ಮೈಸೂರಿನಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಯದುವೀರ್ ವಿರೋಧ; ಬದಲಿ ಕ್ರಮಕ್ಕಾಗಿ ಸಿಎಂಗೆ ಪತ್ರ
ಮೈಸೂರಿನಲ್ಲಿ ಫ್ಲೈಓವರ್ ನಿರ್ಮಾಣವನ್ನು ಸಂಸದ ಯದುವೀರ್ ವಿರೋಧಿಸಿ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ. ಮೈಸೂರಿನ ಪರಂಪರೆ ಮತ್ತು ಸಾಂಸ್ಕೃತಿಕ ಗುರುತನ್ನು ಕಾಪಾಡಲು ಅವರು ಮನವಿ ಮಾಡಿದ್ದಾರೆ. ಫ್ಲೈಓವರ್ಗಳಿಂದ ಸಂಚಾರ ಅಧ್ಯಯನದ ಕೊರತೆ ಮತ್ತು ನಾಗರಿಕ ಸಮಾಲೋಚನೆ ಇಲ್ಲದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಪರ್ಯಾಯ ಪರಿಹಾರಗಳನ್ನು ಸೂಚಿಸಿದ್ದಾರೆ.

ಮೈಸೂರು, ನವೆಂಬರ್ 5: ಮೈಸೂರಿನಲ್ಲಿ ಫ್ಲೈ ಓವರ್ (Mysuru Flyover) ನಿರ್ಮಾಣವನ್ನು ವಿರೋಧಿಸಿ ಸಂಸದ ಯದುವೀರ್, ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಸುದೀರ್ಘ ಪತ್ರ ಬರೆದಿದ್ದಾರೆ. ಮೈಸೂರು ನಗರ ಬೆಳೆಯುತ್ತಲೇ ಇರುವುದರಿಂದ ಅಭಿವೃದ್ಧಿಯು ಪಾರದರ್ಶಕವಾಗಿರಬೇಕೆಂದು ಹೇಳಿರುವ ಅವರು, ಫ್ಲೈಓವರ್ಗಳ ಬದಲಿಗೆ ಯಾವ ಕ್ರಮ ಕೈಗೊಳ್ಳಬಹುದೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯದುವೀರ್ ಬರೆದ ಪತ್ರದಲ್ಲೇನಿದೆ?
ಯದುವೀರ್ ಸಿಎಂಗೆ ಮನವಿ ಮಾಡಿರುವ ಪತ್ರದಲ್ಲಿ, ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ಮೈಸೂರಿನ ಪರಂಪರೆಯನ್ನು ಸಂರಕ್ಷಿಸಬೇಕಿದೆ. ಮೈಸೂರು ನಗರ ಬೆಳೆಯುತ್ತಲೇ ಇರುವುದರಿಂದ, ನಮ್ಮ ಅಭಿವೃದ್ಧಿಯು ಪಾರದರ್ಶಕವಾಗಿರಬೇಕು, ದತ್ತಾಂಶ ಆಧಾರಿತವಾಗಿರಬೇಕು ಮತ್ತು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯ ಪ್ರಸ್ತಾವಿತ ಮೇಲ್ಸೇತುವೆಗಳ ಬಗ್ಗೆ ನನ್ನ ಕಳವಳವನ್ನು ವ್ಯಕ್ತಪಡಿಸಿ ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದೇನೆ. ಯೋಜಿತವಲ್ಲದ ನಗರ ವಿಸ್ತರಣೆಗಾಗಿ ಜೀವಂತ ಪರಂಪರೆಯ ನಗರವಾಗಿ ಮೈಸೂರಿನ ಗುರುತನ್ನು ಅಳಿಸಬಾರದು. ತನ್ನ ಸೊಬಗು, ಹಸಿರು ಅಥವಾ ನನ್ನ ಸಾಂಸ್ಕೃತಿಕತೆಯನ್ನು ಕಳೆದುಕೊಳ್ಳದೆ ಪರಿಣಾಮಕಾರಿಯಾಗಿ ಚಲಿಸುವ ಆಧುನಿಕ ಮೈಸೂರಿನ ನಿರ್ಮಾಣ ನಮ್ಮ ಗುರಿಯಾಗಿರಬೇಕು ಎಂದು ಬರೆದಿದ್ದಾರೆ.
ಪತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಲಾಗಿದೆ
– ಪ್ರಸ್ತಾವನೆಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಸಂಚಾರ ಅಧ್ಯಯನ ಅಥವಾ ನಾಗರಿಕ ಸಮಾಲೋಚನೆ ಇಲ್ಲ. – ಇಂತಹ ದೊಡ್ಡ ಪ್ರಮಾಣದ ಯೋಜನೆಗಳು ಮೈಸೂರಿನ ಪರಂಪರೆಯ ಭೂದೃಶ್ಯಕ್ಕೆ ಬದಲಾಯಿಸಲಾಗದ ಹಾನಿಯನ್ನುಂಟುಮಾಡುತ್ತವೆ. – ನೂರಾರು ಹೆಮ್ಮರಗಳನ್ನು ಕಡಿಯಬಹುದು, ಇದು ಪರಿಸರ ವಿಜ್ಞಾನ ಮತ್ತು ನಗರದ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. – ನಗರದ ಸೌಂದರ್ಯ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಶಾಶ್ವತವಾಗಿ ಬದಲಾಯಿಸಬಹುದು.
ಎಕ್ಸ್ನಲ್ಲಿ ಯದುವೀರ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ
ಜವಾಬ್ದಾರಿಯುತ ಅಭಿವೃದ್ಧಿಯ ಮೂಲಕ ಮೈಸೂರಿನ ಪರಂಪರೆಯನ್ನು ಸಂರಕ್ಷಿಸಬೇಕಿದೆ.
ಮೈಸೂರು ನಗರ ಬೆಳೆಯುತ್ತಲೇ ಇರುವುದರಿಂದ, ನಮ್ಮ ಅಭಿವೃದ್ಧಿಯು ಪಾರದರ್ಶಕವಾಗಿರಬೇಕು, ದತ್ತಾಂಶ ಆಧಾರಿತವಾಗಿರಬೇಕು ಮತ್ತು ಪರಂಪರೆಯಲ್ಲಿ ಬೇರೂರಿರಬೇಕು. ವಿನೋಬಾ ರಸ್ತೆ ಮತ್ತು ಝಾನ್ಸಿ ರಾಣಿ ಲಕ್ಷ್ಮಿಬಾಯಿ ರಸ್ತೆಯ ಪ್ರಸ್ತಾವಿತ ಮೇಲ್ಸೇತುವೆಗಳ ಬಗ್ಗೆ ನನ್ನ… pic.twitter.com/r1Uj46QRX3
— Yaduveer Wadiyar (@yaduveerwadiyar) November 4, 2025
ಫ್ಲೈಓವರ್ಗಳ ಬದಲಿಗೆ, ಅಭಿವೃದ್ಧಿಗಾಗಿ ಯಾವ ಅಂಶಗಳ ಮೇಲೆ ಕೇಂದ್ರೀಕರಿಸಬಹುದೆಂದು ಬರೆದಿರುವ ಯದುವೀರ್, ಸ್ಮಾರ್ಟ್ ಸಂಚಾರ ನಿರ್ವಹಣೆ ಮತ್ತು ಸಿಂಕ್ರೋನೈಸ್ ಮಾಡಿದ ಸಂಕೇತಗಳು, ಸಾರ್ವಜನಿಕ ಸಾರಿಗೆ ಮತ್ತು ಪ್ರವೇಶಸಾಧ್ಯತೆಯ ಸುಧಾರಣೆ ಮತ್ತು ಅಕ್ರಮ ಪಾರ್ಕಿಂಗ್ ಮತ್ತು ಅತಿಕ್ರಮಣಗಳ ವಿರುದ್ಧ ಕಠಿಣ ಕ್ರಮ ಈ ಎಲ್ಲಾ ಅಂಶಗಳನ್ನು ಸಿಎಂ ಮುಂದಿಟ್ಟಿದ್ದಾರೆ.
ಹುಲಿಗಳ ದಾಳಿ ವಿಚಾರದಲ್ಲಿ ಅರಣ್ಯ ಇಲಾಖೆ ಸ್ಪಂದಿಸಬೇಕು – ಯದುವೀರ್
ಮೈಸೂರು ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿಗಳ ದಾಳಿ ವಿಚಾರದಲ್ಲಿ ಅರಣ್ಯ ಇಲಾಖೆ ಸರಿಯಾದ ರೀತಿಯಲ್ಲಿ ಸ್ಪಂದಿಸಬೇಕು ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಯದುವೀರ್ ಒಡೆಯರ್ ಕೇಳಿಕೊಂಡಿದ್ದಾರೆ. ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಎಂದು ನೋಡಬೇಕು. ಪ್ರಕೃತಿಯೇ ಪ್ರಕೃತಿಯನ್ನು ಕಾಪಾಡಿಕೊಳ್ಳುತ್ತದೆ. ಕಾಡಂಚಿನಲ್ಲಿ ಮನುಷ್ಯನ ಅತಿಯಾದ ಹಸ್ತಕ್ಷೇಪ ತಪ್ಪಬೇಕು ಮನುಷ್ಯ ಪ್ರಕೃತಿಗೆ ಕೈ ಹಾಕುವುದು ಬೇಡ ಎಂದು ಯದುವೀರ್ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:34 am, Wed, 5 November 25




