Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಷ್ಕರ ನಡೆಸಿದ್ದ ಸಾರಿಗೆ ನಿಗಮಗಳ ನೌಕರರೊಂದಿಗೆ ಸರ್ಕಾರ ಮಾತುಕತೆ ನಡೆಸಬೇಕು: ಹೈಕೋರ್ಟ್​ ನಿರ್ದೇಶನ

ಮುಷ್ಕರ ಹಿಂಪಡೆದು ನೌಕರರು ಪಟ್ಟು ಸಡಿಲಿಸಿದ್ದಾರೆ. ಸರ್ಕಾರವೂ ಈಗ ಪಟ್ಟು ಸಡಿಲಿಸಿ ಮಾತುಕತೆಗೆ ಮುಂದಾಗಬೇಕು ಎಂದು ಹೈಕೋರ್ಟ್ ಹೇಳಿದೆ.

ಮುಷ್ಕರ ನಡೆಸಿದ್ದ ಸಾರಿಗೆ ನಿಗಮಗಳ ನೌಕರರೊಂದಿಗೆ ಸರ್ಕಾರ ಮಾತುಕತೆ ನಡೆಸಬೇಕು: ಹೈಕೋರ್ಟ್​ ನಿರ್ದೇಶನ
ಸರ್ಕಾರಿ ಬಸ್ (ಸಂಗ್ರಹ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 27, 2021 | 5:16 PM

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್​ ಮಂಗಳವಾರ ವಿಚಾರಣೆ ನಡೆಸಿತು. ಮುಷ್ಕರ ಹಿಂಪಡೆದು ನೌಕರರು ಪಟ್ಟು ಸಡಿಲಿಸಿದ್ದಾರೆ. ಸರ್ಕಾರವೂ ಈಗ ಪಟ್ಟು ಸಡಿಲಿಸಿ ಮಾತುಕತೆಗೆ ಮುಂದಾಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರಿದ್ದ ನ್ಯಾಯಪೀಠವು ಸೂಚನೆ ನೀಡಿತು.

ಅಮಾನತಾಗಿರುವ ಸಿಬ್ಬಂದಿ ಅಮಾನತು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳು ಸಲ್ಲಿಕೆಯಾದ 2 ವಾರಗಳ ಒಳಗೆ ಪ್ರಾಧಿಕಾರವು ಇತ್ಯರ್ಥಪಡಿಸಬೇಕು. ವಜಾಗೊಂಡ‌ ನೌಕರರೂ ಮೇಲ್ಮನವಿ ಸಲ್ಲಿಸಬೇಕು. ಈ ಅರ್ಜಿಗಳನ್ನು 2 ತಿಂಗಳಲ್ಲಿ ಮೇಲ್ಮನವಿ ಪ್ರಾಧಿಕಾರ ತೀರ್ಮಾನಿಸಬೇಕು. ಮೇ 12ರೊಳಗೆ ಸರ್ಕಾರ ಮಾತುಕತೆ ನಡೆಸಬೇಕು. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಬೇಕು. ಮಾತುಕತೆಯ ಬಳಿಕ ಸಮಸ್ಯೆ ಮುಂದುವರಿಯಬಾರದು. ಪ್ರಯಾಣಿಕರಿಗೆ ತೊಂದರೆಯಾಗಬಾರದು. ಮೇ 12ರೊಳಗೆ ಮಾತುಕತೆ ನಡೆಸದಿದ್ದರೆ ಮಧ್ಯಸ್ಥಿಕೆಗೆ ‌ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ಹೈಕೋರ್ಟ್​ ವಿಭಾಗೀಯ ಪೀಠವು ಹೇಳಿತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಲ್ಲಿ ಈಚೆಗೆ ಸಾರಿಗೆ ನಿಗಮಗಳ ನೌಕರರು ನಡೆಸಿದ್ದ ಮುಷ್ಕರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ನೌಕರರ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಮುಷ್ಕರ ನಿರತ ಹಲವು ನೌಕರರನ್ನು ಅಮಾನತು, ವಜಾ ಮಾಡಿತ್ತು. ನಂತರದ ದಿನಗಳಲ್ಲಿ ಹೈಕೋರ್ಟ್​ ಆದೇಶಕ್ಕೆ ತಲೆಬಾಗಿ ನೌಕರರು ಕೆಲಸಕ್ಕೆ ಹಾಜರಾಗಿದ್ದರು.

ಬೆಂಗಳೂರಿನಲ್ಲಿ ಅತ್ಯಗತ್ಯ ಔಷಧಿಗಳ ಕೊರತೆ

ಬೆಂಗಳೂರಿನಲ್ಲಿ ರೆಮ್​ಡಿಸಿವಿರ್ ಮತ್ತು ಆಕ್ಸಿಜನ್ ಕೊರತೆಯಿದೆ ಎಂದು ಹೈಕೋರ್ಟ್​ಗೆ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಸಂಘಟನೆ ‘ಫನಾ’ದ ಅಧ್ಯಕ್ಷ ಡಾ.ಎಚ್​.ಎಂ.ಪ್ರಸನ್ನ ಮಾಹಿತಿ ನೀಡಿದರು. 100 ರೆಮ್​ಡಿಸಿವಿರ್ ಕೇಳಿದರೆ 25 ಮಾತ್ರ ಪೂರೈಸ್ತಿದ್ದಾರೆ. ಹೀಗಾಗಿ ಗಂಭೀರ ಸಮಸ್ಯೆ ಇದ್ದವರಿಗೆ ಮಾತ್ರ ನೀಡಲಾಗುತ್ತಿದೆ. ಸರ್ಕಾರದ ಬಳಿ ಸ್ಟಾಕ್ ಇದ್ದರೂ ರೆಮ್​ಡಿಸಿವಿರ್ ಒದಗಿಸುತ್ತಿಲ್ಲ. ಬೇಡಿಕೆಯ ಶೇಕಡಾ 50ರಷ್ಟು ಮಾತ್ರ ಆಕ್ಸಿಜನ್ ಲಭ್ಯವಿದೆ. ಖಾಸಗಿ ಪೂರೈಕೆದಾರರಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಹೀಗಾಗಿ ಬೆಲೆಯೂ ಮೂರ್ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂದು ಅವರು ತಿಳಿಸಿದರು.

ಆಕ್ಸಿಜನ್ ಮತ್ತು ರೆಮ್‌ಡಿಸಿವಿರ್ ಕೊರತೆಯಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಆಕ್ಸಿಜನ್, ರೆಮ್‌ಡಿಸಿವಿರ್ ಲಭ್ಯತೆ ಬಗ್ಗೆ ನಿತ್ಯ ಪ್ರಕಟಿಸಬೇಕು. ಕೇಂದ್ರದಿಂದ ಹಂಚಿಕೆಯಾದ 802 ಮೆಟ್ರಿಕ್​ ಟನ್ ಆಕ್ಸಿಜನ್ ಒದಗಿಸಿ. ಇಲ್ಲವಾದರೆ ಏ.30ರ ವೇಳೆಗೆ 600 ಮೆಟ್ರಿಕ್​ ಟನ್ ಕೊರತೆ ಕಾಣಿಸಿಕೊಳ್ಳುತ್ತದೆ. ರಾಜ್ಯ ಸರ್ಕಾರ ರೆಮ್​ಡಿಸಿವರ್ ಪೂರೈಕೆ ಹೆಚ್ಚಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು‌ ನ್ಯಾಯಮೂರ್ತಿ ಅರವಿಂದ್ ಕುಮಾರ್​ ಅವರಿದ್ದ ಪೀಠ ಸೂಚನೆ ನೀಡಿತು.

(KSRTC BMTC strike govt should speak with employees directs Karnataka High Court)

ಇದನ್ನೂ ಓದಿ: ಕೊವಿಡ್ ಲಸಿಕೆ ನೀಡುವಾಗ ಅಂಗವಿಕಲರಿಗೆ ಆದ್ಯತೆ ನೀಡಿ: ಹೈಕೋರ್ಟ್​ ಸೂಚನೆ

ಇದನ್ನೂ ಓದಿ: Covid Curfew: ಸಾರಿಗೆ ಬಸ್​ ಸ್ಥಗಿತ, ಸ್ವಗ್ರಾಮಕ್ಕೆ ಹಿಂದಿರುಗುತ್ತಿರುವ ಜನ: ಬಸ್​ ನಿಲ್ದಾಣಗಳೆಲ್ಲಾ ಫುಲ್​ ರಶ್​

Published On - 5:15 pm, Tue, 27 April 21