
ಮಂಡ್ಯ, ಸೆಪ್ಟೆಂಬರ್ 13: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಘಟನೆ ಕಳೆದ ವರ್ಷ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿತ್ತು. ಘಟನೆ ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಘಟನೆ ನಡೆದು ವರ್ಷದ ಬಳಿಕ ಪ್ರತಿಭಟನೆಯಲ್ಲಿ ಭಾಗಿಯಾದ 23 ಮುಖಂಡರಿಗೆ ಇದೀಗ ಸಮನ್ಸ್ ಜಾರಿಮಾಡಲಾಗಿದೆ. ಕಲ್ಲು ತೂರಿದ ಕಿಡಿಗೇಡಿಗಳ ಜೊತೆಗೆ ಘಟನೆ ಖಂಡಿಸಿದ ಮುಖಂಡರ ಮೇಲೂ ಕೇಸು ದಾಖಲಿಸಿರೋದೀಗ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಅಂದು ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಆದರೀಗ ಕಲ್ಲು ತೂರಿದವರನ್ನ ಬಿಟ್ಟು ನಮಗೆ ಸಮನ್ಸ್ ನೀಡಿದ್ದಾರೆ. ಈ ಮೂಲಕ ಹಿಂದೂಗಳನ್ನು ಕುಗ್ಗಿಸುವ ಪ್ರಯತ್ನ ಮಾಡ್ತಿದ್ದಾರೆ. ಹಿಂದೂ ಹಬ್ಬಗಳ ಆಚರಣೆಗೆ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡುತ್ತಿದ್ದು, ಕಳೆದ ವರ್ಷ ನಡೆದ ಗಲಾಟೆ ಸಂಬಂಧ ಈ ವರ್ಷ ಸಮನ್ಸ್ ಜಾರಿ ಮಾಡಲಾಗಿದೆ ಎಂದು ಮದ್ದೂರಿನ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಣಪತಿ ಪ್ರತಿಷ್ಠಾಪನೆಗೆ ಕಠಿಣ ಷರತ್ತುಗಳ ಹೇರುವ ಜೊತೆಗೆ, ಅನುಮತಿ ನೀಡಲು ಯುವಕರನ್ನು ಅಲೆದಾಡಿಸುತ್ತಿದ್ದಾರೆ. ಮಸೀದಿ ಮುಂದೆ ಗಣಪತಿ ಮೆರವಣಿಗೆ ಹೋಗದಂತೆ ಪೋಲೀಸರಿಂದಲೇ ನಿರ್ಬಂಧವಿದ್ದು, ಮತಬ್ಯಾಂಕ್ಗಾಗಿ ಒಂದೇ ಕೋಮಿನ ಓಲೈಕೆ ನಡೆಯುತ್ತಿದೆ. ಮುಸ್ಲಿಮರು ಹಬ್ಬ ಆಚರಿಸುವಾಗ ಯಾವುದೇ ನಿರ್ಬಂಧಗಳಿರುವುದಿಲ್ಲ. ಅವರ ಮೆರವಣಿಗೆ ನಮ್ಮ ದೇವಾಲಯಗಳ ಮುಂದೆ ಸಾಗಿದ್ರು ಏನು ತೊಂದರೆ ಆಗಲ್ಲ. ಆದರೆ ಹಿಂದೂಗಳು ಹಬ್ಬ ಆಚರಿಸುವಾಗ ಎಲ್ಲಿಲ್ಲದ ಷರತ್ತು ಹಾಕುತ್ತಿದ್ದಾರೆ ಎಂದವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಚಲೋ ಪಾದಯಾತ್ರೆ: ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್!
2025ರ ಸೆಪ್ಟೆಂಬರ್ 7ರ ರಾತ್ರಿ ಮಂಡ್ಯ ಜಿಲ್ಲೆಯ ಮದ್ದೂರು ಟೌನ್ನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ರಾಮ್ ರಹೀಮ್ ನಗರದಲ್ಲಿ ಕಲ್ಲು ತೂರಾಟ ನಡೆದು, ಎರಡು ಗುಂಪುಗಳ ನಡುವೆ ಕೋಮು ಗಲಾಟೆ ಹಾಗೂ ಉದ್ವಿಗ್ನತೆ ಉಂಟಾಗಿತ್ತು. ಪಗ್ರಕರಣ ಸಂಬಂಧ 21 ಜನರನ್ನು ಬಂಧಿಸಿದ್ದ ಪೊಲೀಸರು, ಬಂಧಿತ ಆರೋಪಿಗಳ ವಿರುದ್ಧ BNS ಕಾಯ್ದೆ 189(2), 189(4), 121(2), 132ರ ಹಾಗೂ 190ರ ಅಡಿ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ಲಾನ್ ಮಾಡಿಯೇ ಗಣೇಶ ಮೆರವಣಿಗೆ ಮಸೀದಿ ಬಳಿ ಬರುತ್ತಿದ್ದಂತೆಯೇ ಕಲ್ಲು ತೂರಾಟ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿದ್ದರೆ, ಅಂದಿನ ಗೃಹ ಸಚಿವ ಪರಮೇಶ್ವರ್ ಸಹ ಇದೊಂದು ಪೂರ್ಣ ನಿಯೋಜಿತ ಕೃತ್ಯ ಎಂದು ಹೇಳಿದ್ದರು ಎಂಬುದಿಲ್ಲಿ ಗಮನಾರ್ಹ ವಿಚಾರವಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.