ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು; ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ಬಂದ್

ನೈರುತ್ಯ ರೈಲ್ವೆ ವಲಯವು ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಬೆಂಗಳೂರಿನ ಕೆಎಸ್‌ಆರ್ ಯಾರ್ಡ್ ನವೀಕರಣ ಮತ್ತು ಹೊಳೆನರಸೀಪುರದಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಜೂನ್ 18 ರಿಂದ ಆಗಸ್ಟ್ ತಿಂಗಳವರೆಗೆ ಹಲವು ರೈಲುಗಳನ್ನು ರದ್ದುಪಡಿಸಲಾಗಿದೆ ಅಥವಾ ಮಾರ್ಗ ಬದಲಾಯಿಸಲಾಗಿದೆ. ಮೈಸೂರು-ತಾಳಗುಪ್ಪ ಎಕ್ಸ್‌ಪ್ರೆಸ್ ಸಂಪೂರ್ಣ ರದ್ದಾಗಿದ್ದು, ವಂದೇ ಭಾರತ್ ಮತ್ತು ಕಾವೇರಿ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗದಲ್ಲೂ ವ್ಯತ್ಯಯವಾಗಲಿದೆ. ಪ್ರಯಾಣಿಕರು ಅಧಿಕೃತ ಮಾಹಿತಿ ಪರಿಶೀಲಿಸಿ ಪ್ರಯಾಣಿಸಲು ಕೋರಲಾಗಿದೆ.

ಇಂದಿನಿಂದ ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ಸಂಪೂರ್ಣ ರದ್ದು; ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ಬಂದ್
ಸಾಂದರ್ಭಿಕ ಚಿತ್ರ

Updated on: Jun 18, 2026 | 2:00 PM

ಬೆಂಗಳೂರು, ಜೂ.18: ರೈಲ್ವೆ ಹಳಿಗಳ ಸುಧಾರಣೆ, ಸುರಕ್ಷತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ವಲಯವು ರಾಜ್ಯದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಹೊಳೆನರಸೀಪುರ ಮತ್ತು ಮಾವಿನಕೆರೆ ನಿಲ್ದಾಣಗಳ ನಡುವೆ ರಸ್ತೆ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರಿನ ಕ್ರಾಂತಿವಿರ ಸಂಗೊಳ್ಳಿ ರಾಯಣ್ಣ (KSR) ನಿಲ್ದಾಣದಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಜೂನ್ 18 ರಿಂದ ಆಗಸ್ಟ್ ತಿಂಗಳವರೆಗೆ ಹಲವು ಪ್ರಮುಖ ರೈಲುಗಳನ್ನು ರದ್ದು ಹಾಗೂ ಮಾರ್ಗ ಬದಲಾವಣೆ ಮಾಡಲಾಗಿದೆ.

ಹೊಳೆನರಸೀಪುರ ಮಾರ್ಗ: ಜೂನ್ 18 ಮತ್ತು 23 ರಂದು ಸಂಪೂರ್ಣ ರದ್ದಾದ ರೈಲುಗಳು:

ರಸ್ತೆ ಕೆಳಸೇತುವೆ ಕಾಮಗಾರಿಯಿಂದಾಗಿ ಕೆಳಗಿನ ರೈಲುಗಳ ಸಂಚಾರ ಇರಲ್ಲ. ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ (16206)

ತಾಳಗುಪ್ಪ–ಮೈಸೂರು ಎಕ್ಸ್‌ಪ್ರೆಸ್ (16205)

ಅರಸೀಕೆರೆ–ಮೈಸೂರು ಪ್ಯಾಸೆಂಜರ್ (56267)

ಭಾಗಶಃ ರದ್ದು ಮತ್ತು ವಿಳಂಬವಾಗುವ ರೈಲುಗಳು:

ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (16225): ಈ ರೈಲು ಜೂನ್ 18 ಮತ್ತು 23 ರಂದು ಮೈಸೂರಿನಿಂದ ಹೊರಡುವ ಬದಲಾಗಿ ಅರಸೀಕೆರೆಯಿಂದಲೇ ತನ್ನ ಪ್ರಯಾಣವನ್ನು ಆರಂಭಿಸಲಿದೆ. ಇದರಿಂದ ಮೈಸೂರು, ಕೆ.ಆರ್.ನಗರ ಮತ್ತು ಹಾಸನದ ಪ್ರಯಾಣಿಕರಿಗೆ ಸೇವೆ ಲಭ್ಯವಿರುವುದಿಲ್ಲ.

ಮೈಸೂರು–ಯಶವಂತಪುರ ಎಕ್ಸ್‌ಪ್ರೆಸ್ (16208): ಈ ರೈಲು ಮಾರ್ಗ ಮಧ್ಯೆ ನಿಯಂತ್ರಣಕ್ಕೊಳಗಾಗಲಿದ್ದು, ನಿಗದಿತ ಸಮಯಕ್ಕಿಂತ 30 ರಿಂದ 120 ನಿಮಿಷಗಳಷ್ಟು ತಡವಾಗಿ ಸಂಚರಿಸಲಿದೆ.

ಜುಲೈ-ಆಗಸ್ಟ್‌ನಲ್ಲಿ ವಂದೇ ಭಾರತ್, ಕಾವೇರಿ ಎಕ್ಸ್‌ಪ್ರೆಸ್ ರದ್ದು

ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣವಾದ ಕೆಎಸ್‌ಆರ್ (ಮೆಜೆಸ್ಟಿಕ್) ನಲ್ಲಿ ಯಾರ್ಡ್ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕೇರಳ ಮತ್ತು ತಮಿಳುನಾಡಿಗೆ ಸಂಚರಿಸುವ ಕೆಳಗಿನ ರೈಲು ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು-ಕೇರಳ ವಂದೇ ಭಾರತ್ ರದ್ದು: ಜುಲೈ 31 ಮತ್ತು ಆಗಸ್ಟ್ 3 ರಂದು ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (26652) ರೈಲು ಕೆಎಸ್‌ಆರ್ ನಿಲ್ದಾಣಕ್ಕೆ ಬರುವ ಬದಲಾಗಿ ಕೃಷ್ಣರಾಜಪುರಂ (ಕೆ.ಆರ್.ಪುರಂ) ನಿಲ್ದಾಣದಲ್ಲೇ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ಲಾಲ್‌ಬಾಗ್ ಎಕ್ಸ್‌ಪ್ರೆಸ್ ಮಾರ್ಗ ಬದಲಾವಣೆ: ಜುಲೈ 31 ರಿಂದ ಆಗಸ್ಟ್ 3 ರವರೆಗೆ ಚೆನ್ನೈ-ಬೆಂಗಳೂರು ಲಾಲ್‌ಬಾಗ್ ಎಕ್ಸ್‌ಪ್ರೆಸ್ ರೈಲನ್ನು ಬೈಯಪ್ಪನಹಳ್ಳಿಯಿಂದಲೇ ಎಸ್‌ಎಂವಿಟಿ (SMVT) ಬೆಂಗಳೂರು ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.

ಆಗಸ್ಟ್‌ನಲ್ಲಿ ಸಂಪೂರ್ಣ ರದ್ದಾಗಲಿರುವ ಪ್ರಮುಖ ರೈಲುಗಳು:

ಆಗಸ್ಟ್ 1: ಕೆಎಸ್‌ಆರ್ ಬೆಂಗಳೂರು ಟು ಚೆನ್ನೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12658) – ರದ್ದು

ಆಗಸ್ಟ್ 2: ಚೆನ್ನೈ-ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12657) – ರದ್ದು

ಆಗಸ್ಟ್ 2 ಮತ್ತು 3: ಚೆನ್ನೈ-ಅಶೋಕಪುರಂ ಕಾವೇರಿ ಎಕ್ಸ್‌ಪ್ರೆಸ್ ರೈಲು – ರದ್ದು

ಇದನ್ನೂ ಓದಿ:‘ನೀವು ಯಾರಿಗೆ ಹೇಳ್ತೀರೋ ಅವರಿಗೇ ವೋಟ್ ಹಾಕ್ತೀನಿ’: ಆರ್. ಅಶೋಕ್‌ಗೆ ಶಾಸಕ ಯತ್ನಾಳ್ ಭರವಸೆ

ರೈಲ್ವೆ ಕಾರ್ಯಾಚರಣೆಯ ಸಾಮರ್ಥ್ಯ ಮತ್ತು ದಕ್ಷತೆ ಹೆಚ್ಚಿಸಲು ಈ ಮಹತ್ವದ ಕಾಮಗಾರಿ ಅಗತ್ಯವಾಗಿದ್ದು, ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್‌ಲೈನ್ ಅಥವಾ ಆಪ್‌ಗಳ ಮೂಲಕ ರೈಲಿನ ಇಂದಿನ ಸ್ಥಿತಿಯನ್ನು ಪರಿಶೀಲಿಸಿ ಪ್ರಯಾಣ ಬೆಳೆಸಲು ಕೋರಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us