ಚಿತ್ರದುರ್ಗದಲ್ಲಿ ಮನೆಯೊಳಗೆ ನುಗ್ಗಿದ ಚಿರತೆ; ಸ್ಥಳಕ್ಕೆ ಜಮಾಯಿಸಿದ ಸಾವಿರಾರು ಜನ

ಮನೆಯೊಳಗೆ ಬಂದ ಪ್ರಾಣಿ ನಾಯಿ ಇರಬಹುದೆಂದು ತಿರುಗಿ ನೋಡುವಷ್ಟರಲ್ಲಿ ಚಿರತೆ ಗುರ್‌ ಎಂದಿದೆ. ಆತಂಕಗೊಂಡ ನೇತ್ರಾ ತಕ್ಷಣ ಬಾಗಿಲು ಹಾಕಿದ್ದಾರೆ. ಆದರೆ ಮನೆಯೊಳಗೆ ಮಲಗಿದ್ದ ನೇತ್ರಾ ಅವರ ಪತಿ‌ ಚಿದಾನಂದ ಚಿರತೆ ಬರುವುದನ್ನು ಕಂಡು ಶಾಕ್​ಗೆ ಒಳಗಾಗಿದ್ದರು.

ಚಿತ್ರದುರ್ಗದಲ್ಲಿ ಮನೆಯೊಳಗೆ ನುಗ್ಗಿದ ಚಿರತೆ; ಸ್ಥಳಕ್ಕೆ ಜಮಾಯಿಸಿದ ಸಾವಿರಾರು ಜನ
ಅಡುಗೆ ಮನೆಯೊಳಗೆ ಅಡಗಿ ಕುಳಿತಿರುವ ಚಿರತೆ, ಬೋನಿಗೆ ಬಿದ್ದ ಚಿರತೆ
Follow us
|

Updated on: May 09, 2021 | 2:37 PM

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ನಾಯಿ ಬೇಟೆಗೆ ಬಂದ ಕಾಡು ಮೃಗವೊಂದು ನಿನ್ನೆ (ಮೇ 8) ಬೆಳ್ಳಂ ಬೆಳಗ್ಗೆ ಗ್ರಾಮವೊಂದರ ಮನೆಗೆ ನುಗ್ಗಿದೆ. ನೇರ ಅಡುಗೆ ಮನೆಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಮತ್ತೊಂದು ಕಡೆ ಕೊವಿಡ್ ಭೀತಿ ಮರೆತ ಮನುಜ ಮೃಗಗಳೂ ಅವಾಂತರ ಸೃಷ್ಟಿಸಿವೆ. ಚಿತ್ರದುರ್ಗ ತಾಲೂಕಿನ ಮುದ್ದಾಪುರ ಗ್ರಾಮದಲ್ಲಿ ಎಂದಿನಂತೆ ಬೆಳಗಿನ ಜಾವ 6.30 ರ ಸುಮಾರಿಗೆ ನೇತ್ರಾ ಎಂಬುವವರು ಮನೆ ಅಂಗಳದಲ್ಲಿ ಕಸ ಗುಡಿಸುತ್ತಿದ್ದರು. ಅದೇ ವೇಳೆಗೆ ನಾಯಿ ಬೇಟೆಗೆ ಬಂದ ಚಿರತೆಯೊಂದು ಹಿಂಬಾಗಿಲಿನಿಂದ ಮನೆಗೆ ನುಗ್ಗಿದೆ.

ಮನೆಯೊಳಗೆ ಬಂದ ಪ್ರಾಣಿ ನಾಯಿ ಇರಬಹುದೆಂದು ತಿರುಗಿ ನೋಡುವಷ್ಟರಲ್ಲಿ ಚಿರತೆ ಗುರ್‌ ಎಂದಿದೆ. ಆತಂಕಗೊಂಡ ನೇತ್ರಾ ತಕ್ಷಣ ಬಾಗಿಲು ಹಾಕಿದ್ದಾರೆ. ಆದರೆ ಮನೆಯೊಳಗೆ ಮಲಗಿದ್ದ ನೇತ್ರಾ ಅವರ ಪತಿ‌ ಚಿದಾನಂದ ಚಿರತೆ ಬರುವುದನ್ನು ಕಂಡು ಶಾಕ್​ಗೆ ಒಳಗಾಗಿದ್ದರು.

ಬಾಗಿಲು ತೆಗೆಯುವಂತೆ ಕೂಗಿದ ಬಳಿಕ‌ ಬಾಗಿಲು ತೆರೆದು ಚಿದಾನಂದನ ರಕ್ಷಣೆ ಮಾಡಲಾಗಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಪತಿ, ಪತ್ನಿ‌ ಬಚಾವಾಗಿದ್ದಾರೆ. ಆದರೆ ಅಡುಗೆ ಮನೆಯೊಳಗೆ ಹೊಕ್ಕ ಚಿರತೆ ಕೆಲ ಸಾಮಾನುಗಳನ್ನು ಬೀಳಿಸಿ ಹಾಳು ಮಾಡಿದೆ. ಮತ್ತೊಂದು ಕಡೆ ಚಿರತೆ ಮನೆಯೊಳಗೆ ಬಂದ ಸುದ್ದಿ ತಿಳಿದು ಜನ ಜಾತ್ರೆಯೇ ಜಮಾಯಿಸಿತ್ತು. ಸಾಮಾಜಿಕ ಅಂತರ, ಮಾಸ್ಕ್‌ ಮರೆತು ಜನರು ಸೇರಿದ್ದರು. ಕೆಲವರು ಮನೆ ಮೇಲ್ಛಾವಣಿ ಏರಿ ಹಂಚುಗಳಿಗೆ ಹಾನಿ ಮಾಡಿದ್ದಾರೆ ಎಂದು ಚಿದಾನಂದ ಹೇಳಿದರು.

ವಿಷಯ ತಿಳಿಯುತ್ತಿದ್ದಂತೆ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗ್ರಾಮಾಂತರ ಠಾಣೆ ಸಿಪಿಐ‌ ಬಾಲಚಂದ್ರ ನಾಯಕ್ ಮತ್ತು ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಒಂದು ಕಡೆ ಬಾಗಿಲಿಗೆ ಬೋನ್ ಇರಿಸಿ ಮತ್ತೊಂದು ಕಡೆ ಬಾಗಿಲಿಗೆ ಬಲೆ ಹಾಕಿ ಚಿರತೆ ಸೆರೆಗೆ ‌ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದರು. ಆದರೆ ಚಿರತೆ‌ ತಡ ಮಾಡದೆ ಬೋನಿಗೆ ಬಂದು ಬಿತ್ತು. ಸುಮಾರು ಒಂದೂವರೆ ವರ್ಷದ ಚಿರತೆ‌ ಇದಾಗಿದ್ದು, ಸದ್ಯ ಅರಣ್ಯಾಧಿಕಾರಿಗಳು‌ ಚಿರತೆಯನ್ನು ಆಡುಮಲ್ಲೇಶ್ವರ ಕಿರು ಪ್ರಾಣಿ‌ ಸಂಗ್ರಹಾಲಯದಲ್ಲಿರಿಸಿದ್ದಾರೆ. ಆರೋಗ್ಯ ತಪಾಸಣೆ ಬಳಿಕ ಮರಳಿ ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ‌ ಸಂದೀಪ್ ನಾಯಕ್ ತಿಳಿಸಿದರು.

ಇದನ್ನೂ ಓದಿ

ಸರ್ಕಾರಕ್ಕೆ ಇನ್ನೆಷ್ಟು ಜನರ ಬಲಿಬೇಕು? ತಮ್ಮವರನ್ನು ಕಳೆದುಕೊಂಡು ಸರ್ಕಾರಕ್ಕೆ ಶಾಪ ಹಾಕಿದ ಕುಟುಂಬಸ್ಥರು

ಸಚಿವ ಮುರುಗೇಶ್​ ನಿರಾಣಿ ಅವರಿಂದ ಬಾಗಲಕೋಟೆ ಜಿಲ್ಲಾಡಳಿತಕ್ಕೆ 2 ಆ್ಯಂಬುಲೆನ್ಸ್, 6 ಟ್ಯಾಕ್ಸಿಗಳ ನೆರವು

(leopard had come into the house snd people came to see the leopard at chitradurga)