AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರುಬ ಸಮುದಾಯದ ಬೃಹತ್ ಸಮಾವೇಶ; ಎಸ್​ಟಿ ಮೀಸಲು ಶೀಘ್ರ ಆಗಬೇಕೆಂದ ನಾಯಕರು

ಕುರುಬರಿಗೆ ಎಸ್​ಟಿ ಮೀಸಲಾತಿ ನೀಡಬೇಕೆಂದು ದೇವರಾಜ ಅರಸು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಮುಂದಿನ ದಿನಗಳಲ್ಲಿಯಾದರೂ ಸಮುದಾಯದ ಸಚಿವರು ಈ ಬಗ್ಗೆ ಗಮನಹರಿಸಿ, ಸಚಿವ ಸಂಪುಟದಲ್ಲಿ ಒತ್ತಾಯ ಮಾಡಬೇಕು. ಈಗಾಗಲೇ ಸುಮಾರು 340 ಕಿ.ಮೀ ಪಾದಯಾತ್ರೆ ಮಾಡಲಾಗಿದೆ ಎಂದರು.

ಕುರುಬ ಸಮುದಾಯದ ಬೃಹತ್ ಸಮಾವೇಶ; ಎಸ್​ಟಿ ಮೀಸಲು ಶೀಘ್ರ ಆಗಬೇಕೆಂದ ನಾಯಕರು
ಕುರುಬ ಸಮುದಾಯದ ಬೃಹತ್ ಸಮಾವೇಶ
Follow us
sandhya thejappa
|

Updated on:Feb 07, 2021 | 4:08 PM

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಕುರುಬರಿಗೆ ಬಹುಕಾಲದಿಂದ ಅನ್ಯಾಯವಾಗುತ್ತಿದೆ. ಇದನ್ನು ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತುರ್ತಾಗಿ ಗಮನ ಹರಿಸಬೇಕು. ಹಲವು ವರ್ಷಗಳಿಂದ ನಡೆಯುತ್ತಿರುವ ಅನ್ಯಾಯ ಈಗಲಾದರೂ ಸರಿಯಾಗಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಹೇಳಿದರು.

ನಗರದ ಬಿಐಇಸಿ ಮೈದಾನದಲ್ಲಿ ನಡೆದ ಕುರುಬರ ಬೃಹತ್​ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್​ಟಿ ಮೀಸಲಾತಿಗೆ ಒತ್ತಾಯಿಸಿ ರಾಜ್ಯದ ಮೂಲೆಮೂಲೆಗಳಿಂದ ಸಮುದಾಯದ ಜನರು ಬಂದಿದ್ದಾರೆ. ಕಾಡು ಕುರುಬ, ಜೇನು ಕುರುಬರು ಈಗಾಗಲೇ ಎಸ್​ಟಿ ಪ್ರವರ್ಗದಲ್ಲಿದ್ದಾರೆ. ಕುರುಬರಿಗೆ ಎಸ್​ಟಿ ಮೀಸಲಾತಿ ನೀಡಬೇಕೆಂದು ದೇವರಾಜ ಅರಸು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಮುಂದಿನ ದಿನಗಳಲ್ಲಿಯಾದರೂ ಸಮುದಾಯದ ಸಚಿವರು ಈ ಬಗ್ಗೆ ಗಮನಹರಿಸಿ, ಸಚಿವ ಸಂಪುಟದಲ್ಲಿ ಒತ್ತಾಯ ಮಾಡಬೇಕು. ಈಗಾಗಲೇ ಸುಮಾರು 340 ಕಿ.ಮೀ ಪಾದಯಾತ್ರೆ ಮಾಡಲಾಗಿದೆ ಎಂದರು.

ಟಗರಿಗೆ ಟಾಂಗ್ ಕೊಟ್ಟ ಹಳ್ಳಿಹಕ್ಕಿ ಸಮಾವೇಶದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ನಮ್ಮ ಸಮುದಾಯದ ಒಬ್ಬರು ಮುಖ್ಯಮಂತ್ರಿ ಆಗಿದ್ದರು. ಆದರೆ ಇಂದು ಅವರೇ ನಮ್ಮ ಸಮಾವೇಶಕ್ಕೆ ಬಂದಿಲ್ಲ. ಇದರಿಂದ ಕುರುಬ ಸಮುದಾಯಕ್ಕೆ ನೋವಾಗಿದೆ. ಸಮುದಾಯ ಅವರಿಗೆ ತನು, ಮನ, ಧನ ಅರ್ಪಿಸಿತ್ತು. ಇದು ರಾಜಕೀಯ ಅಜೆಂಡಾ ಅಲ್ಲ, ಕೇವಲ ಸಮುದಾಯದ ಹೋರಾಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಹೇಳದೆ ಟಾಂಗ್ ಕೊಟ್ಟರು.

ಕುರುಬರ ಎಸ್​ಟಿ ಹೋರಾಟ ಸಮಿತಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾತನಾಡಿ, ಸ್ವಂತ ಖರ್ಚಿನಿಂದ ಉತ್ತರ ಕರ್ನಾಟಕದವರು ಬಂದಿದ್ದಾರೆ. ಎಸ್​ಟಿ ಮೀಸಲಾತಿಗೆ ನಾವು ಹಕ್ಕುದಾರರಾಗಿದ್ದೇವೆ. ನೆಹರೂ ಕಾಲದಿಂದ ಮೋದಿ ಕಾಲದವರೆಗೆ ನಮಗೆ ಅನ್ಯಾಯ ಆಗಿದೆ. ಕುರುಬ, ಜೇನು ಕುರುಬ, ಕುರುಬನ್, ಗೊಂಡ ಯಾವುದೂ ಬೇರೆ ಅಲ್ಲ. ನಾಲ್ಕು ಜನ ಸಚಿವರು ಒಂದು ಶಕ್ತಿಯಾಗಿ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದರು.

ಕುರುಬ ಸಮಾಜದ ಬೃಹತ್ ಸಮಾವೇಶ; ಪರ್ಯಾಯ ಮಾರ್ಗ ಕಲ್ಪಿಸಿರುವ ಪೊಲೀಸರು

Published On - 4:04 pm, Sun, 7 February 21