ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ; ಪುತ್ರನ ರಾಜಕೀಯ ಅಭಿಷೇಕಕ್ಕೆ ಅಡಿಪಾಯ ಹಾಕಿದರಾ?

ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್‌ ಅಂಬರೀಷ್ ಅವರನ್ನು ಕಣಕ್ಕಿಸಲು ಸುಮಲತಾ ಯೋಜನೆ ರೂಪಿಸುತ್ತಿದ್ದಾರೆ ಎಂಬ ಅನುಮಾನ ಈ ಹಿಂದೆಯೇ ಇತ್ತಾದರೂ ಈಗ ಅದು ಮತ್ತಷ್ಟು ಬಲವಾಗಿದೆ.

ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ; ಪುತ್ರನ ರಾಜಕೀಯ ಅಭಿಷೇಕಕ್ಕೆ ಅಡಿಪಾಯ ಹಾಕಿದರಾ?
ಸುಮಲತಾ ಮತ್ತು ಅಭಿಷೇಕ್ ಅಂಬರೀಷ್ (ಸಾಂದರ್ಭಿಕ ಚಿತ್ರ)
Follow us
| Updated By: ಸಾಧು ಶ್ರೀನಾಥ್​

Updated on:Sep 01, 2021 | 9:06 AM

ಮಂಡ್ಯ: ಸಂಸದೆ‌ ಸುಮಲತಾ ಅಂಬರೀಷ್ ಇಂದು ಮಂಡ್ಯ ಪ್ರವಾಸ ಕೈಗೊಂಡಿದ್ದು, ಮಂಡ್ಯ ತಾಲೂಕಿನ ಹನಕೆರೆ ಗ್ರಾಮದ ಬಳಿ ಮನೆ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಗುದ್ದಲಿ ಪೂಜೆ ಮಾಡಲಿದ್ದು, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಮಂಡ್ಯದಲ್ಲೇ ಮನೆ ನಿರ್ಮಾಣಕ್ಕೆ ಸಂಸದೆ ಮುಂದಾಗಿದ್ದಾರೆ. ಸುಮಲತಾ ನಿವಾಸದ ಗುದ್ದಲಿ ಪೂಜೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಚರ್ಚೆ ಶುರುವಾಗಿದ್ದು, ಸ್ವಂತ ಮನೆ ನಿರ್ಮಾಣದ ಮೂಲಕ ಪುತ್ರ ಅಭಿಷೇಕ್​ ಅಂಬರೀಷ್ ಅವರ ರಾಜಕೀಯ ಪ್ರವೇಶಕ್ಕೆ ಸಿದ್ಧತೆಯೂ ಆರಂಭವಾಯ್ತಾ ಎಂಬ ಕುತೂಹಲ ಮೂಡಿದೆ.

ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸುಮಲತಾ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ತನ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡರುವ ಹನಕೆರೆ ಶಶಿ ಎಂಬುವರಿಂದ ಸದರಿ ಜಾಗವನ್ನು ಖರೀದಿ ಮಾಡಿದ್ದಾರೆ. ಮುಕ್ಕಾಲು ಎಕರೆ ಜಾಗದಲ್ಲಿ ಮನೆ ನಿರ್ಮಿಸಲು ಇಂದು ಗುದ್ದಲಿ ಪೂಜೆ ನೆರವೇರಲಿದ್ದು, 6-7 ತಿಂಗಳಲ್ಲಿ ಮನೆ ನಿರ್ಮಿಸಿ ಅಲ್ಲಿಂದಲೇ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸುವ ಚಿಂತನೆ ಇದೆ ಎಂಬ ಮಾತುಗಳು ಕೆಳಿಬಂದಿವೆ.

ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್‌ ಅಂಬರೀಷ್ ಅವರನ್ನು ಕಣಕ್ಕಿಸಲು ಸುಮಲತಾ ಯೋಜನೆ ರೂಪಿಸುತ್ತಿದ್ದಾರೆ ಎಂಬ ಅನುಮಾನ ಈ ಹಿಂದೆಯೇ ಇತ್ತಾದರೂ ಈಗ ಅದು ಮತ್ತಷ್ಟು ಬಲವಾಗಿದೆ. ರೆಬೆಲ್ ಸ್ಟಾರ್ ಅಂಬರೀಷ್ ಹುಟ್ಟೂರು ಕೂಡ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮವಾಗಿದ್ದು, ತಂದೆಯ ಹುಟ್ಟೂರು ಕ್ಷೇತ್ರದಿಂದಲೇ ಮಗನ ಸ್ಪರ್ಧೆಗೆ ಸಿದ್ಧತೆ ಶುರುವಾಗಿದೆ. ಮಗನ ರಾಜಕೀಯ ಭವಿಷ್ಯಕ್ಕೆ ಸಹಕಾರಿಯಾಗಲೆಂದೇ ಹನಕೆರೆ ಬಳಿ ಸ್ವಂತ ಮನೆ ನಿರ್ಮಾಣ ಮಾಡಲಾಗುತ್ತಿದೆ ಎಂಬ ಗುಮಾನಿ ಇದೆ.

ಮಂಡ್ಯ ನಗರದಲ್ಲಿ ಈಗಾಗಲೇ ಬಾಡಿಗೆ ಮನೆ ಮಾಡಿರೊ ಸಂಸದೆ ಸುಮಲತಾ ಅಂಬರೀಷ್, ಈಗ ಸ್ವಂತ ಮನೆಯನ್ನ ಹನಕೆರೆಯಲ್ಲಿ ನಿರ್ಮಿಸಲಿದ್ದಾರೆ. ಜಿಲ್ಲಾಕೇಂದ್ರ ಮಂಡ್ಯದಲ್ಲಿ ಮನೆ ನಿರ್ಮಾಣ ಮಾಡದೆ ಮಂಡ್ಯ ಹಾಗೂ ಮದ್ದೂರು ತಾಲೂಕುಗಳ ಮಧ್ಯೆ ಇರುವ ಹನಕೆರೆ ಗ್ರಾಮವನ್ನು ಆರಿಸಿಕೊಂಡಿರುವುದು ಸದ್ಯ ಮಂಡ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ಮದ್ದೂರಿಗೆ ಭೇಟಿ ನೀಡಿದ್ದ ಅಭಿಷೇಕ್ ಅಂಬರೀಷ್​ ರಾಜಕೀಯ ಪ್ರವೇಶದ ಬಗ್ಗೆ ಪರೋಕ್ಷವಾಗಿ ಮಾತನಾಡಿ ಗಮನ ಸೆಳೆದಿದ್ದರು. ಜನ ಬಯಸಿದಲ್ಲಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಪರೋಕ್ಷವಾಗಿ ಹೇಳಿದ್ದ ಅಭಿಷೇಕ್ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಮದ್ದೂರಿಗೆ ಹತ್ತಿರ ಇರುವ ಹನಕೆರೆ ಗ್ರಾಮದ ಬಳಿಯೇ ಮನೆ ನಿರ್ಮಿಸಲು ಸುಮಲತಾ ಮುಂದಾಗಿದ್ದಾರಾ ಎನ್ನುವುದು ಸದ್ಯದ ಪ್ರಶ್ನೆ. ಸಂಸದೆಯ ಮನೆ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಇತ್ತ ಚುನಾವಣೆ ಸಮಯದಲ್ಲಿ ನಾನು ಮಂಡ್ಯದಲ್ಲೇ ಮನೆ ಮಾಡುತ್ತೇನೆ ಇಲ್ಲೇ ಇರುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಸಹ ಹೇಳಿದ್ದರು. ಆದರೆ, ಇದೀಗ ಕ್ಷೇತ್ರದಿಂದಲೇ ನಿಖಿಲ್ ದೂರವಾಗಿದ್ದಾರೆ. ಈ ಬೆಳವಣಿಗೆಗಳ ನಡುವೆ ಸುಮಲತಾರ ಮನೆ ನಿರ್ಮಾಣ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಸುಮಲತಾ​ ಬರ್ತ್​ಡೇ ಪಾರ್ಟಿಯಲ್ಲಿ ಯಶ್​, ಸುಧಾಕರ್​, ದರ್ಶನ್​; ಇಲ್ಲಿವೆ ಕಲರ್​ಫುಲ್​ ಫೋಟೋಗಳು 

ಅಂಬರೀಷ್​-ಸುಮಲತಾ ಹಾದಿಯಲ್ಲೇ ನಡೆಯಲಿದ್ದಾರಾ ಅಭಿಷೇಕ್​? ಚುನಾವಣೆಗೆ ಸ್ಪರ್ಧೆ ಮಾಡುವ ಸೂಚನೆ ನೀಡಿದ ಅಂಬಿ ಕುಡಿ

(Sumalatha Ambareesh to build new house in Mandya creates lot of questions in Politics)

Published On - 9:04 am, Wed, 1 September 21