ಪಾರಿವಾಳಗಳ ಹಿಕ್ಕೆಯಿಂದ ಮೈಸೂರು ಅರಮನೆಗೆ ಕಂಟಕ: ಕ್ರಮಕ್ಕೆ ಮುಂದಾದ ಜಿಲ್ಲಾಡಳಿತ

| Updated By: ವಿವೇಕ ಬಿರಾದಾರ

Updated on: Jun 28, 2024 | 10:15 AM

ಮೈಸೂರು ಅರಮನೆಗೆ ಭೇಟಿ ನೀಡಿದಾಗ ಅಲ್ಲಿ ನೂರಾರು ಪಾರಿವಾಳಗಳನ್ನು ಕಾಣುತ್ತೇವೆ. ಬೆಳ್ಳಂಬೆಳಗ್ಗೆ ಈ ಪಾರಿವಾಳಗಳಿಗೆ ಅನೇಕರು ಕಾಳುಗಳನ್ನು ಹಾಕುತ್ತಾರೆ. ಆದರೆ ಕಾಳು ಹಾಕುವುದನ್ನು ನಿಲ್ಲಿಸಬೇಕೆಂದು ತಜ್ಞರು ಮನವಿ ಮಾಡಿದ್ದಾರೆ. ಏಕೆಂದರೆ ಈ ಪಾರಿವಾಳಗಳು ಹಾಕುವ ಹಿಕ್ಕೆಯಿಂದ ಅರಮನೆಗೆ ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.

ಮೈಸೂರು, ಜೂನ್​​ 28: ಸಾಂಸ್ಕೃತಿಕ ನಗರಿ ಮೈಸೂರು (Mysore) ಅರಮನೆಗೆ (Mysore Palace) ಹೆಸರುವಾಸಿ. ವಿಶ್ವವಿಖ್ಯಾತ ಮೈಸೂರು ಅರಮನೆಗೆ ಪಾರಿವಾಳಗಳ (Pigeon) ಹಿಕ್ಕೆಯಿಂದ ಕಂಟಕ ಎದುರಾಗಿದೆ. ಪಾರಿವಾಳಗಳು ಹಾಕುವ ಹಿಕ್ಕೆಯಲ್ಲಿ, ಯೂರಿಕ್ ಆ್ಯಸಿಡ್‌ (Uric Acid) ಇರುತ್ತದೆ. ಯೂರಿಕ್​ ಆಸ್ಯಡಿನಿಂದ ಕೂಡಿರುವ ಈ ಹಿಕ್ಕೆಗಳು ಪಾರಂಪರಿಕ ಕಟ್ಟಡಗಳ ಮೇಲೆ ಬೀಳುವುದರಿಂದ, ಕಟ್ಟಡಗಳು ವಿರೂಪಗೊಳ್ಳುತ್ತವೆ‌ ಎಂದು ಇತಿಹಾಸ ತಜ್ಞ ಪ್ರೋ. ರಂಗರಾಜು ಹೇಳಿದ್ದಾರೆ.

ಈ ಬಗ್ಗೆ ಟಿವಿ9 ಡಿಜಿಟಲ್​​ ಜೊತೆ ಮಾತನಾಡಿದ ಪ್ರೋ. ರಂಗರಾಜು, ಈ ಹಿಕ್ಕೆಗಳನ್ನು ತಾಮ್ರ ಅಥವಾ ಸ್ಟೀಲ್​ ಪಾತ್ರೆಯಲ್ಲಿ ಹಾಕಿ ಕೆಲವು ದಿನಗಳು ಬಿಟ್ಟರೆ, ರಂಧ್ರ ಬೀಳುತ್ತದೆ. ಮೈಸೂರಿನ ಹತ್ತನೇ ಚಾಮರಾಜ ವೃತ್ತ ಮತ್ತು ನಾಲ್ವಡಿ ಕೃಷ್ಣರಾಜ ವೃತ್ತಗಳನ್ನು ಮಾರ್ಬಲ್​ ಕಲ್ಲಿನಿಂದ ಮಾಡಲಾಗಿದೆ. ಈ ವೃತ್ತದಲ್ಲಿ ಪಾರಿವಾಳಗಳು ಹಿಕ್ಕೆ ಹಾಕುವುದರಿಂದ ಮಾರ್ಬಲ್​ಗೆ ಹಾನಿಯಾಗಲಿದೆ. ಈ ಹಿಕ್ಕೆಗಳಿಂದ ಅರಮನೆಗೆ ಬಹಳ ಮಾರಕವಾಗಲಿದೆ ಎಂದರು.

ಹೀಗಾಗಿ, ಅರಮನೆ, ಈ ವೃತ್ತಗಳ ಬಳಿ ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು. ಈ ಬಗ್ಗೆ ಅನೇಕರು ಧ್ವನಿ ಎತ್ತಿದ್ದಾರೆ. ಈ ಪಾರಿವಾಳಗಳು ಅರಮನೆ, ರಾಜರ ವೃತ್ತಗಳಿಂದ ದೂರ ಹೋಗುವಂತೆ ಮಾಡಬೇಕು. ಪಾರಿವಾಳಗಳು ದೂರ ಹೋಗಬೇಕೆಂದರೆ ಕಾಳುಗಳನ್ನು ಹಾಕುವುದು ನಿಲ್ಲಿಸಬೇಕು. ಕೆಲವರೊಂತು ಪಾರಿವಾಳಗಳಿಗೆ ಹಾಕುವ ಕಾಳುನ್ನು ಅರಮನೆ ಅಕ್ಕ-ಪಕ್ಕ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದನ್ನೂ ತಡೆಯಬೇಕು. ಅರಮನೆ ಸೇರಿ ಪಾರಂಪರಿಕ ಕಟ್ಟಡದ ರಕ್ಷಣೆಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.

ಇದನ್ನೂ ಓದಿ: ರಸ್ತೆ ಅಗಲೀಕರಣಕ್ಕೆ ಅರಮನೆ ಜಾಗ ಸ್ವಾಧೀನ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರೋಷಾವೇಷ

ಪಾರಿವಾಳಗಳಿಗೆ ಕಾಳು ಹಾಕುವುದನ್ನು ತಡೆಯಬೇಕು: ಜಿಲ್ಲಾಧಿಕಾರಿ

ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮಾತನಾಡಿ, ಅರಮನೆಯ ಮುಂಭಾಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಿತ್ಯ ಪಾರಿವಾಳಗಿಳಿಗೆ ಮೂಟೆಗಟ್ಟಲೆ ಗೋಧಿ, ಜೋಳ, ಭತ್ತವನ್ನು ನೀಡುತ್ತಿದ್ದಾರೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ಕೂಡ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕುತ್ತಿದ್ದಾರೆ. ಇದರಿಂದ ಪಾರಿವಾಳಗಳು ಅರಮನೆ ಸುತ್ತಮುತ್ತ ವಾಸಿಸಲು ಆರಂಭಿಸಿವೆ. ಈ ಪಾರಿವಾಳಗಳು ಅರಮನೆಯ ಕಟ್ಟಡದ ಮೇಲೆಲ್ಲ ಹಿಕ್ಕೆಗಳನ್ನು ಹಾಕಿ, ಹಾನಿ ಮಾಡುತ್ತಿವೆ. ಇದು ಹೀಗೆ ಮುಂದುವರೆದರೆ ಮುಂಬರುವ ದಿನಗಳಲ್ಲಿ ಸಾಂಸ್ಕೃತಿಕ ಕಟ್ಟಡ ತನ್ನ ಸೌಂದರ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಇದನ್ನು ಈಗಲೇ ತಡೆಗಟ್ಟಬೇಕು ಎಂದರು.

ಪಾರಿವಾಳಗಳಿಗೆ ಕಾಳು ಹಾಕುವುದನ್ನು ಪಾರಂಪರಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳು ಅಪಾಯಕಾರಿ ಎಂದು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ತಮ್ಮ ಖುಷಿಗಾಗಿ ಪಕ್ಷಿಗಳಿಗೆ ತೊಂದರೆ ನೀಡದಂತೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ