ಬೆಸಗರಹಳ್ಳಿ: ಮಗನ ಜೊತೆ ಸೇರಿ ವಿಕಲಚೇತನ ಗಂಡನ ಕಥೆ ಮುಗಿಸಿದ ಪತ್ನಿ, ಅಂಥಾ ಕಾರಣವೇನಿತ್ತು?

| Updated By: ಸಾಧು ಶ್ರೀನಾಥ್​

Updated on: Oct 20, 2023 | 7:11 PM

ಉಮೇಶ್ ಹಾಗೂ ಸವಿತಾ ಇಬ್ಬರಿಗೂ ಕಳೆದ ಹಲವು ವರ್ಷಗಳ ಹಿಂದೆಯೇ ಮದುವೆ ಮಾಡಲಾಗಿತ್ತು. ದಂಪತಿಗೆ ಶಶಾಂಕ್ ಹಾಗೂ ಸೌಜನ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗ ಬೆಂಗಳೂರಿನಲ್ಲಿ ಬಾರೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಆರು ತಿಂಗಳಿಂದ ಮಗನ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಪತ್ನಿ ಸವಿತಾ, ನಿನ್ನೆ ಪಿತೃಪಕ್ಷ ಹಬ್ಬಕ್ಕೆಂದು ಗಂಡನ ಮನೆಗೆ ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದಳು.

ಬೆಸಗರಹಳ್ಳಿ: ಮಗನ ಜೊತೆ ಸೇರಿ ವಿಕಲಚೇತನ ಗಂಡನ ಕಥೆ ಮುಗಿಸಿದ ಪತ್ನಿ, ಅಂಥಾ ಕಾರಣವೇನಿತ್ತು?
ಬೆಸಗರಹಳ್ಳಿ: ಮಗನ ಜೊತೆ ಸೇರಿ ವಿಕಲಚೇತನ ಗಂಡನ ಕಥೆ ಮುಗಿಸಿದ ಪತ್ನಿ
Follow us on

ಆತ ಹುಟ್ಟುತ್ತಲೇ ವಿಕಲಚೇತನವಾಗಿದ್ದ. ಬಲಭಾಗದ ದೇಹ ಸರಿಯಾಗಿ ಸ್ವಾಧೀನ ವಿಲ್ಲದೆ ಇದ್ದರೂ ತಾನಾಯ್ತು ತನ್ನ ಪಾಡಾಯ್ತು ಎಂಬಂತೆ ಕೆಲಸ ಮಾಡಿಕೊಂಡಿದ್ದ. ಎಲ್ಲರಿಗೂ ಆಸೆ ಇರುವಂತೆ ಈತನ ಹೆತ್ತವರಿಗೂ ಒಂದು ಆಸೆ ಇತ್ತು. ಮಗನಿಗೆ ಮದುವೆ ಮಾಡಬೇಕು ಅದರಲ್ಲೂ ಬಡ ಕುಟುಂಬದ ಹೆಣ್ಣು ಮಗಳನ್ನ ತಂದು ಮದುವೆ ಮಾಡಿಕೊಂಡರೆ ತನ್ನ ಮಗನಿಗೂ ಒಂದು ಆಸರೆಯಾದಂತಾಗುತ್ತದೆ. ಆಕೆಗೂ ಒಂದು ಬದುಕು ಸಿಗಲಿದೆ ಎಂಬ ಉದ್ದೇಶದಿಂದ ಹಲವು ವರ್ಷಗಳ ಹಿಂದೆಯೇ ಮಗನಿಗೆ ಮದುವೆ ಮಾಡಿದ್ದರು. ಆದರೆ ಆತನಿಗೆ ಕೊನೆವರೆಗೂ ಜೊತೆಯಾಗಿರಬೇಕಾದ ಪತ್ನಿಯೇ ತನ್ನ ಮಗನ ಜೊತೆ ಸೇರಿ ಕಟ್ಟಿಕೊಂಡ ಪತಿಯನ್ನ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹೌದು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಾಪುರದೊಡ್ಡಿ ಗ್ರಾಮದಲ್ಲಿ ಈ ಕೊಲೆ ನಡೆದಿದ್ದು ಉಮೇಶ್ (46) ಎಂಬಾತನೇ ಪತ್ನಿಯಿಂದ ಕೊಲೆಯಾಗಿರೊ ದುರ್ದೈವಿ (disabled husband). ಈತನ ಪತ್ನಿ (wife) ಸವಿತಾ(43) ಹಾಗೂ ಮಗ ಶಶಾಂಕ್(22) ಇಬ್ಬರೂ ಸೇರಿ ನಿನ್ನೆ ಗುರುವಾರ ರಾತ್ರಿ ಉಮೇಶ್ ನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿ, ಹತ್ಯೆ (murder) ಮಾಡಿದ್ದಾರೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಉಮೇಶ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಅಂದಹಾಗೆ ಉಮೇಶ್ ಹಾಗೂ ಸವಿತಾ ಇಬ್ಬರಿಗೂ ಕಳೆದ ಹಲವು ವರ್ಷಗಳ ಹಿಂದೆಯೇ ಮದುವೆ ಮಾಡಲಾಗಿತ್ತು. ದಂಪತಿಗೆ ಶಶಾಂಕ್ ಹಾಗೂ ಸೌಜನ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗಳು ಸೌಜನ್ಯಳಿಗೆ ಮದುವೆಯಾಗಿದ್ದು ಆಕೆ ಗಂಡನ ಮನೆಯಲ್ಲಿದ್ದಾಳೆ. ಇನ್ನ ಮಗ ಬೆಂಗಳೂರಿನಲ್ಲಿ ಬಾರೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ಆರು ತಿಂಗಳಿಂದ ಮಗನ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದ ಪತ್ನಿ ಸವಿತಾ ನಿನ್ನೆ ಪಿತೃಪಕ್ಷ ಹಬ್ಬಕ್ಕೆಂದು ಚಾಪುರದೊಡ್ಡಿ ಗ್ರಾಮಕ್ಕೆ ಬಂದಿದ್ದಳು.

ಈ ವೇಳೆ ತನ್ನನ್ನ ಬಿಟ್ಟು ಬೆಂಗಳೂರಿಗೆ ಹೋದ ನೀನು ಈಗ ಮತ್ಯಾಕೆ ಬಂದಿದ್ದೀಯಾ? ನಿನ್ನ ಮನೆಗೆ ಸೇರಿಸಲ್ಲ ಹೋಗು ಎಂದು ಪತ್ನಿ ಸವಿತಾಳಿಗೆ ಗಂಡ ಉಮೇಶ್ ರೇಗಿದ್ದ. ಇದೇ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು. ಆ ವೇಳೆ ಬೆಂಗಳೂರಿನಲ್ಲಿದ್ದ ತನ್ನ ಮಗ ಶಶಾಂಕ್ ಗೆ ಫೋನ್ ಮಾಡಿದ ಸವಿತಾ ಮಗನಿಗೆ ಊರಿನಲ್ಲಿ ನಡೆದ ವಿಚಾರ ತಿಳಿಸಿ ಊರಿಗೆ ಬರುವಂತೆ ಹೇಳಿದ್ದಳು.

ಅಮ್ಮನ ಮಾತು ಕೇಳಿ ರಾತ್ರಿ ವೇಳೆಗೆ ಊರಿಗೆ ಬಂದ ಶಶಾಂಕ್ ಹಾಗೂ ಅಮ್ಮ ಸವಿತಾ ಇಬ್ಬರೂ ಸೇರಿ ಉಮೇಶ್ ಜೊತೆಗೆ ಜಗಳ ನಡೆಸಿದ್ದಾರೆ. ಅದು ವಿಕೋಪಕ್ಕೆ ತಿರುಗಿ ಮರದ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿರೊ ಸವಿತಾ ಹಾಗೂ ಆಕೆಯ ಮಗ ಶಶಾಂಕ್ ಇಬ್ಬರೂ ಸೇರಿ ಉಮೇಶನನ್ನ ಹೊಡೆದು ಕೊಂದು ಹಾಕಿದ್ದರು.

ಅಂದಹಾಗೆ ಹುಟ್ಟಿನಿಂದಲೇ ಬಲ ಭಾಗದ ಕೈ ಕಾಲು ಸ್ವಾಧೀನವಿಲ್ಲದ ವಿಕಲಚೇತನವಾಗಿದ್ದ ಉಮೇಶ್. ಬೆಳೆದು ದೊಡ್ಡವನಾದಂತೆ ಎಲ್ಲರಿಗೂ ಅನಿಸಿದಂತೆ ತಮ್ಮ ಮಗನಿಗೆ ಯಾವುದಾದರೂ ಬಡವರ ಮನೆಯ ಹೆಣ್ಣನ್ನು ತಂದು ಮದುವೆ ಮಾಡಬೇಕು, ಬಡವರ ಮಕ್ಕಳಿಗೆ ಕಷ್ಟಸುಖ ಚೆನ್ನಾಗಿ ಗೊತ್ತಿರುತ್ತದೆ. ತನ್ನ ಮಗನಿಗೂ ಆಕೆ ಆಸರೆಯಾಗಿ ನಿಲ್ಲುತ್ತಾಳೆ ಎಂದೇ ಭಾವಿಸಿದ್ದರು.

ಅದರಂತೆ ಪಕ್ಕದ ಊರಿನಲ್ಲಿ ಇನ್ನೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸವಿತಾ ಎಂಬಾಕೆಯನ್ನ ತಂದು ಮದುವೆ ಮಾಡಿಕೊಂಡಿದ್ದರು. ಆದರೆ ಮದುವೆಯಾದ ನಂತರ ಉಮೇಶ್ ಜೊತೆ ಸವಿತಾ ಪದೇ ಪದೇ ಜಗಳ ಆಡುತ್ತಿದ್ದಳು. ಮಗಳನ್ನ ಮದುವೆ ಮಾಡಿಕೊಟ್ಟ ನಂತರ ಅದು ವಿಕೋಪಕ್ಕೂ ಕೂಡ ತಿರುಗಿತ್ತು. ಇನ್ನು ಆರು ತಿಂಗಳ ಹಿಂದೆ ಸಹ ಉಮೇಶ್ ಮೇಲೆ ಸಮತಾ ಹಲ್ಲೆ ಮಾಡಿದ್ದಳು. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಉಮೇಶ್ ಗೆ ನಾಲ್ಕು ಎಕರೆ ಜಮೀನು ಇದ್ದು, ಅದರ ಉಸ್ತುವಾರಿಯನ್ನ ಸಹೋದರಿಯರು ನೋಡಿಕೊಳ್ಳುತ್ತಿದ್ದರು. ಅಲ್ಲದೆ ತನಗೆ ಬರುತ್ತಿದ್ದ ಪಿಂಚಣಿಯನ್ನ ಸಹಾ ತನ್ನ ಸಹೋದರಿಯರಿಗೆ ಕೊಡುತ್ತಿದ್ದ ಎಂಬ ಕೋಪ ಉಮೇಶ್ ಮೇಲಿತ್ತು. ಹೀಗಾಗಿ ಮನೆ ಬಿಟ್ಟು ಸವಿತಾ ಬೆಂಗಳೂರು ಸೇರಿದ್ದಳು.

ಇದೇ ಭಾನುವಾರ ಪಿತೃಪಕ್ಷ ಮಾಡಲು ಉಮೇಶನ ಸಹೋದರಿಯರು ಎಲ್ಲ ರೀತಿಯ ತಿಂಡಿ ತಿನಿಸನ್ನ ಮಾಡಿಕೊಂಡಿದ್ದರು. ಆದರೆ ನೆನ್ನೆ ಸಂಜೆ ಬೆಂಗಳೂರಿನಿಂದ ಮನೆಗೆ ಬಂದಿದ್ದ ಸವಿತಾ, ಉಮೇಶ್ ಜೊತೆ ಜಗಳ ತೆಗೆದು ಪತಿಯ ಕಥೆಯನ್ನೇ ಮುಗಿಸಿದ್ದಾರೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ( Besagarahalli of Maddur taluk in Mandya district) ಪ್ರಕರಣ ದಾಖಲಾಗಿದ್ದು, ಕೊಲೆ ನಂತರ ತಲೆಮರೆಸಿಕೊಂಡಿದ್ದ ಅಮ್ಮ-ಮಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Fri, 20 October 23