ಕಬಡ್ಡಿ ಟೂರ್ನ್ಮೆಂಟ್ ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿತ: ಓರ್ವ ಸಾವು, 13 ಜನರಿಗೆ ಗಾಯ
ಮಂಡ್ಯದಲ್ಲಿ ಕಬ್ಬಡ್ಡಿ ಪಂದ್ಯಾಟದ ವೇಲೆ ವೀಕ್ಷಕರ ಗ್ಯಾಲರಿ ಕುಸಿದುಬಿದ್ದಿದ್ದು, ಈ ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಇನ್ನು 13 ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಏಕಾಏಕಿ ವೀಕ್ಷಕರ ಗ್ಯಾಲರಿ ಕುಸಿದುಬೀಳಲು ಕಾರಣವೇನು? ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದೇನು? ಎನ್ನುವ ಮಾಹಿತಿ ಇಲ್ಲಿದೆ.

ಮಂಡ್ಯ, (ಏಪ್ರಿಲ್ 27): ಮಂಡ್ಯ (Mandya) ತಾಲ್ಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ (Mallanayakanakatte Village )ಕಬಡ್ಡಿ ಪಂದ್ಯದ (kabaddi tournament) ವೇಳೆ ಪ್ರೇಕ್ಷಕರ ಗ್ಯಾಲರಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 13 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಪಣ್ಣಚಾರಿ ಮೃತ ದುರ್ವೈವಿ. ಕಬಡ್ಡಿ ಪಂದ್ಯ ವೀಕ್ಷಿಸಲು ಸ್ಥಳದಲ್ಲಿ ಸಾಕಷ್ಟು ಜನ ನೆರೆದಿದ್ದರು. ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ವೀಕ್ಷಕರ ಗ್ಯಾಲರಿ ಕುಸಿದು ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶ್ರೀ ಭೈರವ ಕಪ್ ಹೆಸರಿನಲ್ಲಿ ಮೈಸೂರು ವಿಭಾಗ ಮಟ್ಟದ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ನಿನ್ನೆ ಮತ್ತು ಇಂದು ನಡೆಯಬೇಕಿದ್ದ ಪಂದ್ಯಾವಳಿ ನಡೆಯಬೇಕಿತ್ತು. ಆದ್ರೆ ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ: ಲಾರಿಗೆ ಕಾರು ಡಿಕ್ಕಿ: ಸ್ಥಳದಲ್ಲೇ ಮೂವರು ಸಾವು, ಮದ್ವೆ ಮನೆಯಲ್ಲಿ ಸೂತಕ
ಈ ಘಟನೆಗೆ ಮುಖ್ಯವಾಗಿ ಕಾರಣವಾಗಿದ್ದೆ ಕಡಿಮೆ ಸಾಮರ್ಥ್ಯದ ಕಬ್ಬಿಣ ಬಳಕೆ. ಸಾವಿರಾರು ಜನರು ಸೇರುವ ಜಾಗದಲ್ಲಿ ನೂರಾರು ಜನ ಕೂರುವ ಗ್ಯಾಲರಿ ಅಳವಡಿಕೆ ಮಾಡಲಾಗಿದೆ. ಒಂದು ಕಡಿಮೆ ಸಾಮರ್ಥ್ಯ ಕಬ್ಬಿಣ, ಇನ್ನೊಂದು ಸರಿಯಾದ ಇಂಟರ್ ಲಾಕ್ ಬಳಸದೆ ಇದದ್ದು. ಮತ್ತೊಂದು ಸಾಮರ್ಥ್ಯಕ್ಕಿಂತ ಹೆಚ್ಚು ವೀಕ್ಷಕರು ಕುಳಿತಿದ್ದರಿಂದ ಗ್ಯಾಲರಿ ಏಕಾಏಕಿ ಕುಸಿದು ಬಿದ್ದಿದೆ ಎನ್ನಲಾಗಿದೆ.
ಮಂಡ್ಯ ಮಿಮ್ಸ್ ಶವಾಗಾರಕ್ಕೆ ಸಚಿವ ಚಲುವರಾಯಸ್ವಾಮಿ, ಮಾಜಿ ಸಚಿವ ಪುಟ್ಟರಾಜು ಭೇಟಿ ನೀಡಿ ಮೃತ ಪಾಪಣ್ಣಚಾರಿ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರದಿಂದ ಮೃತ ವ್ಯಕ್ತಿ ಕುಟುಂಬಕ್ಕೆ ಪರಿಹಾರ ಕೊಡಿಸುವಂತೆ ಮಾಜಿ ಸಚಿವ ಪುಟ್ಟರಾಜು ಅವರು ಸಚಿವ ಸಚಿವ ಚಲುವರಾಯಸ್ವಾಮಿ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಚಲುವರಾಯಸ್ವಾಮಿ ಸಹ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ.
ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿ, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, 13 ಜನ ಗಾಯಗೊಂಡಿದ್ದಾರೆ. ಕಬಡ್ಡಿ ಪಂದ್ಯ ಆಯೋಜನೆಗೆ ಪೊಲೀಸರಿಂದ ಅನುಮತಿ ಪಡೆದಿದ್ದರು. ಆದ್ರೆ ಭದ್ರವಾಗಿ ಗ್ಯಾಲರಿ ಹಾಕಿರದ ಕಾರಣ ಅವಘಡ ನಡೆದಿದೆ. ಜಿಲ್ಲಾಡಳಿತ ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸುತ್ತದೆ. ಮೃತರ ಕುಟುಂಭಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡಸಲು ಸಿಎಂ ಜತೆ ಮಾತನಾಡುತ್ತೇನೆ ಎಂದು ಹೇಳಿದರು.
Published On - 12:10 pm, Sun, 27 April 25







