ಲೋಕಸಭೆಗೆ ನುಗ್ಗಿದ ಮೈಸೂರಿನ ಮನೋರಂಜನ್‌ ಯಾರು? ಈತನಿಗೆ ರಾಜಕೀಯ ನಂಟು ಇತ್ತಾ? ಇಲ್ಲಿದೆ ವಿವರ

parliament security breach: ಲೋಕಸಭೆ ಅಧಿವೇಶನದ ವೇಳೆಯೇ ಭದ್ರತಾ ಕೋಟೆಯನ್ನು ಬೇಧಿಸಿ ಕಲಾಪ ಸ್ಥಳಕ್ಕೆ ನುಗ್ಗಿದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ಮೈಸೂರಿನ ಯುವಕ ಇದ್ದು, ಆತನ ಹೆಸರು ಮನೋರಂಜನ್‌ ಎಂದು ತಿಳಿದುಬಂದಿದೆ. ಹಾಗಾದ್ರೆ, ಯಾರು ಈ ಮನೋರಂಜನ್​? ಏನು ಮಾಡಿಕೊಂಡಿದ್ದಾನೆ? ಎನ್ನುವ ಮಾಹಿತಿ ಇಲ್ಲಿದೆ.

ಲೋಕಸಭೆಗೆ ನುಗ್ಗಿದ ಮೈಸೂರಿನ ಮನೋರಂಜನ್‌ ಯಾರು? ಈತನಿಗೆ ರಾಜಕೀಯ ನಂಟು ಇತ್ತಾ? ಇಲ್ಲಿದೆ ವಿವರ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Dec 13, 2023 | 5:50 PM

ನವದೆಹಲಿ/ಮೈಸೂರು, (ಡಿಸೆಂಬರ್ 13): ಲೋಕಸಭೆ ಅಧಿವೇಶನದ ವೇಳೆಯೇ ಭದ್ರತಾ (ಕೋಟೆಯನ್ನು ಬೇಧಿಸಿ (Security breach in Loksabha) ಕಲಾಪ ಸ್ಥಳಕ್ಕೆ ನುಗ್ಗಿದ ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ಮೈಸೂರಿನ ಮನೋರಂಜನ್‌ ಎಂದು ತಿಳಿದುಬಂದಿದೆ. ಮನೋರಂಜನ್  1989ರ ಜೂನ್ 12ರಂದು  ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಮಲ್ಲಾಪುರ ಗ್ರಾಮದಲ್ಲಿ ಜನಿಸಿದ್ದು, ಈತ ಬಿಇ ಪೂರ್ಣಗೊಳಸಿದ್ದಾನೆ. ಇನ್ನು ಈತ ಕ್ರಾಂತಿಕಾರಿ ಪುಸ್ತಕಗಳನ್ನ ಓದುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.

ಮನೋರಂಜನ್ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಮಲ್ಲಾಪುರ ಗ್ರಾಮದ ನಿವಾಸಿಯಾಗಿದ್ದಾನೆ. ಮೈಸೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ. ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ PU ಓದಿರುವ ಮನೋರಂಜನ್, ಬೆಂಗಳೂರಿನ ಬಿಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾನೆ. ಪ್ರಮುಖ ಅಂಶ ಅಂದರೆ ಈತನಿಗೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಬಿಇ ಸೀಟು ಕೊಡಿಸಿದ್ದರು. ಇನ್ನು ಮನೋರಂಜನ್ 2016ರಲ್ಲಿ ಕಾಂಬೋಡಿಯಾಗೆ ಹೋಗಿದ್ದ ಎನ್ನುವ ಮಾಹಿತಿಗಳು ಸಿಕ್ಕಿವೆ.  ಇನ್ನು ನೋರಂಜನ್ ಕುಟುಂಬ ಪ್ರಸ್ತುತ ಮೈಸೂರಿನ ವಿಜಯನಗರದಲ್ಲಿ ನೆಲೆಸಿದ್ದು, ತಂದೆ ದೇವರಾಜೇಗೌಡ ಕೃಷಿಕ.

ಇದನ್ನೂ ಓದಿ: ಭದ್ರತಾ ಲೋಪ: ಲೋಕಸಭಾ ಸದನದೊಳಗೆ ನುಗ್ಗಿದ್ದು ಮೈಸೂರಿನ ಯುವಕ, ಗಲ್ಲಿಗೇರಿಸಿ ಎಂದ ತಂದೆ

ಇನ್ನು ಘಟನೆ ನಡೆದ ಬೆನ್ನಲ್ಲೇ ಮೈಸೂರಿನ ಪೊಲೀಸರು ಮನೋರಂಜನ್​ ನಿವಾಸಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಕ್ರಾಂತಿಕಾರಿ ಚಿಗುವೆರಾ ಸೇರಿದಂತೆ ಹಲವು ದಾರ್ಶನಿಕರು, ಕ್ರಾಂತಿಕಾರಿಗಳ ಬಗ್ಗೆಗಿನ ಪುಸ್ತಕಗಳು ಸಿಕ್ಕಿವೆ. ಕೆಲವೊಂದು ಭೂಗತ ಜಗತ್ತಿಗೆ ಸಂಬಂಧಿಸಿದ ಪುಸ್ತಕಗಳು, ಸ್ವಾತಂತ್ರ್ಯ ಹೋರಾಟದ ಕಥನಗಳು ಇಲ್ಲಿವೆ. ಮನೋರಂಜನ್‌ ಸಾಕಷ್ಟು ಕ್ರಾಂತಿಕಾರಿ ಯೋಜನೆಗಳನ್ನು ಹೊಂದಿದ್ದರು ಎನ್ನುವುದು ಅವರ ಓದಿನಿಂದ ಗೊತ್ತಾಗುತ್ತಿದೆ.

ಮನೋರಂಜನ್​​ಗೆ ರಾಜಕೀಯ ನಂಟು ಇಲ್ಲ

ಇನ್ನು ಪ್ರಮುಖ ಅಂಶ ಅಂದರೆ ಮನೋರಂಜನ್​ಗೆ ಯಾವುದೇ ರಾಜಕೀಯ ಪಕ್ಷದ ನಂಟು ಹೊಂದಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ. ಅವರಪ್ಪ ದೇವರಾಜೇಗೌಡ ಹೇಳಿದಂತೆ ಮನೋರಂಜನ್ ಊರೂರು ಸುತ್ತಾಡುತ್ತಿದ್ದ. ಇನ್ನು ಅವರ ತಾಯಿ ಹೇಳುವ ಪ್ರಕಾರ, ಮನೋರಂಜನ್ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಹಲವು ವರ್ಷಗಳಿಂದ ಅವನು ಮತದಾನವೇ ಮಾಡಿಲ್ಲ.

ಲೋಕಸಭೆ ಕಲಾಪದ ವೇಳೆ ನುಗ್ಗಿದ್ದ ಮೈಸೂರಿನ ಡಿ.ಮನೋರಂಜನ್​, ಕಲಾಪ ವೀಕ್ಷಣೆಗೆಂದು ಕಳೆದ 3 ತಿಂಗಳಿಂದ ಸಂಸತ್​ನ ಕಚೇರಿಗೆ ಭೇಟಿ ನೀಡುತ್ತಿದ್ದ ಎಂದು ತಿಳಿದುಬಂದಿದೆ.

ಪ್ರಕರಣ ಮತ್ತೋರ್ವ ಆರೋಪಿ ಸಾಗರ್,​ ಮನೋಹರ್​ ಸ್ನೇಹಿತನಾಗಿದ್ದು, ಸಾಗರ್ ಪಡೆದುಕೊಂಡಿದ್ದ ಪಾಸ್​ ಮೇಲೆಯೇ ಮನೋಹರ್ ಸಂಸತ್ ಕಲಾಪ ವೀಕ್ಷಣೆಗೆ ಹೋಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ರೆ, ಉತ್ತರ ಪ್ರದೇಶದ ಲಖನೌ ಮೂಲದ ಸಾಗರ್ ಅದೇಗೆ ಮನೋರಂಜನ್​ಗೆ ಪರಿಚಯವಾಗಿದ್ದ? ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ  ಸಾಗರ್​ಗೆ ಹೇಗೆ ಪಾಸ್ ಪಡೆದುಕೊಂಡಿದ್ದ ಎನ್ನುವುದೇ ನಿಗೂಡವಾಗಿದೆ. ಸದ್ಯ ಪೊಲಿಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಸದನದೊಳಗೆ ಏಕೆ ನುಗ್ಗಿದ್ರು? ಇವರ ಉದ್ದೇಶ ಏನಾಗಿತ್ತು? ಎನ್ನುವ ಮಾಹಿತಿ ಹೊರಬರಬೇಕಿದೆ.

Published On - 5:33 pm, Wed, 13 December 23