ಕಿರಾತಕ ಮದುವೆಯಾಗಿದ್ದರೂ ಮತ್ತೊಬ್ಬ ಯುವತಿಯನ್ನು ಪ್ರೀತಿಗಾಗಿ ಪೀಡಿಸ್ತಿದ್ದ, ಕಾಟ ತಾಳದೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು

ಪ್ರೀತಿ ಹೆಸರಿನಲ್ಲಿ ವಿವಾಹಿತ ನೀಡಿದ ಕಿರುಕುಳಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ!

ಕಿರಾತಕ ಮದುವೆಯಾಗಿದ್ದರೂ ಮತ್ತೊಬ್ಬ ಯುವತಿಯನ್ನು ಪ್ರೀತಿಗಾಗಿ ಪೀಡಿಸ್ತಿದ್ದ, ಕಾಟ ತಾಳದೆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು
ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ!
Edited By: ಸಾಧು ಶ್ರೀನಾಥ್​

Updated on: Jul 04, 2023 | 12:12 PM

ಆತನಿಗೆ ಮದುವೆಯಾಗಿ ಒಂದು ಮಗು ಇತ್ತು (married person). ಆದ್ರೂ ಕಿರಾತಕನಿಗೆ ಮತ್ತೊಂದು ಪ್ರೇಮದ ಖಯಾಲಿ‌ (Love) ಮೂಡಿತ್ತು. ಹೀಗಾಗಿ ನಾಲ್ಕು ವರ್ಷಗಳಿಂದ ಒಂದು ಯುವತಿಯನ್ನು ಪ್ರೀತಿಗಾಗಿ ಪೀಡಿಸುತ್ತಿದ್ದ. ಪ್ರೀತ್ಸೆ ಪ್ರೀತ್ರೆ ಅಂತ ಪೀಡಿಸುವುದರ (Torture) ಜೊತೆಗೆ ಆಕೆಯ ಮದುವೆಯನ್ನೂ ಮುರಿದಿದ್ದ. ಪ್ರೀತ್ಸು ಇಲ್ಲವೇ ಜೊತೆಯಲ್ಲಿ ಸಾಯಿ ಎಂದವನು ಯುವತಿ ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ನಾನು ಆಟೋ ಓಡುಸ್ತಿದ್ರೂ ಆಫೀಸರ್ ಮಗಳಂಗೆ ಸಾಕಿದ್ವೀ ಸರ್… ಅನ್ಯಾಯ ಮಾಡಿಬಿಟ್ಟ ಎಂದು ಆ ಹಿರಿಯ ವ್ಯಕ್ತಿ ಗೋಳಾಡ್ತಾ ಇರೋದು ಮಗಳ ಸಾವಿಗಾಗಿ. ಸತ್ತು ಹೋದ ಮಗಳನ್ನು ನೆನೆ ನೆನೆದು ಕಣ್ಣೀರು ಹಾಕುತ್ತಿರುವ ಈ ತಾಯಿಯ ಹೆಸರು ಶೋಭ. ಈಕೆಯ ಮುದ್ದಿನ ಮಗಳು ಹರ್ಷಿತಾ ರಾಣಿ ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ. ಪ್ರೀತಿ ಹೆಸರಿನ ಕಿರುಕುಳಕ್ಕೆ ಬೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿರುವುದು ಮೈಸೂರು (Mysore) ತಾಲೂಕಿನ ಗಣಗರ ಹುಂಡಿ. ಪ್ರೀತಿ ಹೆಸರಿನಲ್ಲಿ ವಿವಾಹಿತ ನೀಡಿದ ಕಿರುಕುಳಕ್ಕೆ ಹರ್ಷಿತಾ ಎಂಬ ಯುವತಿ ವಿಷದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಣಗರಹುಂಡಿ ಗ್ರಾಮದ ವೇಣುಗೋಪಾಲ್-ಶೋಭಾ ದಂಪತಿ ಮಗಳಾದ 21 ವರ್ಷದ ಹರ್ಷಿತಾಳಿಗೆ ಇದೇ ಗ್ರಾಮದಲ್ಲಿ ಪ್ಲಂಬರಿಂಗ್ ಅಂಗಡಿ ನಡೆಸುತ್ತಿದ್ದ 26 ವರ್ಷದ ಶಿವು ಎಂಬಾತ ಕಾಡುತ್ತಿದ್ದ. ಪ್ರೀತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದನಂತೆ.

ಮೂಲತಃ ಕನಕಪುರದ ಶಿವು ಹಲವು ವರ್ಷಗಳಿಂದ ಗಣಗರಹುಂಡಿಯಲ್ಲೇ ವಾಸವಿದ್ದ. ಕಾಲೇಜು ಓದಲು ಮೈಸೂರಿಗೆ ಹೋಗುತ್ತಿದ್ದ ರಾಣಿಯನ್ನು ನಾಲ್ಕು ವರ್ಷಗಳ ಹಿಂದೆಯೇ ಪುಸಲಾಯಿಸಿ ಪ್ರೀತಿಗೆ ಬೀಳಿಸಿದ್ದ. ಈ ವಿಚಾರ ರಾಣಿ ಮನೆಯವರಿಗೆ ಗೊತ್ತಾಗಿ, ಶಿವುಗೆ ಚೆನ್ನಾಗಿ ಥಳಿಸಿ ಬುದ್ದಿ ಹೇಳಿದ್ದರು. ಆಗ ಸುಮ್ಮನಿದ್ದವನು ಮತ್ತೆ ಪ್ರೀತಿಗಾಗಿ ಯುವತಿಯ ಬೆನ್ನು ಬಿದ್ದಿದ್ದನಂತೆ.

ಕೊನೆಗೆ ರಾಣಿ ಮನೆಯವರು ತಮ್ಮ ಮಗಳಿಗೆ ಬೇರೆ ಹುಡುಗನ ಜೊತೆ ಮದುವೆ ಕೂಡ ಗೊತ್ತು ಮಾಡಿದ್ದರು. ಆದರೆ ಆ ಮದುವೆಯನ್ನೂ ಮುರಿಯುವಂತೆ ಮಾಡಿದ್ದ ಆರೋಪಿ ಶಿವು. ಇಬ್ಬರೂ ಒಟ್ಟಿಗೆ ಸಾಯೋಣ ಅಂತ ಹೇಳಿ ಆಕೆಯ ತಲೆ ಕೆಡಿಸಿದ್ದಾನೆ ಎನ್ನುವುದು ರಾಣಿ ತಂದೆ ಆರೋಪ.

ಜುಲೈ 1 ಶನಿವಾರದಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಬಂದ ರಾಣಿ ವಿಷದ ಮಾತ್ರೆ ಸೇವಿಸಿ ಆಸ್ವಸ್ಥಳಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಣಿ ಕೊನೆಯುಸಿರೆಳೆದಿದ್ದಾಳೆ. ಇನ್ನು ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ತಾಯಿ ಮೊಬೈಲ್ ನಲ್ಲಿ ಮಗಳ ಪೋಟೋಗಳನ್ನು ನೋಡುತ್ತಾ ಕಣ್ಣೀರು ಹಾಕುತ್ತಿರುವ ದೃಶ್ಯ ಎಂತಹವರದೇ ಕರುಳು ಹಿಂಡುವಂತಿದೆ.

ಇನ್ನು ತಂದೆ ಆಟೋ ಓಡಿಸಿದರೂ ಮಗಳನ್ನು ಆಫೀಸರ್ ಮಗಳಂತೆ ಸಾಕಿದ್ದರು. ಮುದ್ದಾದ ಮಗಳು ರಾಣಿಗೆ ಮುದ್ದಾದ ಆ ನಾಯಿ ಅಂದ್ರೆ ತುಂಬಾ ಪ್ರೀತಿ. ಆಕೆಯನ್ನು ಕಾಣದ ನಾಯಿ ಕೂಡಾ ಚಿಂತಾಕ್ರಾಂತವಾಗಿದೆ.

ಈ ಬಗ್ಗೆ ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಆರೋಪಿ ಶಿವು ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದೆಲ್ಲಾ ಏನೇ ಇರಲಿ ತಾನು ಮದುವೆಯಾಗಿದ್ದರೂ ಮತ್ತೊಂದು ಯುವತಿಗೆ ಪ್ರೀತಿ ಪ್ರೇಮದ ಹೆಸರಲ್ಲಿ ಕಿರುಕುಳ ನೀಡಿದ್ದು ಮಾತ್ರವಲ್ಲ ಆಕೆಯ ಸಾವಿಗೂ ಕಾರಣವಾಗಿದ್ದು‌ ಮಾತ್ರ ಘೋರ ಅಪರಾಧವೇ ಸರಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us