ಸಂಸತ್ತಿನಲ್ಲಿ ಧ್ವನಿ ಎತ್ತಿದ ವಿಡಿಯೋ ಹಂಚಿಕೊಂಡು, ಕಾವೇರಿ ಹೋರಾಟಕ್ಕೆ ಬೆಂಬಲಿಸಿದ ಸುಮಲತಾ ವಿಡಿಯೋನಲ್ಲೇನಿದೆ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 29, 2023 | 3:23 PM

ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಆಡಿದ ನನ್ನ ಮಾತುಗಳಲ್ಲಿ ಇಂದಿಗೂ ಏನೇನೂ ಬದಲಾವಣೆ ಆಗಿಲ್ಲ. ಇವತ್ತೂ ನನ್ನ ರೈತರಿಗೆ ನೀರಿನ ವಿಚಾರದಲ್ಲಿ ಅನ್ಯಾಯ ಆಗುತ್ತಲೇ ಇದೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಎರಡೂ ರಾಜ್ಯಗಳಿಗೆ ಸಮನಾದ ನ್ಯಾಯ ಸಲ್ಲಬೇಕಿತ್ತು. ಅದು ಆಗುತ್ತಿಲ್ಲ. ಪದೇ ಪದೇ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎಂದು ಸಂಸದೆ ಸುಮಲತಾ ಅಂಬರೀಶ್​​ ಹೇಳಿದರು.

ಸಂಸತ್ತಿನಲ್ಲಿ ಧ್ವನಿ ಎತ್ತಿದ ವಿಡಿಯೋ ಹಂಚಿಕೊಂಡು, ಕಾವೇರಿ ಹೋರಾಟಕ್ಕೆ ಬೆಂಬಲಿಸಿದ ಸುಮಲತಾ ವಿಡಿಯೋನಲ್ಲೇನಿದೆ?
ಸಂಸದೆ ಸುಮಲತಾ ಅಂಬರೀಶ್​
Follow us on

ಬೆಂಗಳೂರು ಸೆ.29: ತಮಿಳುನಾಡಿಗೆ ಕಾವೇರಿ ನೀರು (Cauvery Water Dispute) ಹರಿಸುತ್ತಿರುವ ವಿಚಾರವಾಗಿ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕನ್ನಡಪರ ಸಂಘನೆಗಳು, ರೈತರು, ಕನ್ನಡ ಚಲನಚಿತ್ರ ನಟರು ಮತ್ತು ವಿರೋಧ ಪಕ್ಷಗಳು ಪ್ರತಿಭಟನೆ ಮಾಡಿದ್ದು, ಕರ್ನಾಟಕ ಬಂದ್ (Karnataka Bandh)​​ ನಡೆಸಿವೆ. ಕಾವೇರಿ (Cauvery) ವಿಚಾರ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh)​​ ತುಟಿ ಪಿಟಿಕ್​ ಅನ್ನುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅಲ್ಲದೇ 28 ಸಂಸದರು ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ಮಾತನಾಡಬೇಕು, ಈ ಬಗ್ಗೆ ಧ್ವನಿ ಎತ್ತಬೇಕೆಂದು ಅಣುಕು ಶವಯಾತ್ರೆ ಮಾಡುವ ಮೂಲಕ ರಾಜ್ಯಾದ್ಯಂತ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ವಿಚಾರವಾಗಿ ಸಂಸದರು ಮಾತನಾಡುತ್ತಿಲ್ಲ ಎಂಬ ಆರೋಪದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್​​ ಫೇಸ್​​ಬುಕ್​​ನಲ್ಲಿ ಫೋಸ್ಟ್​​ ಮಾಡಿದ್ದು, ತಾವು ಸಂಸದೆಯಾಗಿ ಮೊದಲ ಬಾರಿಗೆ ಅಧಿವೇಶನದಲ್ಲಿ ಭಾಗಿಯಾಗಿದ್ದ ಸಮಯದಲ್ಲಿ ಕಾವೇರಿ ವಿಚಾರವಾಗಿ ಮಾತನಾಡಿದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ “ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡಿಗೆ ಸಮಾನ ನ್ಯಾಯ ದೊರೆಯಬೇಕು. ಸಾಕಷ್ಟು ವರ್ಷಗಳಿಂದ ಎರಡು ರಾಜ್ಯಗಳ ನಡುವೆ ಕಾವೇರಿ ನದಿಗಾಗಿ ಸಂಘರ್ಷ ನಡೆಯುತ್ತಿದೆ. ಇದನ್ನು ಬಗೆಹರಿಸಿ “ಸಮಾನ ನ್ಯಾಯ” ಒದಗಿಸಬೇಕು” ಎಂದು ಸಂಸತ್ತಿನಲ್ಲಿ ಒತ್ತಿ ಹೇಳಿದರು.

ಅಂದು ಸುಮಲತಾ ಅಂಬರೀಶ್​ ಅವರು ಕಾವೇರಿ ವಿಚಾರವಾಗಿ ಸಂಸತ್ತಿನಲ್ಲಿ ಮಾಡಿದ ಭಾಷಣದ ತುಣುಕಿನ ವಿಡಿಯೋವನ್ನು ಪೇಸ್​​​ಬುಕ್​​ನಲ್ಲಿ ಫೋಸ್ಟ್​​ ಮಾಡಿ “ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಆಡಿದ ನನ್ನ ಮಾತುಗಳಲ್ಲಿ ಇಂದಿಗೂ ಏನೇನೂ ಬದಲಾವಣೆ ಆಗಿಲ್ಲ. ಇವತ್ತೂ ನನ್ನ ರೈತರಿಗೆ ನೀರಿನ ವಿಚಾರದಲ್ಲಿ ಅನ್ಯಾಯ ಆಗುತ್ತಲೇ ಇದೆ”.

ಇದನ್ನೂ ಓದಿ: ‘ಇಂಡಸ್ಟ್ರಿಗೆ ಬಂದ್ಮೇಲೆ ನಾನು 25 ಬಾರಿ ಕಾವೇರಿ ಹೋರಾಟ ಮಾಡಿದೀನಿ, ಪರಿಹಾರ ಸಿಕ್ಕಿಲ್ಲ’: ಉಪೇಂದ್ರ

“ಕಾವೇರಿ ನದಿ ನೀರಿನ ವಿಚಾರದಲ್ಲಿ ಎರಡೂ ರಾಜ್ಯಗಳಿಗೆ ಸಮನಾದ ನ್ಯಾಯ ಸಲ್ಲಬೇಕಿತ್ತು. ಅದು ಆಗುತ್ತಿಲ್ಲ. ಪದೇ ಪದೇ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ನೀರು ಇದ್ದಾಗ ಹಂಚಿಕೊಳ್ಳುವುದರಲ್ಲಿ ಅರ್ಥವಿದೆ. ಇಲ್ಲದೇ ಇರುವ ಸಮಯದಲ್ಲೂ ನೀರು ಕೊಡುವುದು ನನ್ನ ನಾಡಿನ ರೈತರಿಗೆ ಮಾಡುವ ಅನ್ಯಾಯ. ಅದಕ್ಕೆ ಯಾವಾಗಲೂ ನನ್ನ ವಿರೋಧವಿದೆ. ನದಿ ನೀರಿನ ವಿಚಾರದಲ್ಲಿ ರಾಜಿ ಆಗುವ ಮಾತೇ ಇಲ್ಲ. ಸಂಕಷ್ಟದಲ್ಲಿ ಇರುವ ನನ್ನ ರೈತರ ಪರವಾಗಿ, ಅದು ಲೋಕಸಭೆಯೇ ಆಗಲಿ, ಯಾವುದೇ ವೇದಿಕೆ ಇರಲಿ, ನನ್ನ ಮಾತುಗಳು ನಮ್ಮ ರೈತರ ಪರವಾಗಿಯೇ ಇರಲಿವೆ. ನನಗೆ ನಮ್ಮ ರೈತರ ಹಿತದೃಷ್ಠಿಯೆ ಮುಖ್ಯ. ನನ್ನ ನಾಡಿನ ರೈತರ ಪರವಾಗಿ ಯಾವಾಗಲೂ, ನನ್ನ ಧ್ವನಿ ಮತ್ತು ಹೋರಾಟ ಇದ್ದೇ ಇರುತ್ತದೆ ” ಎಂದು ಕ್ಯಾಪ್ಷನ್​​​ನಲ್ಲಿ ಬರೆದುಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:17 pm, Fri, 29 September 23