ಮೈಸೂರಿನಲ್ಲಿ ಅರುಣ್​ ಯೋಗಿರಾಜ್​ರನ್ನ​ ಸನ್ಮಾನಿಸಿ, ಸುತ್ತೂರು ಮಠದ ಕೊಡುಗೆಯನ್ನು ಸ್ಮರಿಸಿದ ಅಮಿತ್​ ಶಾ

| Updated By: ವಿವೇಕ ಬಿರಾದಾರ

Updated on: Feb 11, 2024 | 2:04 PM

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಭಾಗಿಯಾಗಿದರು. ಈ ವೇಳೆ ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ನಿರ್ಮಿಸಿರುವ ಶಿಲ್ಪಿ ಅರುಣ ಯೋಗಿರಾಜ್ ಅವರನ್ನು ಸನ್ಮಾನಿಸಿದರು.

ಮೈಸೂರಿನಲ್ಲಿ ಅರುಣ್​ ಯೋಗಿರಾಜ್​ರನ್ನ​ ಸನ್ಮಾನಿಸಿ, ಸುತ್ತೂರು ಮಠದ ಕೊಡುಗೆಯನ್ನು ಸ್ಮರಿಸಿದ ಅಮಿತ್​ ಶಾ
ಕೇಂದ್ರ ಗೃಹ ಸಚಿವ ಅಮಿತ್​ ಶಾ
Follow us on

ಮೈಸೂರು, ಫೆಬ್ರವರಿ 11: ನಂಜನಗೂಡು (Nanjangudu) ತಾಲೂಕಿನ ಸುತ್ತೂರಿನಲ್ಲಿ (Suttur Math) ನಡೆಯುತ್ತಿರುವ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಭಾಗಿಯಾಗಿದರು. ಈ ವೇಳೆ ಅಯೋಧ್ಯೆಯ ಬಾಲ ರಾಮನ ಮೂರ್ತಿಯನ್ನು ನಿರ್ಮಿಸಿರುವ ಶಿಲ್ಪಿ ಅರುಣ ಯೋಗಿರಾಜ್ (Arun Yogiraj)​ ಅವರನ್ನು ಸನ್ಮಾನಿಸಿದರು. ಬಳಿಕ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಅತಿಥಿಗೃಹ ಉದ್ಘಾಟಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ (Ayodhya) ಇತ್ತೀಚಿಗೆ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದೆ. ಬಾಲ ರಾಮನ ಮೂರ್ತಿ ನಿರ್ಮಾಣ ಮಾಡಿದ ಅರಣು ಯೋಗಿರಾಜ್​ ಅವರಿಗೆ ಸುತ್ತೂರು ಮಠ ಸನ್ಮಾನ ಮಾಡಿದೆ. ಅಯೋಧ್ಯೆಯಲ್ಲಿ ಸುತ್ತೂರು ಮಠದ ಶಾಖಾ ಮಠ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.

ಸುತ್ತೂರು ಮಠದ ಹಿಂದಿನ 24 ಮಠಾಧೀಶರನ್ನು ಸ್ಮರಿಸಿಕೊಳ್ಳುತ್ತೇನೆ. ಸುತ್ತೂರು ಮಠ ನಿಸ್ವಾರ್ಥ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಅಹಮದಾಬಾದ್ ಕಾರ್ಯಕ್ರಮವನ್ನು ರದ್ದುಪಡಿಸಿ ಇಲ್ಲಿಗೆ ಬಂದಿದ್ದೇನೆ. ಫೆಬ್ರವರಿ 6 ರಿಂದ 11 ರವರೆಗೆ ಸುತ್ತೂರು ಜಾತ್ರೆ ಆಯೋಜಿಸಲಾಗಿದೆ. ಜಾತ್ರೆಯಲ್ಲಿ ವಿಶೇಷ ಪೂಜೆ, ಸಾಮೂಹಿಕ ವಿವಾಹ, ದೇಶೀಯ ಕ್ರೀಡೆಗಳು, ರೈತರಿಗೆ ಸಂಬಂಧಿಸಿದ ಕೃಷಿ ಸೇರಿದಂತೆ ಎಲ್ಲ ಚಟುವಟಿಕೆ ನಡೆದಿವೆ. ಮಠದಲ್ಲಿ 20 ಸಾವಿರಕ್ಕೂ ಹೆಚ್ಚು ಆಡಳಿತ ಮಂಡಳಿ ಸಿಬ್ಬಂದಿ ಇದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದರು.

ಇದನ್ನೂ ಓದಿ: ಗ್ಯಾರಂಟಿಯಿಂದ ಬೊಕ್ಕಸ ಖಾಲಿ ಹೇಳಿಕೆ: ಅಮಿತ್ ಶಾ ಬಹಿರಂಗ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಸವಾಲು

ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ವಿಶೇಷಚೇತನರಿಗೆ ಹೆಚ್ಚು ಒತ್ತು ನೀಡಲಾಗಿದೆ. ಸುತ್ತೂರು ಮಠದ ಕೊಡುಗೆಯನ್ನು ಬಿಜೆಪಿ ಸದಾ ಸ್ಮರಿಸಿಕೊಳ್ಳುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಸಾಂಸ್ಕೃತಿಕ, ಯೋಗ, ಆಯುರ್ವೇದ, ಸುರಕ್ಷತೆ ಮತ್ತು ಭದ್ರತೆ ಕ್ಷೇತ್ರಕ್ಕೆ ಬಹಳ ಒತ್ತು ನೀಡಿದ್ದಾರೆ ಎಂದು ತಿಳಿಸಿದರು.

ನರೇಂದ್ರ ಮೋದಿ, ಅಮಿತ್ ಶಾ ಜೋಡೆತ್ತುಗಳು: ಸುತ್ತೂರು ಶ್ರೀ

ಒಂದು ಗಾಡಿ ಮುನ್ನಡೆಯಲು ಜೋಡಿ ಎತ್ತುಗಳು ಹೇಗೆ ಮುಖ್ಯ, ಹಾಗೆ ದೇಶವನ್ನು ನರೇಂದ್ರ ಮೋದಿ, ಅಮಿತ್ ಶಾ ಮುನ್ನಡೆಸುತ್ತಿದ್ದಾರೆ. ಇದು ನಮ್ಮ ಜಾತ್ರೆ ಎಂದು ಜನರು ಸುತ್ತೂರು ಜಾತ್ರೆಗೆ ಬರುತ್ತಾರೆ. ಗ್ರಾಮೀಣ ಜನರಿಗೆ ಧೈರ್ಯ, ವಿಶ್ವಾಸ ಮೂಡಿಸುವ ಕೆಲಸ ಆಗಿದೆ. ಅಮಿತ್ ಶಾ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂತೋಷವಾಗಿದೆ. ಸರ್ದಾರ್ ವಲ್ಲಭ ಭಾಯಿ ಪಟೇಲ್ ಉಕ್ಕಿನ ಮನುಷ್ಯರಾಗಿದ್ದರು. ಅಮಿತ್ ಶಾ ಕೂಡ ಉಕ್ಕಿನ ವ್ಯಕ್ತಿ ಹೌದು, ಚಾಣಕ್ಯರೂ ಹೌದು. ಅರಮನೆಯಲ್ಲಿದ್ದ ಕೇಶವ ಪಂಡಿತ್ ಅವರು ಗುಜರಾತ್‌ಗೆ ಹೋಗಿದ್ದರು. ಕೇಶವ ಪಂಡಿತ್​ ಅವರು ಅಮಿತ್​ ಶಾ ಅವರಿಗೆ ಶಿಕ್ಷಣ ನೀಡಿದ್ದಾರೆ ಎಂದು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Sun, 11 February 24