ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವ; ಸರೋದ್​ ವಾದಕ ಪಂ.ರಾಜೀವ್ ತಾರಾನಾಥ್ ಕಾರ್ಯಕ್ರಮ ನಿಗದಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 14, 2023 | 10:24 PM

ಅನಾರೋಗ್ಯ ಹಿನ್ನೆಲೆ ಕಾರ್ಯಕ್ರಮಕ್ಕೆ ರಾಜೀವ್ ತಾರಾನಾಥ್ ಒಪ್ಪಿರಲಿಲ್ಲ. ಇದೀಗ ಕಾರ್ಯಕ್ರಮ ನೀಡಲು ಪಂಡಿತ್ ರಾಜೀವ್ ತಾರಾನಾಥ್ ಒಪ್ಪಿದ್ದು, ಕಾರ್ಯಕ್ರಮ ನಿಗದಿ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಅವರು ಸ್ಪಷ್ಟನೆ ನೀಡಿದ್ದಾರೆ.

ವಿಶ್ವವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವ; ಸರೋದ್​ ವಾದಕ ಪಂ.ರಾಜೀವ್ ತಾರಾನಾಥ್ ಕಾರ್ಯಕ್ರಮ ನಿಗದಿ
ಸರೋದ್​ ವಾದಕ ಪಂ.ರಾಜೀವ್ ತಾರಾನಾಥ್
Follow us on

ಮೈಸೂರು, ಅ.14: ವಿಶ್ವವಿಖ್ಯಾತ ಮೈಸೂರು ದಸರಾ(Mysore Dasara)ಉದ್ಘಾಟನೆಯನ್ನು ನಾಳೆ(ಅ.15) ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದಾರೆ. ಅದರಂತೆ ಅಕ್ಟೋಬರ್‌ 21ರಂದು ಮೈಸೂರು ಅರಮನೆ ಎದುರು ಆಯೋಜಿಸಲಾಗಿರುವ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತರಾಷ್ಟ್ರೀಯ ಖ್ಯಾತೀಯ ಸರೋದ್​ ವಾದಕ ಪಂಡಿತ್​ ರಾಜೀವ್​ ತಾರಾನಾಥ್​(Rajeev Taranath) ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅನಾರೋಗ್ಯ ಹಿನ್ನೆಲೆ ಕಾರ್ಯಕ್ರಮಕ್ಕೆ ರಾಜೀವ್ ತಾರಾನಾಥ್ ಒಪ್ಪಿರಲಿಲ್ಲ. ಇದೀಗ ಕಾರ್ಯಕ್ರಮ ನೀಡಲು ಪಂಡಿತ್ ರಾಜೀವ್ ತಾರಾನಾಥ್ ಒಪ್ಪಿದ್ದು, ಕಾರ್ಯಕ್ರಮ ನಿಗದಿ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಅವರು ಸ್ಪಷ್ಟನೆ ನೀಡಿದ್ದಾರೆ.

ಘಟನೆ ವಿವರ

ಇನ್ನು ವಾದಕ ಪಂಡಿತ್​ ರಾಜೀವ್​ ತಾರಾನಾಥ್ ಅವರಿಗೆ ದಸರಾ ಅರಮನೆ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನ ನೀಡಿದ ಅಧಿಕಾರಿಗಳು “ಕಮಿಷನ್​​”ಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೌದು, ಕಾರ್ಯಕ್ರಮ ನಿಗದಿಪಡಿಸಿ ಸಂಭಾವನೆಯನ್ನೂ ಗೊತ್ತು ಮಾಡಲಾಗಿತ್ತು. ಬಳಿಕ ಅಧಿಕಾರಿಗಳು ತಾರಾನಾಥ್​ ಅವರನ್ನು ಸಂಪರ್ಕಿಸಿ “ನಿಮ್ಮ ಸಂಭಾವನೆಗಿಂತ ಮೂರು ಲಕ್ಷ ರೂ. ಹೆಚ್ಚು ಕೊಡುತ್ತೇವೆ” ಹೆಚ್ಚುವರಿಯಾಗಿ ಜಮೆಯಾಗಿರುವ 3 ಲಕ್ಷ ರೂ. ಹಣವನ್ನು ನಮಗೆ ವಾಪಾಸ್ ನೀಡಬೇಕು ಎಂದು ಅಧಿಕಾರಿಗಳು ಕೇಳಿದ್ದಾರೆ. ಆದರೆ, ಪಂಡಿತ್ ರಾಜೀವ್ ತಾರಾನಾಥ್ ಅವರು ಇದಕ್ಕೆ ನಿರಾಕರಿಸಿದ್ದರು. ಬಳಿಕ ಈ ಆರೋಪದ ಬಗ್ಗೆ ಮಾಹಿತಿ ಪಡೆಯಲು ಮೈಸೂರು ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಪಂಡಿತ್ ತಾರಾನಾಥ್ ಅವರ ಬಳಿ ಕಳುಹಿಸಿದ್ದು, ತಪ್ಪಿತಸ್ಥರ ಮೇಲೆ ತಕ್ಷಣ ಎಫ್​​ಐಆರ್ ದಾಖಲು ಮಾಡುವಂತೆ ಮೌಖಿಕ ಸೂಚನೆ ನೀಡಿದ್ದರು.

ಇದನ್ನೂ ಓದಿ:ಮೈಸೂರು ದಸರಾ 2023: ಉರ್ದು ಕವಿಗೋಷ್ಠಿಗೆ ಬಿಜೆಪಿ ಶಾಸಕ ಆಕ್ಷೇಪ; ಸರಣಿ ಟ್ವೀಟ್​ ಮೂಲಕ ಸುನಿಲ್​​ ಕುಮಾರ್ ವಾಗ್ದಾಳಿ

ಸೂಕ್ತ ಕ್ರಮದ ಭರವಸೆ ನೀಡಿದ್ದ ಹೆಚ್​​ಸಿ ಮಹದೇವಪ್ಪ

ಈ ವಿಷಯ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಯಾರೇ ಮಾಡಿದ್ದರೂ ಅವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಲಾಗುತ್ತದೆ. ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ. ನಾಡಹಬ್ಬ ದಸರಾದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ