ಮೈಸೂರು: ಆಟೋ ಡ್ರೈವರ್​ ಪತ್ನಿಗೆ ಟಿಕೆಟ್​ ನೀಡಿದ ಬಿಜೆಪಿ; ಹು-ಧಾ ನಗರ ಪಾಲಿಕೆ ಚುನಾವಣೆಗೆ 3ನೇ ಪಟ್ಟಿ ಪ್ರಕಟ

ಶೋಭಾ.ಪಿ ಅವರ ಪತಿ ರಮೇಶ್ ಆಟೋ ಚಾಲಕರಾಗಿದ್ದು ಯರಗನಹಳ್ಳಿಯಲ್ಲಿ ಬಿಜೆಪಿ ವಾರ್ಡ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೀಗ ಅವರ ಪತ್ನಿ ಶೋಭಾ ಅವರಿಗೆ ಮೈಸೂರು ಪಾಲಿಕೆಯ ವಾರ್ಡ್ 36ರ ಉಪಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದೆ.

ಮೈಸೂರು: ಆಟೋ ಡ್ರೈವರ್​ ಪತ್ನಿಗೆ ಟಿಕೆಟ್​ ನೀಡಿದ ಬಿಜೆಪಿ; ಹು-ಧಾ ನಗರ ಪಾಲಿಕೆ ಚುನಾವಣೆಗೆ 3ನೇ ಪಟ್ಟಿ ಪ್ರಕಟ
ಬಿಜೆಪಿ ಅಭ್ಯರ್ಥಿ
Follow us
| Updated By: Skanda

Updated on:Aug 22, 2021 | 9:27 PM

ಮೈಸೂರು: ಸೆಪ್ಟೆಂಬರ್​ 3ರಂದು ನಡೆಯಲಿರುವ ಮೈಸೂರು ಪಾಲಿಕೆಯ ವಾರ್ಡ್ 36ರ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಪಕ್ಷದ ಕಾರ್ಯಕರ್ತರಾಗಿರುವ ಆಟೋ ಡ್ರೈವರ್​ ಒಬ್ಬರ ಪತ್ನಿಗೆ ಟಿಕೆಟ್​ ನೀಡಿದೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಶೋಭಾ.ಪಿ ಆಯ್ಕೆಯಾಗಿದ್ದಾರೆ.

ಶೋಭಾ.ಪಿ ಅವರ ಪತಿ ರಮೇಶ್ ಆಟೋ ಚಾಲಕರಾಗಿದ್ದು ಯರಗನಹಳ್ಳಿಯಲ್ಲಿ ಬಿಜೆಪಿ ವಾರ್ಡ್ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದೀಗ ಅವರ ಪತ್ನಿ ಶೋಭಾ ಅವರಿಗೆ ಮೈಸೂರು ಪಾಲಿಕೆಯ ವಾರ್ಡ್ 36ರ ಉಪಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದೆ.

ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟ ಹುಬ್ಬಳ್ಳಿ-ಧಾರವಾಡ: ಸೆಪ್ಟೆಂಬರ್​ 3ರಂದು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 3ನೇ ಪಟ್ಟಿ ಪ್ರಕಟವಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಘಟಕದ ಬಿಜೆಪಿ ಅಧ್ಯಕ್ಷ ಅರವಿಂದ್ ಬೆಲ್ಲದ್​​ರಿಂದ ಪಟ್ಟಿ ಪ್ರಕಟವಾಗಿದ್ದು, ಬಿಜೆಪಿಯ 3ನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳ ಹೆಸರು ನಮೂದಿಸಲಾಗಿದೆ.

ಇದುವರೆಗೆ ಒಟ್ಟು 64 ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಪ್ರಕಟಿಸಿದ್ದು, 16 ವಾರ್ಡ್​ಗಳ ಅಭ್ಯರ್ಥಿ ಹೆಸರನ್ನು ಪ್ರಕಟಿಸುವುದು ಬಾಕಿಯಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ನಾಳೆಯೇ ಕೊನೆ ದಿನವಾಗಿದ್ದು, ಕೊನೆ ಗಳಿಗೆಯಲ್ಲೂ 16 ವಾರ್ಡ್​ಗಳ ಅಭ್ಯರ್ಥಿ ಹೆಸರನ್ನು ಬಾಕಿ ಉಳಿಸಿಕೊಂಡು ಬಿಜೆಪಿ ಅಚ್ಚರಿ ಮೂಡಿಸಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್​ ಏನು ಮಾಡಲಿದೆ? ಬೆಳಗಾವಿ: ಸೆಪ್ಟೆಂಬರ್ 3 ರಂದು ಬೆಳಗಾವಿ ನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಚುನಾವಣೆಯ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಎಲ್ಲಾ ವಾರ್ಡ್​​ಗಳಲ್ಲೂ ಕಾಂಗ್ರೆಸ್ ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸಲು ತೀರ್ಮಾನಿಸಿದ್ದೇವೆ. ಆದರೆ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮವಾಗಿಲ್ಲ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಹೇಳಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಸೆಪ್ಟೆಂಬರ್ 3 ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಜತೆ ಟಿಕೆಟ್ ಆಕಾಂಕ್ಷಿಗಳು ಆಗಸ್ಟ್ 14ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದರು. ಬೆಳಗಾವಿಯ ಜಾಧವ್​ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭೇಟಿಯಾಗಿದ್ದರು. ಸಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ವಿಚಾರವಾಗಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ, ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಕುರಿತು ಅಭಿಪ್ರಾಯ ಸಂಗ್ರಹಿಸಿ‌ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

(BJP announces auto driver wife as its candidate for Mysuru city corporation ward 36 by election)

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಎಲ್ಲಾ ವಾರ್ಡ್​ಗಳಲ್ಲೂ ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಸ್ಪರ್ಧೆ: ಸತೀಶ್ ಜಾರಕಿಹೊಳಿ

Published On - 9:26 pm, Sun, 22 August 21