Lok Sabha Elections: ಲೋಕಸಭೆ ಚುನಾವಣೆ, ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮೈಸೂರು ಸಹ ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಕ್ರಮವನ್ನೇ ಅನುಸರಿಸಿದೆ. ಮತದಾನದ ದಿನವಾದ ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ ತಾಣಗಳು ಬಂದ್ ಆಗಿರಲಿವೆ. ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳು ಅಂದು ಬಂದ್ ಆಗಿರಲಿವೆ.

Lok Sabha Elections: ಲೋಕಸಭೆ ಚುನಾವಣೆ, ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್
ಮೈಸೂರು ಅರಮನೆ
Follow us
|

Updated on:Apr 23, 2024 | 9:31 AM

ಬೆಂಗಳೂರು, ಏಪ್ರಿಲ್ 23: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 26ರಂದು ಮೈಸೂರಿನ ಪ್ರವಾಸಿ (Tourist places of Mysuru) ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಮತದಾನದ ದಿನ (Voting Day) ಶುಕ್ರವಾರವಾಗಿದ್ದರಿಂದ ಅಂದು ರಜೆ ಇದೆ. ಶನಿವಾರ, ಭಾನುವಾರ ಹೇಗೂ ರಜೆಯಾದ್ದರಿಂದ ಮತದಾರರು ಪ್ರವಾಸಕ್ಕೆ ಯೋಜನೆ ಹಾಕಿಕೊಂಡು ತೆರಳಿದರೆ ಮತದಾನದ ಪ್ರಮಾಣ ಕಡಿಮಯಾದೀತು ಎಂಬ ಲೆಕ್ಕಾಚಾರದೊಂದಿಗೆ ಅಧಿಕಾರಿಗಳು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಮುಚ್ಚಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಮೈಸೂರು ಮೃಗಾಲಯ ಎಂದೇ ಜನಪ್ರಿಯವಾಗಿರುವ ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿ ಕೆರೆಯನ್ನು ಏಪ್ರಿಲ್ 26 ರಂದು ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತದಾನ ಮಾಡಿ ಬಂದವರಿಗೆ ಹೋಟೆಲ್​ಗಳಲ್ಲಿ ರಿಯಾಯಿ!

ಮೈಸೂರಿನ ಆತಿಥ್ಯ ಕ್ಷೇತ್ರದ ಉದ್ದಿಮೆಗಳೂ ಮತದಾನಕ್ಕೆ ಉತ್ತೇಜನ ನೀಡುವ ಕ್ರಮಗಳನ್ನು ಕೈಗೊಂಡಿವೆ. ಮತದಾನ ಮಾಡಿ ಭೇಟಿ ನೀಡುವ ಮತದಾರರಿಗೆ ರಿಯಾಯಿತಿಗಳು ಮತ್ತು ವಿಶೇಷ ಪ್ಯಾಕೇಜ್‌ಗಳನ್ನು ನೀಡುವುದಾಗಿ ಮೈಸೂರಿನ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಘೋಷಿಸಿವೆ.

ಮತದಾರರ ಓಲೈಕೆಗೆ ಅಧಿಕಾರಿಗಳು ಮತ್ತು ವ್ಯಾಪಾರಸ್ಥರು ಒಗ್ಗೂಡುತ್ತಿರುವುದು ಸಂತಸ ತಂದಿದೆ. ಪ್ರವಾಸಿ ತಾಣಗಳನ್ನು ಮುಚ್ಚುವುದು ಮತ್ತು ರಿಯಾಯಿತಿಗಳನ್ನು ನೀಡುವುದು ಮತದಾರರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಲಿದೆ ಎಂದು ಮೈಸೂರಿನ ವಿಶ್ವೇಶ್ವರನಗರದ ನಿವಾಸಿ ರಂಗನಾಥ್ ಅಭಿಪ್ರಾಯಪಟ್ಟಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​​​ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಏಪ್ರಿಲ್ 25, 26 ರಂದು ಚಿಕ್ಕಮಗಳೂರಿನ ಹೋಂ ಸ್ಟೇ, ರೇಸಾರ್ಟ್​ಗಳಲ್ಲಿ ಸಿಗಲ್ಲ ಬುಕಿಂಗ್

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಏಪ್ರಿಲ್ 25 ಮತ್ತು 26 ರಂದು ಹೋಂ ಸ್ಟೇ, ರೇಸಾರ್ಟ್ ಬುಕಿಂಗ್​​ಗೆ ಅವಕಾಶ ನೀಡದಂತೆ ಚಿಕ್ಕಮಗಳೂರು ಜಿಲ್ಲಾಡಳಿತ ಕೂಡ ಜಿಲ್ಲೆಯ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಸೂಚನೆ ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:28 am, Tue, 23 April 24