KSRTC Pee Gate: ಬಸ್‌ನಲ್ಲಿ ಮೂತ್ರ ವಿಸರ್ಜನೆ ಪ್ರಕರಣ; ಕೆಎಸ್‌ಆರ್‌ಟಿಸಿ ನೀಡಿದ ಸ್ಪಷ್ಟನೆ ಇಲ್ಲಿದೆ

ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ನಾನ್​ ಎಸಿ ಸ್ಲೀಪರ್​ ಬಸ್​ನಲ್ಲಿ ಪ್ರಯಾಣಿಕನೊಬ್ಬ ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ವರದಿಗಳ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.

KSRTC Pee Gate: ಬಸ್‌ನಲ್ಲಿ ಮೂತ್ರ ವಿಸರ್ಜನೆ ಪ್ರಕರಣ; ಕೆಎಸ್‌ಆರ್‌ಟಿಸಿ ನೀಡಿದ ಸ್ಪಷ್ಟನೆ ಇಲ್ಲಿದೆ
ಕೆಎಸ್​ಆರ್​ಟಿ ಬಸ್​ (ಸಾಂದರ್ಭಿಕ ಚಿತ್ರ)
Updated By: Digi Tech Desk

Updated on: Feb 23, 2023 | 11:42 AM

ಬೆಂಗಳೂರು: ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ (KSRTC Bus) ನಾನ್​ ಎಸಿ ಸ್ಲೀಪರ್​ ಬಸ್​ನಲ್ಲಿ ಪ್ರಯಾಣಿಕನೊಬ್ಬ ಯುವತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂಬ ವರದಿಗಳ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದೆ. ಪ್ರಯಾಣಿಕ ಯುವತಿಯ ಮೇಲೆ ಮೂತ್ರ ವಿಸರ್ಜಿಸಿದ್ದ ಎಂಬ ವರದಿಗಳು ಸತ್ಯಕ್ಕೆ ದೂರವಾದುದು ಎಂದು ಕೆಎಸ್​ಆರ್​ಟಿಸಿಯ ಮಂಗಳೂರು ವಿಭಾಗದ ಹಿರಿಯ ವಿಭಾಗಿಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಯಾಣಿಕ ಮೂತ್ರ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ದೂರು ಬಂದ ಕೂಡಲೇ ಕಾರ್ಯಪ್ರವೃತ್ತರಾಗಿದ್ದೇವೆ. ವಾಹನ ಸಂಖ್ಯೆ ಕೆಎ 19 ಎಫ್ 3554 ರಲ್ಲಿ ಕರ್ತವ್ಯ ನಿರ್ವಹಿಸಿದ ಚಾಲಕ ಸಂತೋಷ್ ಮಠಪತಿ ಬಿಲ್ಲೆ ಹಾಗೂ ನಿರ್ವಾಹಕರಾದ ಉಮೇಶ್ ಕರಡಿ ಹೇಳಿಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪಿಯು ಮುಂಗಡ ಆಸನ ಕಾಯ್ದಿರಿಸದ ಪ್ರಯಾಣಿಕರಾಗಿದ್ದು ಆಸನ ಸಂಖ್ಯೆ 29 ರಲ್ಲಿ ಕುಳಿತಿದ್ದ. ಯುವತಿಯು ಆಸನ ಸಂಖ್ಯೆ 3ರಲ್ಲಿ ಇದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಎಸ್​​ಆರ್​ಟಿಸಿ ಬಸ್​​ನಲ್ಲಿ ನಿಜಕ್ಕೂ ನಡೆದಿದ್ದೇನು?

ಬಸ್ಸನ್ನು ಚಾಲಕ ಹುಬ್ಬಳ್ಳಿಯ ಕಿರೇಸೂರು ಹೋಟೇಲ್ ಬಳಿ ರಾತ್ರಿ 10:30ಕ್ಕೆ ಊಟ, ತಿಂಡಿ‌ ಮತ್ತು ನೈಸರ್ಗಿಕ ಕರೆಗಾಗಿ ನಿಲ್ಲಿಸಿದ್ದರು. ಪ್ರಯಾಣಿಕರೆಲ್ಲ ಬಸ್ಸನಿಂದಿಳಿದು ಊಟಕ್ಕೆ ಹೋಗಿದ್ದರು. ಆಸನ ಸಂಖ್ಯೆ 29ರಲ್ಲಿದ್ದ ಪಾನಮತ್ತ ಪ್ರಯಾಣಿಕ ಚಾಲಕನ ಹಿಂದಿನ ಸೀಟಿನ (ಆಸನ ಸಂಖ್ಯೆ 3) ಬಳಿ ಬಂದು ಅದರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಆ ಸಮಯದಲ್ಲಿ ಊಟ ಮುಗಿಸಿ ಮಹಿಳಾ ಪ್ರಯಾಣಿಕರು (ಅವರು ಆಸನ ಸಂಖ್ಯೆ 3ರಲ್ಲಿದ್ದವರು) ಬಸ್ ಏರಲು ಮುಂದಾಗಿದ್ದು, ಘಟನೆಯನ್ನು ಕಂಡಿದ್ದಾರೆ. ತಕ್ಷಣವೇ ಚಾಲಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಚಾಲಕರು, ನಿರ್ವಾಹಕರು ಮತ್ತು ಇತರೆ ಪ್ರಯಾಣಿಕರು ಪ್ರಯಾಣಿಕನನ್ನು ಬಸ್ಸಿನಿಂದ ಕೆಳಗಿಳಿಸಿ ಬೈದು ತರಾಟೆಗೆ ತೆಗೆದುಕೊಂಡಿರುತ್ತಾರೆ. ನಂತರ ಆಸನವನ್ನು ಶುಚಿಗೊಳಿಸಿದ ಬಸ್ ಸಿಬ್ಬಂದಿ ಪ್ರಯಾಣಿಕನನ್ನು ಅಲ್ಲಿಯೇ ಇಳಿಸಿ ಪ್ರಯಾಣ ಮುಂದುವರಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಕೆಎಸ್​ಆರ್​​ಟಿಸಿ ತಿಳಿಸಿದೆ.

ಇದನ್ನೂ ಓದಿ: ವಿಮಾನ ಆಯ್ತು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಯುವತಿ ಮೇಲೆ ಮೂತ್ರ ಮಾಡಿದ ಸಹ ಪ್ರಯಾಣಿಕ

ಮಹಿಳೆಯು ಆಸನ ಸಂಖ್ಯೆ 9ರಲ್ಲಿ ಕುಳಿತು ಪ್ರಯಾಣ ಮುಂದುವರಿಸಿದ್ದಾರೆ. ನಂತರ ಮಹಿಳೆ ಮತ್ತು ಇತರ ಆರು ಮಂದಿ ಪ್ರಯಾಣಿಕರು ಹುಬ್ಬಳ್ಳಿಯಲ್ಲಿ ಇಳಿದಿದ್ದಾರೆ. ಅನಾಗರಿಕವಾಗಿ ಬಸ್ಸಿನಲ್ಲಿ ಮೂತ್ರ ವಿಸರ್ಜನೆ ಮಾಡಿದ ಸಹ ಪ್ರಯಾಣಿಕನ ಕುರಿತು ಮಾಹಿತಿಯನ್ನು ತಿಳಿಯಲು ಪ್ರಯತ್ನಿಸಲಾಗಿದೆ. ಆತ, ಕ್ಷಮೆಯಾಚಿಸಿದ್ದು, ಹೆಚ್ಚಿನ ಮಾಹಿತಿ ಇಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಪೊಲೀಸ್ ದೂರು ನೀಡಿಲ್ಲ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Thu, 23 February 23