ನಾನು ದೆಹಲಿಗೆ ಹೋದಾಗ ನನಗಾರೂ ಒನ್ ಗ್ಲಾಸ್ ಕಾಫಿ ಕೊಡಲಿಲ್ಲ: ಮಂಡ್ಯದಲ್ಲಿ ದೇವೇಗೌಡ

ನಾನೊಬ್ಬ ಸಾಮಾನ್ಯ ಹಳ್ಳಿಯ ರೈತನ ಮಗ. ನಾನೆಂದೂ ಪ್ರಧಾನ ಮಂತ್ರಿ ಆಗಬೇಕು ಅಂದುಕೊಂಡಿರಲಿಲ್ಲ. ನಾನು ದೆಹಲಿಗೆ ಹೋದಾಗ ನನಗೆ ಅಲ್ಲಿ ಯಾರೂ ಒಂದು ಲೋಟ ಕಾಫಿ ಕೊಡಲಿಲ್ಲ ಎಂದರು.

ನಾನು ದೆಹಲಿಗೆ ಹೋದಾಗ ನನಗಾರೂ ಒನ್ ಗ್ಲಾಸ್ ಕಾಫಿ ಕೊಡಲಿಲ್ಲ: ಮಂಡ್ಯದಲ್ಲಿ ದೇವೇಗೌಡ
ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಮತ್ತು ನಿಖಿಲ್ ಕುಮಾರಸ್ವಾಮಿ
Edited By:

Updated on: Dec 05, 2021 | 4:06 PM

ಮಂಡ್ಯ: ನಾನೊಬ್ಬ ಸಾಮಾನ್ಯ ಹಳ್ಳಿಯ ರೈತನ ಮಗ. ನಾನೆಂದೂ ಪ್ರಧಾನ ಮಂತ್ರಿ ಆಗಬೇಕು ಅಂದುಕೊಂಡಿರಲಿಲ್ಲ. ನಾನು ದೆಹಲಿಗೆ ಹೋದಾಗ ನನಗೆ ಅಲ್ಲಿ ಯಾರೂ ಒಂದು ಲೋಟ ಕಾಫಿ ಕೊಡಲಿಲ್ಲ. ನಾನು ಹೋದ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದವರಿಂದಾಗಿ ನಮ್ಮ ಪಕ್ಷ 16ರಿಂದ ಕೇವಲ 2 ಸ್ಥಾನಕ್ಕೆ ಕುಸಿಯುವಂತಾಯಿತು. ನನ್ನ ರಾಜಕೀಯ ಜೀವನಕ್ಕೆ ಶಕ್ತಿ ತುಂಬಿದ್ದು ಹಾಸನ. ಅದು ಹೊರತು ಪಡಿಸಿದ್ರೆ ಅದು ಮಂಡ್ಯ ಜಿಲ್ಲೆ. ಹಾಗಾಗಿ ನಾನು ಇಂದು ಮಂಡ್ಯಕ್ಕೆ ಬಂದಿರುವೆ ಎಂದು ಜೆಡಿಎಸ್ ನಾಯಕ ಎಚ್​.ಡಿ.ದೇವೇಗೌಡ ವಿಧಾನ ಪರಿಷತ್ ಚುನಾವಣೆಯಲ್ಲಿ ಮಂಡ್ಯ ಜನರ ಬೆಂಬಲ ಯಾಚಿಸಿದರು.

ಶ್ರೀರಂಗಪಟ್ಟಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಅಟಲ್​ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಬಿದ್ದು ಹೋದ ನಂತರ ಕಾಂಗ್ರೆಸ್ಸೇತರ, ಬಿಜೆಪಿಯೇತರ ಸರ್ಕಾರ ರಚನೆಗಾಗಿ ತೃತೀಯ ರಂಗದ ನಾಯಕರು ನನ್ನನ್ನು ದೆಹಲಿಗೆ ಕರೆಸಿಕೊಂಡರು. ಒತ್ತಾಯ ಮಾಡಿ ನನ್ನನ್ನು ಆ ಸ್ಥಾನದಲ್ಲಿ ಕೂರಿಸಿದ ನಂತರ ನಾನೇನು ಕೆಲಸ ಮಾಡಿದ್ದೆ ಎಂದು ಈಗ ಮತ್ತೊಮ್ಮೆ ಹೇಳಲು ಹೋಗುವುದಿಲ್ಲ. ಹಳ್ಳಿಯ ರೈತನ ಮಗ ಪ್ರಧಾನಿಯಾಗಿ ಮಾಡಿರುವ ಕೆಲಸದ ಬಗ್ಗೆ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ದವಾಗುತ್ತಿದೆ ಎಂದರು.

ಕಳೆದ ಬಾರಿ ಸ್ಪರ್ಧಿಸಿ ಗೆದ್ದಿರುವವರನ್ನೇ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಶಾಸಕರೆಲ್ಲರೂ ಸೇರಿ ಒಟ್ಟಿಗೆ ಆಯ್ಕೆ ಮಾಡಿರೋದ್ರಿಂದ ಶಾಸಕರಲ್ಲಿ ಯಾವುದೇ ಒಡಕಿಲ್ಲ. ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಮೂರ್ನಾಲ್ಕು ಬಾರಿ ಇಲ್ಲಿಗೆ ಬಂದಿದ್ದಾರೆ. ನಾನಾಗಲಿ ಕುಮಾರಸ್ವಾಮಿಯಾಗಲಿ ಬಂದಿರಲಿಲ್ಲ. ಜಿಲ್ಲೆಯ ಎಲ್ಲ ಶಾಸಕರು ಒಟ್ಟಿಗೆ ಚುನಾವಣೆ ಮಾಡ್ತಿರೋದ್ರಿಂದ ನಾನು ಜಿಲ್ಲೆಗೆ ಬಂದಿರಲಿಲ್ಲ. ಅಭ್ಯರ್ಥಿ ಹಾಗೂ ಅವರ ಮನೆಯವರು ಎಲ್ಲ ಮತದಾರರನ್ನು ಭೇಟಿ ಮಾಡಿ ಮಾತಾಡಿದ್ದಾರೆ. ಉಳಿದಂತೆ ಆಯಾ ತಾಲ್ಲೂಕುಗಳಲ್ಲಿ ಶಾಸಕರು ಕೆಲಸ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಗೆದ್ದಿರುವವರಿಗೆ ಶಕ್ತಿ ಕೊಟ್ಟಿದ್ದೇ ನಾನು. 1995ರಲ್ಲಿ ಮಹಿಳೆಯರಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಕಲ್ಪಿಸಿದ್ದೆ. ಇದರ ಪರಿಣಾಮವಾಗಿ 16 ಲೋಕಸಭೆ ಸ್ಥಾನಗಳನ್ನ ಗೆದ್ದಿದ್ದೆವು ಎಂದು ನೆನಪಿಸಿಕೊಂಡರು.

ಮಂಡ್ಯ ಜಿಲ್ಲೆಗೆ ಜೆಡಿಎಸ್ ನಾಯಕರ ಕೊಡುಗೆ ಅಪಾರ ಎಂದ ಕಳೆದ ಎಂದು ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ, ಲೋಕಸಭೆ ಚುನಾವಣೆಯ ಸೋಲನ್ನು ಮತ್ತೆ ನೆನೆದರು. ಅಂದಿನ ಚುನಾವಣೆಯ ಸೋಲು ಮರೆಯಲು ಈ ಚುನಾವಣೆಯಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಚುನಾವಣೆ ಹೊಸಿಲಲ್ಲಿ ಜಿಲ್ಲಾ ಜೆಡಿಎಸ್ ನಾಯಕರು ದೇವೇಗೌಡರ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಭೇಟಿಗೆ ಸಿದ್ದರಾಮಯ್ಯ ಅನುಮತಿ ಬೇಕೆ: ಜೆಡಿಎಸ್ ನಾಯಕ ಎಚ್​ಡಿ ದೇವೇಗೌಡ ಪ್ರಶ್ನೆ
ಇದನ್ನೂ ಓದಿ: ನೂರಕ್ಕೆ ನೂರು ಜೆಡಿಎಸ್ ಪಕ್ಷ ಸಹಕಾರ ನೀಡುತ್ತೆ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ

Web contact

TV9 Kannada

Read More
Follow Us