AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚದ ಹಣ ನುಂಗಿದ ಅಧಿಕಾರಿ: ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್​

ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ದಸ್ತಗೀರ್ ಅಲಿಯನ್ನು ಲೋಕಾಯುಕ್ತ ಪೊಲೀಸರು ಲಂಚ ಪಡೆಯುತ್ತಿರುವಾಗ ಟ್ರ್ಯಾಪ್ ಮಾಡಿದ್ದಾರೆ. ಎನ್‌ಜಿಒಗೆ ಪ್ರಮಾಣಪತ್ರ ನೀಡಲು ಎರಡು ಸಾವಿರ ರೂಪಾಯಿ ಲಂಚ ಪಡೆಯಲು ಯತ್ನಿಸಿದ ಅಲಿ, ಹಣವನ್ನು ನುಂಗಿದ್ದರು. ಪೊಲೀಸರು ವಾಂತಿ ಮಾಡಿಸಿ ಹಣವನ್ನು ಕಕ್ಕಿಸಿದ್ದಾರೆ.

ಲಂಚದ ಹಣ ನುಂಗಿದ ಅಧಿಕಾರಿ: ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್​
ಲಂಚದ ಹಣ ನುಂಗಿದ ಅಧಿಕಾರಿ: ವಾಂತಿ ಮಾಡಿಸಿ ಕಕ್ಕಿಸಿದ ಲೋಕಾಯುಕ್ತ ಪೊಲೀಸ್​
ಸಂಜಯ್ಯಾ ಚಿಕ್ಕಮಠ
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 21, 2024 | 9:14 PM

Share

ಕೊಪ್ಪಳ, ಡಿಸೆಂಬರ್​ 21: ಕೊಪ್ಪಳ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕ ಇಂದು ಸಂಜೆ ಕೊಪ್ಪಳ ಲೋಕಾಯುಕ್ತ (Lokayukta) ಪೊಲೀಸರ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ದಸ್ತಗಿರ್ ಅಲಿ, ಲೋಕಾ ಬಲೆಗೆ ಬಿದ್ದ ಅಧಿಕಾರಿ. ಲಂಚದ ಹಣ ನುಂಗಿದ ಅಧಿಕಾರಿ ದಸ್ತಗಿರ್ ಅಲಿಗೆ ವಾಂತಿ ಮಾಡಿಸಿ ಲೋಕಾಯುಕ್ತ ಅಧಿಕಾರಿಗಳು ಕಕ್ಕಿಸಿದ್ದಾರೆ.

ಎನ್​ಜಿಓಗೆ ಪ್ರಮಾಣ ಪತ್ರ ನೀಡಲು ಭೀಮನಗೌಡ ಅನ್ನೋರಿಗೆ ದಸ್ತಗಿರ್ ಅಲಿ ಎರಡು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಭೀಮನಗೌಡ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ದಸ್ತಗಿರ್ ಅಲಿಯನ್ನು ಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಚದ ಹಣ ನುಂಗಿ ಭಂಡತನ ಮೆರೆದೆ ಅಧಿಕಾರಿ

ಲೋಕಾಯುಕ್ತ ಪೊಲೀಸರ ಬಲೆಗೆ ಬೀಳ್ತಿದ್ದಂತೆ ದಸ್ತಗಿರ್ ಅಲಿ ಹೈಡ್ರಾಮಾವೇ ಮಾಡಿದ್ದಾರೆ. ಲಂಚ ಪಡೆದಿದ್ದ ಎರಡು ಸಾವಿರ ರೂಪಾಯಿ ನೋಟನ್ನು ನುಂಗಿ ಸಾಕ್ಷಿನಾಶ ಮಾಡಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ನೀರು ಕುಡಿಸಿ ವಾಂತಿ ಮಾಡಿಸಿ, ಹಣ ಹೊರಗೆ ತೆಗೆಸಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರಿಂದ ದೂರು: ಬೆಸ್ಕಾಂ, ಜಲಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ

ಸದ್ಯ ದಸ್ತಗಿರ್ ಅಲಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾಯಚೂರು ಲೋಕಾಯುಕ್ತ ಎಸ್ಪಿ ಶಶಿಧರ್ ಮಾರ್ಗದರ್ಶನದಲ್ಲಿ ದಾಳಿ ನಡೆದಿದ್ದು, ಕೊಪ್ಪಳ ಲೋಕಾಯುಕ್ತ ಪಿಐ ನಾಗರತ್ನ, ಸುನೀಲ್ ಮೇಗಿಲಮನಿ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಅಬಕಾರಿ ಇನ್ಸಪೆಕ್ಟರ್​ಗೆ ಲೋಕಾ ಬಿಸಿ

ಇನ್ನು ಇತ್ತೀಚೆಗೆ ಕೊಪ್ಪಳ ನಗರದಲ್ಲಿರುವ ಅಬಕಾರಿ ಇಲಾಖೆಯಲ್ಲಿ, ಅಬಕಾರಿ ಇನ್ಸಪೆಕ್ಟರ್ ಅಂತ ಕೆಲಸ ಮಾಡುತ್ತಿರುವ ರಮೇಶ್ ಅಗಡಿ ಅರಳಿಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಶಾಕ್ ನೀಡಿದ್ದರು. ಕೊಪ್ಪಳ ನಗರದ ಬೃಂದಾವನ ನಗರದಲ್ಲಿರುವ ಬಾಡಿಗೆ ಮನೆ, ಬಿ.ಟಿ ಪಾಟೀಲ್ ನಗರದಲ್ಲಿರುವ ಕಚೇರಿ ಮತ್ತು ಸ್ವಗ್ರಾಮ ಜಿಲ್ಲೆಯ ಯಲಬುರ್ಗಾ ತಾಲೂಕಿನ ತುಮ್ಮರಗುದ್ದಿ ಗ್ರಾಮದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳ ತಂಡ, ಮುಂಜಾನೆಯಿಂದ ಸಂಜೆವರಗೆ ದಾಖಲಾತಿಗಳ ಪರಿಶೀಲನೆ ಮಾಡಿದ್ದರು.

ಇದನ್ನೂ ಓದಿ: 4 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ಮುಲ್ಕಿ ಆರ್‌ಐ

ರಾಯಚೂರು ಲೋಕಾಯುಕ್ತ ಎಸ್ಪಿ ಎಂಎನ್ ಶಶಿದರ್, ನೇತೃತ್ವದಲ್ಲಿ ಡಿವೈಎಸ್ಪಿ ಶೀಲವಂತ, ಸಿಪಿಐ ಸುನೀಲ್ ಮೇಗಿಲಮನಿ ತಂಡ, ಪರಿಶೀಲನೆ ಮಾಡಿದ್ದರು. ನಸುಕಿನ ಜಾವ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.