
ಮೈಸೂರು, ಮೇ.16: ರಾಜ್ಯಾದ್ಯಂತ ಹವಾಮಾನ ವೈಪರೀತ್ಯದ ಬೆನ್ನಲ್ಲೇ ಮಳೆರಾಯನ ಆರ್ಭಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಮೈಸೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಇಂದು (ಮೇ.16) ಸಂಜೆ ಸಂಭವಿಸಿದ ಪ್ರತ್ಯೇಕ ಸಿಡಿಲು ಬಡಿತದ ದುರಂತಗಳಲ್ಲಿ ಓರ್ವ ರೈತ ಮಹಿಳೆ ಹಾಗೂ ಯುವಕ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ಸಿಡಿಲು ಬಡಿದು ಆಲನಹಳ್ಳಿ ನಿವಾಸಿಯಾದ ವಿನೋದಾ ಎಂಬ ರೈತ ಮಹಿಳೆ ಮೃತಪಟ್ಟಿದ್ದಾರೆ. ಇಂದು ಸಂಜೆ ಜಮೀನಿನಲ್ಲಿ ಕಟ್ಟಿಹಾಕಿದ್ದ ಹಸುಗಳನ್ನು ಮಳೆಯಿಂದಾಗಿ ವಾಪಸ್ ಮನೆಗೆ ಕರೆತರಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಸಿಡಿಲಿನ ತೀವ್ರತೆಗೆ ವಿನೋದಾ ಮಾತ್ರವಲ್ಲದೆ ಅವರಿಗೆ ಸೇರಿದ ಎರಡು ಹಸುಗಳು ಕೂಡ ಸ್ಥಳದಲ್ಲೇ ಜೀವ ಕಳೆದುಕೊಂಡಿವೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಂದಿನಿಂದ 4 ದಿನ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆ: ಆಲಿಕಲ್ಲು ಮಳೆ , ಬಿರುಗಾಳಿಯ ಮುನ್ನೆಚ್ಚರಿಕೆ!
ಬಳ್ಳಾರಿ ತಾಲೂಕಿನ ಡಿ. ನಾಗನಹಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಸಿಡಿಲಿಗೆ ಬಲಿಯಾಗಿದ್ದಾನೆ. ಗಾದಿಲಿಂಗಪ್ಪ (32) ಮೃತಪಟ್ಟ ದುರ್ದೈವಿ. ಇಂದು ಸಂಜೆ ಸಪೋಟ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಸಿಡಿಲು ಅಪ್ಪಳಿಸಿದೆ. ಸಿಡಿಲಿನ ಹೊಡೆತಕ್ಕೆ ಸಿಕ್ಕು ಗಾದಿಲಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹವಾಮಾನ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕೆ ನೀಡಿರುವುದರಿಂದ, ಸಾರ್ವಜನಿಕರು ಮಳೆ ಮತ್ತು ಗುಡುಗು ಮುನ್ಸೂಚನೆ ಇರುವಾಗ ಜಮೀನು, ತೋಟ ಅಥವಾ ಮುಕ್ತ ಪ್ರದೇಶಗಳಿಗೆ ಹೋಗದೆ ಸುರಕ್ಷಿತ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕೆಂದು ಕಂದಾಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ