AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಸ್ಕಿ ಉಪಚುನಾವಣೆ: ಬಿಜೆಪಿ ಪರ ಹಣ ಹಂಚಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ವಿಡಿಯೊ ವೈರಲ್

ನಂದೀಶ್ ರೆಡ್ಡಿ ಜನರಿಂದ ತುಸು ದೂರ ತೆರಳುತ್ತಿದ್ದಂತೆ ಮಾತನಾಡಿರುವ ಓರ್ವ ಕಾಂಗ್ರೆಸ್​ ಬೆಂಬಲಿಗ, ‘ಬಿಜೆಪಿ ದುಡ್ಡು ಕಾಂಗ್ರೆಸ್​ಗೆ ವೋಟು’ ಎಂದು ವ್ಯಂಗ್ಯವಾಡಿದ್ದಾನೆ. ಮಸ್ಕಿಯಲ್ಲಿ ಭಾನುವಾರ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿಯೂ ಬಿಜೆಪಿ ನೋಟು, ಕಾಂಗ್ರೆಸ್​ಗೆ ವೋಟು ಘೋಷಣೆ ಪ್ರತಿಧ್ವನಿಸಿತ್ತು.

ಮಸ್ಕಿ ಉಪಚುನಾವಣೆ: ಬಿಜೆಪಿ ಪರ ಹಣ ಹಂಚಿದ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ವಿಡಿಯೊ ವೈರಲ್
ಹಣ ಹಂಚುತ್ತಿರುವ ನಂದೀಶ್ ರೆಡ್ಡಿ
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 12, 2021 | 9:59 PM

Share

ರಾಯಚೂರು: ಈ ಬಾರಿಯ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಬಿಜೆಪಿ ತನ್ನ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಮಸ್ಕಿ ಕ್ಷೇತ್ರದ ವಿವಿಧೆಡೆ ಚುರುಕಾಗಿ ಓಡಾಡುತ್ತಾ ಜನರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

ಈ ನಡುವೆ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರ ಮಸ್ಕಿ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಪ್ರಚಾರ ನಡೆಸಿರುವ ಬಿಜೆಪಿ ನಾಯಕ, ಬಿಎಂಟಿಸಿ ಅಧ್ಯಕ್ಷ ಅಧ್ಯಕ್ಷ ನಂದೀಶ್​ ರೆಡ್ಡಿ ಮತಕ್ಕಾಗಿ ಹಣ ಹಂಚಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ‘ಎಲ್ಲರೂ ಸೇರಿ ತಗೊಬೇಕು’ ಎಂದು ಹೇಳುವ ನಂದೀಶ್ ರೆಡ್ಡಿ ಒಂದಿಷ್ಟು ಹಣವನ್ನು ಗುಂಪಿನಲ್ಲಿದ್ದವರಿಗೆ ಕೊಡುತ್ತಾರೆ.

ರಾಯಚೂರು ಜಿಲ್ಲೆಯಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ನಂದೀಶ್​ ರೆಡ್ಡಿ ತಲಾ ₹ 1 ಸಾವಿರ ನೀಡುವುದು ಸೆರೆಯಾಗಿದೆ. ಮತ ನೀಡುವಂತೆ ಕೋರಿ ನಂದೀಶ್ ರೆಡ್ಡಿ ಈ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.

ನಂದೀಶ್ ರೆಡ್ಡಿ ಜನರಿಂದ ತುಸು ದೂರ ತೆರಳುತ್ತಿದ್ದಂತೆ ಮಾತನಾಡಿರುವ ಓರ್ವ ಕಾಂಗ್ರೆಸ್​ ಬೆಂಬಲಿಗ, ‘ಬಿಜೆಪಿ ದುಡ್ಡು ಕಾಂಗ್ರೆಸ್​ಗೆ ವೋಟು’ ಎಂದು ವ್ಯಂಗ್ಯವಾಡಿದ್ದಾನೆ. ಮಾತ್ರವಲ್ಲ, ಕೊಟ್ರೆ ಇಸ್ಕೊಳ್ರೀ ಎಂದೂ ಪ್ರಚೋದಿಸಿದ್ದಾನೆ.

ಕಾಂಗ್ರೆಸ್ ಸಮಾವೇಶದಲ್ಲಿ ಪ್ರತಿಧ್ವನಿಸಿದ್ದ ‘ನೋಟು’ ಮಸ್ಕಿಯಲ್ಲಿ ಭಾನುವಾರ ನಡೆದಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಇತರ ನಾಯಕರು ‘ಬಿಜೆಪಿಯವರು ದುಡ್ಡು ಕೊಟ್ರೆ ಇಸ್ಕೊಳಿ. ವೋಟ್ ಮಾತ್ರ ಕಾಂಗ್ರೆಸ್​ಗೆ ಹಾಕಿ. ಬಿಜೆಪಿ ನೋಟು-ಕಾಂಗ್ರೆಸ್​ಗೆ ವೋಟು’ ಎಂದು ಕರೆ ನೀಡಿದ್ದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಏಪ್ರಿಲ್ 17ರಂದು ನಡೆಯಲಿದೆ. ಬಿಜೆಪಿ ಪರ ಪ್ರತಾಪಗೌಡ ಪಾಟೀಲ ಮತ್ತು ಕಾಂಗ್ರೆಸ್​ನ ಬಸನಗೌಡ ನಡುವೆ ಜಿದ್ದಾಜಿದ್ದಿ ಪೈಪೋಟಿ ನಡೆದಿದೆ. ಮೇ 2ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ.

(Maski By Election BJP Leader Nandish Reddy Caught on Camera Distributing Money)

ಇದನ್ನೂ ಓದಿ: ನರೇಂದ್ರ ಮೋದಿ ಗಡ್ಡ ಬಿಟ್ಟರೆ ರವೀಂದ್ರನಾಥ್​ ಠಾಗೋರ್​ ಆಗುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ

ಇದನ್ನೂ ಓದಿ: ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ 50 ಕೋಟಿ ಖರ್ಚು: ಸಿದ್ದರಾಮಯ್ಯ ಗಂಭೀರ ಆರೋಪ

Published On - 9:55 pm, Mon, 12 April 21