ಮುಡಾ ಪ್ರಕರಣ ನಿಭಾಯಿಸುವಲ್ಲಿ ಸಿಎಂ ಫೇಲ್​​, ಸಿದ್ದರಾಮಯ್ಯ ವಿರುದ್ಧ ಸಚಿವರು ಬೇಸರ

| Updated By: ವಿವೇಕ ಬಿರಾದಾರ

Updated on: Sep 29, 2024 | 10:15 AM

ಮುಡಾ ಹಗರಣ ರಾಷ್ಟ್ರವ್ಯಾಪಿ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವಾಗಿ ರಾಜಕೀಯ ಜಟಾಪಟಿ ಜೋರಾಗಿದೆ. ಮುಖ್ಯಮಂತ್ರಿಗಳ ರಾಜೀನಾಮೆಗಾಗಿ ಬಿಜೆಪಿ ಆಗ್ರಹಿಸುತ್ತಿದೆ. ಇದರ ನಡುವೆ ಮುಖ್ಯಮಂತ್ರಿಗಳ ಸಂಪುಟದ ಸಚಿವರೇ ಸಿದ್ದರಾಮಯ್ಯ ಅವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಮುಡಾ ಪ್ರಕರಣ ನಿಭಾಯಿಸುವಲ್ಲಿ ಸಿಎಂ ಫೇಲ್​​, ಸಿದ್ದರಾಮಯ್ಯ ವಿರುದ್ಧ ಸಚಿವರು ಬೇಸರ
ಸಚಿವ ಸಂಪುಟ ಸಭೆ
Follow us on

ಬೆಂಗಳೂರು, ಸೆಪ್ಟೆಂಬರ್​ 29: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ದೇಶಾದ್ಯಂತ ಸದ್ದು ಮಾಡಿದೆ. ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಭಾಗಿಯಾಗಿದ್ದಾರೆ ಆರೋಪ ಕೇಳಿಬಂದಿದ್ದು, ಎಫ್​ಐಆರ್​ ದಾಖಲಾಗಿದೆ. ಎ1 ಸಿಎಂ ಸಿದ್ದರಾಮಯ್ಯ ಮತ್ತು ಎ2 ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಆಗಿದ್ದಾರೆ. ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಾಗುತ್ತಿದ್ದಂತೆ, ಸರ್ಕಾರ ಅಲ್ಪ ಮಟ್ಟಿಗೆ ಅಲುಗಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣದ ಆರೋಪ ಕೇಳಿಬರುತ್ತಿದ್ದಂತೆ ಸಚಿವರು, ಹೈಕಮಾಂಡ್​, ಶಾಸಕರು ಮತ್ತು ಕಾರ್ಯಕರ್ತರು ಸಿಎಂ ಪರವಾಗಿ ನಾವಿದ್ದೇವೆ ಎಂದು ಹೇಳಲು ಆರಂಭಿಸಿದರು. ಆದರೆ ಇದೀಗ, ಸ್ವತಃ ಸಂಪುಟದ ಸಚಿವರು ಹಗರಣದ ವಿಚಾರವಾಗಿ ಸಿಎಂ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಇಡೀ ಪ್ರಕರಣವನ್ನು ನಿಭಾಯಿಸಿದ ರೀತಿ ಬಗ್ಗೆ ಸಚಿವರು ಒಳಗೊಳಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಖ್ಯಮಂತ್ರಿಗಳ ಟೀಂ ಮೊದಲೆ ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಳ್ಳಲಿಲ್ಲ. ದೂರುದಾರರನ್ನು ಬಹಳ ಸದರವಾಗಿ ತೆಗೆದುಕೊಂಡರು. ದೂರುದಾರರ ಬಳಿ ದಾಖಲೆ ಸಂಗ್ರಹವಾಗುತ್ತಿದ್ದರೂ ಕೂಡ ಸಿಎಂ ಕಚೇರಿ ಗಮನಕ್ಕೆ ಬರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿಗೂ ದೂರು ನೀಡಿದ ಸ್ನೇಹಮಯಿ ಕೃಷ್ಣ

ಮೊದಲ ದೂರು ರಾಜ್ಯಪಾಲರಿಗೆ ಸಲ್ಲಿಕೆ ಆದಾಗಲೂ ಸಿಎಂ ಕಚೇರಿ ಗಮನಕ್ಕೆ ಬಂದಿಲ್ಲ. ಮುಡಾ ತಾಂತ್ರಿಕ ಸಮಿತಿ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಪ್ಪು ಮಾಡಿದ ಅಧಿಕಾರಿಗಳನ್ನು ಅಯಕಟ್ಟಿನ ಜಾಗದಲ್ಲೇ ಮುಂದುವರಿಸಲಾಯಿತು. ಮೈಸೂರಿನ ಸಿಎಂ ಆಪ್ತ ನಾಯಕರು ಅನಗತ್ಯವಾಗಿ ದೂರುದಾರರನ್ನು ಎದುರು ಹಾಕಿಕೊಂಡರು. ಕೋರ್ಟ್ ಮೆಟ್ಟಿಲು ಹತ್ತಿದಾಗಲೂ ವಾದ ಮಾಡಿದ ರೀತಿ ಸಮರ್ಪಕವಾಗಿ ಇರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮುಖ್ಯಮಂತ್ರಿಗಳ ಪರ ವಾದ ಮಂಡಿಸಿದ ಅಘಿಷೇಕ್ ಮನು ಸಿಂಘ್ವಿ ವಾದದ ಬಗ್ಗೆ ಸಚಿವರು ಸಂತೃಪ್ತಿ ಹೊಂದಿಲ್ಲ. ಸಿಂಘ್ವಿ ವಾದ ಇನ್ನಷ್ಟು ಸಮರ್ಥವಾಗಿ ಇರಬೇಕಿತ್ತು. ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಳ್ಳುವಲ್ಲಿ ಸಿಎಂ ಫೇಲಾದರು. ಬಿಜೆಪಿ ಮೊದಲ ಹಂತದ ಟಾರ್ಗೆಟ್‌ ರೀಚ್ ಆಗಿದೆ. ಪ್ರಕರಣ ಬಹಳ ಮುಂದಕ್ಕೆ ಹೋಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ತನಿಖೆಗೆ 4 ತಂಡ ರಚನೆ

ಮುಡಾದ ಹಗರಣದ ತನಿಖೆಗಾಗಿ ಲೋಕಾಯುಕ್ತ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಲೋಕಾಯುಕ್ತ ಎಸ್ಪಿ ಉದೇಶ್, ಡಿವೈಎಸ್ಪಿ ಮಾಲತೇಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾನ್ಯೂ ಥಾಮಸ್‌ ಹಾಗೂ ಇನ್ಸ್‌ಪೆಕ್ಟರ್​​ ಅವರನ್ನು ಒಳಗೊಂಡ ನಾಲ್ಕು ತಂಡ ರಚಿಸಲಾಗಿದೆ. ಈ ತಂಡ ನ್ಯಾಯಾಲಯ ನೀಡಿರುವ ದಾಖಲೆಗಳು, ದೂರಿನಲ್ಲಿ ಅಡಕವಾಗಿರುವ ದಾಖಲೆಗಳನ್ನು ಪರಿಶೀಲಿಸುತ್ತಿದೆ. ದಾಖಲೆಗಳ ಪರಿಶೀಲನೆ ಬಳಿಕ ಅಧಿಕಾರಿಗಳ ತಂಡ ತನಿಖೆ ಆರಂಭಿಸುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ