ಕೊವಿಡ್​ ಸಂಬಂಧಿತ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದರೂ ಕದ್ದು ಮುಚ್ಚಿ ವ್ಯಾಪಾರ; ಎಲ್ಲೆಲ್ಲಿ ನಿಯಮ ಪಾಲಿಸುತ್ತಿಲ್ಲ?

ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳ ಬಾಗಿಲನ್ನು ಮುಚ್ಚಿಲಾಗುತ್ತಿದೆ. ಆದರೂ ಕೂಡಾ ಕೆಲವೆಡೆ ಪೊಲೀಸರ ಕಣ್ಣು ​ತಪ್ಪಿಸಿ ಅಂಗಡಿಗಳ ಬಾಗಿಲನ್ನು ತೆರೆಯಲಾಗುತ್ತಿದೆ.

ಕೊವಿಡ್​ ಸಂಬಂಧಿತ ಕಟ್ಟುನಿಟ್ಟಿನ ಕ್ರಮ ಜಾರಿಯಲ್ಲಿದ್ದರೂ ಕದ್ದು ಮುಚ್ಚಿ ವ್ಯಾಪಾರ; ಎಲ್ಲೆಲ್ಲಿ ನಿಯಮ ಪಾಲಿಸುತ್ತಿಲ್ಲ?
ಹಾವೇರಿಯಲ್ಲಿ ತರಕಾರಿ ಮಾರುಕಟ್ಟೆ
Edited By: ಆಯೇಷಾ ಬಾನು

Updated on: Apr 30, 2021 | 12:01 PM

ಹಾವೇರಿ: ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದರಿಂದ ರಾಜ್ಯದಲ್ಲಿ ಲಾಕ್​ಡೌನ್​​ ಜಾರಿಗೊಳಿಸಲಾಗಿದೆ. ಜನರು ಹೊರಗೆ ಬಾರದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡದಂತೆ ಕಾಪಾಡಲು ಸಾಮಾಜಿಕ ಅಂತರ ನಿಯಮ ಪಾಲಿಸಲೇ ಬೇಕು. ಆದ್ದರಿಂದ ಜನರು ಓಡಾಡದಂತೆ ನಿಗವಹಿಸುತ್ತಿದ್ದಾರೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳ ಬಾಗಿಲನ್ನು ಮುಚ್ಚಿಲಾಗುತ್ತಿದೆ. ಆದರೂ ಕೂಡಾ ಕೆಲವೆಡೆ ಪೊಲೀಸರ ಕಣ್ಣು ​ತಪ್ಪಿಸಿ ಅಂಗಡಿಗಳ ಬಾಗಿಲನ್ನು ತೆರೆಯಲಾಗುತ್ತಿದೆ.

ಹೊರಗಡೆ ನೋಡಲು ಅಂಗಡಿಗಳ ಬಾಗಿಲು ಮುಚ್ಚಿದಂತೆ ಅನಿಸಿದರೂ, ಹಿಂದಿನ ಬಾಗಿಲಿನಿಂದ ವ್ಯಾಪಾರ ನಡೆಸುತ್ತಿದ್ದಾರೆ. ಇದೇ ರೀತಿ ಹಾವೇರಿಯ ಎಂ.ಜಿ ವೃತ್ತದಲ್ಲಿ ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಟ್ಟೆ, ಚಿನ್ನದ ಅಂಗಡಿಗೆ ಅನುಮತಿ ಇಲ್ಲದಿದ್ದರೂ ಬೆಳಿಗ್ಗೆಯಿಂದ ಕದ್ದುಮುಚ್ಚಿ ವ್ಯಾಪಾರ ಮಾಡಲಾಗುತ್ತಿತ್ತು. ಈ ಮೊದಲೇ ಎಚ್ಚರಿಕೆ ನೀಡಿದ್ದರೂ ಪುನಃ ಅದೇ ತಪ್ಪು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗದಲ್ಲಿ ನಿಯಮ ಮೀರಿ ರಸ್ತೆ ಬದಿ ಹೂವು, ಹಣ್ಣು ವ್ಯಾಪಾರ
ಕೊರೊನಾ ನಿಯಂತ್ರಣಕ್ಕಾಗಿ ಕೊರೊನಾ ನಿಯಂತ್ರಣ ಕಟ್ಟುನಿಟ್ಟಾದ ಕ್ರಮ ಜಾರಿಯಲ್ಲಿದ್ದರೂ, ನಿಯಮ ಮೀರಿ ರಸ್ತೆ ಬದಿ ಹೂವು, ಹಣ್ಣು ವ್ಯಾಪಾರ ಮಾಡಲಾಗುತ್ತಿದೆ. ಗಾಂಧಿವೃತ್ತದ ಬಳಿ ರಸ್ತೆ ಬದಿ ಹೂವು, ಹಣ್ಣಿನ ವ್ಯಾಪಾರ ನಡೆಯುತ್ತಿದೆ. ಈ ಕುರಿತಂತೆ ನಿಯಮ ಮೀರಿ ವ್ಯಾಪಾರಕ್ಕಿಳಿದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ನಗರಸಭೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಜನಜಂಗುಳಿ
ಚಿಕ್ಕಬಳ್ಳಾಪುರದ ಎಪಿಎಂಸಿ ಮಾರುಕಟ್ಟೆ ಜನ ಜಂಗುಳಿಯಿಂದ ಕೂಡಿದೆ. ಸಾಮಾಜಿಕ ಅಂತರ ಮರೆತು ವ್ಯಾಪಾರ ವಹಿವಾಟು ನಡೆಯುತ್ತಿದೆ. ಕೊರೊನಾ ಸೋಂಕು ಹರಡುವ ಭೀತಿ ಇದ್ದರೂ ಜನರು ಉದ್ದಟತ ತೋರುತ್ತಿದ್ದಾರೆ. ಜನರ ಈ ಬೇಜವಾಬ್ದಾರಿಗೆ ತಿಳಿ ಹೇಳುವವರೇ ಇಲ್ಲದಂತಾಗಿದೆ.

ಕೊರೊನಾ ಹರಡುವಿಕೆಯ ನಡುವೆಯೂ ಹಾಸನದ ರೆಸಾರ್ಟ್​ನಲ್ಲಿ ಜನಸಾಗರ
ಹಾಸನ ಜಿಲ್ಲೆಯ ರೆಸಾರ್ಟ್​ನಲ್ಲಿ ಎರಡು ದಿನಗಳ ಹಿಂದಷ್ಟೇ 60ಕ್ಕೂ ಹೆಚ್ಚು ಮಂದಿ ಬೆಂಗಳೂರಿನಿಂದ ಬಂದು ವಾಸವಾಗಿದ್ದರು. ಇದನ್ನು ತಿಳಿದ ಸ್ಥಳೀಯರು ರೆಸಾರ್ಟ್​ನಿಂದ ಅವರನ್ನು ಖಾಲಿ ಮಾಡಿಸಿದ್ದಾರೆ. ಕೊರೊನಾ ಹರಡುವ ಭೀತಿಯಿಂದ ಸ್ಥಳೀಯರು ಈ ನಿರ್ಧಾರ ಕೈಗೊಂಡಿದ್ದಾರೆ. ರೆಸಾರ್ಟ್​ ಮಾಲೀಕರಿಗೆ ಈ ಮೊದಲು ಎಚ್ಚರಿಕೆ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಯಲ್ಲಿ ಸ್ಥಳೀಯರೇ ರೆಸಾರ್ಟ್​ ಬಳಿ ಆಗಮಿಸಿ ರೆಸಾರ್ಟ್​ ಖಾಲಿ ಮಾಡಿಸಿದ್ದಾರೆ.

ಗದಗದಲ್ಲಿ ಜನ ಜಂಗುಳಿ; ಲಾಠಿ ಹಿಡಿದು ಬುದ್ದಿ ಹೇಳಿದ ಪೊಲೀಸರು
ಜಿಲ್ಲೆಯ ಭೂಮರೆಡ್ಡಿ ಸರ್ಕಲ್​ ಬಳಿ ಇಂದು ಜನಜಂಗುಳಿ ಇದ್ದ ಕಾರಣ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಜನ ಜಂಗುಳಿ ನಿಯಂತ್ರಣ ಮಾಡಲು ಲಾಠಿ ಹಿಡಿದು ಪೊಲೀಸರು ಬುದ್ಧಿವಾದ ಹೇಳಿದ್ದಾರೆ. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಇಲ್ಲದೇ ಬೇಕಾಬಿಟ್ಟಿಯಾಗಿ ಜನರು ಓಡಾಟ ನಡೆಸುತ್ತಿದ್ದರು. ಪೊಲೀಸರ ಜತೆ ಬೆಟಗೇರಿ ನಗರಸಭೆ ಆಯುಕ್ತ ರಮೇಶ ಜಾದವ್ ಸಾಥ್ ನೀಡಿದ್ದು, ಮಾರುಕಟ್ಟೆಯಲ್ಲಿ ಜನ ಜಂಗುಳಿ ನಿಯಂತ್ರಣಕ್ಕಾಗಿ ಕೊವಿಡ್ ನಿಯಮ ಪಾಸಿಸುವಂತೆ ಜನರಿಗೆ ತಿಳುವಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಅನಾವಶ್ಯಕವಾಗಿ ರಸ್ತೆಗಿಳಿದ 200 ಬೈಕ್‌ ಸೀಜ್
ಲಾಕ್‌ಡೌನ್ ಜಾರಿಯಲ್ಲಿದ್ದರೂ ಬೇಕಾಬಿಟ್ಟಿ ಓಡಾಡುವವರಿಗೆ ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಕೆ. ರಾಮರಾಜನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು ಅನಾವಶ್ಯಕವಾಗಿ ರಸ್ತೆಗಿಳಿದ 200 ಬೈಕ್‌ಗಳನ್ನ ಸೀಜ್ ಮಾಡಲಾಗಿದೆ. ನಗರದಲ್ಲಿ ಸುಮಾರು 70 ರಿಂದ 80 ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದೇವೆ‌. ಸರ್ಕಾರದ ನಿಯಮ ಉಲ್ಲಂಘಿಸಿದರೆ ಕೇಸ್ ದಾಖಲಿಸಲಾಗುತ್ತದೆ ಎಂದು ಮಾಹಿತಿ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುತ್ತಾರೆ ಹಾಗೂ ದಂಡ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಸರ್ಕಾರ ಆದೇಶ ಪಾಲನೆ ಮಾಡಬೇಕು. ಇಲ್ಲವಾದರೇ ಅವರಿಗೆ ಸಮಸ್ಯೆಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

YouTube video player

ಇದನ್ನೂ ಓದಿ: Coronavirus India Update: 3.86 ಲಕ್ಷ ಹೊಸ ಕೊವಿಡ್ ಪ್ರಕರಣಗಳೊಂದಿಗೆ ದಾಖಲೆ ಬರೆದ ಭಾರತ , ಒಂದೇದಿನ 3,498 ಮಂದಿ ಸಾವು

Follow Us