್ಕಾಂಗಳ ನೌಕರರು ಮತ್ತು ಅಧಿಕಾರಿಗಳ ವೇತನ ಬೇಡಿಕೆ ಪರಿಷ್ಕರಣೆ ಆಗಲೇಬೇಕು. 01-04-2022 ರಿಂದ ಪೂರ್ವನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.

ವೇತನ ಪರಿಷ್ಕರಣೆಯಾಗಿ ಸುಮಾರು 5 ರಿಂದ 6 ವರ್ಷ ಆಗಿದೆ. ನಾವು ತುಂಬಾ ಆರ್ಥಿಕ ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದೇವೆ. ಪ್ರತಿಭಟನೆಯಿಂದಾಗುವ ಪರಿಣಾಮಕ್ಕೆ ನಾವು ಯಾವುದೆ ರೀತಿ ಜವಾಬ್ದಾರರಲ್ಲ. ನಾವು ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇವೆ ಎಂದು ಕೆಪಿಟಿಸಿಎಲ್​ ನೌಕರರ ಸಂಘ ಹಾಗೂ ಒಕ್ಕೂಟದ ಅಧ್ಯಕ್ಷ ಲಕ್ಷ್ಮಿಪತಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Wed, 15 March 23