
ಮಂಡ್ಯ, ಏಪ್ರಿಲ್ 29: 12 ದಿನಗಳ ಹಿಂದೆ ನಾಪತ್ತೆಯಾಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳ ಮೃತ ದೇಹಗಳು ಮಂಗಳವಾರ (ಏ.29) ಕೆ.ಆರ್.ಎಸ್ನ (KRS) ವಿಸಿ ನಾಲೆಯಲ್ಲಿ (VC Nale) ಕಾರಿನ ಸಮೇತ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೂವರು ಅಘಾತದಿಂದ ಮೃತಪಟ್ಟಿದ್ದಾರಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುವುದು ಇನ್ನೂ ನಿಗೂಢವಾಗಿದೆ. ಕುಮಾರಸ್ವಾಮಿ, ಅದ್ವೈತ್ (7) ಮತ್ತು ಅಕ್ಷರ (3) ಮೃತ ದುರ್ದೈವಿಗಳು.
ಮೃತ ಕುಮಾರಸ್ವಾಮಿಯವರು ಮೂಲತಃ ಮೈಸೂರಿನ ಕೆ.ಆರ್.ನಗರದ ಹೆಬ್ಬಾಳುದವರು. ಕಳೆದ ಕೆಲ ವರ್ಷಗಳಿಂದ ಕುಟುಂಬದವರ ಜೊತೆ ಬೆಂಗಳೂರಿನಲ್ಲಿ ವಾಸವಿದ್ದರಂತೆ. ಏಪ್ರಿಲ್ 17 ರಂದು ಕೆ.ಆರ್.ನಗರಕ್ಕೆ ಹೋಗುವುದಾಗಿ ಪತ್ನಿಗೆ ಹೇಳಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಕುಮಾರಸ್ವಾಮಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟಿದ್ದಾರೆ. ಆದರೆ, ಇಂದು ಆ ಮೂವರ ಮೃತ ದೇಹಗಳು ಕೆ.ಆರ್.ಎಸ್ ನಾರ್ಥ್ ಬ್ಯಾಂಕ್ನ ವಿಸಿ ನಾಲೆಯಲ್ಲಿ ಕಾರಿನ ಸಮೇತ ಪತ್ತೆಯಾಗಿದ್ದು, ಇದು ಅಪಘಾತವೋ ಅಥವ ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ.
ಏಪ್ರಿಲ್ 17 ರ ರಾತ್ರಿ 8 ಗಂಟೆ ವೇಳೆ ಕುಮಾರಸ್ವಾಮಿಯವರು ತಮ್ಮ ತಂದೆಗೆ ಪೋನ್ ಮಾಡಿ ತಾವು ಕೆ.ಆರ್.ಎಸ್ ಬಳಿ ಇದ್ದು ಊರಿಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಅದಾದ ಬಳಿಕ ಪೋನ್ ಸ್ವಿಚ್ ಆಫ್ ಆಗಿದೆ. ಈ ಬಳಿಕ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದರು. ಆದರೆ, ಇಂದು ನಾಲೆಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಿದಾಗ ಕಾರು ಪತ್ತೆಯಾಗಿದ್ದು, ಈ ವೇಳೆ ಮೂವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿವೆ.
ಕುಮಾರಸ್ವಾಮಿ ಅವರು ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಂತೆ. ಕೈ ತುಂಬಾ ಸಂಬಳ ಸಹ ಇತಂತೆ. ಆದರೆ, ಇತ್ತೀಚೆಗೆ ಆ ಕೆಲಸ ಬಿಟ್ಟು ಸ್ನೇಹಿತರ ಜೊತೆ ಬ್ಯುಸಿನೆಸ್ ಶುರುಮಾಡಿದ್ದರು. ಆದರೆ, ಶುರುವಾದ ಕೆಲ ದಿನ ಚೆನ್ನಾಗಿದ್ದ ಬ್ಯುಸಿನೆಸ್ ಬಳಿಕ ಲಾಸ್ ಆಗಿ ಕಂಪನಿ ಮುಚ್ಚಿದ್ದರಂತೆ. ಕುಮಾರಸ್ವಾಮಿ ಅವರು ನಾಪತ್ತೆಯಾದ ದಿನದಿಂದ ಅವರ ಸ್ನೇಹಿತರನ್ನು ವಿಚಾರಿಸಿದ್ರು, ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲವಂತೆ. ಇದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರಾ, ಅಪಘಾತವಾಗಿದಿಯಾ ಅಥವಾ ಯಾರಾದರು ಕೊಲೆ ಮಾಡಿದ್ದಾರಾ ಅಂತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯ: ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ
ಸದ್ಯ ಕೆ.ಆರ್. ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಈ ಮೂವರ ಸಾವು ನಿಗೂಡವಾಗಿದ್ದು, ಇದು ಆತ್ಮಹತ್ಯೆಯೋ, ಅಪಘಾತವೋ ಇಲ್ಲವೆ ಕೊಲೆಯಾ ಅಂತ ಪೊಲೀಸರ ತನಿಖೆ ಬಳಿಕ ತಿಳಿದುಬರಲಿದೆ.
Published On - 3:58 pm, Tue, 29 April 25